ಜಾತಿರತ್ನವ ಸುಟ್ಟಡೆ ಪ್ರಭೆ ಪ್ರಜ್ವಲಿಸುವುದಲ್ಲದೆ,
ವಿಜಾತಿಯ ರತ್ನ ಬೆಂಕಿಯಲ್ಲಿ ಬೆಂದಡೆ ಹೊರೆಗಳೆದು, ಪ್ರಭೆಯ ತೆರೆ ನಿಂದು,
ತಾ ಜಜ್ಜರಿಯಾಗಿ ನಷ್ಟವಾಗುತಿಪ್ಪುದು.
ನಡೆ ನುಡಿ ಶುದ್ಧಾತ್ಮಂಗೆ ಆಗುಚೇಗೆ ಸೋಂಕಿದಲ್ಲಿ,
ವಂದನೆ ನಿಂದೆ ಬಂದಲ್ಲಿ, ತನುವಿನ ಪ್ರಾಪ್ತಿ ಸಂಭವಿಸಿದಲ್ಲಿ,
ಲಿಂಗವಲ್ಲದೆ ಪೆರತೊಂದನರಿಯ.
ಆತ್ಮತೇಜಿಗೆ, ಅಹಂಕಾರಿಗೆ, ದುರ್ವಿಕಾರವಿಷಯಾಂಗಿಗೆ,
ಒಂದು ವ್ರತವ ಯತಿಯೆಂದು ಹಿಡಿದು
ಮತ್ತೊಂದು ವ್ರತದ ತ್ರಿವಿಧಮಲವೆಂದು ಬಿಟ್ಟು
ಮತ್ತೊಬ್ಬ ದಾತೃ ಇತ್ತೆಹೆನೆಂದಲ್ಲಿ ಭಕ್ಷಿಸಿ,
ತ್ರಿವಿಧವ ಹಿಡಿದು ಮತ್ತನಪ್ಪವಂಗೆ ವಿರಕ್ತಿ ಎತ್ತಣ ಸುದ್ದಿ?
ಇಂತೀ ಉಭಯಸ್ಥಲಭೇದವನರಿದಾಚರಿಸಬೇಕು,
ಸದ್ಯೋಜಾತಲಿಂಗವನರಿವುದಕ್ಕೆ.