ಅಂಡ ಪಿಂಡವಾಗಿ, ಪಿಂಡಾಂಡವನೊಳಕೊಂಡು ವಿಚ್ಚಿನ್ನವಾದ ಭೇದವ ತಿಳಿದು,
ತ್ರಿಗುಣಭೇದದಲ್ಲಿ ಪಂಚಭೂತಿಕದಲ್ಲಿ ಪಂಚವಿಂಶತಿತತ್ವಂಗಳಲ್ಲಿ,
ಏಕೋತ್ತರಶತಸ್ಥಲ ಮುಂತಾದ ಭೇದಂಗಳ ತಿಳಿದು,
ಆವಾವ ಸ್ಥಲಕ್ಕೂ ಸ್ಥಲನಿರ್ವಾಹವ ಕಂಡು,
ಬಹುಜನಂಗಳು ಒಂದೆ ಗ್ರಾಮದ ಬಾಗಿಲಲ್ಲಿ ಬಂದು
ತಮ್ಮ ತಮ್ಮ ನಿಳಯಕ್ಕೆ ಸಂದು
ಗ್ರಾಮದ ಸುಖ-ದುಃಖವ ಅನುಭವಿಸುವಂತೆ,
ಇಂತೀ ಪಿಂಡಸ್ಥಲವನ್ನಾಚರಿಸಿ ಆತ್ಮ ವೃಥಾ ಹೋಹುದಕ್ಕೆ ಮೊದಲೆ
ಸದ್ಯೋಜಾತಲಿಂಗವ ಕೂಡಬೇಕು.