ವಿಷಯ ವಿರಕ್ತನಾಗಿ ದೃಢ ಭಕ್ತಿಯಿಂದ
ಸದ್ಗುರು ಚರಣಕ್ಕೆ ಶರಣಾಗತಿ ಹೊಕ್ಕು
ನಿರ್ಮಲನಾಗಿ ತತ್ಸನ್ನಿಧಿಯಲ್ಲಿ ನಿಂದು
ತನ್ನನರಿಯಲೆಂದು ಬಂದು,
ತಾನಾ ಅರಿವೆ ಮೈಯಾಗಿ,
ಅರಿಯೆ ನಾನೆನ್ನದೆಂಬ ಮರವೆಯನರಿವುದು.
ಸನ್ಮಾತ್ರ ತನು ತಾನಲ್ಲೆಂಬರಿವು ತಾನಲ್ಲವೆ?
ಚಿನ್ಮಯ ಚೋದ್ಯ ರೂಪನಲ್ಲವೆ?
ನಿರವಯ ನಿರ್ಗುಣ ತಾನೇತರಿಂದ
ನೋವವನಲ್ಲೆಂದನಲಾನಂದಮಯ.
ಮಿಥ್ಯೆಯಿಂ ಕೆಡುವುದು ಸಕಲ ಜಗವು.
ಸತ್ಯವೆನಗೆ ಕೇಡಿಲ್ಲೆಂದರಿಯಲು ನಿತ್ಯಪದ.
ಸರ್ವಭಾವ ಹುಸಿ ತೋರದೆ
ನಿಂದ ನಿಲವದು ಪರಿಪೂರ್ಣಸತ್ಯ, ನಂಬು,
ನಿನ್ನ ನೀ ತಿಳಿದು ನೋಡೆ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.