ದಿಟದ ಚಂದ್ರನು ಅನೇಕ ಘಟದ ಜಲದೊಳಗೆ ಜನಿಸಿ ಅನೇಕ ವ್ಯವಹಾರವಾದಂತೆ ಜೀವನೆ ಜಗ, ಜಗವೆ ಜೀವನಾದ. ಆದಿ ಅನಾದಿ ವಿಚಿತ್ರತರವಾದ ಮಾಯೆ. ಈ ಮಾಯೆಯಿಂದ ತನಗೆ ತಾನೇ ಪ್ರತಿಬಿಂಬ. ಆ ಮಾಯಾ ಪ್ರತಿಬಿಂಬವೆ ತನಗೆ ಸಂಸಾರ. ಆ ಸಂಸಾರವನು ಆ ಪರಮಾತ್ಮನು ಕೂಡಿಯೂ ಕೂಡದೆ ಆ ಘಟ ಜಲ ಚಂದ್ರಮನ ಹಾಂಗೆ ವರ್ತಿಸುತ್ತಿಹನು. ಅದೆಂತೆಂದಡೆ: ``ಏಕ ಏವ ಹಿ ಭೂತಾತ್ಮಾಭೂತೇ ಭೂತೇ ವ್ಯವಸ್ಥಿತಃ| ಏಕಧಾ ಬಹುಧಾಚೈವ ದೃಶ್ಯತೇ ಜಲಚಂದ್ರವತ್||' ಎಂದುದಾಗಿ, ಸಟೆಯ ಮಾಯೆಯ ಸಟೆಯೆಂದು ಕಳೆದುಳಿದ ದ್ಥೀರ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
ದೃಶ್ಯವ ಕಾಬ ದೃಷ್ಟನಾರೋ ಎಂದಡೆ ದೃಶ್ಯ ದೃಷ್ಟಗಳನರಿವ ಅರಿವದು ದೃಶ್ಯನೂ ಅಲ್ಲ ದೃಷ್ಟನೂ ಅಲ್ಲ. ಅದೃಶ್ಯಭಾವ ದೃಷ್ಟಿ ಚಿನ್ಮಯ ದರ್ಶನಾದಿ ಕ್ರಿಯೆಯಿಲ್ಲದ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ, ಕಾಲಕರ್ಮವಿಲ್ಲದಲ್ಲಿಂದತ್ತತ್ತ, ಮಾಯಾಮೋಹವಿಲ್ಲದಲ್ಲಿಂದತ್ತತ್ತ, ಏನೂ ಏನೂ ಇಲ್ಲದಲ್ಲಿಂದತ್ತತ್ತ, ಆದಿಮೂವರಿಲ್ಲದಲ್ಲಿಂದತ್ತತ್ತ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲದಲ್ಲಿಂದತ್ತತ್ತ!
ದರ್ಪಣದಿಂದ ತನ್ನನರಿದಾತ ಮತ್ತೆ ದರ್ಪಣಕ್ಕೆ ಕಿಂಕರನಾಗಬೇಕೆ? ಶ್ರುತಿಯಿಂದ ತನ್ನನರಿದಾತ ಮತ್ತೆ ಶ್ರುತಿಗೆ ಕಿಂಕರನಾಗಬೇಕೆ? ಹೇಳಾ, ಎಲೆ ಮರುಳೆ ಜಡಪಿಂಡವೆ! ನೀನು ನಿರವಯ ನಿರ್ಗುಣ ನಿತ್ಯ ಪರಿಪೂರ್ಣನಹೆ. ಈ ಸಿಮ್ಮಲಿಗೆಯ ಚೆನ್ನರಾಮನ ಅರಿವಿನೊಳಗಡಗಿದಡೆ ಶ್ರುತಿಗತೀತನಹೆ.
ದಶಪಂಚಕಳೆಯಿಂದ ಶಶಿಬಿಂದು ಉದಯವು. ದಶಪಂಚವನು ನುಂಗಿ ದಶಪಂಚವನು ಉಗುಳಿತು. ಅದರ ದೆಸೆಯನರಿಯದೆ ಹೋದರು. ಅದು ಬೆಸಗೊಂಬವರಿಗೆ ತಾನು ವಿಷಮ. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ದೆಸೆಯನರಿಯದೆ ಹೋದರು.