ಹಸಿವುಳ್ಳನ್ನಕ್ಕ ವ್ಯಾಪಾರ ಬಿಡದು,
ಸೀತ ಉಳ್ಳನ್ನಕ್ಕ ಉಪಾಧಿಕೆ ಬಿಡದು,
ಮಾತುಳ್ಳನ್ನಕ್ಕ ಬೂಟಾಟಿಕೆ ಬಿಡದು, ನಿದ್ರೆಯುಳ್ಳನ್ನಕ್ಕ ಸತಿಯ ಸಂಗ
ಬಿಡದು.
ಇದು ಕಾರಣ_
ಕ್ಷುತ್ತಿಂಗೆ ಭಿಕ್ಷೆ, ಸೀತಕ್ಕೆ ರಗಟೆ, ಮಾತಿಂಗೆ ಮಂತ್ರ,
ಶಯನಕ್ಕೆ ಶಿವಧ್ಯಾನವೆಂದು ಹೇಳಿಕೊಟ್ಟ
ಗುರುವಚನವ ಮೀರಿ ನಡೆವವರಿಗೆ
ಪರದಲ್ಲಿ ಪರಿಣಾಮ ದೊರೆಕೊಳ್ಳದು ನೋಡಾ.
ಇದು ಕಾರಣ_
ಗುರುವಾಜ್ಞೆಯ ಮೀರಿ ಮನಕ್ಕೆ ಬಂದಂತೆ ನಡೆವವರ
ಎನಗೊಮ್ಮೆ ತೋರದಿರಾ ಗುಹೇಶ್ವರಾ.