ಮನ ಮಗ್ನವಾಗಿ, ಅರಿವನು ಘನಪ್ರಾಣಲಿಂಗದಲ್ಲಿ ಸವೆದು,
ತನುವನು ಕ್ರಿಯಾಚಾರವಿಡಿದು, ಇಷ್ಟಲಿಂಗದಲ್ಲಿ ಸವೆದು,
ಮಹಾನುಭಾವವನರಿತಂತಹ ವೀರಶೈವಸಂಪನ್ನರಾದ
ಶಿವಶರಣರಿಗೆ ಸಂಸಾರಿಗಳೆನ್ನಬಹುದೆ ಅಯ್ಯ?
ಹೊನ್ನು-ಹೆಣ್ಣು-ಮಣ್ಣೆಂಬ ತ್ರಿವಿಧಪದಾರ್ಥಂಗಳ ವಿವರಿಸಿ,
ಇಷ್ಟ-ಪ್ರಾಣ-ಭಾವವೆಂಬ ಮೂರು ಲಿಂಗದ ಮುಖವನರಿದರ್ಪಿಸಿ,
ಆರು ಲಿಂಗದನುವಿನಲ್ಲಿ ಕೈಕೊಂಡು,
ಬಂದ ಬಂದ ಸಕಲಪದಾರ್ಥವನು ಅದರ ಪೂರ್ವಾಶ್ರಯವಳಿದು,
ಶಿವಪ್ರಸಾದವೆಂದು ಅನುಭವಿಸುತಿರ್ಪರು.
ಅಂತಪ್ಪ ನಿರುಪಮ, ನಿರ್ಭೇದ್ಯ,
ನಿರಾಳ, ನಿಃಶೂನ್ಯ ಪರಮಪ್ರಸಾದಿಗಳಿಗೆ
ಸಂಸಾರಿಗಳೆಂದು ನುಡಿವ ಅಜ್ಞಾನಿಸಂದೇಹಿಗಳು ಅಘೋರನರಕದಲ್ಲಿ
ಮುಳುಗುವರೆಂದಾತನಂಬಿಗರ ಚೌಡಯ್ಯ.