ಪರಪುರುಷಾರ್ಥವನರಿಯದೆ ಕೆಟ್ಟ ನರಗುರಿಗಳು ನೀವು ಕೇಳಿರೋ:
ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು.
ಮರಳಿ ಕೊಟ್ಟದ್ದಕ್ಕೆ ಕೀರ್ತಿದೇಹವ ಪಡೆದವರ
ಪರಿಯ ಕೇಳು ಎಲೇ ಮನವೇ:
ಪರಪುರುಷಾರ್ಥಿಯಾದರೆ, ವೀರವಿಕ್ರಮನಂತಾಗಬೇಕು,
ಪರಪುರುಷಾರ್ಥಿಯಾದರೆ, ಬಸವಕುಮಾರನಂತಾಗಬೇಕು,
ಪರಪುರುಷಾರ್ಥಿಯಾದರೆ, ಕಪೋತಪಕ್ಷಿಯಂತಾಗಬೇಕು,
ಇಂತೀ ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು.
ಹಣವೇನು ದೊಡ್ಡಿತ್ತುರಿ ಹೆಣ್ಣೇನು ದೊಡ್ಡಿತ್ತುರಿ
ಮಣ್ಣೇನು ದೊಡ್ಡಿತ್ತುರಿ ಅನ್ನವೇನು ದೊಡ್ಡಿತ್ತುರಿ
ಇಂತಿವುಗಳೊಳು ಒಂದನಾದರೂ
ಪರಪುರುಷಾರ್ಥಕ್ಕೆ ನೀಡದೆ ಮಾಡದೆ,
ತನ್ನ ಶರೀರವ ಹೊರೆದುಕೊಂಡು ಬದುಕುವೆನೆಂಬ
ಹೊಲೆ ಮಾದಿಗರುಗಳಿಗೆ ಇಹ-ಪರ ನಾಸ್ತಿ
ಎಂದಾತ ನಮ್ಮ ಅಂಬಿಗರ ಚೌಡಯ್ಯ.