ಸ ಪದದಿಂದ ಪ್ರಾರಂಭವಾಗುವ ವಚನಗಳು:
ಸ್ಥಿತಿ ಹರಿಯದಾದಡೆ, ಹರಹರಿಸುವಲ್ಲಿ ಪರಿಹರಿಸಿಕೊಂಡುದಿಲ್ಲ.ಲಯಕ್ಕೆ ರುದ್ರನಾದಡೆ, ತನ್ನೊಲುಮೆಯ ಸತಿಯ, ಲಯವ ಮಾಡಿದುದಿಲ್ಲ.ಇದನಿನ್ನಾರಿಗೆ ಹೇಳುವೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
ಸಕಲ ಆಗಮಂಗಳ ಕಲಿತು, ಸರ್ವಜನಕ್ಕೆ ಹೇಳಿ, ತಾ ನಿಃಕರುಣಿಯಾಗಿ,ತ್ರಿವಿಧಮಲಕ್ಕೆ ಹೊರಗಾಗೆಂದು ತಾನೊಳಗಾಗಿ,ಬರಿಮಾತಿನ ಭಟನಂತೆ ಅದರಾರೈಕೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
ಸೃಷ್ಟಿಯ ಮೇಲಣ ನರಪಟ್ಟಣದ ಹಾದಿಯಲ್ಲಿ, ಕಟ್ಟಿದರೈವರು ಕಳ್ಳರು.ಇರಿಯುವುದಕ್ಕೆ ಕೈದಿಲ್ಲ, ಹೊಯ್ವುದಕ್ಕೆ ಡೊಣ್ಣೆಯಿಲ್ಲ.ಅವರು ಕಳ್ಳರಲ್ಲಾ ಎಂದು ಬೆಳ್ಳರುಸಿಕ್ಕಿದರು ಕಳ್ಳರ ಕೈಯ ಕರಟದಲ್ಲಿ.ಕಳ್ಳಿಯ ಹಾಲು ಕಳ್ಳರ ಕಣ್ಣಿನಲ್ಲಿ ಹೊಯ್ದು, ಬೆಳ್ಳರೆಲ್ಲಿ ಹೋದರೆಂದರಿಯೆ.ಸಗರದ ಬೊಮ್ಮನೊಡೆಯ ತನುಮನ ಸಂಗವಾಗಿ ನಿಸ್ಸಂಗಿಯಾದ.
ಸ್ಥೂಲ ಕೂಡುವಲ್ಲಿ, ಸೂಕ್ಷ್ಮ ಆಡುವಲ್ಲಿ, ಕಾರಣ ಕೂಡುವಲ್ಲಿ,ತ್ರಿವಿಧದ ಒಡಲಾವುದೆಂದರಿತು, ವಸ್ತುವಿನ ಕೂಟದ ಭೇದವ ಘಟಿಸಿ,ಮನ ತನುವಿನಲ್ಲಿ ಭಿನ್ನ ಭೇದವಿಲ್ಲದೆ, ಗಂಧ ಕುಸುಮದಂತೆ,ಹೆರೆಹಿಂಗದ ಲಿಂಗಸಂಗಸುಖವನರಿ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
ಸರ್ಪನ ಹೆಡೆಯ ಮೇಲಣ ಮಾಣಿಕ್ಯ ಬೇಕಾದಡೆ.ಸರ್ಪನ ಕೊಂದಲ್ಲದೆ ಮಾಣಿಕ್ಯವಿತ್ತಬಾರದು.ಸರ್ಪನ ಕೊಂದಲ್ಲದೆ ಮಾಣಿಕ್ಯವ ಒಪ್ಪದಲ್ಲಿ ತೆಗೆಯಬಲ್ಲಡೆ,ಅದು ವಿರಕ್ತನ ಸತ್ವ.ತ್ರಿವಿಧದಲ್ಲಿ ಬೆಚ್ಚಂತಿರದೆ, ಹುಡಿಯೊಳಗಣ ಲೇಖದಂತೆ,ತೊಡೆದಡೆ ಕುರುಹಿಲ್ಲದಂತಿರಬೇಕು.ತ್ರಿವಿಧವನೊಡಗೂಡಿಯಿದ್ದಾತಂಗೆ ಆತನ ಎಡೆಬಿಡುವಿಲ್ಲದೆ ಅರಿ.ಸಗರದ ಬೊಮ್ಮನೊಡೆಯತನುಮನ ಸಂಗಮೇಶ್ವರಲಿಂಗವೆಂದೆ ಪ್ರಮಾಣಿಸು.
ಸಂಸಾರವನರಿತಲ್ಲಿ, ಸಂಶಯವಿಲ್ಲದ ಸಾರವೆ ಅರಿವು.ಅರಿವು ಮರೆಯದೆ ಹೆರೆಹಿಂಗಿ, ಕುರಿತಿದ ಸಂಸಾರದ ಸಾರ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.