ಯುಗಜುಗಂಗಳು ಮಹಾಪ್ರಳಯವಾದಲ್ಲಿ
ಉಳಿಯಿತ್ತೊಂದು ಮಲಯಜದ ಬೇರು.
ಬೇರಿನಲ್ಲಿ ಮಣ್ಣು ಸಿಕ್ಕಿ, ಮಣ್ಣಿನ ಸಾರಕ್ಕೆ ಬೇರು ಚಿಗಿತು,
ಮೂರು ಕೊನರಾಯಿತ್ತು.
ಮೂರು ಕೊನರು ಬಲಿದು, ಐದು, ಕೊಂಬಾಯಿತ್ತು.
ಐದು ಕೊಂಬಿನ ತುದಿಯಲ್ಲಿ ಆರೆಲೆ ಚಿಗಿತು,
ಆರೆಲೆಯ ಅಡಿಯಲ್ಲಿ ಮೂರು ಹೂದೋರಿತ್ತು.
ಹೂ ಮೀರಿ ಬಲಿವುದಕ್ಕೆ ಮೊದಲೆ, ಮರ ಬಲಿದು ಹಣ್ಣಾಯಿತ್ತು.
ಹಣ್ಣಿನ ಬೀಜ ರಸವನುಂಡು, ಕಾದಿದ ಅಣ್ಣಂಗೆ ಇಲ್ಲವಾಯಿತ್ತು,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವು ನಿಃಪತಿಯನೈದಿದ ಕಾರಣ.