ಅ ಪದದಿಂದ ಪ್ರಾರಂಭವಾಗುವ ವಚನಗಳು:
ಅಡುವಳ ಕೈ ಉಳಿದು, ಅಡದವಳ ಕೈ ಬೆಂದಿತ್ತು.ಮನೆಯೊಡೆಯ ನೆರವಿಗನಾಗಿ, ಪರವನೊಡೆಯನಾದ.ಅನ್ನಿಗ ತನ್ನವನಾದ, ತನ್ನ ತಾನರಿತ ಕಾರಣ.ಸಗರದ ಬೊಮ್ಮನೊಡೆಯತನುಮನ ಸಂಗಮೇಶ್ವರ ಲಿಂಗವನರಿತ ಕಾರಣ.
ಅದು ಹುಸಿ,, ಕಚ್ಚಿದಡೆ ವಿಷವೇರಿತ್ತಲ್ಲದೆ, ವಿಷಕ್ಕೆ ಹಾಹೆ ಇಲ್ಲ.ಇರಿದವನಿದ್ದಂತೆ ಅಂಬಿಗೆ ಮುನಿವರೆ ?ಹಾವಿದ್ದಂತೆ ವಿಷವ ಕೊಲಬಹುದೆ ?ಎಲ್ಲರಲ್ಲಿ ಲೇಪ ನೀನಾಗಿದ್ದು, ಕರಣಂಗಳ ಹೋರಾಟವೇಕೆ ಎನಗೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ ?
ಅಯ್ಯಾ, ಸಕಲವ ನೇತಿಗಳೆದು ನಿಂದ ಅಕ್ಷತೆಯನಿಡುವೆನಯ್ಯಾ.ವಿಕಳಭಾವರೂಪಿಲ್ಲದ ಗಂಧವ ಧರಿಸುವೆನಯ್ಯಾ.ಸಕಲಭಾವ ಸಂಚರಿಸದೆ ನಿರುತವಾಗಿ ನಿಂದ ಧೂಪವ ಕೈಕೊಳ್ಳಯ್ಯಾ.ಇಂತೀ ಮನಘನ ಭಾವಪೂಜೆ ನಿಮಗರ್ಪಿತವಯ್ಯಾ.ಸಗರದ ಬೊಮ್ಮನೊಡೆಯ ಎನ್ನ ತನುಮನ ಸಂಗದಲ್ಲಿ ನಿಂದು,ನಿಸ್ಸಂಗವಾದಲ್ಲಿಯೆ ನಿಮಗೆ ಪೂಜೆಯಯ್ಯಾ.
ಅಂಗವಳಿದು ಸುಸಂಗವಾಗಲಾಗಿ,ಸಂದೇಹಿಗಳ ಸಂದೇಹ ಬಿಟ್ಟಿತ್ತು, ನಿಸ್ಸಂದೇಹವಾಯಿತ್ತು.ಅದೆಂತೆಂದಡೆ;ತೋರುವ ತೋರಿಕೆ ತಾನೆಯಾದ ಕಾರಣ.ಸಕಲದೊಳಗಿರ್ದು ನಿಃಕಲದ ರೂಪ ನಿರ್ಧರವೆಂದು ಭಾವಿಸಿ,ಅರಿದರುಹಿಸಿಕೊಂಬವ ತಾನು ತಾನೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
ಅನ್ಯರು ಮಾಡಿದ ಸುರೆಯ ಕೊಂಡು, ಜಗ ತನ್ನ ತಾನರಿಯದಿರೆ,ತನ್ನಲ್ಲಿ ಒದಗಿದ ಮೂರು ಸುರೆಯ ಕೊಂಡು, ಸುರನಾಥನನರಿಯದಿರೆ,ತ್ರಿವಿಧದ ಸುರತಕ್ಕೊಳಗಾಹ ಸುರಭಾವಿಗಳ ಹರಹಿಗೆ ಸಿಕ್ಕ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು.