ಬಸವಣ್ಣ, ಚೆನ್ನಬಸವಣ್ಣ, ಪ್ರಭು, ವೀರಮಡಿವಳ, ನಿಜಗುಣಶಿವಯೋಗಿ,
ಸಿದ್ಭರಾಮ, ಮೋಳಿಗೆಯಯ್ಯ, ಆಯ್ದಕ್ಕಿಯ ಮಾರಯ್ಯ,
ಏಕಾಂತರಾಮಯ್ಯ,
ಅಜಗಣ್ಣ, ಶಕ್ತಿ, ಮುಕ್ತಿ, ಮಹಾದೇವಿಯಕ್ಕ ಮುಂತಾದ
ಏಳುನೂರೆಪ್ಪತ್ತು ಅಮರಗಣಂಗಳು ಕೊಟ್ಟ ವ್ರತಪ್ರಸಾದ.
ಆ ಪ್ರಸಾದ ಎನಗೆ ಪ್ರಸನ್ನ, ನಿಮಗೆ ಮರ್ತ್ಯದ ಮಣಿಹ ಹಿಂಗುವನ್ನಕ್ಕ.
ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ, ನಾ ಹಿಡಿದ ನೇಮದಲ್ಲಿ, ಭಾಷೆಯಲ್ಲಿ, ನಾ ತಪ್ಪಿದಡೆ, ತಪ್ಪ ಹೊತ್ತಲ್ಲಿ ನಿಮ್ಮ ಕೇಳಿದಡೆ, ನಾ ಸತ್ತಿಹೆನೆಂದು ಕೂಡಿದಡೆ, ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ ಘಟವ ಬಿಟ್ಟಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಕ್ರೀ ಭಿನ್ನಚಿಹ್ನದೋರದಲ್ಲಿಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ನಿನ್ನಲ್ಲಿಯೆ ಲೀಯ.