ಜಗಮೆಚ್ಚಬೇಕೆಂಬ ಶೀಲವ ನಾನರಿಯೆ,
ಕೊಳುಕೊಡೆಯಾಗಬೇಕೆಂಬ ಶೀಲವ ನಾನರಿಯೆ,
ದ್ರವ್ಯದ ಕಳ್ಳತನಕ್ಕಂಜಿ ಶೀಲವಾದುದ ನಾನರಿಯೆ.
ಹೊರಗಣ ಬಾವಿ, ಮನೆಯ ಮಡಕೆ -
ತನುಘಾತಕಕ್ಕಾದ ಶೀಲವೆಂದು ನಾನರಿಯೆ.
ತಾ ಹೋದಲ್ಲಿ ಇದಿರ ಕೇಳುವಲ್ಲಿ
ಆಯತ ಸ್ವಾಯತ ಸನ್ನಹಿತನೆಂಬುದ ವಿಚಾರಿಸಿ,
ಅಹುದಲ್ಲವೆಂಬುದ ಮನಕ್ಕೆ ಕುರುಹಿಟ್ಟು,
ನೇಮಕ್ಕೆ ಬಂದುದ ವ್ರತಕ್ಕೆ ಸಂದುದ ಸಂದೇಹವುಳ್ಳನ್ನಕ್ಕ ವಿಚಾರಿಸಿ,
ಸಂದೇಹ ನಿಂದಲ್ಲಿ ತನ್ನ ಆಯತದ ಅನುವನರಿತು ಕೊಂಬುದು ಪ್ರಸಾದವು. ಇಂತೀ ತನುವಿಚಾರ ಕ್ರೀವಿಚಾರ ;
ಇಂತೀ ಭಾವಶುದ್ಧಾತ್ಮವಾದಲ್ಲಿ ವ್ರತ ಸಂದಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಶೀಲವಂತನಾದ.