ಧನಶೀಲ ಮನಶೀಲ ತನುಶೀಲ ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ.
ಇಂತೀ ವ್ರತಸಂಪದವೆಲ್ಲವು ಅದಾರ ಕುರಿತು ಮಾಡುವ ನೇಮ
ಎಂಬುದ ತಾನರಿಯಬೇಕು.
ಗುರುವಿಂಗೆ ತನುವನರ್ಪಿಸಿ, ಲಿಂಗಕ್ಕೆ ಮನವನರ್ಪಿಸಿ,
ಜಂಗಮಕ್ಕೆ ಧನವನರ್ಪಿಸಿ, ತ್ರಿವಿಧಕ್ಕೆ ತ್ರಿವಿಧವ ಕೊಟ್ಟು,
ತನ್ನ ವ್ರತಕ್ಕೆ ಭಿನ್ನಭಾವವಿಲ್ಲದೆ ನಿಂದುದೆ ವ್ರತ.
ಹೀಗಲ್ಲದೆ, ಇದಿರ ಮಾತಿಂಗಂಜಿ
ಕೊಡುವ ಕೊಂಬುವರ ನಿಹಿತಕ್ಕಂಜಿ ನಡೆವನ ವ್ರತ
ಜಂಬುಕ ಶೀಲವಹಿಡಿದು ನಾಲಗೆಮುಟ್ಟದೆ ನುಂಗುವ ತೆರದಂತೆ
ಸರ್ವವ ತಾ ಮುಟ್ಟುವಲ್ಲಿ ಜಂಗಮಮುಟ್ಟದೆ ತಾ ಮುಟ್ಟಿದನಾದಡೆ
ಸಜ್ಜನಸ್ತ್ರೀ ಕೆಟ್ಟುನಡೆದಂತೆ.
ಬಾಯಿಯಿದ್ದು ಬಯ್ಯಲಾರೆ, ಕಯ್ಯಿದ್ದು ಪೊಯ್ಯಲಾರೆ,
ಕಾಂಬುದಕ್ಕೆ ಮೊದಲೆ ಕಣ್ಣ ಮುಚ್ಚುವೆನು.
ಈ ಗುಣ ತಪ್ಪದು ನಿಮ್ಮಾಣೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.