ನಿತ್ಯ ಚಿಲುಮೆಯ ಕೃತ್ಯವೆಂದು ಮಾಡುವಲ್ಲಿ,
ಮಳಲಿನ ಮರೆಯ ನೀರ ಬಳಸದೆ,
ಸಲೆ ಪೃಥ್ವಿಯಲ್ಲಿ ನೆಲೆ ಚಿಲುಮೆಯಂ ಕಂಡು
ದಿನಕೃತ್ಯ ತಪ್ಪದೆ ನೇಮ ಸಲುವಂತೆ ಕಾಷ್ಠವಂ ತೊಳೆದು
ಜೀವಜಂತುಗಳ ನೋಡಿ, ಉಂಡೆ ಮರನಂ ಒಡೆಯದೆ,
ಜೀರ್ಣವಾದ ಕಾಷ್ಠಮಂ ಒಲೆಗಿಕ್ಕದೆ
ತುಳಿಯದ ಧಾನ್ಯವಂ ಶೋಧಿಸಿ,
ಲತೆ ಪರ್ಣ ಮೊದಲಾದ ಪಚ್ಚೆ ಪೈರು ಗೆಣಸು ವಿದಳ ಹುಡುಕಂ ಮುಟ್ಟದೆ, ಲಿಂಗಾವಧಾನದಲ್ಲಿ ಸ್ವಯಂ ಪಾಕವಂ ಮಾಡಿ
ಸ್ವಾನುಭಾವದಿಂದ ಲಿಂಗಾರ್ಚನೆಯ ಮಾಡಿ
ಬೇಡದೆ ಕಾಡದೆ ಸ್ವ ಇಚ್ಫಾಪರನಾಗಿ ಆರೈದು ನಡೆವಲ್ಲಿ,
ನೀರು ನೆಲ ಬಹುಜನಗ್ರಾಮ ಗಣಸಮೂಹಸಂಪದಸಮಯಕ್ಕೆ ಸಿಕ್ಕದೆ
ತ್ರಿವಿಧಕ್ಕೊಳಗಲ್ಲದೆ, ಇಂತೀ ನೇಮವೆ ತಾನಾಗಿ, ತಾನೆ ನೇಮವಾಗಿ,
ಉಭಯಕ್ಕೆ ತೆರಪಿಲ್ಲದೆ ನಿಂದುದು ಆಚಾರವೆ ಪ್ರಣವಾದ ರಾಮೇಶ್ವರಲಿಂಗವು ತಾನೆ.