ತನುಗುಣ ಮನಗುಣ ಪ್ರಾಣಗುಣಾದಿಗಳಲ್ಲಿ ಹುದುಗಿದಡೆ,
ಪಂಚೇಂದ್ರಿಯ ಅರಿಷಡ್ವರ್ಗಂಗಳೊಳು ಮನ ಕೂರ್ತು ಬೆರಸಿದಲ್ಲಿ,
ಆ ಮನದ ಹಸ್ತದಲ್ಲಿ ಲಿಂಗವಿಲ್ಲ.
ಲಿಂಗವಿಲ್ಲವಾಗಿ ಭಕ್ತಿಯಿಲ್ಲ, ಭಕ್ತಿಯಿಲ್ಲವಾಗಿ ವಿವೇಕವಿಲ್ಲ,
ವಿವೇಕವಿಲ್ಲವಾಗಿ ಅರಿವಿಲ್ಲ, ಅರಿವಿಲ್ಲವಾಗಿ ಸುಜ್ಞಾನವಿಲ್ಲ,
ಸುಜ್ಞಾನವಿಲ್ಲವಾಗಿ ಪರಮಾರ್ಥ ಘಟಿಸದು.
ಇವೆಲ್ಲವ ಕಳೆದುಳಿದಲ್ಲಿ ಮನದ ಹಸ್ತದಲ್ಲಿ ಲಿಂಗವಿದ್ದಿತ್ತು,
ಲಿಂಗದಲ್ಲಿ ಮನ ಸಂದಿತ್ತು,
ಮನ ಸಂದಲ್ಲಿ ಸೌರಾಷ್ಟ್ರ ಸೋಮೇಶ್ವರ ಸ್ವಸ್ಥಿರವಾದನು.