ಬಿಲ್ಲು ಕೋಲವಿಡಿದು ಮನ ಬಂದ ಪರಿಯಲ್ಲಿ ಎಚ್ಚಾಡುವಾತ
ಅರ್ತಿಕಾರನಲ್ಲದೆ ಬಿಲ್ಲುಗಾರನಲ್ಲವಯ್ಯ.
ಹೊನ್ನು ಹೆಣ್ಣು ಮಣ್ಣ ಬಿಟ್ಟು
ಚೆನ್ನಾಗಿ ಮಂಡೆಯ ಬೋಳಿಸಿಕೊಂಡು
ಹಾಡಿದ ವಚನಂಗಳೇ ಹಾಡಿಕೊಂಡು
ಮುಂದೆ ವಸ್ತುವ ಸಾದ್ಥಿಸಿಕೊಳ್ಳಲರಿಯದೆ
ಹಸಿದರೆ ತಿರಿದುಂಡು
ಮಾತಿನಮಾಲೆಯ ಕಲಿತಾತ
ವಿರಕ್ತನೆಂಬ ನಾಮಕ್ಕರುಹನಲ್ಲದೆ
ಸಂಧಾನಕ್ಕರುಹನಲ್ಲ.
ಅದೇನು ಕಾರಣವೆಂದೊಡೆ
ಭಕ್ತಿಯೆಂಬ ಬಿಲ್ಲ ಹಿಡಿದು
ಸಮ್ಯಜ್ಞಾನವೆಂಬ ಹೆದೆಯನೇರಿಸಿ
ಲಿಂಗನಿಷ್ಠೆಯೆಂಬ ಬಾಣವ ತೊಟ್ಟು
ಆಕಾಶದ ಮೇಲಣ ಮುಪ್ಪುರದ ಮಧ್ಯದ
ಮಾಣಿಕ್ಯದ ಕಂಭವ ಮುಳುಗಲೆಚ್ಚು
ಮಾಯೆಯ ಬಲುಹ ಗೆಲಿದ
ಶರಣನೀಗ ಲಿಂಗಸಂಧಾನಿಯಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.