ಆರುಬಣ್ಣದ ಹದಿನೈದು ದೇಹದ ಕೋಡಗ,
ಒಂದು ರತ್ನವ ಮೆಟ್ಟಿಕೊಂಡು,
ಒಂದು ರತ್ನವ ಹಿಡಿದುಕೊಂಡು,
ಮತ್ತೊಂದು ರತ್ನವ ಮರೆಮಾಡಿಕೊಂಡು,
ಮೇರುಪರ್ವತವ ಶಿಖರವನೇರಿತು ನೋಡ.
ಅದು ತಾನಿರ್ದ ಪಂಚವರ್ಣದ ಪಟ್ಟಣವ ಹಾಳುಮಾಡಿ,
ಆ ಪಟ್ಟಣದ ಪ್ರಜೆಪರಿವಾರಂಗಳ ಕೈಕಾಲುಗಳಂ ಕೊಯ್ದು,
ಮಂತ್ರಿ ನಾಲ್ವರ ಕಡಿಖಂಡವಂ ಮಾಡಿ,
ಪ್ರಾಣಸ್ನೇಹಿತರಪ್ಪ ಸಂಗಾತಿಗಳೈವರ ಕಣ್ಣ ಕಳೆದು,
ಒಡಹುಟ್ಟಿದಿಬ್ಬರ ತಲೆಯೊಡೆಯನಿಕ್ಕಿ,
ತನ್ನಿಂದ ತಾನೇ ಸತ್ತೀತು.
ಭಕ್ತಿಯೆಂಬ ಬಿಲ್ಲ ಹಿಡಿದು,
ನಿರಹಂಕಾರವೆಂಬ ತಿರುವನೇರಿಸಿ,
ಉರಿಯ ಬಣ್ಣದಲೆಚ್ಚು ಮರ್ಕಟನ ಕೊಂದು,
ಆ ರತ್ನಂಗಳಂ ಕೊಂಡು,
ಸೂರೆಯ ಬಿಟ್ಟಾತನೀಗ ಲಿಂಗಕ್ಕೆ ಸಲೆ ಸಂದ ಶರಣನಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.