ರತ್ನಜ್ಯೋತಿಯ ಪ್ರಭೆಯೊಳಗಣ ಸ್ವಯರತ್ನ ಶರಣಂಗೆ
ತತ್ಪದವೆಂದಡೇನಯ್ಯ ? ತ್ವಂ ಪದವೆಂದಡೇನಯ್ಯ ?
ಅಸಿಪದವೆಂದಡೇನಯ್ಯ ?
ತತ್ಪದವೆಂದಡೆ ಲಿಂಗ, ತ್ವಂ ಪದವೆಂದಡೆ ಅಂಗ,
ಅಸಿಪದವೆಂದಡೆ ಲಿಂಗಾಂಗಸಂಯೋಗವಯ್ಯ.
ಇಂತೀ ತ್ರಿವಿಧವನು ಮೀರಿದಾತ ಸ್ವಾನುಭಾವ ಸಂಪನ್ನ, ಸ್ವಯಂಭು ತಾನೆ.
ಅಖಂಡದಾಕಾರ ಆದಿವಸ್ತು ತಾನೆಂದರಿಯದೆ
ತತ್ಪದವೆ ಲಿಂಗವೆಂದು ಬೆರತಿಪ್ಪರು ಆ ಲಿಂಗ ತಮಗೆಲ್ಲಿಯದು ?
ಅಸಿಪದವೆ ಲಿಂಗಾಂಗಸಂಯೋಗವೆಂಬರು.
ಆ ಲಿಂಗಾಂಗಸಂಯೋಗ ತಮಗೆಲ್ಲಿಯದು ?
ಲಿಂಗ ತಮ್ಮದೆಂಬರು, ಪೃಥ್ವಿಯ ಹಂಗು.
ಅಂಗ ತಮ್ಮದೆಂಬರು, ಅಪ್ಪುವಿನ ಹಂಗು.
ಜ್ಞಾನ ತಮ್ಮದೆಂಬರು, ತೇಜದ ಹಂಗು.
ಇಂತೀ ತ್ರಿವಿಧದ ಹಂಗ ಹರಿದು ಲಿಂಗವೆ ತಾನಾದ
ಬಸವಣ್ಣ ಸಾಕ್ಷಿಯಾಗಿ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವಾಯಿತ್ತು.