ಘಟನಾಘಟನಸಮರ್ಥನಪ್ಪ ಶ್ರಿಗುರುವಿನ ಪ್ರಸಾದದಿಂದಲ್ಲದೆ,
ಮಾಯೆಗೆ ಮರುಳಾದ ನರಜೀವಿಗಳ
ಬಹಿರಂಗದ ಬರಿಯಸಂಸ್ಕಾರ ಮಾತ್ರದಿಂದ ಭವಿ ಭಕ್ತನಪ್ಪನೆ ?
ಸೊಡ್ಡಳದೇವನ ಶುಭವಪ್ಪ ನೋಟದಿಂದ
ಇಟ್ಟಿಯ ಹಣ್ಣುಗಳು ಸಿಹಿಯಾದುವಲ್ಲದೆ,
ಲೋಕದ ಕಾಕುಮಾನವರ ನೋಟಮಾಟದಿಂದ ಸಿಹಿಯಾದುವೆ ?
ಅದು ಕಾರಣ_ಅಂತಪ್ಪ ಸಾಮಥ್ರ್ಯವಿಲ್ಲದೆ
ಕಡುಪಾತಕಿಗಳ ಹಿಡಿದು ತಂದು, ಲಿಂಗವ ಕೊಡಲು
ಕಡೆತನಕ ಭವಿಗಳಾಗಿರ್ಪರಲ್ಲದೆ ಭಕ್ತರಾಗಲರಿಯರಯ್ಯಾ
ಕೂಡಲಚೆನ್ನಸಂಗಯ್ಯಾ.