ಕಾಯಪುರವೆಂಬ ಪಟ್ಟಣದೊಳಗೆ;
ಮನವೆಂಬ ಅರಸು, ತ್ರಿಗುಣವೆಂಬ ಪ್ರಧಾನರು,
ವಶೀಕರಣವೆಂಬ ಸೇನಬೋವ
ಸಂಚಲವೆಂಬ ತೇಜಿ, ಅಷ್ಟಮದವೆಂಬ ಆನೆ,
ಈರೈದು (ಮನ್ನೆಯ) ನಾಯಕರು, ಇಪ್ಪತ್ತೈದು ಪ್ರಜೆ,
ನೂರನಾಲ್ವತ್ತೆಂಟು ದೇಹವಿಕಾರವೆಂಬ ಪರಿವಾರ,
ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು_
ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗದರಸು,
ಅಜಾತನೆಂಬ ಶರಣ ಪ್ರಧಾನಿ
ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು,
ಅರಸು ಕೂಡಲಚೆನ್ನಸಂಗಯ್ಯನು, ಒಲಿದ ಕಾರಣ.