ಆತ್ಮ ಒಂದೆಂದಲ್ಲಿ, ಇಂದ್ರಿಯಂಗಳು ಹಲವು ತೆರನಾದವು ನೋಡಾ.
ವಾಯು ಒಂದೆಂದಡೆ, ಒಂಬತ್ತು ಸಂಧಿಸಿದವು ನೋಡಾ.
ಇಂದ್ರಿಯ ಒಂದೆಂದಡೆ, ನಾಲ್ಕು ಸಂದಣಿಸಿದವು ನೋಡಾ.
ಮದ ಒಂದೆಂದಡೆ, ಏಳು ಸಂಭ್ರಮಿಸುತಿವೆ ನೋಡಾ.
ಕಳೆ ಒಂದೆಂದಡೆ, ಹದಿನೈದು ಹಿಂಗದಿವೆ ನೋಡಾ.
ಇಂತೀ ಸ್ಥೂಲತನು ಒಂದೆಂದಡೆ, ಸೂಕ್ಷ್ಮಕಾರಣ ದ್ವಂದ್ವವಾಗಿವೆ ನೋಡಾ.
ಜೀವ ಒಂದೆಂದಡೆ, ಪರಮಾತ್ಮನೆಂದು ತ್ರಿವಿಧ ಸಂಗವಾಗಿದೆ ನೋಡಾ.
ಅರಿದೆನೆಂಬಲ್ಲಿ ಹಿಂದೊಂದು ಮರವೆ, ಮರೆದೆನೆಂಬಲ್ಲಿ ಮುಂದೊಂದರಿವು.
ಇಂತೀ ದಂಪತಿ ಸಂಗವುಳ್ಳನ್ನಕ್ಕ ಏನನಹುದೆಂಬೆ, ಏನನಲ್ಲಾ ಎಂಬೆ !
ನುಡಿದಡೆ ಸಮಯಕ್ಕೆ ದೂರ, ಸುಮ್ಮನಿದ್ದಡೆ ಸ್ವಾನುಭಾವಕ್ಕೆ ದೂರ.
ಆರೆಂದಡೂ ಎನಲಿ, ಆವ ಸ್ಥಲದಲ್ಲಿ ನಿಂದಡೂ ಭಕ್ತಿಸ್ಥಲವೆ.
ವಸ್ತುವ ನೆಮ್ಮುವುದಕ್ಕೆ ವಿಶ್ವಾಸ.
ಇದು ಸಂಗನಬಸವಣ್ಣನ ಕಟ್ಟು, ಬ್ರಹ್ಮೇಶ್ವರಲಿಂಗವ ಮುಟ್ಟುವ ಗೊತ್ತು.