ಭ ಪದದಿಂದ ಪ್ರಾರಂಭವಾಗುವ ವಚನಗಳು:
ಭಕ್ತಿಪ್ರಸಾದ, ಮುಕ್ತಿಪ್ರಸಾದ, ಇರಪರಪ್ರಸಾದದ ನೆಲೆಯ ಕಂಡು ಸುಖಿಸಿದೆವೆಂಬರು. ತಾವರಿಯದ ವಿವರ ತಮಗೆಲ್ಲಿಯದೊ ? ಸಂಗಯ್ಯನಲ್ಲಿ ಬಸವ ಕಾಯರಹಿತನಲ್ಲದೆ ಮತ್ತಾರನೂ ಕಾಣೆನಯ್ಯಾ.
ಭಕ್ತಿಯಿಲ್ಲದ ಕಿಂಕುರ್ವಾಣವ ಮಾಡಹೋದರೆ ಆ ಭಕ್ತಿ ಗಹಗಹಿಸಿ ನಕ್ಕಿತ್ತು. ಕಿಂಕುರ್ವಾಣವಿಲ್ಲದಿದ್ದರೆ ಜ್ಞಾನವಿಲ್ಲದಾಯಿತ್ತು. ಆ ಜ್ಞಾನ ಜ್ಞಾನಕ್ಕೆ ಸುಯಿದಾನವೈದಲು ಭಕ್ತಿನೆಲೆಯಾಯಿತ್ತಯ್ಯ ಸಂಗಯ್ಯ.
ಭೃತ್ಯಾಚಾರವಳಿಯ ಭೃತ್ಯವನನುಭವಿಸಿದೆನು. ಅಪ್ರತಿಮಲಿಂಗ ನಿಜಾನಂದ ಸುಖವ ಕಂಡು ಸುಯಿದಾನಿಯಾನಾದೆನಯ್ಯ, ಎಲೆಯಯ್ಯ ಏನೆಂದೆನ್ನೆ ನಿಮ್ಮ ಮಹದ ಆಯತವ ? ಮಹದನುಭವವ ಕಂಡು ಸುಖಿಯಾದೆನಯ್ಯ ಸಂಗಯ್ಯ.
ಭಾವವಿಲ್ಲದ ರೂಪೆ ರೂಪಿಲ್ಲದೆ ಅಡಗಿದೆ. ನಿಯಮವಿಲ್ಲದ ಕಳೆಯೆ ಕಳೆಯಿಲ್ಲದೆ ಅಡಗಿದೆ. ಕಾಯವಿಲ್ಲದ ಸುಖವೆ ಸುಖವಿಲ್ಲದೆ ಅಡಗಿದೆ. ಕರಣಂಗಳ ಸಂಗವನಳಿದು ಕರ್ಮದ ಮಾಟಕೂಟವ ಕಳೆದು ಕಲ್ಪಿತನಷ್ಟವಾಗಿ ಬಸವಾ ಬಸವಾ ಬಸವಾ ಎಂಬ ಶಬ್ದ ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ.