ಅರಿಯೆನರಿಯೆನಿಂತಹ ಮೂರ್ತಿಯ, ಅರಿಯದವನಲ್ಲ.
ನಾನು ಬೆರಸಿರಲು ಸುಖದಿಂದ ಪ್ರಣವಾಕ್ಷರವಾಯಿತ್ತಯ್ಯ.
ಆ ಪ್ರಣವಾಕ್ಷರವೆ ಪ್ರಸಾದವಾಯಿತ್ತು.
ಆ ಪ್ರಸಾದದ ನೆಲೆಯಿಂದ ಮನ ವಿಶೇಷವಾಯಿತ್ತು.
ವಿಶೇಷವಿಚಾರದಿಂದ ವಿನಯಾರ್ತ ಪ್ರಸಾದಿಯಾನಾದೆನಯ್ಯ.
ಪ್ರಸಾದಸುಖದಿಂದ ಮುಖ ವಿಶೇಷವಾಯಿತ್ತು.
ಸಂಗಯ್ಯ, ನಿಮ್ಮ ಬಸವನಿಂದಲಾನು ಪರಿಣಾಮಿಯಾದೆನು.
ಅರಿಯೆನರಿಯೆ ನಾನು, ಏನುವನರಿಯೆನಯ್ಯ;
ಎಲ್ಲವ ಮರದೆನಯ್ಯ,
ಎಲ್ಲಾ ಪುರಾತರ ಹಂಗ ಹರಿದು ನಾನು
ಸಂಗ ನಿಸ್ಸಂಗಿಯಾದೆನು.
ಗುಣಕಥನದ ಮಾತ ಹರಿದು
ಬಸವ ಬಸವಾಯೆಂಬ ಮಾತಿನ ಭ್ರಮೆಯ ಕಳೆದುಳಿದೆನಯ್ಯ.
ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು.
ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು.
ಉಭಯದ ಹಂಗಹರಿದು ಉಪಮಾತೀತನಾದ ನಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಕೂಡಿ
ನಿರಾಳ ಪ್ರಸನ್ನಮೂರ್ತಿಯಾದ ನಮ್ಮ ಬಸವಯ್ಯನು.
ಅರಸರಸಲು ನಾನು
ಅರಸುವ ವಸ್ತು ಎನ್ನ ಕಣ್ಣಿಂಗೆ ಕಾಣಲಾಯಿತ್ತು.
ಬಯಕೆಯ ಬಯಸಲು ನಾನು
ಬಯಸುವ ವಸ್ತು ಕೈಗೂಡಿತ್ತು.
ನಾನೆಂತಹ ಪುಣ್ಯವುಳ್ಳವಳೋ !
ನಾನೆಂತಹ ಮುಕ್ತಿಯುಳ್ಳವಳೋ !
ನಾನುಭಯದ ಸಂಗವ ಹರಿದು ನಿಸ್ಸಂಗಿಯಾದೆನು
ಸಂಗಯ್ಯನಲ್ಲಿ ದ್ವಂದ್ವಕರ್ಮರಹಿತಳು.