ನಿಚ್ಚ ನಿಚ್ಚ ಲಿಂಗಪೂಜೆಯ ಮಾಡಿ,
ನಿಚ್ಚ ನಿಚ್ಚ ಜಂಗಮಕ್ಕೆ ಶರಣೆಂದು, ಜಂಗಮಪೂಜೆಯ ಮಾಡಿ,
ನಿಚ್ಚ ನಿಚ್ಚ ಪಾದೋದಕ ಪ್ರಸಾದವ ಕೊಂಡು,
ಮತ್ತೆ, ಆ ಜಂಗಮವ ದ್ಥಿಕ್ಕರಿಸಿ ನುಡಿದು,
ಹುಸಿಯಟಮಟವನಾರೋಪಿಸಿ,
ಜಂಗಮದ ಕೈಗೆ, ನಾಲಗೆಗೆ ಶಿಕ್ಷೆಯ ಮಾಡಬೇಕೆಂಬವರಿಗೆ
ಗುರುವುಂಟೆ? ಲಿಂಗವುಂಟೆ? ಜಂಗಮವುಂಟೆ?
ಪಾದೋದಕ ಪ್ರಸಾದವುಂಟೆ? ಇಲ್ಲವಾಗಿ.
ಅವರಿಗೆ ಪೂಜಾಫಲ ಮುನ್ನವೆಯಿಲ್ಲವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.