ಭಕ್ತ ವಿರಕ್ತಂಗೆ ಜೂಜು ವೇಂಟೆ ಕುತರ್ಕ ಕರ್ಕಶ
ನೆತ್ತ ಚದುರಂಗ ಪಗಡೆ ಪಗುಡಿತನ ಪರಿಹಾಸ
ಕುಸರಸ ಕುಚಿತ್ತ ಕುಟಿಲ ಗಣಿಕಾಸಂಗ
ಇಂತೀ ಸಮೇಳ ಸ್ವಚ್ಫಂಗಳ ಮಾಡುತ್ತ
ವೇದವ ಮರೆದು, ಶಾಸ್ತ್ರವ ತೊರೆದು, ಪುರಾಣದ ಹಾದಿಯನರಿಯದೆ
ಆಗಮದ ಆಗುಚೇಗೆಯ ಕಾಣದೆ
ಶಿವಾಧಿಕ್ಯ ಸಂಬಂಧನಲ್ಲದೆ, ಶಿವಪೂಜೆಯನೊಲ್ಲದೆ
ಶಿವಧ್ಯಾನದಲ್ಲಿ ನಿಲ್ಲದೆ
ಶಿವ ಯಥಾ ಕಥನದಲ್ಲಿ ತ್ರಿಕರಣಶುದ್ಧಾತ್ಮನಲ್ಲದೆ
ಇಂತೀ ಬಹುದುರ್ವಿಕಾರನಾಗಿ ಆಡುತ್ತ
ಮತ್ತವು ತೀರಿದ ಬಳಿಕ ದೇವಂಗೆ ಎಡೆಮಾಡು,
ಜಪಕ್ಕೆ ಮಾಲೆಯ ತಾ ಧ್ಯಾನದಲ್ಲಿದ್ದೆಹೆನೆಂದು
ಮತ್ತೆ ಅನ್ಯರು ಹೊದ್ದಬೇಡಾಯೆಂದು
ಚಿತ್ತಶುದ್ಧನಾಗಿದ್ದೆಹೆನೆಂದು ನುಡಿಗುಟ್ಟುವ ಮಿಟ್ಟೆಯ ಭಂಡಂಗೆ
ಕೃತ್ಯ ನಿತ್ಯ ನೇಮ ಜಪ ತಪ
ವ್ಯೋಮ ಅನುಸಂಧಾನ ಸತ್ಕ್ರಿಯಾಮಾರ್ಗ ಮತ್ತುಂಟೆ ?
ಸಂಸಾರದ ಹರವರಿಯಲ್ಲಿದ್ದಡೂ
ಕೋಲದ ಮಣಿಮಾಡದ ಕೆಳೆಯಲ್ಲಿದ್ದ
ಅರಸಿನ ಎಚ್ಚರಿಕೆಯ ಇರುವಿನಂತೆ ಇರಬೇಕು.
ಇಂತೀ ಸತ್ಕ್ರಿಯಾಮಾರ್ಗಂಗಳಿರವಿನಿಂದ
ಕಾಲಕರ್ಮಟಂಗಳಿಂದ ಕಳೆದು, ಸುಗುಣ ದುರ್ಗುಣಂಗಳ ತಿಳಿದು
ಉಭಯವ ಕಳೆದು, ತನ್ನ ತಾನರಿದು
ಭಿನ್ನಭಾವಿಯಲ್ಲದೆ, ಇಂತೀ ಭಾವ ಸನ್ನೆಗಟ್ಟಿಗೆಯಂತೆ
ಕಮಠೇಶ್ವರಲಿಂಗವನರಿವುದಕ್ಕೆ ಕ್ರಿಯಾಪದ ಭಿತ್ತಿ.