ಅಥವಾ

ಒಟ್ಟು 80 ಕಡೆಗಳಲ್ಲಿ , 13 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ? ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು, ಮತ್ತೆಲ್ಲರಲ್ಲಿ ಬೆರಸಬಹುದೆ ? ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ, ಮತ್ತಿವ ಒಡಗೂಡಬಹುದೆ ? ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ, ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಹರಶರಣರಿಗೆ ದೂರ.
--------------
ಶಿವಲೆಂಕ ಮಂಚಣ್ಣ
ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ ? ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ? ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ? ಇಂತೀ ವ್ರತದ ನಿಹಿತವ ತಿಳಿದಲ್ಲಿ, ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ, ಆ ತನುವ ಬಿಡದಿರ್ದಡೆ ಎನಗದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
--------------
ಅಕ್ಕಮ್ಮ
ವಾರಿ ತೆಂಗಿನ ಮರದಲ್ಲಿ ಏರಿತ್ತೊ ? ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ? ಅಲ್ಲಾ ವೃಕ್ಷದ ಸಹಜ ಬೀಜವೊ ? ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ, ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ, ನೀರೆಲ್ಲಿ ಅಡಗಿತ್ತು? ಹಿಪ್ಪೆ, ಕವಚವೆಲ್ಲಿದ್ದಿತ್ತು ? ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?, ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ, ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾದ್ಥಿಸಿಕೊಳ್ಳಿ, ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ, ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ? ಆ ಅಂಗಭಾವ ವಿರಹಿತನೋ ? ಈ ಉಭಯದ ಸಂದೇಹವುಳ್ಳನ್ನಕ್ಕ ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ, ಇಂತೀ ಭೇದಂಗಳನರಿತು, ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ, ಅದು ಬ್ಥಿನ್ನರೂಪೋ, ಅಬ್ಥಿನ್ನರೂಪೋ ? ಆ ನಿಜದ ನೆಲೆಯ ನೀವೇ ಬಲ್ಲಿರಿ. ಕಾಮಧೂಮ ಧೂಳೇಶ್ವರನಲ್ಲಿ ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು.
--------------
ಮಾದಾರ ಧೂಳಯ್ಯ
ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು. ನಾಮವೊಂದೇ ರೂಪವೊಂದೇ ಕ್ರೀವೊಂದೇ ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ. ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು. ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ, ಆ ಮಹತ್ವವು ತನಗನ್ಯವೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ, ಮೇರಳ ಸಿಪ್ಪೆ ಮುಚ್ಚಿಯಲ್ಲದೆ ಅಂಕುರದ ತಿರುಳಿಗೆ ಆದಿಯಿಲ್ಲ. ತಿರುಳು ಅಂಕುರ ನಾಸ್ತಿಯಾದಲ್ಲಿ ಸಿಪ್ಪೆ ಹುಟ್ಟುವುದಕ್ಕೆ ಉಭಯದ ತತ್ತಿಲ್ಲದಾಗದು. ಅಲ್ಲಾ ಎಂದಡೆ ಕ್ರೀವಂತರೊಪ್ಪರು, ಅಹುದೆಂದಡೆ ಅಮಲಿನ ಮಲಿನವಾಗದು. ದಗ್ಧವಾದ ಪಟ ಸಾಭ್ರಕ್ಕೊದಗದು. ಒಂದೆಂದು ಎರಡ ಕೂಡಿ ಸಂದನಳಿದಲ್ಲಿ ಲೆಕ್ಕ ನಿಂದಿತ್ತು. ಸದಾಶಿವಮೂರ್ತಿಲಿಂಗವೆಂದಲ್ಲಿ ಉಭಯನಾಮ ಲೀಯವಾಯಿತ್ತು.
--------------
ಅರಿವಿನ ಮಾರಿತಂದೆ
ಮನದ ಕೈಯಿಂದರಿದು, ಬುದ್ಧಿಯ ಕೈಯಿಂದ ವಿಚಾರಿಸಿ, ಚಿತ್ತದ ಕೈಯಿಂದ ಅರ್ಪಿಸಿಕೊಂಬುದು ಜ್ಞಾತೃವೋ ಜ್ಞಾನವೋ ಜ್ಞೇಯವೋ ? ಇಂತೀ ತ್ರಿವಿಧದ ಕೈಯಲ್ಲಿ ತ್ರಿವಿಧಮುಖಂಗಳಿಂದ ಅರ್ಪಿಸಿಕೊಂಬುದು ಅಂಗದ ಮೇಲಿದ್ದ ಲಿಂಗಸೋಂಕೊರಿ ಆ ಲಿಂಗದ ಒಳಗಣ ಕಳಾಸ್ವರೂಪೊ ? ಅಲ್ಲಾ, ತನ್ನ ಅರಿದ ಅರುಹಿಸಿಕೊಂಬ ನಿರುಗೆಯ ಕುರುಹೊ ? ಇಂತೀ ಅಂಗದಲ್ಲಿ, ಭಾವದಲ್ಲಿ, ಅರಿದ ಅರಿಕೆಯಲ್ಲಿ ತ್ರಿವಿಧ ಕುರುಹಳಿದು ಒಡಗೂಡಿದಲ್ಲಿ ಅಂಗಸೋಂಕು, ಅಲ್ಲಿಯೇ ನಿರಾಳ ಭೋಗಬಂಕೇಶ್ವರಲಿಂಗವಲ್ಲಿಯೆ.
--------------
ಶ್ರೀ ಮುಕ್ತಿರಾಮೇಶ್ವರ
ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು. ಆ ಮಡುವಿನ ಮಧ್ಯದಲ್ಲಿ ಐದು ಸರಗೂಡಿದ ಬಾವಿ. ಆ ಬಾವಿಯೊಳಗೆ ಮೂರು ಮುಖದ ಹುಲಿ ಹುಟ್ಟಿತ್ತು. ಒಂದು ಕೊಂದು ತಿಂಬುದು, ಒಂದು ಕೊಲ್ಲದೆ ತಿಂಬುದು, ಒಂದು ಎಲ್ಲರ ನೋಡಿ ತಿಂಬುದು, ಅಲ್ಲಾ ಎಂಬುದು, ಹುಲಿಯ ಬಣ್ಣ ಮೊದಲು ಕಪ್ಪು, ನಡುವೆ ಭಾಸುರ, ತುದಿಯಲ್ಲಿ ಬಿಳಿದು. ಹಗೆವಣ್ಣ ಸಹಿತಾಗಿ ಹುಟ್ಟಿದ ಹುಲಿ, ಉರಿಯ ಮಡುವನೀಂಟಿ, ಸರಬಾವಿಯ ಕುಡಿದು, ತಿಂಬವೆರಡು ಮುಖ ತಿನ್ನದ ಮುಖದಲ್ಲಿ ಅಡಗಿ, ಕಡೆ ಕಪ್ಪು, ನಡುವಣ ಭಾಸುರ, ತುದಿಯ ಬಿಳುಪಿನಲ್ಲಿ ಅಡಗಿ ಒಡಗೂಡಿತ್ತು. ಅದರ ತೊಡಿಗೆಯ ಕೇಳಿಹರೆಂದಂಜಿ, ಅಡಗಿದೆಯಾ, ಅಲೇಖನಾದ ಶೂನ್ಯ ಕಲ್ಲಿನೊಳಗಾಗಿ ?
--------------
ವಚನಭಂಡಾರಿ ಶಾಂತರಸ
ಭರಿತಾರ್ಪಣವೆಂದು ಲಿಂಗಕ್ಕೆ ಸಮರ್ಪಿಸಿದ ಮತ್ತೆ ಪ್ರತಿಪ್ರಸಾದವೆಂದು ಕೊಂಬಲ್ಲಿ ಭರಿತಾರ್ಪಣವೆಂತುಟಾಯಿತ್ತು ? ತನ್ನಯ ಘಟದ ಹೆಚ್ಚುಗೆಯೊ ? ಅಲ್ಲಾ, ಭರಿತಾರ್ಪಣದ ವ್ರತದ ನಿಶ್ಚಯವೊ ? ಕಟ್ಟಿನ ವ್ರತಕ್ಕೆ ಪುನರಪಿ ಕ್ರೀಯುಂಟೆ ? ಸತ್ಯ ಜಾರಿದ ಮತ್ತೆ ಮುಕ್ತಿಯ ಪಥ ಅವಂಗುಂಟೆ ? ಇಂತೀ ಕಂಡವರ ಕಂಡು, ಕೈಕೊಂಡು, ಅವರೊಂದಾಗಿ ಆಡಿ, ಅವರ ಸಂಸರ್ಗದಿಂದವ ಕಲಿತು, ಅವರು ಹಿಂಗಿದ ಮತ್ತೆ ತಾನೆಂದಿನಂತಹ ಕ್ರಿಯಾಭಂಡನ ಭರಿತಾರ್ಪಣಲಂಡನ ಮತ್ತಾವ ಕ್ರೀಯಲ್ಲಿಯೂ ತಪ್ಪಿ, ಆ ತಪ್ಪಿಗೆ ವ್ರತವ ಹೆಚ್ಚಿಸಿಕೊಂಡಹೆನೆಂಬ ದುರ್ಮತ್ತ ಸುರಾಪಾ[ನಿಯಿಂ]ದತ್ತ ಕಾಣದಿರ್ದಡೆ ಭಕ್ತಿಗೆ ಸಲ್ಲ, ಮುಕ್ತಿಯವಂಗಿಲ್ಲ, ಸದ್ಭಕ್ತರೊಳಗಲ್ಲ, ಮಿಕ್ಕಾದ ಕೃತ್ಯ ಅವಂಗಿಲ್ಲ, ಇದು ಸತ್ಯ, ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.
--------------
ಶ್ರೀ ಮುಕ್ತಿರಾಮೇಶ್ವರ
ಕುಂಭದ ಅಪ್ಪುವಿನ ಸಂಗದಲ್ಲಿ ತಂಡುಲವ ಹಾಕಿ ಅಗ್ನಿಘಟದಿಂದ ಬೇಯಿಸಲಿಕ್ಕಾಗಿ, ಒಂದೊಂದು ತಂಡುಲ ಹಿಂಗಿ ಬೆಂದಿತ್ತೆ? ಆ ಅಪ್ಪು ಬೇರೆ ಬೇರೆ ಸಂಗವ ಮಾಡಿತ್ತೆ? ಆ ಅಗ್ನಿ ತಂಡುಲಕ್ಕೊಂದೊಂದು ಬಾರಿ ಉರಿಯಿತ್ತೆ? ಇಂತೀ ವಿವರಂಗಳ ಭೇದವನರಿತು ಅಂಗದಲ್ಲಿ ಆರು ಸ್ಥಲವನಂಗೀಕರಿಸಿದಲ್ಲಿ ಬೇರೊಂದೊಂದರಲ್ಲಿ ಹಿಂಗಿ ನೋಡಿಹೆನೆಂದಡೆ ಮೂರಕ್ಕಾರು ಆರಕ್ಕೆ ಮೂವತ್ತಾರು ಮತ್ತಿವರೊಳಗಾದ ಗುಣ ನಾಮಾತೀತಕ್ಕೆ ಅತೀತವಾಗಿಪ್ಪುದು. ಇಂತೀ ಸ್ಥಲಂಗಳನಹುದೆಂದೊಪ್ಪದೆ, ಅಲ್ಲಾ ಎಂದು ಬಿಡದೆ, ಅಲ್ಲಿಯ ಸ್ಥಲವಲ್ಲಿಯೆ ಏಕೀಕರಿಸಿ, ಅಲ್ಲಿಯ ಭಾವವ ತೋರಿದಲ್ಲಿಯೆ ಲೇಪಮಾಡಿ, ಹಿಡಿದಡೆ ಹಿಡಿತೆಗೆ ಬಾರದೆ, ಬಿಟ್ಟಡೆ ಹರವರಿಯಲ್ಲಿ ಹರಿಯದೆ, ವಸ್ತುಕದಲ್ಲಿ ವರ್ಣಕ ತೋರಿ ಆ ವರ್ಣಕಕ್ಕೆ ವಸ್ತುಕ ಅಧೀನವಾಗಿಪ್ಪ ಉಭಯಸ್ಥಲವನರಿದಲ್ಲಿ ವಿಶ್ವಸ್ಥಲ ನಾಶವಾಗಿ ಸದ್ಯೋಜಾತಲಿಂಗ ವಿನಾಶನವಾಗಬೇಕು.
--------------
ಅವಸರದ ರೇಕಣ್ಣ
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳ ಅರ್ಪಿಸುವಲ್ಲಿ ಕಟ್ಟಳೆವುಂಟು, ತನ್ನ ಘಟದ ಲಕ್ಷಣವುಂಟು. ಇಂತೀ ಉಭಯವ ಪ್ರಮಾಣಿಸಿಕೊಂಡು ಅರ್ಪಣದಿಂದ ಅರ್ಪಿಸುವಲ್ಲಿ ತೃಪ್ತಿಯ ಅಭಿಲಾಷೆಯಿಂದ ಸತ್ಯ ಸದೈವರ ಸಹಪಙ್ಞ್ತಯಲ್ಲಿ ಕ್ಷುತ್ತಿನ ಅಪೇಕ್ಷಕ್ಕಾಗಿ ಮತ್ತೆ ಪುನರಪಿಯಾಗಿ ಇಕ್ಕು ತಾಯೆಂದಡೆ, ಅದು ತನ್ನ ಕ್ಷುತ್ತಿನ ಭೇದವೊ ? ಭರಿತಾರ್ಪಣದ ಯುಕ್ತಿಯ ಭಿತ್ತಿಯೊ? ಭರಿತಾರ್ಪಣವೆಂಬಲ್ಲಿ ಲಿಂಗಕ್ಕೆ ಕೊಟ್ಟಲ್ಲದೆ ಮುಟ್ಟೆನೆಂಬ ಕಟ್ಟೊ ? ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂದ ಬಂದ ಮುಟ್ಟೊ ? ಇಂತಿವ ತಿಳಿದು, ಮನವಚನಕಾಯ ಕರಣೇಂದ್ರಿಯಂಗಳು ಮುಂತಾದ ಭೇದಂಗಳಲ್ಲಿ ಒಮ್ಮೆಗೊಮ್ಮೆ ತುತ್ತನಿಡುವಲ್ಲಿ, ಸವಿಯಾದ ರಸಾನ್ನಗಳ ಚಪ್ಪಿರಿವಲ್ಲಿ, ಅಲ್ಲಿಗಲ್ಲಿಗೆ ಉಭಯವಳಿದ ಭರಿತಾರ್ಪಣದ ತೆರನ ಕಂಡು, ಈ ಗುಣ ಜಿಹ್ವೇಂದ್ರಿಯದ ಭರಿತಾರ್ಪಣ. ಇಂತೀ ಭರಿತಾರ್ಪಣವನಂಗೀಕರಿಸಿದ ಸರ್ವವ್ಯವಧಾನಿಯ ಎಚ್ಚರಿಕೆಯ ಮುಟ್ಟು, ಮುಂದೆ ಗುಹ್ಯೇಂದ್ರಿಯಕ್ಕೆ ಸಿಕ್ಕು. ಇಂತೀ ವಿಷಯ ವ್ಯಸನಾದಿಗಳಲ್ಲಿ ಭರಿತಾರ್ಪಣದಿಂದ ಕೂಡುವ ಪರಿಯಿನ್ನೆಂತೊ ? ಇಂದ್ರಿಯ ಬಿಡುವನ್ನಕ್ಕ ಪುನರಪಿಯಾಗಿ ಅಂಗೀಕರಿಸಿಯಲ್ಲದೆ ಚಲನೆಯ ಗುಣ ಹೆರೆಹಿಂಗದು. ಅಲ್ಲಿಯ ಭರಿತಾರ್ಪಣದ ಪರಿಯ ಬಲ್ಲವನಾದಡೆ ಸರ್ವ ಎಲ್ಲಾ ಗುಣದಲ್ಲಿ ಭರಿತಾರ್ಪಣ, ಲಿಂಗಾಂಗ ಪರಿಪೂರ್ಣನೆಂಬೆ. ಇಂತೀ ಗುಣವನರಿಯದೆ ಕಂಡಕಂಡವರ ಕಂಡು ಕೈಕೊಂಡು ಈ ವ್ರತವನಂಗೀಕರಿಸಿದನಾದಡೆ ಗುರುವಿಂಗೆ ದೂರ, ಲಿಂಗ ಅವಂಗಿಲ್ಲ, ಚರಪ್ರಸಾದ ಸಲ್ಲ. ಇಂತಿವನರಿಯದೆ, ಗೆಲ್ಲಸೋಲಕ್ಕೆ ಹೋರಿಹೆನೆಂದಡೆ ಚೆನ್ನಬಸವಣ್ಣನ ಕೋರಡಿಯ ಕೊಡುವೆ. ಸಂಗನಬಸವಣ್ಣನ ಮೆಚ್ಚಿಸುವೆ. ಪ್ರಭು ನಿಜಗುಣದೇವರ ತಲೆದೂಗಿಸುವೆ. ಇದಕ್ಕೆ ಹಾಕಿದೆ ಮುಂಡಿಗೆ, ವರ್ಮದ ತಲೆಸುತ್ತು, ಎನ್ನೊಡೆಯ ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಹುಡಿಯ ಹಾರಿಸಿ ಅಡಗಿಸುವ ವಾಯು ಅಡಗಿ ತೋರುವ ಬೆಡಗಿನಂತೆ, ಪ್ರಾಣಲಿಂಗಿಯ ಅಂಗ. ಅಂಗವಡಗಿದಲ್ಲಿ ವಾಯುವಿಂಗೆ ಭಂಗವೊ ? ಅಲ್ಲಾ , ನುಡಿದವರ ನುಡಿಗೆ ಭಂಗವೊ ? ಇದರ ತೊಡಕ ತಿಳಿದಾತನೆ ಮೃಡನು, ಬಸವಪ್ರಿಯ ಕೂಡಲಚೆನ್ನಬಸವಣ್ಣ ಪ್ರಭುವೆ.
--------------
ಹಡಪದ ಅಪ್ಪಣ್ಣ
ಲಿಂಗಪ್ರಸಾದವ ಕೊಂಬುತಿದ್ದು ಮತ್ತೆ, ಪದಾರ್ಥದ್ರವ್ಯಂಗಳು ಇದಿರೆಡೆಯಾಗಿ ಬರಲಿಕಾಗಿ ಆ ಕರದಲ್ಲಿಯೆ ದ್ರವ್ಯವ ಸಮರ್ಪಿಸಬಹುದೆ ? ಅಹುದೆಂದಡೆ ಕ್ರೀ ಸೂತಕ, ಅಲ್ಲಾ ಎಂದಡೆ ಪ್ರಥಮಪ್ರಸಾದ ಅವರಿಗಿಲ್ಲ. ಇಂತೀ ಉಭಯವನರಿದು ಅರ್ಪಿಸಬಲ್ಲಡೆ ಲಿಂಗಾಂಗ ಸಹಭೋಜನವೆಂಬೆ. ಅಲ್ಲದಿರ್ದಡೆ ಪಡುವಿಂಗೆ ನೆರೆದ ತುಡುಗುಣಿಗಳಂತೆ ಬಾಯೊಳಗಣ ಕಚ್ಚು ದೇಹದೊಳಗಣ ಮುರುಗು ಅವಂಗಾವ ನಿತ್ಯನೇಮವೂ ಇಲ್ಲ, ಇದು ಸತ್ಯ ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.
--------------
ಶ್ರೀ ಮುಕ್ತಿರಾಮೇಶ್ವರ
ಅಲ್ಲಾ ಎನಬಾರದು, ಅಹುದೆನಬಾರದು, ಕೂಡಲಸಂಗನ ಶರಣರ ಸಂಗ ಕರಗಸದ ಬಾಯಿಧಾರೆಯಂತೆ ಅತಿ ಬಿರಿದಯ್ಯಾ
--------------
ಬಸವಣ್ಣ
ಅಪ್ಪುವಿನ ಯೋಗದ ಕಾಷ* ಹೊತ್ತುವಲ್ಲಿ, ಮೆಚ್ಚನೆ ತಮದ ಧೂಮ, ಶುಷ್ಕದ ಅಪ್ಪುವಿನ ಗುಣ. ಅಪ್ಪುವರತು ಶುಷ್ಕ [ತೊ]ಟ್ಟಾರೆ, ಕಿಚ್ಚು ಮುಟ್ಟುವುದಕ್ಕೆ ಮುನ್ನವೆ, ಹೊತ್ತಿ ಬೇವುದದು ಕಿಚ್ಚೋ, ಮತ್ತೊಂದೋ ? ಇಂತೀ ಉಭಯವನರಿತು, ಒಂದರಲ್ಲಿ ಒಂದು ಅದೆಯೆಂಬ ಸಂದೇಹವ ನೋಡಾ. ಅಲ್ಲಾ ಎಂದಡೆ ಭಿನ್ನಭಾವ, ಅಹುದೆಂದಡೆ ಇಷ್ಟದ ದೃಷ್ಟವೊಂದೆಯಾಗಿದೆ. ಜನ ಜಾತ್ರೆಗೆ ಹೋದವನಂತೆ ಕೂಟದಲ್ಲಿ ಗೋಷಿ* ಹ[ರಿ]ದಲ್ಲಿ, ತಮ್ಮ ತಮ್ಮ ಮನೆಯ ಇರವಿನ ಹಾದಿ. ಇಂತಿವನರಿದು ಬಾಡಗೆಯ ಮನೆಗೆ ಹೊಯ್ದಾಡಲೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸುಖದುಃಖಗಳನರಿವುದು, ಕಾಯ ಜೀವ ಒಂದಾದಲ್ಲಿ. ಅಹುದು ಅಲ್ಲಾ ಎಂಬುದನರಿವುದು, ಜೀವ ಪರಮ ಒಂದಾದಲ್ಲಿ. ಕಂಡೆ ಕಾಣೆನೆಂಬುದು, ದೃಕ್ಕೂ ದೃಶ್ಯ ಒಂದಾದಲ್ಲಿ. ಇಂತೀ ಪೂರ್ವ ಉತ್ತರ ಮಧ್ಯದಲ್ಲಿ ನಿಶ್ಚಯವದೇಕೋ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->