ಅಥವಾ

ಒಟ್ಟು 113 ಕಡೆಗಳಲ್ಲಿ , 40 ವಚನಕಾರರು , 87 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಟ್ಟಕಡೆಯಲಿಂದ ನಟ್ಟನಡುಮಧ್ಯಕ್ಕೆ ಬರಲು, ಸಟ್ಟಸರಿರಾತ್ರಿ ಕವಿಯಿತ್ತು ನೋಡಾ ! ಹುಸಿಗಳ್ಳರೊತ್ತಿಬಂದಲ್ಲಿ ಹೆಸರು ಅಡಗಿ ಹೋಯಿತ್ತು. ಮತ್ತೆ ನೋಡ ಕಂಡ, ಮಿಥ್ಯದೃಷ್ಟರೊಡ ಕಂಡ, ನಿರಂಜನ ಚನ್ನಬಸವಲಿಂಗವ ನೋಡ ಕಂಡ.
--------------
ದೇಶಿಕೇಂದ್ರ ಸಂಗನಬಸವಯ್ಯ
ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ ಆರು ಭೇದ ಮೂರರಲ್ಲಿ ಅಡಗಿ ಎರಡು ಅಳಿವಿಂಗೆ ಒಳಗಾಯಿತ್ತು. ಒಂದು ನಿಂದು ಸಮಯ ರೂಪಾಯಿತ್ತು. ಸಮಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗಕ್ಕೆ ಶಕ್ತಿನಾಮವಿಲ್ಲ.
--------------
ಅರಿವಿನ ಮಾರಿತಂದೆ
ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ ಪರಕೆ ಪರವಾದ ಪರಾಪರವು ತಾನೆ ನೋಡಾ. ಆ ಪರಾಪರವು ತಾನೆ ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ, ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ. ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ. ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು. ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ. ಆ ಚಿದದ್ವಯವಾದ ಬಸವಣ್ಣನೇ ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ, ಎನ್ನ ಸರ್ವಾಂಗಲಿಂಗವು ಕಾಣಾ. ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು ಬಸವಣ್ಣನಾದ ಕಾರಣ, `ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ ಭವಾರ್ಣವ ದಾಂಟಿದೆನು ಕಾಣಾ. ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ ಶರಣನಾದೆನು ಕಾಣಾ. ಬಸವನೇ ಲಿಂಗವಾದ ಕಾರಣ ನಾನಂಗವಾದೆನು. ಕರ್ತೃವೇ ಬಸವಣ್ಣ, ಭೃತ್ಯನೇ ನಾನು. ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ. ಇದು ಕಾರಣ, ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ, ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸೂರ್ಯನ ಕರಜಾಲಂಗಳು ಸೂರ್ಯೋದಯವಾದಲ್ಲಿ ಹುಟ್ಟಿ, ಸೂರ್ಯನು ಅಸ್ತಮಿಸಲು ಕೂಡ ಅಡಗುವಂತೆ, ಮನೋವಿಕಾರದಿಂದ ಲೋಕವೆಲ್ಲವೂ ತೋರಿ, ಮನ ಲಯವಾದೊಡನೆ ಆ ಲೋಕವೆಲ್ಲವೂ ಅಡಗಿ, ಜ್ಞಾನತತ್ತ್ವವೊಂದೇ ತನ್ನ ಸ್ವರೂಪವಾಗಿ ಉಳಿದಿಹ ಯೋಗಿಗೆ ಮುಂದೆ ಅರಿಯಬೇಕಾದುದೊಂದೂ ಇಲ್ಲವಯ್ಯಾ. ಉಳಿದ ಉಳುಮೆ ಜ್ಞಾನರೂಪಾಗಿ ನಿಂದಿತಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೇ.
--------------
ಸ್ವತಂತ್ರ ಸಿದ್ಧಲಿಂಗ
ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ ಗರ್ಭವಿಲ್ಲದೆ ಬಸುರಾದುದ ಕಂಡೆ. ದಿನ ವಾರ ಮಾಸವಿಲ್ಲದೆ ಬೇನೆತೋರದೆ ಒಂದು ಶಿಶು ಹಡೆದುದ ಕಂಡೆ. ಆ ಶಿಶು ಮಂಡಲಾದ್ಥಿಪತಿಯ ಕೊಂದು ಮಂಡಲವೆಲ್ಲ ಸುಡುವುದ ಕಂಡೆ. ಕಂಡವರ ನುಂಗಿ ಸೂಲಗಿತ್ತಿಯ ಕೊಲ್ಲುವದ ಕಂಡೆ. ತಾಯಿಸಂಗವ ಮಾಡಿ ತಂದೆಯಲ್ಲಿ ಸತ್ತು ಕೂಡಲಚನ್ನಸಂಗಯ್ಯನ ಪಾದದಲ್ಲಿ ಅಡಗಿ ಬಯಲಾದುದ ಕಂಡೆ. ಅದು ಅಡಗಿದಲ್ಲಿ ತಾನಡಗಬಲ್ಲರೆ ಪ್ರಳಯವಿರಹಿತ ಪರಶಿವಮೂರ್ತಿ ತಾನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜಲದೊಳಗಳ ಮತ್ಸ್ಯದ ನೆಲೆಯ, ಮುಗಿಲೊಳಗಳ ಮಿಂಚಿನ ನೆಲೆಯ, ವಾರಿಯ ಸರಲೆಕ್ಕವ ಭೇದಿಸಬಹುದೆ? ಆ ತೆರದಲ್ಲಿ ನಿಂದಾತ್ಮನ ಒದಗನರಿವ ಭೇದವೆಂತುಟಯ್ಯಾ? ವಾಯು ಬಯಲಲ್ಲಿ ಅಡಗಿ ಆವಠಾವಿನಲ್ಲಿ ಬೀಸಿದಡೆ ಕಲೆದೋರುವಂತೆ, ಆತ್ಮನ ಭೇದವ ಭೇದಿಸುವ ಪರಿ ತನ್ನನರಿತಲ್ಲದಾಗದು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಬಾಯಾರಿ ರಸ ಬತ್ತಿದವಂಗೆ ಪಾಯಸದ ಗಡಿಗೆಯ ತಂದಿರಿಸಿದಡೆ ಬಾಯಾರು ಹಿಂಗುವುದೆ? ಸಕಲ ಸುಖದಲ್ಲಿ ಇಹಂಗೆ ಸಕಳೇಶ್ವರನ ಅಕಲ ಬಲ್ಲನೆ? ಇಂತಿವರೆಲ್ಲರು ಅಖಿಳರೊಳಗೆ ಅಡಗಿ ಸುಖದುಃಖವ ಭೋಗಿಸುವ ಪ್ರಕೃತಿ ವಿಧರಿಗೇಕೆ ಅಕಳಂಕನ ಮಾತು. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮೂವರಳಿದು, ಮೂರ್ತಿಯ ಕಳದು, ಅನಿಮಿಷಯೋಗ ವಿಚಾರವನನುಭವಿಸಿ, ವಿಚಾರವನಂಗವನಂಗೈಸಿದಂಗವನಂಗದಲ್ಲಿಯೆ ಅಡಗಿ ನಿಂದೆನಯ್ಯ ಸಂಗಯ್ಯ.
--------------
ನೀಲಮ್ಮ
ನಿರೂಪ ರೂಪಿನಲ್ಲಿ ಅಡಗಿ, ನಿರಾಲಂಬವಾಯಿತ್ತು ಬಸವನಲ್ಲಿ. ನಿರಾಲಂಬಮೂರ್ತಿಯಲ್ಲಿ ನಿರ್ಮಲಸುಧೆಯನನುಭವಿಸಿದೆನಯ್ಯಾ ನಾನು ಬಸವಾ. ಅನುಭವಿಸಿ ಬಸವ ಕುಳವಳಿದು ಭ್ರಮೆಯಳಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಇಷ್ಟಲಿಂಗ, ಪ್ರಾಣಲಿಂಗವೆಂದು ಬೇರೊಂದು ಕಟ್ಟಣೆಯ ಕಟ್ಟಬಹುದೆ ? ವೃಕ್ಷ ಬೀಜದಲ್ಲಿ ಅಡಗಿ, ಬೀಜ ವೃಕ್ಷವ ನುಂಗಿಪ್ಪ ತೆರನಂತೆ, ಇಷ್ಟ ಪ್ರಾಣ ಬೆಚ್ಚಂತಿರಬೇಕು. ಅಪ್ಪು ಮುತ್ತಾದಂತೆ, ಉಭಯದ ಗೊತ್ತು ತಾನೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮಹಾಶ್ರೀಗುರುವೆ ತಂದೆ, ಮಹಾಜಂಗಮವೆ ತಾಯಿ. ಇವರಿಬ್ಬರ ಸಂಗಸಂಯೋಗದಿಂದ ನಾನು ಹುಟ್ಟಿದೆ ನೋಡಿರಯ್ಯಾ. ಸರ್ವಾಂಗಸಾಹಿತ್ಯ ನಾನು ಹುಟ್ಟಿದ ಬಳಿಕ. ತಂದೆ ತಾಯಿಗಳಿಬ್ಬರು ಲಿಂಗವೆಂಬ ಹೆಣ್ಣ ತಂದು, ಎನ್ನ ಕೊರಳಲ್ಲಿ ಕಟ್ಟಿ ಮದುವೆಯ ಮಾಡಿದರಯ್ಯಾ. ಆ ಹೆಣ್ಣಿನ ಕೈಹಿಡಿದು ನಾನು ಬದುಕಿದೆನು. ಆ ಹೆಣ್ಣಿನ ಸಂಯೋಗದಿಂದ ಮಗನೆಂಬ ಮಹಾಲಿಂಗ ಹುಟ್ಟಿದನಯ್ಯಾ. ಆ ಮಗ ಹುಟ್ಟಿದ ಮುನ್ನವೆ ಎನಗೆ ಮರಣವಾಯಿತ್ತು. ಲಿಂಗವೆಂಬ ಹೆಂಡತಿ ಮುಂಡೆಯಾದಳು. ತಂದೆ ತಾಯಿಗಳಿವರಿಬ್ಬರೂ ನನ್ನ ಒಂದಾಗಿ ಅಡಗಿ ಹೋದರು. ಇನ್ನು ಮುನ್ನಿನ ಪರಿ ಎಂತುಟಲ್ಲವಾಗಿ ನಾನು ಬದುಕಿದೆ ಕಾಣಾ, ಶುದ್ಭ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನ ಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತ್ತಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಮರದಲ್ಲಿ ಉರಿ ಹುಟ್ಟಿ, ಅಡಗಿ ಸುಡದ ಭೇದವ ಬಲ್ಲಡೆ, ಕಾಯದ ಲಿಂಗದ ಸೂತಕವಿಲ್ಲ. ಕಲ್ಲಿನಲ್ಲಿ ಕಿಡಿ ಹುಟ್ಟಿ, ಅಲ್ಲಿ ಉರಿಯದೆ, ಆಚೆಯಲ್ಲಿ ಸಾಕಾರವ ಮುಟ್ಟಿ ಉರಿವಂತೆ, ಆ ನಿಹಿತವನರಿದಲ್ಲಿ ಪ್ರಾಣಲಿಂಗವೆಂಬ ಮನಸೂತಕವಿಲ್ಲ. ಸೂತಕ ಪ್ರಸೂತಕವಾಗಿ, ಏತಕ್ಕೂ ಒಡಲಿಲ್ಲದಿಪ್ಪುದು, ಅದೇ ಅಜಾತತ್ವ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ, ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ, ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು, ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ, ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು, ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ, ಆ ಕಲ್ಲತಗಲಿದ ಕಾಲ್ನೋವಿಗೆ ಔಷದ್ಥಿಯ ಮಾಡಿ, ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು, ಆ ತಾಯಿಯೆತ್ತಿಕೊಂಡು, ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ ತಾ ಹೊದ್ದ ಮೇಲ್‍ಸೆರಗಿಲೊರಸಿ ಮೊಲೆಯುಣಿಸಿ, ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ ಅಳುಳುಳುಳುಳುಳೆಂದು ಹಾಡುತ್ತಿರಲು, ಆ ಶಿಶುವು ಆ ಔಷಧದಿಂದೆ ನೋವು ಹೋಗಿ, ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ, ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ, ತೊಟ್ಟಿಲ ತೂಗುವುದರೊಳಗೆ ಜೋಕಬಂದು, ಸುಖನಿದ್ರೆಯೊಳ್ ಮೈಮರೆದಿರಲು, ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು, ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ, ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ, ಆ ಶಿಶುವಿನ ಸಾವು ಆರು ಅರಿಯರು. ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೋಪದೇಶವಮಾಡಿ, ತನ್ನ ಚಿತ್‍ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ ತೋರಿ ಹೇಳಿ ಕಾಣಿಸಿಕೊಡಲು, ಆ ಚಿತ್‍ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ ಸರ್ವ ಅವಯವಂಗಳ ಕಸರು ಕಳೆದು, ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ, ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ ಹಿಂದಿಂದು ಹೇಯವಾಗೆ ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ, ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ, ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ, ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ, ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ, ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು, ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು, ಸಾವು ಬಂದು ಸಾವು ಸತ್ತು ಸಾವು ಸಾವಾಗಲು ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು, ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ ಅರುವು ಮರೆಗೊಂಡಿರ್ಪ ನಿರ್ಬೈಲ ಆರೂ ಅರಿಯರೋ. ಆ ಶರಣ ತನ್ನರುವು ತಾನರಿಯ, ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ. ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ ಗಾಳಿಗೊದರುವ ಒಡಕುಮಡಕಿಯ ಸ್ವರವ ಕಡಿಮಿಯಾದ ನಾದವನು ಆಲಿಸಿ, ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು, ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ, ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು ಅದು ತಪ್ಪಲಿಕ್ಕೆ ಪಂಚತತ್ವದೇಹವು, ಪಂಚತತ್ವಕ್ಕೆ ಕೂಡಿಸುವೆವು ಎಂಬುವರು. ಅದು ಹಾಂಗಿರಲು, ಆ ದೇಹ ಬಯಲುವಾದರೇನು ? ಆ ಬಯಲಿಗೆ ಸಾವು ಇಲ್ಲವು. ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು. ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಹೋಗುವ ಬನ್ನಿರಯ್ಯ ; ಶಕ್ತಿಪಾತವಾದ ಶಿವಯೋಗೀಶ್ವರರು ಶಿವಭಕ್ತರು ಹೋಗುವ ಬನ್ನಿರಯ್ಯ. ಸುಕ್ಷೇತ್ರದಲ್ಲಿರ್ಪ ಮಹಲಿಂಗದರುಶನಕೆ ಹೋಗುವ ಬನ್ನಿರಯ್ಯ. ಜೀವಸಂಚಾರವೆಂಬ ಪ್ರಾಕೃತವೆನಿಸುವ ಅಧೋಕುಂಡಲಿಸ್ವರೂಪಮಾದ ಅಹಂ ಎಂಬ ಹೆಬ್ಬಟ್ಟೆಯಂ ಬಿಟ್ಟು, ಸಜ್ಜೀವವೆಂಬ ವೈಕೃತವೆನಿಸುವ ಮಧ್ಯಕುಂಡಲಿಸ್ವರೂಪಮಾದ ಸೋಹಮೆಂಬ ಸಣ್ಣಬಟ್ಟೆಯ ಹಿಡಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ಕೇವಲ ಶಿವಯೋಗವೆಂಬ ಏಕವೆನಿಸುವ ಊಧ್ರ್ವಕುಂಡಲಿಸ್ವರೂಪಮಾದ ಓಂ ಎಂಬ ನುಸುಳುಗಂಡಿಯಂ ನುಸಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ದ್ವಯಮಂಡಲವ ಭ್ರೂಮಧ್ಯವೆಂಬ ಮಹಾಮೇರುವ ಮಧ್ಯದಲ್ಲಿ ಏಕಮಂಡಲಾಕಾರ ಮಾಡಿ, ಆ ಕಮಲಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಮಹಾಲಿಂಗದಲ್ಲಿ ಜೀವಪರಮರಿಬ್ಬರನೇಕಾರ್ಥವಂ ಮಾಡಿ, ಶಾಂಭವೀಮುದ್ರಾನುಸಂಧಾನದಿಂದೆ ಅಧೋಮುಖಕಮಲವೆಲ್ಲ ಊಧ್ರ್ವಮುಖವಾಗಿ, ಆ ಮಹಾಲಿಂಗವ ನೋಡುತಿರಲು ಆ ಕಮಲಸೂತ್ರವಿಡಿದಿಹ ಷಡಾಧಾರಚಕ್ರಂಗಳ ಊಧ್ರ್ವಮುಖವಾಗಿ ಆ ಕಮಲದಲ್ಲಿ ಅಡಗಿ, ಆ ಕಮಲದ ಎಸಳು ಐವತ್ತೆರಡಾಗಿ ಎಸೆವುತಿರ್ಪವು. ಪರಿಪೂರ್ಣ ಜ್ಞಾನದೃಷ್ಟಿಯಿಂ ಆ ಮಹಾಲಿಂಗಮಂ ನಿರೀಕ್ಷಿಸಲು ಆ ಕಮಲದಲ್ಲಿ ಮಹಾಲಿಂಗಸ್ವರೂಪಮಾಗಿ ಸಕಲ ಕರಣೇಂದ್ರಿಯಂಗಳು ಆ ಮಹಾಲಿಂಗದಲ್ಲಿಯೆ ಅಡಗಿ, ಸುನಾದಬ್ರಹ್ಮವೆಂಬ ಇಷ್ಟವೆ ಮಹಾಲಿಂಗವೆಂದರಿದು ನೋಡುತ್ತಿರಲು, ಜ್ಯೋತಿರ್ಮಯವಾಗಿ ಕಾಣಿಸುತಿಪ್ಪುದು. ಅದೇ ಜೀವಪರಮರೈಕ್ಯವು ; ಅದೇ ಲಿಂಗಾಂಗಸಂಬಂಧವು. ಆ ಮಹಾಲಿಂಗದ ಕಿರಣಂಗಳೆ ಕರಣಂಗಳಾಗಿ ಆ ಕಮಲವು ಅಧೋಮುಖವಾಗಿ ಆ ಮಹಾಲಿಂಗವು ತನ್ನ ನಿಜನಿವಾಸವೆನಿಸುವ `ಅಂತರೇಣ ತಾಲುಕೇ' ಎಂಬ ಶ್ರುತಿ ಪ್ರಮಾಣದಿ ತಾಲುಮೂಲದ್ವಾದಶಾಂತವೆಂಬ ಬ್ರಹ್ಮರಂಧ್ರದ ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪುದೊಂದು ಶಿವಚಕ್ರವು. ಆ ಶಿವಚಕ್ರವೆ ಶಿವಲೋಕವೆನಿಸುವುದು. ಆ ಶಿವಲೋಕವೆ ಶಾಂಭವಲೋಕವೆನಿಸುವುದು. ಶಾಂಭವಲೋಕವೆ ಶಾಂಭವಚಕ್ರವೆನಿಸುವುದು. ಆ ಶಾಂಭವಚಕ್ರದಲ್ಲಿ ಆಧಾರವಾದಿ ಪಶ್ಚಿಮಾಂತ್ಯವಾದ ನವಚಕ್ರಂಗಳು ಸಂಬಂಧವಾಗಿರುತಿರ್ಪವು. ಅದು ಹೇಗೆಂದೊಡೆ ; ಆ ಶಾಂಭವಚಕ್ರಮಧ್ಯದ ಚತುರ್ದಳಾಗ್ರದಲ್ಲಿ ಅಗ್ನಿಮಂಡಲದಲ್ಲಿ ಅಷ್ಟದಳ ಇರ್ಪುವು. ಆ ಅಷ್ಟದಳ ಚತುರ್ದಳದಲ್ಲಿ `ವಶಷಸ' ಎಂಬ ನಾಲ್ಕಕ್ಷರಯುಕ್ತವಾದ ಆಧಾರಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ನ' ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ತಾರಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಗ್ನಿಮಂಡಲದ ಚತುರ್ದಳದ ಈಶಾನ್ಯ ದಳದಲ್ಲಿ `ಬ ಭ ಮ ಯ ರ ಲ' ಎಂಬ ಆರಕ್ಷರಯುಕ್ತವಾದ ಸ್ವಾದ್ಥಿಷ್ಠಾನಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಮ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದಂಡಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳಾಗ್ರದಲ್ಲಿ ಸೂರ್ಯಮಂಡಲವಿರ್ಪುದು. ಆ ಸೂರ್ಯಮಂಡಲದಲ್ಲಿ `ಡಢಣ ತಥದಧನ ಪಫ' ಎಂಬ ದಶಾಕ್ಷರಯುಕ್ತವಾದ ಮಣಿಪೂರಕಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಶಿ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಕುಂಡಲಾಕೃತಿಯಲ್ಲಿ ಸಂಬಂಧವಾಗಿರ್ಪುದು. `ಕಖಗಘಙ ಚಛಜಝಞ ಟಠ' ಎಂಬ ದ್ವಾದಶಾಕ್ಷರಯುಕ್ತವಾದ ಅನಾಹತಚಕ್ರವು ಸೂರ್ಯಮಂಡಲದಲ್ಲಿ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ವ'ಕಾರವು ಆ ಮಹಾಲಿಂಗಸ್ವರೂಪವಾದಪ್ರಣವದ ಅರ್ಧಚಂದ್ರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳದಮಧ್ಯದಲ್ಲಿ ಚಂದ್ರಮಂಡಲವಿರ್ಪುದು. ಆ ಚಂದ್ರಮಂಡಲದಲ್ಲಿ- `ಅ ಆ ಇ ಈ ಉ ಊ ಋ Iೂ ಲೃ ಲೂೃ ಏ ಐ ಓ ಔ ಅಂ ಅಃ' ಎಂಬ ಷೋಡಶಾಕ್ಷರಯುಕ್ತವಾದ ವಿಶುದ್ಧಿಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಯ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಮಹಾಲಿಂಗಕ್ಕೆ ಪೀಠಮಾಗಿರ್ದ ಬಿಂದುಯುಕ್ತಮಾದ ಪ್ರಣವವು ಆ ಮಹಾಲಿಂಗದ ಮುಂದಿರ್ದ `ಹಂ ಳಂ ಹಂ ಕ್ಷಂ' ಎಂಬ ಚುತವರ್ಣಾಕ್ಷರಯುಕ್ತವಾದ ಆಜ್ಞಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಓಂಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಜ್ಯೋತಿರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಚತುರ್ದಳವು ತ್ರಿದಳದಲ್ಲಿ ಕ್ಷ ಉ ಸ ಎಂಬ ತ್ರಯಕ್ಷರಯುಕ್ತವಾದ ಶಿಖಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ಕ್ಷ' ಕಾರವು ಆ ಮಹಾಲಿಂಗಸ್ವರೂಪವಾದ ಕುಂಡಲಾಕೃತಿ ಅರ್ಧಚಂದ್ರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಆ ಚತುರ್ದಳದ ಮಧ್ಯದಲ್ಲಿ ಬಟುವೆ ಏಕದಳವೆನಿಸಿಕೊಂಬುದು. ಆ ಏಕದಳದಲ್ಲಿ ಪಶ್ಚಿಮಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಹ್ರಾಂ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿ ಜ್ಯೋತಿರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಹೀಂಗೆ ಅಷ್ಟಚಕ್ರಂಗಳ ತನ್ನೊಳಗೆ ಗಬ್ರ್ಥೀಕರಿಸಿಕೊಂಡು ಬೆಳಗುತ್ತಿರ್ಪುದೊಂದು ಬ್ರಹ್ಮರಂಧ್ರಚಕ್ರವು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಹ್ರೀಂ ಕಾರಗಳು. ಆ ಹರದನಹಳ್ಳಿಯ ಪ್ರಭುಲಿಂಗಗುರುಸ್ವಾಮಿಯ ಶಿಷ್ಯರು ನಿಜಾನಂದ ಗುರುಚೆನ್ನಯ್ಯನವರು. ಆ ನಿಜಾನಂದ ಗುರುವಿನ [ಶಿಷ್ಯರು] ಗುರುಸಿದ್ಧವೀರೇಶ್ವರದೇವರು. ಆ ಸಿದ್ಧವೀರೇಶ್ವರದೇವರ ಕರಕಮಲದಲ್ಲಿ ಉದಯವಾದ ಬಾಲಸಂಗಯ್ಯನು ನಾನು. ಆ ನಿರಂಜನ ಗುರುವೆ ತಮ್ಮ ಕೃಪೆಯಿಂದ ತಮ್ಮಂತರಂಗದಲ್ಲಿರ್ದ ಅತಿರಹಸ್ಯವಾದ ಶಾಂಭವಶಿವಯೋಗವೆಂಬ ಮಹಾಜ್ಞಾನೋಪದೇಶಮಂ ಹರಗುರು ವಾಕ್ಯಪ್ರಮಾಣಿನಿಂ ಎನ್ನ ಹೃದಯಕಮಲದಲ್ಲಿ ಕರತಳಾಮಳಕದಂತೆ ತೋರಿ, ಆ ಹೃದಯಕಮಲಕರ್ಣಿಕಾಮಧ್ಯದಲ್ಲಿರ್ಪ ನಿರಂಜನಗುರುವೆ ನಿರಂಜನಮಹಾಲಿಂಗವೆಂದರಿದು ಆ ನಿರಂಜನಮಹಾಲಿಂಗವೆ ಕರಸ್ಥಲದಲ್ಲಿರ್ಪ ಸುನಾದಬ್ರಹ್ಮವೆಂಬ ಇಷ್ಟಲಿಂಗವೆಂದರಿದು, ಆ ಕರಸ್ಥಲದಲ್ಲಿರ್ಪ ಇಷ್ಟಲಿಂಗವೆ ತಾನೆಂದರಿದು ``ಮಂತ್ರಮಧ್ಯೇ ಭವೇತ್‍ಲಿಂಗಂ ಲಿಂಗಮಧ್ಯೇ ಭವೇತ್‍ಮಂತ್ರಂ | ಮಂತ್ರಲಿಂಗದ್ವಯಾದೇಕಂ ಇಷ್ಟಲಿಂಗಂತು ಶಾಂಕರಿ ||' ಎಂದುದಾಗಿ, ಎನ್ನ ಹೃತ್ಕಮಲಕರ್ಣಿಕಾಮಧ್ಯದಲ್ಲಿ ಶಾಂಭವೀಮುದ್ರಾನುಸಂಧಾನದಿಂದ ಆ ಲಿಂಗವೆ ಮಂತ್ರ, ಮಂತ್ರವೆ ಲಿಂಗವೆಂದರಿದು ಓಂ ಓಂ ಎಂದು ಶಿವಸಮಾದ್ಥಿಯ ಜಪಮಂ ಜಪಿಸುತ್ತ ಜ್ಯೋತಿರ್ಲಿಂಗಮಂ ಕೇಳುತ, ಜ್ಯೋತಿರ್ಲಿಂಗದೊಳು ಮುಳುಗಾಡುತ್ತಿರ್ದೆನಯ್ಯಾ ಬಸವಣ್ಣಪ್ರಿಯ ಚೆನ್ನಸಂಗಯ್ಯನೆಂಬ ಗುರುವಿನ ಕೃಪೆಯಿಂದ, ನಿಮ್ಮ ಶರಣರ ಪಡುಗ ಪಾದರಕ್ಷೆಯ ಹಿಡಿವುದಕ್ಕೆ ಯೋಗ್ಯನಾದೆನಯ್ಯ ನಿಮ್ಮ ಕೃಪೆಯಿಂದ.
--------------
ಭಿಕ್ಷದ ಸಂಗಯ್ಯ
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ, ಹಲ್ಲು ಕಲ್ಲಿನೊಳಗಾಗಿ, ಅಲ್ಲಿಯೆ ಅಡಗಿ ನೋಡುತ್ತದೆ. ಅದ ನಾವು ನೀವು ಎಲ್ಲರೂ ಅರಿವ ಬನ್ನಿ, ಅರ್ಕೇಶ್ವರಲಿಂಗವ ಬಲ್ಲವರಹರೆ.
--------------
ಮಧುವಯ್ಯ
ಇನ್ನಷ್ಟು ... -->