ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮಫಲವೆಲ್ಲವೂ ದೇವತೆಗಳಾಹಾರವು; ಸ್ಥಾವರಫಲವೆಲ್ಲವೂ ಮನುಷ್ಯರಾಹಾರವು. ಅದೆಂತೆಂದೊಡೆ : ದೇವತಾಬಿಂದುವಿನಲ್ಲಿ ಮನುಷ್ಯಕೃತ್ಯದಿಂದುದ್ಭವಿಸುವುದೆಲ್ಲ ಸ್ಥಾವರವು; ಮನುಷ್ಯ ಬಿಂದುವಿನಲ್ಲಿ ದೇವತಾ ಕೃತ್ಯದಿಂದುದ್ಭವಿಸುವುದೆಲ್ಲ ಜಂಗಮವು. ಮನುಷ್ಯರು ಶೂದ್ರಮುಖದಿಂ ಕೊಂಬುತಿರ್ಪರು. ದೇವತೆಗಳು ಬ್ರಾಹ್ಮಣಮುಖದಿಂ ಕೊಂಬುತಿರ್ಪರು. ಪೃಥ್ವಿಯಲ್ಲಿ ಎಂಬತ್ತುನಾಲ್ಕುಲಕ್ಷವಿಧ ಜಂಗಮಗಳು ಹೇಗೋ ದೇವತೆಗಳಲ್ಲಿಯೂ ಹಾಗೆ. ದೇವತೆಗಳು ತಮ್ಮ ಕರ್ಮಫಲವು ತೀರಿದೊಡೆ, ತದ್ಧೋಷ ಕರ್ಮಾನುಸಾರಮಾಗಿ ಪಂಚಾಶಲ್ಲಕ್ಷ ದೇಹಗಳೊಂದಂ ಹೊಂದಿ ಆಯಾ ಆಹಾರಂಗಳಂ ಭುಂಜಿಸುತ್ತಾ. ತದಾನುಗುಣ್ಯಮಾಗಿ ಕ್ರೀಡಿಸುತ್ತರ್ಪಂದದಿ, ಮನುಷ್ಯನು ಇಹಲೋಕಕರ್ಮವು ತೀರಿದಲ್ಲಿ ಆ ಕರ್ಮಫಲಕ್ಕೆ ತಕ್ಕ ಮರಣವಂ ಹೊಂದಿ, ದೇವತಾ ಪಿಶಾಚಾಂತಮಾದ ದೇಹಗಳೊಳೊಂದು ದೇಹವನ್ನೆತ್ತಿ, ಸುಖದುಃಖಗಳನನುಭವಿಸುತ್ತಾ ತನ್ನ ಅದ್ಥಿಕಾರಕ್ಕೆ ದೇವತೆಯನ್ನು ಗ್ರಹಿಸಿ, ಆ ದೇವತಾಮುಖದಿಂ ಆಹಾರಂಗಳಂ ಗ್ರಹಿಸುವಂತೆ, ಆ ದೇವತೆಗಳು ತಮ್ಮ ಅದ್ಥಿಕಾರಕ್ಕನುಗುಣವಾಗಿ ಮನುಷ್ಯರಂ ಗ್ರಹಿಸಿ, ಆ ಮನುಷ್ಯಮುಖದಿಂ ಆಹಾರಂಗಳಂ ಕೊಂಬುತಿರ್ಪರು. ದೇವೆತಗಳಿಗೆ ಮಂತ್ರದಿಂದಾವಾಹನೋಚ್ಚಾಟನೆಗಳು, ಮನುಷ್ಯರಿಗೆ ತಂತ್ರದಿಂದಾವಾಹನೋಚ್ಚಾಟನೆಗಳು. ಮನುಷ್ಯರಿಗೆ ತಂತ್ರದಿಂ ಕೂಡಿದ ಮಂತ್ರವು, ದೇವತೆಗಳಿಗೆ ಮಂತ್ರದಿಂ ಕೂಡಿದ ತಂತ್ರವು, ಇಂತು ಮನುಷ್ಯರೂಪದಿಂದ ಸತ್ತು. ದೇವತಾರೂಪದಿಂ ಹುಟ್ಟುತ್ತಿರ್ಪ ದಂದುಗವಂ ಬಿಡಿಸಿ, ನಿನ್ನಲ್ಲಿ ಸತ್ತು ಹುಟ್ಟುತ್ತಿರ್ಪ ನಿಜಸುಖವಂ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಜೀವನಿಗೆ ಮನಸ್ಸೇ ಪ್ರಥಮವೇಷ. ಆ ಮನವಂ ಹಿಡಿದು ಸಕಲಗುಣಂಗಳೂ ಅಕ್ಷಯಗಳಾಗಿ ಒಂದಕೊಂದಾವರಿಸಿಕೊಂಡಿಹವು. ಅದೆಂತೆಂದೊಡೆ : ಜೀವನ ಶರೀರೋಪಧಿಯಿಂದ ಗಂಧವಸ್ತ್ರಾಭರಣ ಸಂಸಾರ ಗೃಹಕ್ಷೇತ್ರಾದ್ಯಾವರಣಂಗಳಿಂದಲೂ ನಾನಾವಿಧ ಭ್ರಾಮಕದಿಂದಲೂ ಬುದ್ಧನಾಗಿ, ಆ ಶರೀರವಂ ಬಿಡಲಾರದೆ, ಆ ಶರೀರವೇ ತಾನಾಗಿ ವ್ಯವಹರಿಸುತ್ತಾ, ಹಲವು ಗುಣಗಳಿಂ ಬದ್ಧನಾಗಿ, ಆ ಸೂಕ್ಷ್ಮಶರೀರದಿಂ ಸ್ವರ್ಗಾದಿ ಭೋಗಂಗಳನ್ನೂ ನರಕಾದಿ ಯಾತನೆಗಳನ್ನೂ ಅನುಭವಿಸುತ್ತಿರ್ಪನು. ಮಾನಸಾದಿ ಕಾರಣಗಳಿಂ ಬದ್ಧನಾಗಿರ್ಪನೇ ಜೀವನು, ಅದಕ್ಕೆ ಹೊರಗಾಗಿರ್ಪನೇ ಪರಮನು. ಅದೆಂತೆಂದೊಡೆ : ದರ್ಪಣದಲ್ಲಿ ಬದ್ಧನಾಗಿರ್ಪ ನಿಜಛಾಯೆಯಂದದಿ ಆ ದರ್ಪಣವೇ ಮನಸ್ಸು, ಆ ಛಾಯೆಯೇ ಜೀವನು, ಆ ಛಾಯೆಯಿಂ ತನ್ನ ನಿಜಮಂ ವಿಚಾಸುತಿರ್ಪುದೇ ಭಾವವು. ಭಾವದಲ್ಲಿ ಬದ್ಧನಾಗಿರ್ಪನೇ ಪರಮನು, ಸಾಕಾರಮನದಲ್ಲಿ ನಿರಾಕಾರಮಾಗಿರ್ಪನೇ ಜೀವನು, ನಿರಾಕಾರಭಾವದಲ್ಲಿ ಸಾಕಾರಮಾಗಿರ್ಪನೇ ಪರಮನು. ಇಂತು ಅನಂತಗಳಾಗಿರ್ಪ ಮಾನಸಾದ್ಯುಪಾಧಿಗಳಲ್ಲಿ ಒಂದು ವಸ್ತುವೇ ನಾನಾಮುಖದಲ್ಲಿ ಅನಂತಗಳಾಗಿ ಉಪಾಧಿಯಂತಿರ್ದು, ಉಪಾಧಿಯುಪಾಧಿಯೊಳಗೆ ಕೂಡಿ ಪ್ರತಿಫಲಿಸಿ, ಛಾಯೆಯಿಂ ಛಾಯೆಯು ಪ್ರತಿಫಲಿಸಿ ಗಣನೆಗೆ ಸಾಧ್ಯಮಾಗದೆ ಕರತಲಾಮಲಕಮಾಗಿರ್ಪ ನಿನ್ನ ನಿಜಲೀಲಾ ನಟನೆಯಂ ನಾನೆಂತು ಬಣ್ಣಿಸುವೆನಯ್ಯಾ. ನಿನ್ನ ನಿಜಪ್ರಕಟನೆಯು ನನ್ನಿಂದಲ್ಲದೆ ಅನ್ಯರಿಂ ಸಾಧ್ಯಮಲ್ಲಮಾಗಿ, ನಿನಗಿಂತ ಶಿವಭಕ್ತರೇ ಅಧಿಕರಯ್ಯಾ. ನಿನ್ನಿಂದಲಾದುಪಾಧಿಯು ನಿನ್ನ ಕಾರಣದಿಂದಲೇ ಪರಿಹೃತಮಾದಲ್ಲಿ ನಾನೆಂಬಹಂಕಾರಮಳಿದು ನೀನು ನೀನಾದಲ್ಲಿ ನಿನ್ನೊಳಗಿಪ್ಪ ಮತ್ಸರವು ಮುನ್ನವೆ ಅಳಿದು, ಉನ್ನತಸುಖದೊಳೋಲಾಡುತ್ತಿರ್ಪೆನಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಜೀವಪಶುಗಳಂ ಕೊಲ್ವ ಕಾಲವ್ಯಘ್ರನಂ ಸಂಹರಿಸಿ, ತತ್ವರೂಪಮಪ್ಪ ವಿಚಿತ್ರವರ್ಣಮಪ್ಪ ದಿಗ್ವಸನಮುಳ್ಳುದರಿಂ ವ್ಯಾಘ್ರಚರ್ಮಾಂಬರಧಾರಿಯಾದೆ. ನಿನ್ನ ಶಿರಸ್ಸಿನ ಮೇಲೆ ಕರ್ಮಕೇಶಂಗಳಿಲ್ಲದೆ ನವಗ್ರಹಸ್ವರೂಪ ಪುಷ್ಪಗಳಿಂ ಪರಿಶೋಭಿಯಾಗಿರುವುದರಿಂದ ಗಗನಕೇಶಿಯಾದೆ. ಅಸ್ಥಿರೂಪಮಾದುದೇ ವಜ್ರವು, ಆವಜ್ರವೇ ಪುರುಷರತ್ನವು, ಅದು ಚ್ಯುತಿಯಿಲ್ಲದ್ದು, ರತ್ನಂಗಳೆಂಬ ಆವಯವಂಗಳಗೆ ಶಿರೋರೂಪಮಾಗಿಹುದು, ಅದೇ ನಿರ್ಮಲಸ್ವರೂಪಮಪ್ಪ ಜ್ಞಾನವೆಂಬ ಭಾವವು. ಅಂತಪ್ಪ ನಿರ್ಮಲಜ್ಞಾನದಿಂ ಶೋಭಿಸಲ್ಪಟ್ಟುದರಿದಂ ಅಸ್ಥಿಮಾಲಾಧರನಾದೆ. ಶೇಷನೇ ಮತಿಸ್ವರೂಪ, ಆಮತಿಯೇ ವಿವೇಕವು, ಅದಕ್ಕೆ ಭಾವವೇ ಶಿರಸ್ಸು, ಆ ಭಾವಸಹಸ್ರಮುಖದಲ್ಲಿ ಶೋಭಿಸುತ್ತಿರ್ಪ ಜ್ಞಾನರತ್ನಂಗಳಿಂ ಮನವೆಂಬ ಪೃಥ್ವಿಗಾಧಾರಮಾಗಿರ್ಪ ವಿವೇಕಸರ್ಪಪ್ರಕಾಶದಿಂದೊಪ್ಪುತಿರ್ಪುದರಿಂ ನಾಗಾಭರಣನಾದೆ. ಪೃಥಿವ್ಯಾದಿ ಪಂಚಭೂತಂಗಳಿಗೊಡೆಯನಾದುದರಿಂದ ಭೂತಪತಿಯಾದೆ. ಕಾಲನಿಂ ಕೋಟಲೆಗೊಳುತಿರ್ಪ ಜೀವಂಗಳ ಮೇಲೆ ದಯೆಯಿಂ ಕಾಲಂಗೆ ಕಾಲರೂಪಮಾದ ನಿನ್ನ ಪ್ರಳಯಕಾಲದಲ್ಲಿ ಸಕಲಪ್ರಪಂಚಮಂ ಸುಜ್ಞಾನಾಗ್ನಿಯಲ್ಲಿ ದಹಿಸಿ ತದ್ಭಸ್ಮಮಂ ಧರಿಸಿ, ಪ್ರಾಣಿಗಳ ಭವತಾಪಮಂ ತಣ್ಣನೆಮಾಡಿ, ತತ್ಪ್ರಪಂಚಸಂಹಾರಾಸ್ಥಾನವಾಸಿಯಾಗಿರ್ಪುದರಿಂ ಭಸ್ಮಧಾರಿಯೂ, ನಾಲ್ಕು ವೇದಂಗಳು ನಾಲ್ಕುಪಾದಂಗಳಾಗಿ, ಬ್ರಹ್ಮಮುಖದಲ್ಲಿ ಗಮಿಸುತಿರ್ಪ ನಿರ್ಮಲಧರ್ಮರಥಾರೂಢನಾಗಿರ್ಪುದರಿಂದ ನಂದಿವಾಹನಾರೂಢನಾದೆ. ಇಂತಪ್ಪ ನಿನ್ನ ಸುಮಂಗಳ ಸ್ವರೂಪಮಂ ನಾನರಿಯದೆ, ಅಮಂಗಲಗಳನ್ನೇ ಭಾವಿಸಿ, ಅಪರಾಧಿಯಾಗಿರ್ಪೆನ್ನ ದುರ್ಗುಣಂಗಳಂ ನಿನ್ನಾಗ್ರಹವೆಂಬ ಚಿದಗ್ನಯಿಂ ದಹಿಸಿ, ಕೋಪಾಂತದಲ್ಲಿಬಪ್ಪ ಪರಮಶಾಂತಿಯೊಳು ನನ್ನನಿಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ