ಒಡವೆ ವಸ್ತು ಧನ ಧಾನ್ಯವ ಲೋಭದಿಂದ ಗಳಿಸಿ,
ಮಡದಿಮಕ್ಕಳಿಗೆಂದು ಮಡುಗಿಕೊಂಡು,
ದಾನಧರ್ಮವ ಪರ ಉಪಕಾರಕ್ಕೆ ನೀಡದೆ,
ಹೇಸಿಗುಣದಲ್ಲಿಪ್ಪ ಮಾನವರ ಆಯುಷ್ಯ ವ್ಯಯಿದು
ಕಾಲಮೃತ್ಯು ಬಂದು ಹೊಡೆದೊಯ್ಯು[ವಾಗ],
ಸುಖದಲ್ಲಿರುವಂದಿನ ಮಡದಿ-ಮಕ್ಕಳು ಒಡವೆ-ವಸ್ತು
ಧನಧಾನ್ಯ ಕಾಯುವವೆ ? ಕಾಯವು.
ಎರವಿನ ಸಿರಿ, ಎರವಿನ ಮನೆ, ಎರವಿನ ಮಡದೇರು,
ಎರವಿನ ಮಕ್ಕಳ ನೆಚ್ಚಿಕೊಂಡು
ಊರ ಸೀರಿಂಗೆ ಅಗಸ ಬಡದು ಸಾವಂತೆ,
ಪರಾರ್ಥನರಕದೊಡವೆಯ ನೆಚ್ಚಿ
ನನ್ನತನ್ನದೆಂದು ಲೋಭತ್ವದಿಂದ ಕೆಟ್ಟರು.
ಬರುತೇನು ತರಲಿಲ್ಲ , ಹೋಗುತೇನು ಒಯ್ಯಲಿಲ್ಲ ,
ಹುಟ್ಟುತ್ತಲೆ ಬತ್ತಲೆ, ಹೋಗುತಲೆ ಬತ್ತಲೆ.
ಈ ನಷ್ಟಸಂಸಾರವ ನಂಬಿ ಕೆಡದಿರಿ ಮನುಜರಿರ.
ನಂಬಿ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ.