ಒಡೆಯರು ಭಕ್ತರಿಗೆ ಸಲುವ ಸಹಪಙô್ತಯಲ್ಲಿ, ಗುರು ಅರಸೆಂದು, ತನ್ನ ಪರಿಸ್ಪಂದವೆಂದು ರಸದ್ರವ್ಯವ ಎಸಕದಿಂದ ಇಕ್ಕಿದಡೆ, ಅದು ತಾನರಿದು ಕೊಂಡಡೆ ಕಿಸುಕುಳದ ಪಾಕುಳ. ಅಲ್ಪ ಜಿಹ್ವೆಲಂಪಟಕ್ಕೆ ಸಿಕ್ಕಿ ಸಾವ ಮತ್ಸ್ಯದಂತೆಯಾಗದೆ- ಈ ಗುಣವ ನಿಶ್ಚಯಿಸಿದಲ್ಲಿ ಏಲೇಶ್ವರಲಿಂಗವನರಿಯಬಲ್ಲ.
ಕಂಬಳಿಯ ಹರಿಕಿನಲ್ಲಿ ಛತ್ತೀಸಕೋಟಿದೇವರ್ಕಳೆಲ್ಲರೂ ಸಿಕ್ಕಿ, ಅಳಲುತ್ತ ಬಳಲುತ್ತಲೈದಾರೆ. ಆ ಕಂಬಳಿಯಲ್ಲಿ ಮಹಾರುದ್ರನುದ್ಧರಿಸಿದ. ಮಹಾರುದ್ರನ ಕಪಾಲದಲ್ಲಿ ಇಷ್ಟಾರ್ಥವೆಂಬ ಶಕ್ತಿ ಹುಟ್ಟಿದಳು. ಆ ಶಕ್ತಿಯ ಯೋನಿಕಮಲದಲ್ಲಿ ವಿಷ್ಣು ಹುಟ್ಟಿದ. ವಿಷ್ಣುವಿನ ನಾಬ್ಥಿಕಮಲ ಮಧ್ಯದಲ್ಲಿ ಬ್ರಹ್ಮ ಹುಟ್ಟಿದ. ಬ್ರಹ್ಮನ ಸೃಷ್ಟಿಯಾಂತ ಕೈಯಲ್ಲಿ ಸಕಲಬಹುರೂಪಂಗಳು ಹುಟ್ಟಿದವು. ಆಡುತಿರ್ದರಯ್ಯಾ ಕಂಬಳಿಯ ಹರಿಕಿನ ಮಧ್ಯದಲ್ಲಿ. ಕುರಿ ಸಾಯದು, ಕಂಬಳಿ ಹರಿಯದು. ಇದಕ್ಕಂಜುತಿದ್ದೇನೆ ನಿಃಕಳಂಕ ಮಲ್ಲಿಕಾರ್ಜುನಾ
ಮಹಾಜ್ಯೋತಿಯನೊಡಗೂಡಿಪ್ಪ ಉರುತರ ಪರಮಜ್ಞಾನಿ ಘನತರದ ಸಂಯೋಗಿ ಬ್ರಹ್ಮಾಂಡಂಗಳು ನಿನ್ನ ಮರೆಸಲರಿಯವು. ಸಕಲ ಬ್ರಹ್ಮಾಂಡಂಗಳನೊಳಗು ಮಾಡಿ ಮೇಲೆ ತೊಳಗಿ ಬೆಳಗುತಿಪ್ಪೆ ಎಮ್ಮ ಶರಣರ ಕರಸ್ಥಲದಲ್ಲಿ ಸಿಕ್ಕಿ. ಮಹಾದೀಪ್ತಿಯನಿಂಬುಗೊಂಡಿತ್ತಾ ಕರಸ್ಥಲವು. ಆ ಕರಸ್ಥಲಕ್ಕೆ ಆವ ಬ್ರಹ್ಮಾಂಡಂಗಳ ಸರಿಯೆಂಬೆ? ನಿಮ್ಮ ಶರಣರ ಕರಸ್ಥಲವೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.