ಅಥವಾ

ಒಟ್ಟು 29 ಕಡೆಗಳಲ್ಲಿ , 16 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಬ್ರಹ್ಮವೆಂಬ ಲಿಂಗದಿಂದ ಭಾವಲಿಂಗ ಉದಯವಾಯಿತ್ತು. ಆ ಭಾವಲಿಂಗದಿಂದ ಪ್ರಾಣಲಿಂಗ ಉದಯವಾಯಿತ್ತು. ಆ ಪ್ರಾಣಲಿಂಗದಿಂದ ಇಷ್ಟಲಿಂಗ ಉದಯವಾಯಿತ್ತು. ಆ ಇಷ್ಟಲಿಂಗಕ್ಕೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಅರ್ಪಿಸಬಲ್ಲಾತನೆ ನಿಮ್ಮ ಸದ್ಭಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಂದ್ರಿಯಂಗಳಲ್ಲಿ ಲಿಂಗವು ಅರ್ಪಿತವ ಸಂದ್ಥಿಸಿಕೊಂಡು ಉಂ[ಬು]ದೆಂಬ ತ್ರಿಭಂಗಿ ಗ್ರಹಿತವ ನೋಡಾ. ಇಂದ್ರಿಯಂಗಳ ಮುಖದಲ್ಲಿ ಲಿಂಗವು ಬಂದು ಉಂಬಾಗ ಇಂದ್ರಿಯವೆ ಲಿಂಗಕ್ಕೆ ಬೀಜವೆ? ಅದು ಗರಿಗೋಲಿನ ಮೊನೆಯಂತೆ, ಲಿಂಗದಿಂದ ಸರ್ವೇಂದ್ರಿಯ ನಿಶ್ಚಯ. ಇದು ಲಿಂಗವ್ಯವಧಾನಿಯ ಅಂಗ, ಸದ್ಯೋಜಾತಲಿಂಗದ ಸಂಗ.
--------------
ಅವಸರದ ರೇಕಣ್ಣ
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ, ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ; ಬಿಂದುಮಯವಾದ ಶರೀರದಲ್ಲಿ ರೂಪು ನಾದಮಯಮಾದ ಪ್ರಾಣದಲ್ಲಿ ನಾಮ ಕಳಾಮಯಮಾದ ಮನದಲ್ಲಿ ಕ್ರಿಯೆ ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ, ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು, ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು. ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು . ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು . ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ, ಆ ಬಿಂದುವೇ ಆದಿಶಕ್ತಿಮಯಮಾಯಿತ್ತು. ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ, ಆ ನಾದವೇ ಪರಾಶಕ್ತಿಯಾಯಿತ್ತು. ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ, ಆ ಕಳೆಯೇ ಜ್ಞಾನಶಕ್ತಿಯಾಯಿತ್ತು. ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ, ಪ್ರಾಣವು ಗುರುವಿನಿಂದ ಪವಿತ್ರಮಾಗಿ, ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ ಕರ್ಮಭಕ್ತಿಯಲ್ಲದೆ ನಿರ್ಮಳಸದ್ಭಕ್ತಿಯೆಲ್ಲಿಯದೊ ? ಒಮ್ಮೆ ಧರಿಸಿ ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದೆನೆಂದು ಭವಿಯಾಗುತ್ತೊಮ್ಮೆ, ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ತೆರನರಿಯದಿಪ್ಪ ಬರಿಯ ಶುದ್ಧಶೈವವಂ ಬಿಟ್ಟು, ಬ್ರಹ್ಮ ವಿಷ್ಣು ರುದ್ರ ಮಾಹೇಶ್ವರರು ಒಂದೆಂದು ನುಡಿವ ದುಃಕರ್ಮ ಮಿಶ್ರವಂ ಬಿಟ್ಟು, ಹರನೆ ಹಿರಿಯನೆಂದು ಕಿರಿಯರೆಲ್ಲಾ ದೇವರೆಂದು ನುಡಿದು ಕಂಡ ಕಂಡವರ್ಗೆ ಹೊಡೆಗೆಡವ ವೇಶಿಯ ಸುತನಂತೆ ಸಂಕೀರ್ಣಕ್ಕೊಳಗಾದ ಸಂಕೀರ್ಣಶೈವಮಂ ನೋಡದೆ, ದೂರದಿಂ ನಮಿಸಿ ಅರ್ಪಿಸಿ ಶೇಷವರುಣಕರ್ತನಲ್ಲವೆಂದು ದೂರಸ್ತನಹ ಪೂರ್ವಶೈವಮಂ ತೊಲಗಿ, ಅಂಗದಲನವರತ ಲಿಂಗಮಂ ಧರಿಸಿರ್ದು ದೇಹೇಂದ್ರಿಯ ಮನಃ ಪ್ರಾಣ ಜ್ಞಾನ ಭಾವ ಒಮ್ಮುಖಮಂ ಮಾಡಿ, ಸದ್ಗುರುಕಾರುಣ್ಯಮಂ ಪಡೆದು, ಲಿಂಗವೇ ಪತಿ, ಗುರುವೆ ತಂದೆ, ಜಂಗಮವೇ ಲಿಂಗವೆಂದರಿದು, ದ್ರವ್ಯವೆಂಬುದು ಭೂತರೂಪು, ಪ್ರಸಾದವೆಂಬುದು ಲಿಂಗರೂಪವೆಂದು ತಿಳಿದು, ಲಿಂಗದ ಪಾದೋದಕವೇ ಲಿಂಗಕ್ಕೆ ಮಜ್ಜನವಾಗಿ ಲಿಂಗದ ಪ್ರಸಾದವೇ ಲಿಂಗಕ್ಕೆ ಆರೋಗಣೆಯಾಗಿ ಲಿಂಗದಿಂದ ನೋಡುತ್ತ ಕೇಳುತ್ತ ರುಚಿಸುತ್ತ ಮುಟ್ಟುತ್ತ ವಾಸಿಸುತ್ತ ಕೊಡುತ್ತ ಆನಂದಿಸುತ್ತ ಅಹಂ ಮಮತೆಗೆಟ್ಟು ಸಂದು ಸಂಶಯವರಿತು ಹಿಂದು ಮುಂದ ಹಾರದಿಪ್ಪುದೆ ವೀರಶೈವ. ಅದೆಂತೆಂದಡೆ: ಪಿತಾ ಗುರುಃ ಪತಿರ್ಲಿಂಗಂ, ಸ್ವಲಿಂಗಂ ಜಂಗಮಪ್ರಭುಃ ತಸ್ಮಾತ್ಸರ್ವಪ್ರಯತ್ನೇನ ತಸ್ಯೈವಾರಾಧನಂ ಕ ರು ಸ ಏವ ಸ್ಯಾತ್ಪ್ರಸಾದಸ್ತೇ ಭಕ್ತಿವಿತ್ತಸಮರ್ಪಿತಃ ತತ್ಪ್ರಸಾದಸ್ತು ಭೋಕ್ತವ್ಯಃ ಭಕ್ತೋವಿಗತಕಲ್ಮಷಃ ಎಂದುದಾಗಿ, ಇಂತಲ್ಲದಿರ್ದುದೆ ಇತರ ಶೈವ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖ, ಅಂಗಲಿಂಗಸಂಗದಿಂದ ಪರಮಸುಖ ನೋಡಯ್ಯಾ. ಅಂಗಲಿಂಗಸಂಗದ ಸುಖವನು ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯ ಬಲ್ಲ.
--------------
ಚನ್ನಬಸವಣ್ಣ
ಕಾಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋ[ಗ]ದು. ಇಂದ್ರಿಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋಗದು. ತನ್ನಿಂದಲೇ (ಅಹುದು), ತನ್ನಿಂದಲೇ ಹೋಹುದು. ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರವುಳ್ಳನ್ನಕ್ಕರ, ಕೂಡಲಚೆನ್ನಸಂಗನಲ್ಲಿ ಶರಣನೆನಿಸಲು ಬಾರದು.
--------------
ಚನ್ನಬಸವಣ್ಣ
ಅಂಗದ ಕೈಯಲ್ಲೊಂದಂಗವದೆ ನೋಡಾ. ಲಿಂಗದ ಕೈಯಲ್ಲೊಂದು ಲಿಂಗವದೆ ನೋಡಾ. ಈ ಉಭಯದ ಮಧ್ಯದಲ್ಲಿ ಅರಿದ ತಲೆಯ, ಕೈಯಲ್ಲಿ ಹಿಡಿದುಕೊಂಡು, ಮುಂಡ ಉದಯವಾಯಿತ್ತ ಕಂಡೆ. ಅದಕ್ಕೆ ತಲೆಯಲ್ಲಿ ಓಲೆ, ಮುಂಡದಲ್ಲಿ ಮೂಗುತಿ, ಮೂಗಿನಲ್ಲಿ ಕಣ್ಣು, ಕಿವಿಯಲ್ಲಿ ತೋರಣ, ಕಂಗಳ ಮುತ್ತುಸರವ ಪವಣಿಸುವ ಜಾಣೆಯ ಕಣ್ಣ ಕೈಯ ಲಿಂಗಕ್ಕೆ ಮದುವೆಯ ಮಾಡಿದರೆಮ್ಮವರು. ಆ ಲಿಂಗದಿಂದ ರೂಪಲ್ಲದ, ಸೋಂಕಿಲ್ಲದ ಸೊಬಗಿನ ಅಭಿನವ ಶಿಶು ಹುಟ್ಟಿತ್ತು ನೋಡಾ. ಆ ನಾಮವ ಹಿಡಿದು ಕರೆದಡೆ ಕೈಸನ್ನೆ ಮಾಡಿತ್ತು. ನೋಡಿದಡೆ ಮುಂದೆಬಂದು ನಿಂದಿತ್ತು. ಅಪ್ಪಿದಡೆ ಸೋಂಕಿಲ್ಲದೆ ಹೋಯಿತ್ತು. ಅರಸಹೋದಡೆ ಅವಗವಿಸಿತ್ತು. ನಿಜಗುರು ಭೋಗೇಶ್ವರಾ, ಇದರ ಕೌತುಕದ ಕಾರಣವೇನು ಹೇಳಯ್ಯಾ.
--------------
ಭೋಗಣ್ಣ
ಲಿಂಗದಿಂದುದಯ ನಮಗೆ, ಹೇಗಿರ್ದಡು ಲಿಂಗದಿಂದ ಬೆಳಿಗೆ ಎಂದು ಹೆಡಕೆತ್ತಿ ಆಚರಿಸಲಾಗದು. ಸತ್ತು ಹುಟ್ಟಿ ಬೆಳೆದು ಬೆಳೆಯೊಳು ಸುಯಿಧಾನಿ ಸುಖನರಿದು ಮರೆದು. ಮಡಿಯಬಲ್ಲ ಮಹಿಮಂಗಲ್ಲದಿಲ್ಲವೈಕ್ಯಪದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯದಿಂದ ಕರ್ಮವ ಕಂಡು, ಭಾವದಿಂದ ಲಿಂಗವ ಕಂಡು ಲಿಂಗದಿಂದ ಸ್ವಾನುಭಾವವಾಗಿ, ಅಂಗದ ಸಂಗಕ್ಕೆ ಹೊರಗಾಯಿತ್ತು ಕದಂಬಲಿಂಗವನರಿಯಲಾಗಿ
--------------
ಗೋಣಿ ಮಾರಯ್ಯ
ಪ್ರಸಾದವೆಂಬುದು ನಿರ್ಮಳಮುಖದಿಂದ ಉದ್ಭವವಾದದ್ದು. ಚಿತ್‍ಶಕ್ತಿಯಿಂದ ಮಹಾಲಿಂಗರೂಪವಾಯಿತು. ಮಹಾಲಿಂಗಪ್ರಸಾದದಿಂದ ಪ್ರಸಾದಲಿಂಗ ಉದ್ಭವವಾಯಿತು. ಪ್ರಸಾದಲಿಂಗದಿಂದ ಜಂಗಮಲಿಂಗ ಉದ್ಭವವಾಯಿತು. ಜಂಗಮಲಿಂಗಪ್ರಸಾದದಿಂದ ಶಿವಲಿಂಗ ಉದ್ಭವವಾಯಿತು. ಶಿವಲಿಂಗಪ್ರಸಾದದಿಂದ ಗುರುಲಿಂಗಪ್ರಸಾದ ಉದ್ಭವವಾಯಿತು. ಗುರುಲಿಂಗಪ್ರಸಾದದಿಂದ ಅಚಾರಲಿಂಗ ಉದ್ಭವವಾಯಿತು. ಇಂತೀ ಷಡ್ವಿಧಲಿಂಗವು ಪ್ರಸಾದದಿಂದ ಉದ್ಭವಿಸಿದವು. ಲಿಂಗದಿಂದ ಜಗತ್ತು ಉದ್ಭವಿಸಿದವು. 'ಲಿಂಗಮಧ್ಯೇ ಜಗತ್ಸರ್ವಂ ತ್ರೆೃಲೋಕ್ಯಂ ಸಚರಾಚರಂ | ಲಿಂಗ ಬಾಹ್ಯಾತ್ ಪರಂ ನಾಸ್ತಿ [ತಸ್ಮಾತ್] ಲಿಂಗಂ ಪ್ರಪೂಜಯೇತ್ || ಲೀಯಾಲೀಯ ಸಂಪ್ರೋಕ್ತಂ ಸಕಾರಂ ಸ್ಫಟಿಕಮುಚ್ಯತೇ ! ಲಯರ್ನಾಗಮಶ್ಯನಂ ಲಿಂಗಶಬ್ದಮೇವಚೇತ್ || ಲೀಯತೇ ಗಮ್ಯತೇ ಯತ್ರಯೋನಿಃ ಸರ್ವಚರಾಚರಂ | ತದೀಯಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||'' ಸರ್ವ ಸಚರಾಚರವೇ ಪ್ರಸಾದರೂಪ. ಅನಂತಕೋಟಿ ಬ್ರಹ್ಮಾಂಡಗಳಿಗೆ ಪ್ರಸಾದವೆ ಕಾಯ ಜೀವ ಪ್ರಾಣವಾಯಿತು, ಕಾಯ ಇಷ್ಟಲಿಂಗವಾಯಿತು, ಜೀವ ಪ್ರಾಣಲಿಂಗವಾಯಿತು, ಭಾವವೇ ತೃಪ್ತಿಲಿಂಗವಾಯಿತು. ಪೃಥ್ವಿ ಅಪ್ಪುಗಳೆರಡು ಕಾಯವಾಯಿತು. ಅಗ್ನಿ ವಾಯುಗಳೆರಡು ಪ್ರಾಣಲಿಂಗವಾಯಿತು. ಅಕಾರ ಓಂಕಾರವೇ ಭಾವವಾಯಿತು. ಇಂತೀ ಪಂಚತತ್ವಪ್ರಸಾದವೆನಿಸಿದ ಪ್ರಣಮವು [ಹೀಗೆ ಕಾಯ ಜೀವ ಪ್ರಾಣ ಪ್ರಸಾದವಾಯಿತ್ತು] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಲಿಂಗದಿಂದ ಅರಿವನರಿದೆಹೆನೆಂದಡೆ, ಆತ್ಮಂಗೆ ಸೂತಕ. ಅರಿವಿನಿಂದ ಉಭಯವ ಕಂಡೆಹೆನೆಂದಡೆ, ಅರಿವಿಂಗೆ ಸೂತಕ. ಅರಿದ ಅರಿವು, ಆ ಅರಿವುದಕ್ಕೆ ಮುನ್ನವೆ ಕುರುಹುಗೊಂಡ ಮತ್ತೆ ಅರಿವುದಕ್ಕೆ ಒಡಲಿಲ್ಲ, ಮರೆವುದಕ್ಕೆ ತೆರಹಿಲ್ಲ. ಆದಿಶೂನ್ಯಕ್ಕೆ ಮೊದಲೆ, ನಾದಶೂನ್ಯವಾದ ಮತ್ತೆ ಕಾಮಧೂಮ ಧೂಳೇಶ್ವರನೆಂದೆನಲಿಲ್ಲ.
--------------
ಮಾದಾರ ಧೂಳಯ್ಯ
ಲಿಂಗದಿಂದ ಶರಣರುದಯಯವಾಗದಿರ್ದಡೆ, ಬಸವ ಚೆನ್ನಬಸವ ಪ್ರಭುದೇವರು ಮುಖ್ಯವಾದ ಏಳುನೂರುಯೆಪ್ಪತ್ತು ಅಮರಗಣಂಗಳು ಎಲ್ಲರೂ ಕ್ಷೀರ ಕ್ಷೀರವ ಬೆರಸಿದಂತೆ, ನೀರು ನೀರು ಬೆರಸಿದಂತೆ, ಘೃತ ಘೃತವ ಬೆರಸಿದಂತೆ, ಬಯಲು ಬಯಲ ಬೆರಸಿದಂತೆ ಲಿಂಗವ ಬೆರಸಿ ಮಹಾಲಿಂಗವೆಯಾದರು ನೋಡ. ಲಿಂಗದಿಂದ ಶರಣರುದಯವಾಗದಿರ್ದಡೆ, ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ, ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ನೋಡಾ. ಇಂತಪ್ಪ ದೃಷ್ಟವ ಕಂಡು ನಂಬದಿರ್ಪುದು ಕರ್ಮದ ಫಲ. ಅದು ಇವರ ಗುಣವೆ? ಶಿವನ ಮಾಯಾಪ್ರಪಂಚಿನ ಗುಣ ನೋಡಾ. ಈ ಪ್ರಪಂಚುಜೀವಿಗಳು ಅಲ್ಲ ಎಂಬುದು, ಅಹುದೆಂಬುದು ಪ್ರಮಾಣೆ? ಅಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮ ಪ್ರಸಾದದಿಂದ ಲಿಂಗಕ್ಕೆ ಚೈತನ್ಯಸ್ವರೂಪವೆಂದರಿದು, ಪಾದೋದಕದಿಂದ ಲಿಂಗಕ್ಕೆ ಮಜ್ಜನವೆಂದರಿದು, ಜಂಗಮ ಪ್ರಸಾದವೆ ಲಿಂಗಕ್ಕೆ ಅರ್ಪಿತವಾಗಿ, ಲಿಂಗದಿಂದ ನೋಡುತ್ತ, ಕೇಳುತ್ತ, ರುಚಿಸುತ್ತ, ಮುಟ್ಟುತ್ತ, ವಾಸಿಸುತ್ತ, ಕೂಡುತ್ತ, ಅಹಂ ಮಮತೆಗೆಟ್ಟು, ಸಂದು ಸಂಶಯವರತು, ಹಿಂದ ಮುಂದ ಹಾರದಿಪ್ಪುದೇ ನಿಜವೀರಶೈವ. ಇಂತಲ್ಲದೆ ಉಳಿದುದೆಲ್ಲವು ಇತರ ಶೈವ ಕಾಣಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವಿನಿಂದಾಯಿತ್ತೆನ್ನ ಗುರುಸಂಬಂಧ; ಲಿಂಗದಿಂದಾಯಿತ್ತೆನ್ನ ಲಿಂಗಸಂಬಂಧ; ಜಂಗಮದಿಂದಾಯಿತ್ತೆನ್ನ ಜಂಗಮಸಂಬಂಧ. ಅದೆಂತೆಂದಡೆ: ತನುವಿಕಾರವಳಿದೆನಾಗಿ ಗುರುಸಂಬಂಧ; ಮನವಿಕಾರವಳಿದೆನಾಗಿ ಲಿಂಗಸಂಬಂಧ; ಧನವಿಕಾರವಳಿದೆನಾಗಿ ಜಂಗಮಸಂಬಂಧ. ಇಂತೀ ತ್ರಿವಿಧವಿಕಾರವಳಿದೆನಾಗಿ, ಗುರುವಾಗಿ ಗುರುಭಕ್ತಿಸಂಪನ್ನ; ಲಿಂಗವಾಗಿ ಲಿಂಗಭಕ್ತಿಸಂಪನ್ನ; ಜಂಗಮವಾಗಿ ಜಂಗಮಭಕ್ತಿ ಸಂಪನ್ನ. ಇದು ಕಾರಣ, ಅರಿವೆ ಗುರು, ಅನುಭಾವವೆ ಲಿಂಗ, ಆನಂದವೆ ಜಂಗಮ. ಅದು ಹೇಗೆಂದಡೆ: ಅರಿವೆಂಬ ಗುರುವಿನಿಂದ ಇಷ್ಟಲಿಂಗಸಾಹಿತ್ಯ; ಅನುಭಾವವೆಂಬ ಲಿಂಗದಿಂದ ಪ್ರಾಣಲಿಂಗಸಾಹಿತ್ಯ ಆನಂದವೆಂಬ ಜಂಗಮದಿಂದ ತೃಪ್ತಿಲಿಂಗಸಾಹಿತ್ಯ. ಅರಿವಿನಿಂದ ಅನುಭವ; ಅನುಭವದಿಂದ ಅರಿವು. ಅರಿವು ಅನುಭವ ಸಮರಸವಾದುದೆ ಆನಂದ. ಆನಂದಕ್ಕೆ ಅರಿವೆ ಸಾಧನ. ಇಷ್ಟದಿಂದ ಪ್ರಾಣ, ಪ್ರಾಣದಿಂದ ಇಷ್ಟ; ಇಷ್ಟಪ್ರಾಣಸಂಯೋಗವಾದುದೆ ತೃಪ್ತಿ. ಆ ತೃಪ್ತಿಗೆ ಇಷ್ಟಲಿಂಗದರಿವೆ ಸಾಧನ. ಅದೆಂತೆಂದಡೆ: ಆ ಇಷ್ಟಲಿಂಗದಲ್ಲಿ ವಿನಯ ಮೋಹ ಭಯ ಭಕ್ತಿ ಕರುಣ ಕಿಂಕುರ್ವಾಣ ಸಮರಸವಾದುದೆ ಆಚಾರಲಿಂಗ. ಮತ್ತಾ ಇಷ್ಟಲಿಂಗದಲ್ಲಿ ದೃಢಸ್ನೇಹ ನಿಶ್ಚಯ ನಿಶ್ಚಲವಿಶ್ವಾಸ ಸಮರಸವಾದುದೆ ಗುರುಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಎಚ್ಚರಿಕೆ ಸುಜನತ್ವ ಸಾವಧಾನ ಸನ್ನಹಿತ ಪ್ರಸನ್ನತ್ವ ಸಮರಸವಾದುದೆ ಶಿವಲಿಂಗ. ಮತ್ತಾ ಇಷ್ಟಲಿಂಗದಲ್ಲಿ ನಿಸ್ತರಂಗ ದೃಕ್ಕಿರಣೋದಯ ಹೃದಯಕುಹರ ಸ್ವಯಾನುಭಾವಾಂತರ್ಮುಖ ಸಮರಸವಾದುದೆ ಜಂಗಮಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಪರವಶ ಗೂಢ ಏಕಾಗ್ರಚಿತ್ತ ಉತ್ತರಯೋಗ ಪರಿಪೂರ್ಣಭಾವ ಸಚ್ಚಿದಾನಂದ ಸಮರಸವಾದುದೆ ಪ್ರಸಾದಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಮನೋಲಯ ಭಾವಾದ್ವೈತ ಅನುಪಮ ಚಿತ್ತಾತ್ಮಿಕದೃಷ್ಟಿ ಸುನಾದ ಭೋಜ್ಯ ಸಮರಸವಾದುದೆ ಮಹಾಲಿಂಗ. ಇಂತಪ್ಪ ಮಹಾಲಿಂಗದಿಂದ ಪ್ರಸಾದಲಿಂಗ, ಪ್ರಸಾದಲಿಂಗದಿಂದ ಜಂಗಮಲಿಂಗ, ಜಂಗಮಲಿಂಗದಿಂದ ಶಿವಲಿಂಗ, ಶಿವಲಿಂಗದಿಂದ ಗುರುಲಿಂಗ, ಗುರುಲಿಂಗದಿಂದ ಆಚಾರಲಿಂಗ. ಆಚಾರಲಿಂಗದಲ್ಲಿ ಅನುಭಾವಿಯಾದಡೆ, ಇಪ್ಪತ್ತೈದು ಕರಣಂಗಳನರಿದಾಚರಿಸಬೇಕು. ಗುರುಲಿಂಗದಲ್ಲಿ ಅನುಭಾವಿಯಾದಡೆ, ಇಪ್ಪತ್ತು ಕರಣಂಗಳನರಿದಾಚರಿಸಬೇಕು. ಶಿವಲಿಂಗದಲ್ಲಿ ಅನುಭಾವಿಯಾದಡೆ, ಹದಿನೈದು ಕರಣಂಗಳನರಿದಾಚರಿಸಬೇಕು. ಜಂಗಮದಲ್ಲಿ ಅನುಭಾವಿಯಾದಡೆ, ಹತ್ತು ಕರಣಂಗಳನರಿದಾಚರಿಸಬೇಕು. ಪ್ರಸಾದಲಿಂಗದಲ್ಲಿ ಅನುಭಾವಿಯಾದಡೆ, ಐದು ಕರಣಂಗಳನರಿದಾಚರಿಸಬೇಕು. ಮಹಾಲಿಂಗದಲ್ಲಿ ಅನುಭಾವಿಯಾದಡೆ, ಎಲ್ಲಾ ಕರಣಂಗ?ನರಿದಾಚರಿಸಬೇಕು. ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ, ಆ ಇಷ್ಟಲಿಂಗದ ಗಂಧಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಆಚಾರಲಿಂಗಭೋಗಿ. ಮತ್ತಾ ಇಷ್ಟಲಿಂಗದ ರಸಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಗುರುಲಿಂಗಭೋಗಿ. ಮತ್ತಾ ಇಷ್ಟಲಿಂಗದ ರೂಪುಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಶಿವಲಿಂಗಭೋಗಿ. ಮತ್ತಾ ಇಷ್ಟಲಿಂಗದ ಸ್ಪರ್ಶನಂಗಳಾರು ಮುಖಂಗಳಾಗಿ ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಜಂಗಮಲಿಂಗಭೋಗಿ. ಮತ್ತಾ ಇಷ್ಟಲಿಂಗದ ಶಬ್ದಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳ್ಳಬಲ್ಲನಾಗಿ ಪ್ರಸಾದಲಿಂಗಭೋಗಿ. ಮತ್ತಾ ಇಷ್ಟಲಿಂಗದ ಪರಿಣಾಮಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಮಹಾಲಿಂಗಭೋಗಿ. ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ, ಆ ಇಷ್ಟಲಿಂಗದ ಸದ್ಯೋಜಾತಮುಖವಪ್ಪ ಪ್ರಾಣಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ವಾಮದೇವಮುಖವಪ್ಪ ಜಿಹ್ವೆಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಅಘೋರಮುಖವಪ್ಪ ನೇತ್ರಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ತತ್ಪುರುಷಮುಖವಪ್ಪ ತ್ವಕ್ಕುಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಈಶಾನಮುಖವಪ್ಪ ಶ್ರೋತ್ರಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಗೋಪ್ಯಮುಖವಪ್ಪ ಹೃದಯಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ. ಇಂತಪ್ಪ ತೃಪ್ತಿಪದಾರ್ಥಂಗಳಾರು, ಶಬ್ದಪದಾರ್ಥಂಗಳಾರು, ಸ್ಪರ್ಶನಪದಾರ್ಥಂಗಳಾರು, ರೂಪುಪದಾರ್ಥಂಗಳಾರು, ರಸಪದಾರ್ಥಂಗಳಾರು, ಗಂಧಪದಾರ್ಥಂಗಳಾರು. ಇಂತೀ ಗಂಧಪದಾರ್ಥಂಗಳಾರನು ಘ್ರಾಣಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ರಸಪದಾರ್ಥಂಗಳಾರನು ರುಚಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ರೂಪುಪದಾರ್ಥಂಗಳಾರನು ನಿರೀಕ್ಷಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ಸ್ಪರ್ಶನ ಪದಾರ್ಥಂಗಳಾರನು ಸೋಂಕಿಸುವಲ್ಲಿ ಅಷ್ಟಾದಶಲಿಂಗಶೇಷ ಭುಕ್ತನಾಗಿ, ಶಬ್ದಪದಾರ್ಥಂಗಳಾರನು ಲಾಲಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ತೃಪ್ತಿಪದಾರ್ಥಂಗಳಾರನು ಪರಿಣಾಮಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ಅರ್ಪಿತ ಪ್ರಸಾದ ಅವಧಾನ ಸ್ಥಳಕು? ಅನುಭಾವ ಆಚರಣೆ ಇಂತಿವೆಲ್ಲವನು ಇಷ್ಟಲಿಂಗದಲ್ಲಿಯೆ ಕಂಡು ಸುಖಿಸುತ್ತಿರ್ಪ ಮಹಾಮಹಿಮನ ನಾನೇನೆಂಬೆನಯ್ಯಾ ! ಇಂತಪ್ಪ ಮಹಾಮಹಿಮನೊಳಕೊಂಡಿಪ್ಪ ಇಷ್ಟಬ್ರಹ್ಮವ ನಾನೇನೆಂಬೆನಯ್ಯಾ ! ಫಲ ಪತ್ರ ಕುಸುಮ ರಸ ಗಂಧ ಕಾರ ಒಗರು ಹುಳಿ ಮಧುರ ಇಂತಿವೆಲ್ಲಕ್ಕೂ ಜಲವೊಂದೆ ಹಲವು ತೆರನಾದಂತೆ, ಮಸೆದ ಕೂರಲಗು ಮೊನೆ ಮೊನೆಗೆ ಬಂದಾನುವಂತೆ, ರಸಘುಟಿಕೆಯೊಂದೆ ಸಹಸ್ರ ಮೋಹಿಸುವಂತೆ, ಬಂಗಾರವೊಂದೆ ಹಲವಾಭರಣವಾದಂತೆ, ಹತ್ತೆಂಟುಬಾಯ ಹುತ್ತದೊಳಗೆ ಸರ್ಪನೊಂದೆ ತಲೆದೋರುವಂತೆ ಹಲವು ಕರಣಂಗಳ ಕೊನೆಯ ಮೊನೆಯ ಮೇಲೆ ತೊ?ಗಿ ಬೆಳಗುವ ಪರಂಜ್ಯೋತಿರ್ಲಿಂಗವು ! ಅನುಪಮ ಅದ್ವಯ ವಾಙ್ಮನೋತೀತ ಅವಿರಳ ಅಪ್ರಮೇಯ ಚಿನ್ಮಯ ನಿರಾವರಣ ನಿರುತ ನಿರ್ಗುಣ ನಿರ್ಭೇದ್ಯ, ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಸರ್ವಾಂಗಲಿಂಗಿ.
--------------
ಚನ್ನಬಸವಣ್ಣ
ಸೃಷ್ಟಿಹೇತುವಾದ ಸಂಸಾರವೇ ಪೃಥ್ವಿಯು, ತದ್ರಕ್ಷಣಹೇತುವಾದುದೇ ಜಲವು, ಇವೆರಡನ್ನೂ ಸಂಬಂಧಿಸಿ, ಏಕಮಾಗಿ ಘನೀಭವಿಸುವಂತೆ ಮಾಡಿ, ತತ್ಸಂಹಾರಕ್ಕೆ ತಾನೇ ಕಾರಣಮಾಗಿರ್ಪ ಮನಸ್ಸೇ ಅಗ್ನಿಯು. ಆ ಮನಸ್ಸನ್ನು ಪ್ರಕಾಶಗೊಳಿಸಿ ಅದರೊಳಗೆ ಕೂಡಿ ಅಭೇದಮಾಗಿರ್ಪ ಜೀವನೇ ವಾಯುವು, ಅಗ್ನಿಯು ಪೃಥ್ವಿಯೊಳಗೆ ಬದ್ಧಮಾಗಿರ್ಪಂತೆ, ಮನವು ಸಂಸಾರಬದ್ಧಮಾಗಿರ್ಪುದು. ವಾಯುವು ಜಲದೊಳಗೆ ಬದ್ಧಮಾಗಿರ್ಪಂತೆ, ಜೀವನು ಶರೀರದಲ್ಲಿ ಬದ್ಧಮಾಗಿರ್ಪನು. ಜೀವನು ತಾನು ಸಂಸಾರದೊಳ್ಕೂಡಿ ಸ್ಥೂಲವಾಗಿಯೂ ಮನದೊಳ್ಕೊಡಿ ಸೂಕ್ಷ್ಮವಾಗಿಯೂ ಇರ್ಪನು. ಸಂಸಾರ ಶರೀರ ಮನೋಜೀವಗಳಿಗಾಧಾರಮಾಗಿರ್ಪ ಕರ್ಮವೇ ಆಕಾಶವು, ಆ ಕರ್ಮವನಾವರಿಸಿರ್ಪ ಮಹಾಮೋಹವೆಂಬ ಸುಷುಪ್ತಿಯ ಒಳಹೊರಗೆ ಪ್ರಕಾಶಿಸುತ್ತಿರ್ಪ ಜಾಗ್ರತ್ಸ್ವಪ್ನಜ್ಞಾನಂಗಳೇ ಚಂದ್ರಸೂರ್ಯರು. ಮನಸ್ಸೆಂಬ ಅಗ್ನಿಯು ಜೀವಾನಿಲನಿಂ ಪಟುವಾಗಿ ಸಂಸಾರಶರೀರಂಗಳಂ ಕೆಡಿಸಿ, ಕರ್ಮವೆಂಬಾಕಾಶದೊಳಗೆ ಜೀವಾನಿಲನಿಂ ಕೂಡಿ ಧೂಮರೂಪಮಾಗಿ ಶರೀರಸಂಸಾರಗಳೆಂಬ ಮೇಘÀಜಲವರ್ಷವಂ ನಿರ್ಮಿಸಿ, ಜೀವನಿಗವಕಾಶವಂ ಮಾಡಿಕೊಟ್ಟು, ತಾನಲ್ಲಿಯೇ ಬದ್ಧನಾಗಿ, ಜೀವನಿಂದ ಪ್ರಕಾಶಮಾಗುತ್ತಿರ್ಪುದು. ಇಂತಪ್ಪ ಕರ್ಮವೆಂಬಾಕಾಶಕ್ಕೆ ಜೀವನೆಂಬ ವಾಯುವೇ ಕಾರಣವು. ಇವು ಒಂದಕ್ಕೊಂದು ಕಾರಣಮಾಗಿ, ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ ತೋರುತ್ತಾ ಅಡಗುತ್ತಾ ಬಳಲುತ್ತಾ ತೊಳಲುತ್ತಿರ್ಪ ಭವರೋಗದಲ್ಲಿ ಜೂಗುತ್ತಿರ್ಪ ಬಂಧನದ ಈ ದಂದುಗವಿನ್ನೆಂದಿಗೆ ಪೋಪುದು ಎಂದು ಮುಂದುಗಾಣದೆ ಇರ್ಪೆನ್ನ ತಾಪವಂ ನೀಂ ದಯೆಯಿಂ ತಣ್ಣನೆ ಮಾಳ್ಪೊಡೆ, ಸತ್ಯಜ್ಞಾನಾನಂದಮೂರ್ತಿಯಾದ ಪರಮಾತ್ಮನೇ ಗುರು ಲಿಂಗ ಜಂಗಮ ಸ್ವರೂಪಿಯಾಗಿ, ಜ್ಞಾನದಿಂದ ನಿಜವೂ ನಿಜದಿಂದಾನಂದವೂ ಪ್ರಕಾಶಮಾಗಿರ್ಪಂತೆ, ಗುರುವಿನಿಂದ ಲಿಂಗವಂ ಲಿಂಗದಿಂದ ಜಂಗಮವಂ ಕಂಡೆನು. ಅಂತಪ್ಪಾ ನಿಜಾತ್ಮಲಿಂಗವನು ಕರ್ಮವೆಂಬ ಆಕಾಶದಲ್ಲಿ ಬೆರೆಸಲು, ಅದೇ ಕಾರಣಮಾಯಿತ್ತು. ಆ ಕರ್ಮವೆಂಬ ಶಕ್ತಿಯು ಲಿಂಗವೆಂಬ ಶಿವನೊಳಗೆ ಕೂಡಲು, ಲಿಂಗತೇಜಸ್ಸಿನಿಂ ಕರ್ಮಗರ್ಭದಲ್ಲಿ ಜೀವನಿಗೆ ಪುನರ್ಭವಮಾದುದರಿಂದ ಪ್ರಾಣಲಿಂಗಮಾಯಿತ್ತು. ಅದೆಂತೆಂದೊಡೆ : ಲಿಂಗವೆಂಬ ಮಹಾಲಿಂಗದಿಂ ಜನಿಸಿದ ಕರ್ಮವೇ ಪ್ರಸಾದಲಿಂಗವು, ಆ ಕರ್ಮದಿಂ ಜನಿಸಿದ ಜೀವನೇ ಜಂಗಮಲಿಂಗವು, ಅಂತಪ್ಪ ಲಿಂಗದಿಂದುಸಿದ ಮನಸ್ಸೇ ಶಿವಲಿಂಗವು, ಅಂತಪ್ಪ ಮನಸ್ಸಿನಿಂದ ಪರಿಶುದ್ಧಮಾಗಿರ್ಪ ಶರೀರವೇ ಗುರುಲಿಂಗವು. ಅಂತಪ್ಪ ಗುರುಲಿಂಗಮಾಗಿರ್ಪ ಶರೀರದಿಂದನುಭವಿಸುತ್ತಿರ್ಪ ಸಂಸಾರವೇ ಆಚಾರಲಿಂಗವು. ಇಂತು ಸಂಸಾರಶರೀರಂಗಳಿಗೆ ಇಷ್ಟಲಿಂಗವೇ ಕಾರಣವೂ ಮನೋಜೀವರಿಗೆ ಪ್ರಾಣಲಿಂಗವೇ ಕಾರಣವೂ ಆಗಿ, ಕರ್ಮಲಿಂಗಂಗಳಿಗೆ ಭಾವಲಿಂಗಂಗಳೇ ಕಾರಣಮಾಗಿ, ಕಾರಣವೇ ಐಕ್ಯಸ್ಥಾನವಾದುದರಿಂ ಸಂಸಾರ ಶರೀರಂಗಳು ಇಷ್ಟಲಿಂಗದೊಳಗೂ ಮನೋಜೀವಂಗಳು ಪ್ರಾಣಲಿಂಗದೊಳಗೂ ಐಕ್ಯವಂ ಹೊಂದಿದವು. ಕರ್ಮಲಿಂಗಗಳು ಭವಲಿಂಗದೊಳಗೈಕ್ಯಮಾಗಿ, ಪ್ರಾಣವು ಭಾವದೊಳಗೆ ಬೆರೆದು, ಭೇದವಡಗಿ ತಾನು ತಾನಾಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇನ್ನಷ್ಟು ... -->