ಕಟೆದ ಕಲ್ಲು ಲಿಂಗವೆಂದೆನಿಸಿತು; ಕಟೆಯದ ಕಲ್ಲು ಕಲ್ಲೆನಿಸಿತ್ತು. ಪೂಜಿಸಿದ ಮಾನವ ಭಕ್ತನೆನಿಸಿದನು; ಪೂಜಿಸದ ಮಾನವ ಮಾನವನೆನಿಸಿದನು. ಕಲ್ಲಾದಡೇನು? ಪೂಜೆಗೆ ಫಲವಾಯಿತ್ತು ; ಮಾನವನಾದಡೇನು? ಭಕ್ತಿಗೆ ಕಾರಣಿಕನಾದನು. ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
ಪೃಥ್ವಿಯ ಸಾರಗೆಟ್ಟ ಹೊಲದಲ್ಲಿ, ಆರವೆಯಿಲ್ಲದ ಮರ ಹುಟ್ಟಿ, ಕಣ್ಣಿಗೆ ತೋರಲಿಲ್ಲದ ಬಿತ್ತಾಯಿತ್ತು, ಅದು ಈ ಧರೆಯಲ್ಲಿ ಬಿತ್ತಿದಡೆ, ಆ ಧರೆಯಲ್ಲಿ ಹುಟ್ಟಿತ್ತು, ಅದರಿಂದಾಚೆ ಫಲವಾಯಿತ್ತು, ಕೊಂಬಿಂದೀಚೆ ಹಣ್ಣಾಯಿತ್ತು. ಹಣ್ಣು ಮೆಲುವ ಬಾಯಿಗೆ ಹಣ್ಣಿತ್ತು, ಈ ಹಣ್ಣಿನ ಸವಿಯ ಹೇಳು, ಚೆನ್ನಬಂಕೇಶ್ವರಲಿಂಗಾ.
ನೂಲೆಳೆಯ ಗಾತ್ರದ ಮರದಲ್ಲಿ, ಬೆಟ್ಟದ ತೋರದ ಕಾಯಿ ಫಲವಾಯಿತ್ತು. ಅದು ಹಣ್ಣಾಗದು, ನೋಡಿರಯ್ಯಾ ಇನ್ನೆಂತೊ ? ಏರಬಾರದು ಮರನ, ಕೊಯ್ದು ಹಿಡಿಯಬಾರದು ಕಾಯ. ಈ ಭೇದವನರಿದು ಮರನನೇರದೆ, ಕಾಯ ಮುಟ್ಟದೆ, ಹಣ್ಣಿನ ರುಚಿಯ ಚೆನ್ನಾಗಿ ಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗ ತನ್ನಲ್ಲಿ ನಿರ್ಲೇಪಸಂಬಂಧಿ.