ಅಜ ಹರಿ ಸುರರಿಗೆ ಶರೀರವ ತೊಡಿಸಿ
ಕರಣದೋಕುಳಿಯಾಡಿ
ವಿಷಯದ ಮಳೆಯ ಕರೆವುತ್ತಿದ್ದಾಳೆ ನೋಡಾ.
ಹರಣದ ಮಧ್ಯದಲ್ಲಿ ನಿಂದು,
ಹೆಣ್ಣು ಹೊನ್ನು ಮಣ್ಣು ತೋರಿ,
ಕಣ್ಣ ಕಟ್ಟಿದಳು ನೋಡಾ,
ನಿಮ್ಮ ಕಾಣಲೀಯದೆ.
ತಾನು ತಲೆಕೆಳಗಾಗಿ ಕಾಲುಮೇಲಾಗಿ ನಡೆವಳು.
ಕರಿಯಾಗಿ ನಿಂದು, ಹರಿಯಾಗಿ ಹರಿದು,
ಉರಿಯಾಗಿ ಸುಡುತಿಪ್ಪಳು ನೋಡಾ.
ಕರಿಯ ಶಿರದಲ್ಲಿ ಉರಿ ಹುಟ್ಟಲು
ಕರಿ ಬೆಂದಿತ್ತು, ಹರಿ ನಿಂದಿತ್ತು, ಉರಿ ಕೆಟ್ಟಿತ್ತು.
ಶರೀರಗುಣವಳಿದು ಸದ್ಭಕ್ತಿಸಾಮ್ರಾಜ್ಯವನಾಳುತ್ತಿರ್ದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.