ನಾಲ್ಕು ಯುಗಂಗಳು ಸಹಸ್ರ ವೇಳೆ ತಿರುಗಿದಡೆ, ಬ್ರಹ್ಮಂಗೊಂದು ಬ್ರಹ್ಮನಂದು ಸಹಸ್ರ ವೇಳೆ ತಿರುಗಿದಡೆ, ವಿಷ್ಣುವಿಗೊಂದು ಗಳಿಗೆ. ವಿಷ್ಣು ತಾನು ಹನ್ನೆರಡು ಲಕ್ಷ[ವೇಳೆ]ತಿರುಗಿದಡೆ, ಮಹೇಶ್ವರಂಗೊಂದು ನಿಮಿಷ. ಅಂತಪ್ಪ ಮಹೇಶ್ವರರನೇಕ ಲೀಲೆ ಧರಿಸಿದಲ್ಲಿ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆ ಸಮಾಪ್ತಿ, ನೋಡಯ್ಯಾ ಬಾಚರಸರೆ.
ಜ್ಞಾನವನಂತರಂಗಕಿತ್ತು, ಕ್ರೀಯವ ಬಹಿರಂಗಕಿತ್ತು, ಸರ್ವಾಚಾರಸಂಪತ್ತಿನೊಳಗಿರಿಸಿದ ಕ್ರಿಯಾಘನಗುರುವಿನ ತೆಗೆದುಹಾಕಿ ನಾವು ಲಿಂಗಜಂಗಮಸನ್ನಿಹಿತರೆಂದಡೆ ಆ ನಾಲಿಗೆ ಕೀಳದಿಹರೆ ಕಾಲನವರು ? ಆ ಮಹಾಗುರುವಿನ ಸದ್ಭಾವಲಿಂಗವನರ್ಚಿಸುವಲ್ಲಿ ಖಂಡಿಸದಿಹರೆಯಮನವರು? ಆ ಗುರುಜ್ಞಾನ ಭಸಿತವನು ಧರಿಸಿದಲ್ಲಿ ಚರ್ಮವ ಹೆರಜಿ ಬಿಸಾಟರೆ ಅಂತಕನವರು? ಆ ಗುರುಕಟಾಕ್ಷಮಣಿಯ ಧರಿಸಿದಲ್ಲಿ ಕಡಿಕಡಿದು ಕಡೆಗಿಡರೆ ಯಮನವರು ? ಆ ಆದಿಯ ಗುರುನಾಮಾಮೃತವ ಸೇವಿಸುವರ ಹೃದಯವನಿರಿದು ಕೆಡಹದಿಹರೆ ದಂಡಧರನವರು ? ಆ ಅವಿರಳ ಗುರುವಿನ ಪರಮಾನಂದ ಪಾದೋದಕವ ಕೊಂಬ ಮಾನವರ ಬಾಧಿಸರೆ ಕೀನಾಶನವರು ? ಆ ಮಹಾಜ್ಞಾನಿ ಗುರುವಿನ ಮಹದಾನಂದಪ್ರಸಾದವ ಸೇವಿಸುವ ಭಾವವನು ಶೋಕಾಗ್ನಿಯಿಂದೆ ನೋಯಿಸದಿಹರೆ ನಿರಯಪತಿಯವರು ? ಇದು ಕಾರಣ ಗುರುವ ಜರಿದು ನೆರೆದು ಮಾಡುವ ಮಾಟವೆಲ್ಲ ವೈತರಣಿಯಕೂಟ ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.