ಅಥವಾ

ಒಟ್ಟು 64 ಕಡೆಗಳಲ್ಲಿ , 26 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುವನರಿವನ್ನಕ್ಕ ಅರ್ಚನೆ, ಪುಣ್ಯವನರಿವನ್ನಕ್ಕ ಪೂಜೆ, ಶರೀರವುಳ್ಳನ್ನಕ್ಕ ಸುಖದುಃಖವ ಸಂತಾಪಿಸಬೇಕು. ತೆಪ್ಪದಲ್ಲಿ ನಿಂದು ಒತ್ತಿ ಹೊಳೆಯ ದಾಟುವಂತೆ. ಕ್ರೀಶುದ್ಧವಾದಲ್ಲಿ ಜ್ಞಾನದ ಗೊತ್ತು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಆಸೆ ತ್ರಿವಿಧದ ಗೊತ್ತು, ನಿರಾಸೆ ಏಕಮಯನ ಗೊತ್ತು. ಅಲ್ಲ, ಅಹುದೆಂಬುದು ಬಲ್ಲವನ ಮತವಲ್ಲ. ಎಲ್ಲಿಯೂ ಸದ್ಗುಣ, ಎಲ್ಲರಲ್ಲಿ ನಿಜಭಾವ, ಪರಿಪೂರ್ಣ ತಾನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ ? ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ ? ನಿತ್ಯ ಅನಿತ್ಯವ ತಿಳಿದು, ಮತ್ರ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ. ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ, ಆ ಬಚ್ಚಬಯಲ ಬೆಳಗ ನಿನ್ನ ನೀನೆ ನೋಡಿಕೊ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
--------------
ಮೋಳಿಗೆ ಮಹಾದೇವಿ
ಇಷ್ಟಲಿಂಗ, ಪ್ರಾಣಲಿಂಗವೆಂದು ಬೇರೊಂದು ಕಟ್ಟಣೆಯ ಕಟ್ಟಬಹುದೆ ? ವೃಕ್ಷ ಬೀಜದಲ್ಲಿ ಅಡಗಿ, ಬೀಜ ವೃಕ್ಷವ ನುಂಗಿಪ್ಪ ತೆರನಂತೆ, ಇಷ್ಟ ಪ್ರಾಣ ಬೆಚ್ಚಂತಿರಬೇಕು. ಅಪ್ಪು ಮುತ್ತಾದಂತೆ, ಉಭಯದ ಗೊತ್ತು ತಾನೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉಭಯವನರಿವ ಚಿತ್ತಕ್ಕೆ ಅರಿವೆ ಇಷ್ಟಲಿಂಗಕ್ಕೆ ಗೊತ್ತು. ಉಭಯದಂಗ ಏಕೀಕರವಾದಲ್ಲಿ ಜಲ ಬಲಿದು ಶುಕ್ತಿಯಾದಂತೆ, ಕರಂಡಗರ್ಭದಲ್ಲಿ ಬಲಿದು ಕರಂಡವನೊ[ಡೆ]ದರಿದಂತೆ, ಅಂಗದಲ್ಲಿದ್ದರಿದು, ಘನಲಿಂಗವನರಿಯಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬ ಕುರುಹಾಯಿತ್ತು.
--------------
ಶಿವಲೆಂಕ ಮಂಚಣ್ಣ
ಮೂಲಾಧಾರ ಮುಂತಾದ ಷಡಾಧಾರಂಗಳಲ್ಲಿ ಆಶ್ರಯವರ್ಣ ದಳವರ್ಣ ಭಾವವರ್ಣ ಆತ್ಮವರ್ಣ ಅಕ್ಷರವರ್ಣ ಸ್ಥಲವರ್ಣಂಗಳ ಕಲ್ಪಿಸಿ, ಭೇದಕ್ರೀಯಿಂದ ಅರಿಯಬೇಕಾಗಿ ಕ್ರೀ ಮೂರು, ಸ್ಥಲವಾರು, ತತ್ವವಿಪ್ಪತ್ತೈದು, ಕಥನ ಮೂವತ್ತಾರು, ಪ್ರಸಂಗ ನೂರೊಂದರಲ್ಲಿ ನಿರ್ವಾಹ. ಈ ಏಕವಸ್ತು ತ್ರಿಗುಣಾತ್ಮಕವಾದ ಸಂಬಂಧ. ಇಂತಿವನರಿತೆಹೆನೆಂದು ಒಂದಕ್ಕೊಂದು ಸಂದನಿಕ್ಕದೆ ಗುರುವಿನ ಕಾರುಣ್ಯವನರಿತು, ಲಿಂಗದಲ್ಲಿ ಚಿತ್ತವ ಮೂರ್ತಿಗೊಳಿಸಿ ಜಂಗಮದಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಭಕ್ತಿಯನೊಪ್ಪಿ ನಿಶ್ಚಯನಾಗಿಪ್ಪುದೆ ಭಕ್ತಿಯ ಅಂಗಕ್ಕೆ ಇಕ್ಕಿದ ಗೊತ್ತು ವಿಶ್ವಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 77 ||
--------------
ದಾಸೋಹದ ಸಂಗಣ್ಣ
ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು, ಪ್ರಸಾದಿಸ್ಥಲ ಐದು, ಪ್ರಾಣಲಿಂಗಿಸ್ಥಲ ಆರು, ಶರಣಸ್ಥಲವೆರಡು, ಐಕ್ಯಸ್ಥಲ ಒಂದು, ಭಕ್ತಂಗೆ ಮೂರು ಗೊತ್ತು, ಮಾಹೇಶ್ವರಂಗೆ ನಾಲ್ಕು ಗೊತ್ತು, ಪ್ರಸಾದಿಗೆ ಐದು ಗೊತ್ತು, ಪ್ರಾಣಲಿಂಗಿಗೆ ಆರು ಗೊತ್ತು, ಶರಣಂಗೆ ಎರಡು ಗೊತ್ತು, ಐಕ್ಯಂಗೆ ಒಂದು ಗೊತ್ತಾಗಿ ಸಂಬಂಧಿಸಿ ಷಡುಸ್ಥಲ ರೂಪಾದಲ್ಲಿ ಒಂದು ಸ್ಥಲಕ್ಕೆ ಆರು ಸ್ಥಲ ಹೊರೆ ಹೊರೆಯಾಗಿ ಮಿಶ್ರವಾಗಿ ಸ್ಥಲಂಗಳು ಚರಿಸುವಲ್ಲಿ ನೂರೊಂದು ಸ್ಥಲಂಗಳಲ್ಲಿ ಆರೋಪಿಸಿ ನಿಂದುದು ಮೂರೆ ಭಕ್ತಿಸ್ಥಲ, ಸಂದುದು ನಾಲ್ಕೆ ಮಾಹೇಶ್ವರಸ್ಥಲ, ಕೊಂಡುದು ಐದೆ ಪ್ರಸಾದಿಸ್ಥಲ, ಗಮನವಿಲ್ಲದೆ ನಿಜದಲ್ಲಿ ನಿಂದುದಾರೆ ಪ್ರಾಲಿಂಗಿಸ್ಥಲ, ಸ್ತುತಿ-ನಿಂದೆಗೆಡೆಯಿಲ್ಲದೆ ನಿಂದುದೆರಡೆ ಶರಣಸ್ಥಲ, ನಿರ್ನಾಮವಾಗಿ ಭಾವಕ್ಕೆ ಬ್ರಮೆಯಿಲ್ಲದುದೊಂದೆ ಐಕ್ಯಸ್ಥಲ. ಇಂತೀ ಭಿನ್ನ ವರ್ಣಂಗಳಲ್ಲಿ ವರ್ಣಸ್ವರೂಪನಾದೆಯಲ್ಲಾ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 67 ||
--------------
ದಾಸೋಹದ ಸಂಗಣ್ಣ
ಲಿಂಗನಿಷೆ*ಯುಳ್ಳ ವೀರಶೈವ ಮಹೇಶ್ವರರು ಸಕಲಪದಾರ್ಥವ ಲಿಂಗಕ್ಕೆ ಕೊಡದೆ, ಎನ್ನಂಗಕ್ಕೆ ಕೊಂಡಡೆ ವ್ರತಕ್ಕೆ ಭಂಗವೆಂದೆಂಬಿರಯ್ಯಾ ಉದಯಕಾಲದಲ್ಲಿ ಶೌಚಾಚಮನವ ಮಾಡಿ ಅಗ್ಗಣಿಯ ಬಳಸುವಿರಿ, ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಹಳ್ಳ ಕೊಳ್ಳ ಕೆರೆ ಬಾವಿ ನದಿಗಳಿಗೆ ಹೋಗಿ, ಮೃತ್ತಿಕಾದಿಂದ ಹಸ್ತಪಾದಕ್ಕೆ ಮೂರು ವೇಳೆ ಪೂಸಿ ಮೂರು ವೇಳೆ ತೊಳೆವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಶೌಚಕ್ಕೆ ಒಯ್ದ ಪಾತ್ರೆಯ ಮೃತ್ತಿಕಾದಿಂದ ತೊಳೆದು, ತಾ ಉಟ್ಟು ತೊಟ್ಟ ಪಾವಡಪಂಕಿಗಳ ನೀರಿನಲ್ಲಿ ಸೆಳೆದು ಗಾಳಿ ಬಿಸಲಾಗ ಹಾಕುವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಇಂತೀ ಎಲ್ಲವನು ಶುಚಿ ಮಾಡಿ ಜ್ಯಾಲಿ ಬೊಬ್ಬಲಿ ಉತ್ರಾಣಿಕಡ್ಡಿ ಮೊದಲಾದ ಕಡ್ಡಿಗಳ ತಂದು ಆವಾಗ ತಮ್ಮ ಅಂಗದ ಮೇಲಣ ಲಿಂಗವ ತೆಗೆದು ಅಂಗೈಯಲ್ಲಿ ಪಿಡಿದು, ಆ ಲಿಂಗಕ್ಕೆ ಮಜ್ಜನ ಮಾಡಿ, ಮರಳಿ ತಾ ಮುಖಮಜ್ಜನವ ಮಾಡಿ, ಆ ಮೇಲೆ ತಮ್ಮ ಅಂಗೈಯೊಳಗಿನ ಇಷ್ಟಲಿಂಗಕ್ಕೆ ಆ ಕಡ್ಡಿಯ ತೋರಿ, ತೋರಿದಂಥ ಧಾವನೆಯ ಮಾಡುವರು. ಲಿಂಗದ ಗೊತ್ತು ತಮಗಿ¯್ಲ ; ತಮ್ಮ ಅಂಗದ ಗೊತ್ತು ಲಿಂಗಕ್ಕಿಲ್ಲ . ಇಂತಪ್ಪ ಭಿನ್ನವಿಚಾರವನುಳ್ಳ ಮಂಗಮನುಜರಿಗೆ ಲಿಂಗನೈಷೆ*ಯುಳ್ಳ ವೀರಮಹೇಶ್ವರರೆಂದಡೆ ನಿಮ್ಮ ಶಿವಶರಣರು ಮುಖವೆತ್ತಿ ನೋಡರು. ಮನದೆರೆದು ಮಾತನಾಡರು, ತಮ್ಮೊಳಗೆ ತಾವೇ ಮುಗುಳುನಗೆಯ ನಕ್ಕು ಸುಮ್ಮನಿರುವರು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರ್ತಿ ಅಭ್ಯಾಸ ಮಚ್ಚು ಕಾರಣದಿಂದ ಮಾಡುವ ಭಕ್ತಿ , ದ್ರವ್ಯದ ಕೇಡಾಯಿತ್ತು. ಮನ ನೆಮ್ಮಿದ ಅರ್ತಿ, ಘನವ ನೆಮ್ಮಿದ ಅಭ್ಯಾಸ, ಎಡೆಬಿಡುವಿಲ್ಲದ ಮಚ್ಚು, ಘನಲಿಂಗವ ಕೂಡುವುದೊಂದಚ್ಚು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕೂಡುವ ಸುಚಿತ್ತದ ಗೊತ್ತು.
--------------
ಶಿವಲೆಂಕ ಮಂಚಣ್ಣ
ಅಪ್ಪುವಿನ ಉತ್ಕಟದ ಮಣಿಯಂತೆ ಚಿತ್ರದ ಎಸುಗೆಯ ಲಕ್ಷಣದಂತೆ ಸೂತ್ರದ ಲೆಪ್ಪದ ಭಿತ್ತಿ ಕಡೆಗಾಣಿಸಿದಂತೆ ದೀಪದ ಮೊತ್ತ ಕೆಟ್ಟು ಮೃತ್ತಿಕೆಯ ಘಟ ಒಪ್ಪವಿದ್ದಂತೆ ರಾಜ ಚಿತ್ರದ ಗೃಹ ಹೊತ್ತಿ ಬೆಂದು ಭಸ್ಮಗುಪ್ಪೆಯಿದ್ದಂತೆ ಇದು ಕ್ರಿಯಾಪಥ ಮುಕ್ತನ ಭೇದ. ಅರಿದು ಮರೆದವನ ಚಿತ್ತದ ಗೊತ್ತು. µಟ್ಕರ್ಮ ವಿರಕ್ತನ ನಷ್ಟ, ಸರ್ವಗುಣಿ ಸಂಪನ್ನನ ಮುಟ್ಟಿನ ಭೇದ; ನಿರುತ ಸ್ವಯ ಸಂಗದ ಕೂಟ, ಈ ಗುಣ ಸಾವಧಾನಿಯ ಬೇಟ, ಸರ್ವಾಂಗಲಿಂಗಿಯ ಕೂಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ವ್ರತವೆಂಬುದೇನು ? ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು. ಜಗದ ಕಾಮಿಯಂತೆ ಕಾಮಿಸದೆ, ಜಗದ ಕ್ರೋಧಿಯಂತೆ ಕ್ರೋಧಿಸದೆ, ಜಗದ ಲೋಭಿಯಂತೆ ಲೋಭಿಸದೆ, ಮಾಯಾಮೋಹಂಗಳು ವರ್ಜಿತವಾಗಿ ಮನಬಂದಂತೆ ಆಡದೆ, ತನುಬಂದಂತೆ ಕೂಡದೆ ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.
--------------
ಅಕ್ಕಮ್ಮ
ಭಕ್ತಿಯುಳ್ಳನ್ನಕ್ಕ ಇಷ್ಟಲಿಂಗದ ಹಂಗು ಬೇಕು. ಆತ್ಮನುಳ್ಳನ್ನಕ್ಕ ಅರಿವೆಂಬುದ ವಿಚಾರಿಸಬೇಕು. ಮತ್ರ್ಯವೆಂಬುದು ನಾ ಬಲ್ಲನ್ನಕ್ಕ ಕರ್ಕಶದ ಜಗ. ಇದು ಕಾರಣದಲ್ಲಿ, ಕೈಲಾಸವೆಂಬ ಬಟ್ಟೆಯನರಸಬೇಕು. ಎನ್ನ ಸತ್ಯಕ್ಕೆ, ಎನ್ನ ಭಕ್ತಿಗೆ, ಎನ್ನ ಮನಕ್ಕೆ ಎನ್ನ ಮುಕ್ತ್ಯಂಗನೆ, ಎನ್ನ ನಿಶ್ಚಯಕ್ಕೆ ಒಂದು ಗೊತ್ತು ತೋರಾ. ನಿಃಕಳಂಕ ಮಲ್ಲಿಕಾರ್ಜುನ ಎಲ್ಲಿ ಇದ್ದಹನು ಹೇಳಾ ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->