ಅಥವಾ

ಒಟ್ಟು 36 ಕಡೆಗಳಲ್ಲಿ , 16 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
--------------
ಅಲ್ಲಮಪ್ರಭುದೇವರು
ಮತ್ತಂ, ಸಚಿತ್ರ ತಮಂಧಾಕಾರಮಾದ ಪುರುಷತತ್ವದ, ಮಂಡಲತ್ರಯದ ತತ್ತಮಂಧರುಚಿಯಂತರ್ಗತ ಮಾಣಿಕ್ಯವರ್ಣದ, ಹಂಸಾಂಕಿತದೆರಡೆಸಳ ನೀರೇಜದ ಕರ್ಣಿಕೆಯ, ಸೂಕ್ಷ ್ಮರಂಧ್ರಗತ ಪ್ರಣವದ ಜ್ಯೋತಿರಾಕೃತಿಯಾದ, ಗುಹ್ಯ ಪ್ರಣವವೆ[ಮ]ಹಾಲಿಂಗಮದು, ನಿನ್ನ ಗೋಪ್ಯ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪರಿಪೂರ್ಣ ಷಡಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಪಾಯು ಗುಹ್ಯ ಪಾದ ಪಾಣಿ ವಾಕ್ ಅಂತರ ಈ ಆರು ಕರ್ಮಾಂಗವು ಕ್ರಿಯಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಪಾಯುಶ್ಚ ಗುಹ್ಯಪಾದಾಶ್ಚ ಹಸ್ತಂ ವಾಗಂತರಂ ತಥಾ | ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
``ನೇತ್ರಂ ದೇವೋ ನ ಚಾಪರಃ'' ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವಲಿಂಗ ಪರಬ್ರಹ್ಮವು. ``ನೇತ್ರಂ ಸರ್ವಜ್ಞ ಮೇ ವಪುಃ'' ಎಂಬ ಶ್ರುತಿಯುಂಟಾಗಿ, ನೇತ್ರವು ಶಿವಲಿಂಗಕ್ಕೆ ದೇಹವು. ``ನೇತ್ರಮಧ್ಯೋದ್ಭವಂ ಲಿಂಗಂ'' ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಮೂರ್ತಿಯ ಹೆತ್ತ ತಾಯಿ. ``ನೇತ್ರಮಧ್ಯಜಚಿತ್ಸುಖಂ'' ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವೇಷ್ಟಲಿಂಗದ ಗುಹ್ಯಕ್ಕೆ ರಾಣಿವಾಸಮಕ್ಕುಂ. ``ದ್ವಿನೇತ್ರಕುಚಯೋರ್ಲಿಂಗಂ'' ಎಂಬ ಶ್ರುತಿಯುಂಟಾಗಿ ನೇತ್ರವು ಪ್ರಾಣಲಿಂಗದ ಹಸ್ತಂಗಳಿಗೆ ಪಿಡಿವ ಕುಚಂಗಳಕ್ಕುಂ. ``ಚಕ್ಷುಶ್ಚ ಶಿವ ಪುಷ್ಪಂ ಚ'' ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಕ್ಕೆ ಅವಿರಳ ಪುಷ್ಪಮಕ್ಕುಂ. ``ಲಿಂಗಜ್ಯೋತಿಶ್ಚ ನೇತ್ರಯೋಃ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ, ಅಖಂಡ ಜ್ಯೋತಿಯಕ್ಕುಂ. ``ಲಿಂಗಾಭಿಷೇಕಂ ಚಕ್ಷುಶ್ಚ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ ಅಭಿಷೇಕವ ಮಾಡುವ ಕಳಸಂಗಳಕ್ಕುಂ ``ಲಿಂಗಸ್ಯ ಸಾಯಕಂ ನೇತ್ರಂ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗವನೊಳಗುಮಾಡಿಕೊಂಬುದಕ್ಕೆ ಹಾಕುವ ಬಾಣಂಗಳಕ್ಕುಂ. ``ಚಕ್ಷುರ್ಲಿಂಗಸ್ಯ ಚಾಕ್ಷುಷಿ'' ಎಂಬ ಶ್ರುತಿಯುಂಟಾಗಿ, ನೇತ್ರಂಗಳು ಲಿಂಗಮೂರ್ತಿಯ ನೇತ್ರಂಗಳಲ್ಲದೇ ಸ್ವಯಕ್ಕೆ ನೇತ್ರವಿಲ್ಲ. ಈ ನೇತ್ರಂಗಳು ಲಿಂಗಮೂರ್ತಿಯ ನೋಟ ಬೇಟ ಕೂಟದಿಂ, ಭಾವ ಮನ ದೃಕ್ಕೀಲೈಸಿ ನಟ್ಟ ದೃಷ್ಟಿಯಿಂ ನೋಳ್ವ (ನೋಟ) ಲಿಂಗೈಕ್ಯ ಶರಣಂಗಲ್ಲದೆ ಲೋಗರಿಗೆಲ್ಲಿಯದೊ ? ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ ಈ ನೇತ್ರದ ಮಹಿಮೆಯ ಗುಹೇಶ್ವರನೇ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳಿವರೆತ್ತ ಬಲ್ಲರು ನೋಡಾ.
--------------
ಅಲ್ಲಮಪ್ರಭುದೇವರು
ಇಂದ್ರ ಕಪಾಲ, ಅಗ್ನಿ ನಯನ, ಯಮ ಬಾಯಿ, ನೈಋತ್ಯ ಕರ, ವರುಣ ಹೃತ್ಕಮಲ, ವಾಯವ್ಯ ನಾಬ್ಥಿ, ಕುಬೇರ ಗುಹ್ಯ, ಈಶಾನ ಜಂಘೆ, ಇಂತೀ ಅಷ್ಟತನುಮೂರ್ತಿ ರೋಹವಾಹ ಪ್ರಮಾಣು. ಅವರೋಹವಾಗಿ ಮುಮುಕ್ಷುವಾಗಿ ಅಷ್ಟತನುವಿನಲ್ಲಿ ಆತ್ಮನು ನಿಶ್ಚಯವಾದುದನರಿದು ಸದ್ಯೋಜಾತಲಿಂಗವ ಹೊರೆಯಿಲ್ಲದೆ ಕೂಡಬೇಕು.
--------------
ಅವಸರದ ರೇಕಣ್ಣ
ಅನಾದಿ ಪರಶಿವನಿಂದಾಕಾರವಾದ ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು, ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ ಸ್ಥೂಲವಾದಡೆ ಸದಾಚಾರಕ್ಕೆ ಹೊರಗು ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ ಭೃತ್ಯಭಾವದಿಂದ ಹತ್ತು ಹನ್ನೊಂದ ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?) ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ ! ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ: ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್‍ಸ್ಥಾನದೊಳಗೆ ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಭಿನ್ನವಾದಡೆ, ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು, ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ ಸ್ಥೂಲವೆನಿಸುವುದಯ್ಯಾ ! ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ ಸೂಕ್ಷ್ಮವೆನಿಸುವುದಯ್ಯಾ ! ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ, ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು ಜಂಗಮದ ಪಾದದಲ್ಲಿ ಸಮಾಧಿಯ ಮಾಡುವುದಯ್ಯಾ ಪ್ರಾಣತ್ಯಾಗವ ಮಾಡಲಾರದಿರ್ದಡೆ, ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ, ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾಧಿಯ ಮಾಡಿ ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ. ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ ಷಟ್‍ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ ನಿರವಯವಪ್ಪುದು ನೋಡಾ ! ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ, ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ, ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !
--------------
ಚನ್ನಬಸವಣ್ಣ
ಎರಡೊಂದು ಮುಕ್ಕೂಟದೊಳು ಲಿಂಗದೆಡೆಯಾಟವಿರಲು, ಬೀಜಕ್ಷೇತ್ರದೆರಕ ಹರಿಹರಯೋಗ. ವಿರತರತಿ ನಿಕ್ಷೇಪವಿದುವೆ ಗರ್ಭಾದಾನ. ಪರಮಬೀಜಾವಾಪವಿದರ ಫಲನಿರ್ವಾಣ ! ಸರಸಲಿಂಗದ ನಿಷೇಕವನರಿವುದೆ ಸಾಜ, ಗುರುವೆ ಕರುಣಿಸಿದ ಶಿವಲಿಂಗಕಮಲಾರ್ಚನೆಯನು. ಇದು ಗುಹ್ಯ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮತ್ರಮಾ ಶಿವಾತ್ಮಕ ಪ್ರಸಾದಮಂತ್ರವಾದೊಡೈದು ತೆರದಿಂ ಪೇಳಲ್ಪಟ್ಟುದೆಂತೆನೆ- ಮೊದಲ್ತಾನೆ ಶುದ್ಧಪ್ರಸಾದವೆರಡನೆಯದೆ ಮೂಲಪ್ರಸಾದಂ. ಮೂರನೆಯದೆ ತತ್ವಪ್ರಸಾದಂ. ನಾಲ್ಕನೆಯದೆ ಆದಿಪ್ರಸಾದ- ಮೈದನೆಯದೆ ಆತ್ಮಪ್ರಸಾದಮಿಂತಿವರೊಳ್ಮೊದಲ ಶುದ್ಧಪ್ರಸಾದಮೆಂತೆನೆ- ನಿರ್ದೋಷಮಾಗಿ ಶಿವನೆಂದುಕ್ತಮಾದ ನಾದ ಗುಹ್ಯ ಪರ ಜೀವ ದೇಹಿ ಭೂತ ಪಂಚಮ ಸಾಂತ ತತ್ವಾಂತ ಭೂತತಾಂತ ಶಿವಾರ್ಣ ಶೂನ್ಯಾವ್ಯಯಂಗಳೆಂಬ ತ್ರಯೋದಶ ನಾಮಪರ್ಯಾಯಾಂಕಿತವಾಗಿ ಸಮಸ್ತ ಪ್ರಾಣಿಗಳಂತಸ್ಥಿತಮಾದ ಶಿವಬೀಜವೆ ಸರ್ವ ಕಾರಣ ಕಾರಣವೆನಿಸಿದ ಶುದ್ಧಪ್ರಸಾದವೆನಿಸುಗು- ಮದೆ ಗುರುಮುಖದಿಂ ತನ್ನನರಿದಾತಂಗೆ ಭೋಗ ಮೋಕ್ಷಾದಿ ಸಕಲೈಶ್ವರ್ಯ ಸಿದ್ಧಿಗಳನೀವುದೆಂದೆಯಯ್ಯಾ, ಪರಮ ಶಿವಲಿಂಗ ನಿರಂತರ ಕೃಪಾಪಾಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮರಂಧ್ರ, ಶಿಖಾ, ಪಶ್ಚಿಮವೆಂಬ ನವಚಕ್ರಸ್ಥಾನವ ಗುದ ಗುಹ್ಯ ನಾಬ್ಥಿ ಹೃದಯ ಕಂಠ ಉತ್ತಮಾಂಗ ಅಳ್ಳನೆತ್ತಿ ನಡುನೆತ್ತಿ ಹಿಂಭಾಗದ ಕಳ್ಳಕುಣಿಕೆಯೆಂದು ಪೇಳುವಿರಿ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗ ಇರ್ಪುದೇ? ಇಲ್ಲ. ಮತ್ತಂ, ಬಲ್ಲಾದರೆ ಪೇಳಿರಿ, ಇಲ್ಲವಾದರೆ ನಮ್ಮ ಶಿವಗಣಂಗಳ ಕೇಳಿರಿ. ಅದೆಂತೆಂದಡೆ : ಆಧಾರಚಕ್ರವೆಂಬುದೇ ಘ್ರಾಣ. ಸ್ವಾದ್ಥಿಷ್ಠಾನಚಕ್ರವೆಂಬುದೇ ಜಿಹ್ವೆಸ್ಥಾನ. ಮಣಿಪೂರಕಚಕ್ರವೆಂಬುದೇ ನೇತ್ರಸ್ಥಾನ. ಅನಾಹತಚಕ್ರವೆಂಬುದೇ ತ್ವಕ್ಕಿನಸ್ಥಾನ. ವಿಶುದ್ಧಿಚಕ್ರವೆಂಬುದೇ ಕರ್ಣಸ್ಥಾನ. ಆಜ್ಞಾಚಕ್ರವೆಂಬುದೇ ಹೃದಯಸ್ಥಾನ. ಬ್ರಹ್ಮಸ್ಥಾನವೆಂಬುದೇ ಕರಸ್ಥಲ. ಶಿಖಾಸ್ಥಾನವೆಂಬುದೇ ಮನಸ್ಥಲ. ಪಶ್ಚಿಮಸ್ಥಾನವೆಂಬುದೇ ಪ್ರಾಣಸ್ಥಲ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗವು ಸಂಬಂಧವಾಗಿರುವುದಲ್ಲದೆ ಅಂತಪ್ಪ ಜಡದೇಹಿ ನವಸ್ಥಾನದ ಮಾಂಸರಕ್ತದಲ್ಲಿ ಪರಶಿವಲಿಂಗವು ಇರ್ಪುದೆ? ಇಲ್ಲ. ಅದೇನು ಕಾರಣವೆಂದಡೆ : ಘ್ರಾಣದಲ್ಲಿ ಆಚಾರಲಿಂಗಸ್ವಾಯತವಿಲ್ಲದೆ ಗಂಧ ದುರ್ಗಂಧ ಮೊದಲಾದ ಆವ ಗಂಧದ ವಾಸನೆಯು ತಿಳಿಯದು. ಜಿಹ್ವೆಯಲ್ಲಿ ಗುರುಲಿಂಗಸ್ವಾಯತವಿಲ್ಲದೆ ಸವಿ ಕಹಿ ಮೊದಲಾದ ಆವ ರುಚಿಸ್ವಾದವು ತಿಳಿಯದು. ನೇತ್ರದಲ್ಲಿ ಶಿವಲಿಂಗಸ್ವಾಯತವಿಲ್ಲದೆ ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ ಮೊದಲಾದ ಷಡ್ವರ್ಗದ ರೂಪು ಲಕ್ಷಣ ತಿಳಿಯದು. ತ್ವಕ್ಕಿನಲ್ಲಿ ಜಂಗಮಲಿಂಗಸ್ವಾಯತವಿಲ್ಲದೆ ಮೃದು ಕಠಿಣ ಮೊದಲಾದ ಆವ ಸುಖವು ತಿಳಿಯದು. ಶ್ರೋತ್ರದಲ್ಲಿ ಪ್ರಸಾದಲಿಂಗಸ್ವಾಯತವಿಲ್ಲದೆ ಸುಸ್ವರ ಅಪಸ್ವರ ಮೊದಲಾದ ಆವ ಸ್ವರಲಕ್ಷಣವು ತಿಳಿಯದು. ಹೃದಯದಲ್ಲಿ ಮಹಾಲಿಂಗಸ್ವಾಯತವಿಲ್ಲದೆ ಷಡಿಂದ್ರಿಸುಖತೃಪ್ತಿ ಮೊದಲಾದ ಸಕಲೇಂದ್ರಿಯ ಸುಖತೃಪ್ತಿ ಸಂತೋಷವು ತಿಳಿಯದು. ಕರಸ್ಥಲದಲ್ಲಿ ನಿರಾಕಾರವಾದ ನಿಷ್ಕಲಲಿಂಗವೆಂಬ ಇಷ್ಟಲಿಂಗ ಸ್ವಾಯತವಿಲ್ಲದೆ ಷಡ್ವಿಧಾಂಗದಲ್ಲಿ ಷಡ್ವಿಧಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಮನದಲ್ಲಿ ಶೂನ್ಯಲಿಂಗವೆಂಬ ಪ್ರಾಣಲಿಂಗಸ್ವಾಯತವಿಲ್ಲದೆ ಸರ್ವೇಂದ್ರಿಯಲ್ಲಿ ಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಪ್ರಾಣವೆಂಬಾತ್ಮನಲ್ಲಿ ಭಾವಲಿಂಗಸ್ವಾಯತವಿಲ್ಲದೆ ಸರ್ವಾಂಗಲಿಂಗಮಯ ಪರವಸ್ತುಸ್ವರೂಪ ತಾನೆಂದು ತಿಳಿಯದು. ಇಂತಪ್ಪ ವಿಚಾರವನು ತಿಳಿಯಬಲ್ಲಾತನೇ ಅನಾದಿಶರಣನು. ಅಂತಪ್ಪ ಪರಶಿವಲಿಂಗದ ಸ್ವಾಯತಸಂಬಂಧವಾದ ಭೇದವ ತಿಳಿಯದೆ ಅಂಗಭಾವ ಮುಂದುಗೊಂಡು ಇರ್ಪಾತನೇ ಭವಭಾರಿಕನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವತತ್ವ ಐದು ಅವಾವೆಂದಡೆ; ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧ ವಿದ್ಯೆ- ಇಂತು ಶಿವತತ್ವ ಐದು. ಇನ್ನು ವಿದ್ಯಾತತ್ತ್ವವೆಂತೆಂದಡೆ: ಕಲೆ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ - ಇಂತು ವಿದ್ಯಾತತ್ತ್ವ ಏಳು. ಇನ್ನು ಕರಣಂಗಳೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ - ಇವು ಕರಣತತ್ತ್ವ ನಾಲ್ಕು. ಇನ್ನು ಇಂದ್ರಿಯಂಗಳೆಂತೆಂದಡೆ: ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ - ಇಂತು ಬುದ್ಧೀಂದ್ರಯಂಗಳು ಐದು. ಇನ್ನು ಕರ್ಮೇಂ್ರಯಂಗಳೆಂತೆಂದಡೆ: ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು - ಇಂತು ಕರ್ಮೇಂ್ರಯಂಗಳು ಐದು. ಇನ್ನು ತನ್ಮಾತ್ರಂಗಳೆಂತೆಂದಡೆ: ಶಬ್ದ, ಸ್ಪರ್ಶ, ರೂಪು, ರಸ ಗಂಧ - ಇಂತು ಜ್ಞಾನೇಂದ್ರಿಯ ವಿಷಯ ಐದು. ಇನ್ನು ಕರ್ಮೇಂ್ರಯ ವಿಷಯವೆಂತೆಂದಡೆ: ವಚನ, ಗಮನ, ಆದಾನ, ಆನಂದ, ವಿಸರ್ಜನ ಇಂತು ಕರ್ಮೇಂ್ರಯ ವಿಷಯ ಐದು. ಇನ್ನು ವಾಕ್ಕುಗಳಾವುವೆಂದಡೆ: ಪರಾ, ಪಶ್ಯಂತಿ, ಮಧ್ಯಮೆ, ವೈಖರಿ - ಇಂತು ವಾಕ್ಕು ನಾಲ್ಕು. ಸಾತ್ಪಿ, ರಾಜಸ, ತಾಮಸ - ಇಂತು ಗುಣ ಮೂರು. ರಾಜಸಹಂಕಾರ, ವೈಖರಿಯಹಂಕಾರ, ಭೂತಾಯಹಂಕಾರ -ಇಂತು ಅಹಂಕಾರ ಮೂರು. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ - ಇಂತು ಭೂತಂಗಳು ಐದು. ಭೂತಕಾರ್ಯ ಇಪ್ಪತ್ತೈದು - ಅವಾವೆಂದಡೆ: ಅಸ್ಥಿ, ಮಾಂಸ, ತ್ವಕ್, ನಾಡಿ, ರೋಮ - ಈ ಐದು ಪೃಥ್ವೀಪಂಚಕ. ಲಾಲಾ, ಮೂತ್ರ, ಸ್ವೇದ, ಶುಕ್ಲ, ಶೋಣಿಕ - ಈ ಐದು ಅಪ್ಪುವಿನ ಪಂಚಕ. ಕ್ಷುಧೆ, ತೃಷೆ, ನಿದ್ರೆ, ಆಲಸ್ಯ, ಸ್ತ್ರೀಸಂಗ - ಈ ಐದು ಅಗ್ನಿಪಂಚಕ. ಪರಿವ, ಪಾರುವ, ಸುಳಿವ, ನಿಲುವ, ಅಗಲುವ - ಈ ಐದು ವಾಯುಪಂಚಕ. ರಾಗ, ದ್ವೇಷ, ಭಯ, ಲಜ್ಜೆ, ಮೋಹ - ಈ ಐದು ಆಕಾಶವಂಚಕ. ಇಂತೀ ಇಪ್ಪತ್ತೈದು ಭೂತಕಾರ್ಯ ಪಂಚೀಕೃತಗಳು. ಇನ್ನು ದಶವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ - ಈ ಹತ್ತು ವಾಯುಗಳು, ಇನ್ನು ದಶನಾಡಿಗಳು: ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಹಸ್ತಿ, ಜಿಹ್ವೆ, ಪುಷ್ಕರ, ಪಯಸ್ವಿನಿ, ಆಲಂಬು, ಲಕುಹ, ಶಂಕಿನಿ - ಇಂತೀ ಹತ್ತು ನಾಡಿಗಳು. ಇಂತು ತತ್ವ ತೊಂಬತ್ತಾರು ಕೂಡಿಕೊಂಡು ಆತ್ಮನು ಭೂಮಧ್ಯದಲ್ಲಿರ್ದು ಅವಸ್ಥೆಬಡುವುದನು ಹೇಳಿಹೆನು. ಅದೆಂತೆಂದಡೆ ಅವಸ್ಥೆಯ ಕ್ರಮ: ಪ್ರೇರಕಾವಸ್ಥೆ ಒಂದು, ಅಧೋವಸ್ಥೆ ಐದು, ಊಧ್ರ್ವಾವಸ್ಥೆ ಐದು, ಮಧ್ಯಾವಸ್ಥೆ ಐದು, ಕೇವಲಾವಸ್ಥೆ ಒಂದು, ಸಕಲಾವಸ್ಥೆ ಒಂದು, ಶುದ್ಧಾವಸ್ಥೆ ಒಂದು, ನಿರ್ಮಲಾವಸ್ಥೆ ಐದು, ಅಂತೂ ಅವಸ್ಥೆ ಇಪ್ಪತ್ತನಾಲ್ಕು, ಅವರಲ್ಲಿ ಪ್ರೇರಕಾವಸ್ಥೆಯೆಂತೆಂದಡೆ: ತತ್ತ್ವಸಮೂಹಂಗಳನು ಕೂಡಿಕೊಂಡು ಇರ್ದಲ್ಲಿ ಆ ಪುರುಷನು ಪಂಚೇಂ್ರಯಂಗಳಲ್ಲಿ ವಿಷಯಂಗಳು ಅತಿ ಚಮತ್ಕಾರದಲ್ಲಿ ಅರಿವವೇಳೆ ಪ್ರೇರಕಾವಸ್ಥೆಯೆಂದು. ಅದಕ್ಕೆ ಪ್ರೇರಿಸುವ ತತ್ತ್ವಂಗಳಾವುವೆಂದಡೆ- ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು, ಭೂತಂಗಳಲ್ಲಿ ಒಂದು, ಇಂದ್ರಿಯಂಗಳಲ್ಲಿ ಒಂದು -ಇಂತೀ ಹದಿನೆಂಟು ತತ್ವಂಗಳಲ್ಲಿ ವಿಷಯಂಗಳನರಿವನು. ಅದು ಹೇಗೆಂದಡೆ - ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು - ಇಂತು ಹದಿನಾರು ತತ್ತ್ವ. ಆಕಾಶಭೂತವೂ ಶ್ರೋತ್ರೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನದಲ್ಲಿರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಸೋಂಕನರಿವ; ತೇಜಭೂತವೂ ನಯನೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರೂಪವನರಿವ; ಅಪ್ಪುಭೂತವೂ ಜಿಹ್ವೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರಸವನರಿವ; ಪೃಥ್ವಿಭೂತವೂ ಪ್ರಾಣೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಗಂಧವನರಿವ. ಇಂತೀ ವಿಷಯಂಗಳನರಿವುದು. ಇದು ಪ್ರೇರಕಾವಸ್ಥೆಯೆಂದೆನಿಸುವದು. ಇನ್ನು ಅಧೋವಸ್ಥೆ ಐದಕ್ಕೆ ವಿವರ: ಪ್ರಥಮದಲ್ಲಿ ಜಾಗ್ರಾವಸ್ಥೆ ಅದಕ್ಕೆ ಪ್ರೇರಿಸುವ ತತ್ತ್ವಂಗಳು ಬಿಟ್ಟಿಹವಾವುವೆಂದಡೆ: ಶಿವತತ್ತ್ವ ಐದು, ಮಾಯಾತತ್ತ್ವ ಒಂದು, ವಿದ್ಯಾತತ್ತ್ವ ಆರು, ಭೂತಂಗಳು ಐದು ಇಂತು ಹದಿನೇಳು ಬಿಟ್ಟಿಹುದು. ಇನ್ನು ಜಾಗ್ರಾವಸ್ಥೆಯಲ್ಲಿಹ ತತ್ತ್ವಗಳೆಷ್ಟೆಂದಡೆ: ಕರಣ ನಾಲ್ಕು, ಬುದ್ಧೀಂದ್ರಿಯ ಐದು, ಕರ್ಮೇಂದ್ರಿಯ ಐದು, ವಿಷಯ ಹತ್ತು, ವಾಯು ಹತ್ತು. ಇಂತು ಮೂವತ್ತನಾಲ್ಕು ತತ್ತ್ವಂಗಳಲ್ಲಿ ಆ ತನು ಕೇಳದೆ ಕೇಳುವ, ಮಾತಾಡದ ಹಾಂಗೆ ಆಲಸ್ಯದಲ್ಲಿ ಮಾತನಾಡುತ್ತಿಹನು, ಇಂತು ಜಾಗ್ರಾವಸ್ಥೆ. ಇನ್ನು ಸ್ವಪ್ನಾವಸ್ಥೆ. ಅದಕ್ಕೆ ಹತ್ತು ತತ್ತ್ವಂಗಳು ಬಿಟ್ಟಿಹವು. ಅವಾವುವೆಂದಡೆ:ಬುದ್ಧೀಂ್ರಯ ಐದು, ಕರ್ಮೇಂದ್ರಿಯ ಐದು. ಲಲಾಟದಲ್ಲಿ ನಿಲುವು ಕಂಠಸ್ಥಾನದಲ್ಲಿ ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡಿಹುದು. ಅದೆಂತೆಂದಡೆ:ಮಾಯೆ ಒಂದು, ವಾಯು ಹತ್ತು, ವಿಷಯ ಹತ್ತು, ಕರಣ ನಾಲ್ಕು ಇಂತು ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡು ಸ್ವಪ್ನಂಗಳ ಕಾಣುತಿಹನು. ಇದು ಸ್ವಪ್ನಾವಸ್ಥೆ. ಇನ್ನು ಸುಷುಪ್ತಾವಸ್ಥೆಗೆ ಬಹಲ್ಲಿ ಕಂಠಸ್ಥಾನದಲ್ಲಿ ನಿಂದ ತತ್ತ್ವಂಗಳಾವಾವವೆಂದಡೆ- ಮಾಯೆ ಒಂದು, ವಾಯು ಒಂಬತ್ತು ವಿಷಯ ಹತ್ತು, ಕರಣ ಮೂರು- ಇಂತು ಇಪ್ಪತ್ತಮೂರು ತತ್ತ್ವ. ಇನ್ನು ಹೃದಯಸ್ಥಾನದಲ್ಲಿ ಕೂಡಿಹ ತತ್ತ್ವ ಆವಾವೆಂದಡೆ: ಪ್ರಾಣವಾಯು ಒಂದು, ಪ್ರಕೃತಿ ಒಂದು, ಚಿತ್ತ ಒಂದು -ಇಂತು ಸುಷುಪ್ತಾವಸ್ಥೆಯಲ್ಲಿ ತತ್ತ್ವ. ಇನ್ನು ತೂರ್ಯಾವಸ್ಥೆಗೆ ಬಹಾಗ ಹೃದಯದಲ್ಲಿ ನಿಂದ ತತ್ತ್ವ ಚಿತ್ತ ಒಂದು. ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿಹ ತತ್ತ್ವ ಪ್ರಾಣವಾಯು ಒಂದು, ಪ್ರಕೃತಿ ಒಂದು. ಅತೀತಾವಸ್ಥೆಗೆ ಹೋಹಾಗ ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿ ಪ್ರಾಣವಾಯುವುಳಿದು ಅತೀತಾವಸ್ಥೆಯಲ್ಲಿ ಪ್ರಕೃತಿಗೂಡಿ ಮೂಲಾಧಾರದಲ್ಲಿ ಆಣವಮಲಯುಕ್ತವಾಗಿ ಏನೆಂದರಿಯದೆ ಇಹುದು, ಇಂತಿದು ಅಧೋವಸ್ಥೆ. ಇನ್ನು ಊಧ್ರ್ವಾವಸ್ಥೆ, ಅತೀತದಲ್ಲಿ ಪ್ರಕೃತಿಕಾರ್ಯಂಗಳೆಲ್ಲವನೂ ಬಿಟ್ಟು, ತತ್ತ್ವಂಗಳೊಂದೂ ಇಲ್ಲದೆ, ಅಣವಮಲಸ್ವರೂಪವಾಗಿ ಮೂಲಾಧಾರದಲ್ಲಿ ಬ್ದಿರ್ದ ಆತ್ಮನಿಗೆ ಪರಮೇಶ್ವರನ ಕರುಣದಿಂದ ಕ್ರಿಯಾಶಕ್ತಿ, ಶಕ್ತಿತತ್ತ್ವಮಂ ಪ್ರೇರಿಸುವುದು. ಆ ಶಕ್ತಿ ಕಲೆ, ಕಾಲ, ನಿಯತಿಗಳಂ ಪ್ರೇರಿಸುವುದು. ಆ ವೇಳೆಯಲ್ಲಿ ಸೂಕ್ಷೆ ್ಮಯೆಂಬ ವಾಕ್ಕು ಕೂಡುವುದು. ಇಂತು ಅತೀತದಲ್ಲಿ ಅರುಹಿಸುವ ತತ್ತ್ವಂಗಳು: ಶಕ್ತಿತತ್ತ್ವ, ಕಲೆ, ಕಾಲ, ನಿಯತಿ, ಸೂಕ್ಷೆ ್ಮ ಇಂತು ತತ್ತ್ವಂಗಳು ಐದು. ಇನ್ನು ತೂರ್ಯಾವಸ್ಥೆಗೆ ಬಹಾಗ ಹಿಂದೆ ಹೇಳಿದ ತತ್ತ್ವ ಐದು, ಪಶ್ಯಂತಿಯೆಂಬ ವಾಕ್ಕು, ಪ್ರಾಣವಾಯು ಕೂಡಿ ತತ್ತ್ವ ಏಳು ತೂರ್ಯಾವಸ್ಥೆಯಲ್ಲಿ ಪ್ರೇರಿಸುವುದು: ಹಿಂದೆ ಹೇಳಿದ ತತ್ತ್ವ ಏಳು ಕೂಡಿ, ಹೃದಯಸ್ಥಾನದಲ್ಲಿ ಮಧ್ಯಮೆ, ಚಿತ್ತ - ಎರಡು ಕೂಡುತ್ತಿಹವು. ಆ ವೇಳೆಯಲ್ಲಿ ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಪ್ರೇರಿಸುವುದು. ಆ ಶುದ್ಧವಿದ್ಯಾತತ್ತ್ವ ಆತ್ಮಂಗೆ ಅರಿವನೆಬ್ಬಿಸುವುದು. ಇಚ್ಛಾಶಕ್ತಿ ಈಶ್ವರತತ್ತ್ವಮಂ ಪ್ರೇರಿಸುವುದು; ಈಶ್ವರತತ್ತ್ವ ರಾಗತತ್ತ್ವಮಂ ಪ್ರೇರಿಸುವುದು; ರಾಗತತ್ತ್ವ ಆತ್ಮಂಗೆ ಇಚ್ಛೆಯನೆಬ್ಬಿಸುವುದು. ಆಶಕ್ತಿ ಸಾದಾಖ್ಯತತ್ತ್ವಮಂ ಪ್ರೇರಿಸುವುದು; ಸಾದಾಖ್ಯತತ್ತ್ವ ಪ್ರಕ್ಕೃತಿತ್ತ್ವಮಂ ಪ್ರೇರಿಸುವುದು; ಪರಾಶಕ್ತಿ ಶಿವತತ್ತ್ವಮಂ ಪ್ರೇರಿಸುವುದು; ಶಿವತತ್ತ್ವ ಗುಣತತ್ತ್ವಮಂ ಪ್ರೇರಿಸುವುದು. ಇಂತು ಹದಿನೆಂಟು ತತ್ತ್ವ ಆವಾವವೆಂದಡೆ: ಪಂಚಶಕ್ತಿ ಹೊರಗಾಗಿ ಶಿವತತ್ತ್ವ ಐದು, ವಿದ್ಯಾತತ್ತ್ವ ಐದು, ಪ್ರಾಣವಾಯು ಒಂದು, ಪ್ರಕೃತಿ ಒಂದು, ಗುಣ ಮೂರು, ಚಿತ್ತ ಒಂದು, ಪುರುಷ ಒಂದು. ಇಂತು ತತ್ತ್ವ ಹದಿನೇಳು ಸುಷುಪ್ತಾವಸ್ಥೆಯಲ್ಲಿ ಅರುಹಿಸುವುವು. ಇನ್ನು ಸ್ವಪ್ನಾವಸ್ಥೆಯ ಕಂಠದಲ್ಲಿಹ ತತ್ತ್ವ: ಜ್ಞಾನೇಂದ್ರಿಯ ವಿಷಯ ಹತ್ತು, ಕರ್ಮೇಂದ್ರಿಯ ವಿಷಯ ಹತ್ತು, ಪ್ರಾಣವಾಯು ಉಳಿಯೆ, ವಾಯುಚಿತ್ತ ಉಳಿಯೆ, ತ್ರಿಕರಣ ಅಹಂಕಾರ ಮೂರು, ವೈಖರಿಯ ವಾಕ್ಕು ಒಂದು ಇಂತು ಇಪ್ಪತ್ತನಾಲ್ಕು ತತ್ತ್ವ. ಸುಷುಪ್ತಾವಸ್ಥೆಯಲ್ಲಿ ಹಿಂದೆ ಹೇಳಿದ ತತ್ತ್ವ ಹದಿನೇಳು ಕೂಡಿ ತತ್ತ್ವ ನಲವತ್ತೊಂದು ಸ್ವಪ್ನಾವಸ್ಥೆಯಲ್ಲಿ ಕೂಡಿಹವು. ಆಗ ತನ್ನೊಳಗೆ ಅರುಹಿಸುವ ಪ್ರಕಾರವೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ, ಹೃದಯ ಈ ಐದು. ಚಿತ್ತವನು ಆಕಾರ ಪ್ರೇರಿಸುವುದು. ಆ ಅಕಾರವನು ಬ್ರಹ್ಮ ಪ್ರೇರಿಸುವನು, ಬುದ್ಧಿಯನು ಉಕಾರ ಪ್ರೇರಿಸುವುದು; ಉಕಾರವನು ವಿಷ್ಣು ಪ್ರೇರಿಸುವನು, ಅಹಂಕಾರವನು ಮಕಾರ ಪ್ರೇರಿಸುವುದು; ಮಕಾರವನು ರುದ್ರ ಪ್ರೇರಿಸುವನು, ಮನವನು ಬಿಂದು ಪ್ರೇರಿಸುವುದು; ಬಿಂದುವನು ಈಶ್ವರ ಪ್ರೇರಿಸುವನು; ಹೃದಯವನು ನಾದ ಪ್ರೇರಿಸುವುದು; ನಾದವನು ಸದಾಶಿವ ಪ್ರೇರಿಸುವನು. ಈ ಹದಿನೈದು ತನ್ನೊಳಗೆ ಸೂಕ್ಷ ್ಮಶರೀರದಲ್ಲಿಹುದು. ...........ಗೀ(?) ಅಷ್ಟತನುವಿನಿಂದ ಸ್ವರ್ಗನರಕವನರಿವನು. ಮುಂದೆ ಜಾಗ್ರಾವಸ್ಥೆಯಲ್ಲಿ ಅರುಹಿಸುವ ತತ್ತ್ವ ಅವಾವವೆಂದಡೆ- ಭೂತ ಐದು, ಉಭಯೇಂದ್ರಿಯ ಹತ್ತು, ಭೂತಕಾರ್ಯ ಇಪ್ಪತ್ತೈದು, ನಾಡಿ ಹತ್ತು, ಅಂತು ತತ್ತ್ವ ನಲವತ್ತೊಂದು. ಅಂತು ಕೂಡಿ ತತ್ತ್ವ ತೊಂಬತ್ತೊಂದು. ಇಂತಿದು ಊಧ್ರ್ವಾವಸ್ಥೆ. ಇನ್ನು ಸಕಲಾವಸ್ಥೆಯೆಂತೆಂದಡೆ: ತೊಂಬತ್ತೊಂದು ತತ್ತ್ವ ಅವರಲ್ಲಿ ಪ್ರೇರಕತತ್ವವೊಂದು ಪ್ರೇರಿಸುವಲ್ಲಿ ಸಕಲಾವಸ್ಥೆ. ಅದು ಶಿವನನೂ ತನ್ನನೂ ಪಾಶಪಂಚಕವನು ಅರಿಯದೆ ಎಲ್ಲ ವಿಷಯಂಗಳನು ಅರಿವುತ್ತಿಹುದು. ಇನ್ನು ಮಧ್ಯಮಾವಸ್ಥೆಯೆಂತೆಂದಡೆ- ಹಿಂದೆ ಕಂಡವನ ಈಗಲೆಂದು ಅರಿಯಹುದೀಗ ಜಾಗ್ರ ಅತೀತ. ಹಿಂದೆ ಕಂಡವನ ಅರಿದ ಹಾಂಗಿಹುದೀಗ ಜಾಗ್ರ ತುರೀಯ. ಹಿಂದೆ ಕಂಡವನ ಮೆಲ್ಲನೆಚ್ಚತ್ತು ಅರಿವುದು ಜಾಗ್ರದ ಸುಷುಪ್ತಿ. ಹಿಂದೆ ಕಂಡವನ ಕಂಡಾಗಲೆ ಅರಿವುದು ಜಾಗ್ರದ ಸ್ವಪ್ನ. ಹಿಂದೆ ಕಂಡವನ ಹೆಸರು, ಇದ್ದ ಸ್ಥಲ, ಅವನ ಕಾಯಕ ಮುಂತಾಗಿ ಚೆನ್ನಾಗಿ ಅರಿವುದು ಜಾಗ್ರದ ಜಾಗ್ರ. ಅದೆಂತೆಂದಡೆ, ಜಾಗ್ರದಲ್ಲಿ ಪುರುಷತತ್ತ್ವದಲ್ಲಿ ಎಲ್ಲ ತತ್ತ್ವಗಳು ಕೂಡಿದ ಕಾರಣಂದ ತಾನೇನ ನೆನೆದಿದ್ದುದನು ಮರೆವುದು ಜಾಗ್ರ ಅತೀತ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಕೂಡಲು ನೆನೆದುದನು ಹೇಳಿಹೆನೆಂದಡೆ ತೋರುವ ಹಾಂಗೆ ಇಹುದು ತೋರದಿಹುದು ಜಾಗ್ರದ ತುರೀಯ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಚಿತ್ತವು ಕೂಡಲು ನೆನೆದುದನು ಮೆಲ್ಲನೆಚ್ಚತ್ತು ಅರಿದು ಹೇಳುವುದು ಜಾಗ್ರದ ಸುಷುಪ್ತಿ, ಆ ಪುರುಷತತ್ತ್ವದಲ್ಲಿ ಕರಣ ನಾಲ್ಕು, ಇಂದ್ರಿಯ ಹತ್ತು, ವಾಯು ಹತ್ತು, ವಿಷಯ ಹತ್ತು ಅಂತೂ ತತ್ತ್ವ ಮೂವತ್ತನಾಲ್ಕು ಕೂಡಲಾಗಿ, ತಾ ನೆನೆದುದನು ಇದ್ದುದನು ಚೆನ್ನಾಗಿ ಅರಿದು ವಿವರದಿಂದ ಹೇಳುವುದು ಇದು ಜಾಗ್ರದ ಜಾಗ್ರ. ಇಂತಿದು ಮಾಧ್ಯಮಾವಸ್ಥೆ. ಇನ್ನು ಕೇವಲಾವಸ್ಥೆಯೆಂತೆಂದಡೆ: ಶುದ್ಧತತ್ತ್ವ ವಿದ್ಯಾತತ್ತ್ವವನೆಲ್ಲವ ಬಿಟ್ಟು ಆಣವಮಲದಲ್ಲಿ ಆಣವಸ್ವರೂಪಾಗಿ ಕಣ್ಗತ್ತಲೆಯಲ್ಲಿ ಏನೂ ಕಾಣದ ಕಣ್ಣಿನ ಹಾಂಗೆ ಇದ್ದುದೀಗ ಕೇವಲಾವಸ್ಥೆ. ಇನ್ನು ಶುದ್ಧಾವಸ್ಥೆಯೆಂತೆಂದಡೆ: ಕರ್ಮಸಮಾನದಲ್ಲಿ ಶಕ್ತಿಪಾತವಾಗಿ,ತ್ರಿಪದಾರ್ಥಜ್ಞಾನವಾಗಿ, ದಿಟವೆಂಬಂತೆ ತೋರುತ್ತಿಹ ದೇಹಾಪ್ರಪಂಚುವನು ಸಟೆಯೆಂದು ಕಸವ ಕಳೆವ ಹಾಂಗೆ ಕಳೆದು, ತತ್ತ್ವಂಗಳೊಳಗೆ ಇದ್ದು ತತ್ತ್ವಂಗಳಿಗೆ ಅನ್ಯವಾಗಿ, ಆ ತತ್ತ್ವಂಗಳನು ಅರಿದ ಸಕಲಾವಸ್ಥೆಯೆಂಬ ಕೇವಲಾವಸ್ಥೆಯೆಂಬ ಈ ಎರಡು ಅವಸ್ಥೆಗಳೂ ತನ್ನನು ಶಿವನನು ಅರಿವುದಕ್ಕೆ ಪ್ರಯೋಜನವಲ್ಲವೆಂದು ಎರಡವಸ್ಥೆಯನೂ ಬಿಟ್ಟು ಸಕಲವನೂ ಹೊದ್ದದೆ ಕೇವಲವನೂ ಹೊದ್ದದೆ ತ್ರಾಸಿನ ಮುಳ್ಳು ನಿಂದ ಹಾಂಗೆ ನಿಂದುದು ಶುದ್ಧಾವಸ್ಥೆ. ಇದು ಶಿವನ ಶರಣರಿಗಲ್ಲದೆ ಇಲ್ಲ. ಇನ್ನು ನಿರ್ಮಲಾವಸ್ಥೆ ಎಂತೆಂದಡೆ- ಶಿವಜ್ಞಾನದಲ್ಲಿ ಬೋಧವನಳಿದು ಜ್ಞೇಯದೊಳು ಕೂಡಿಹ ಜೀವನ್ಮುಕ್ತರಿಗೆ ಪಂಚಾವಸ್ಥೆಗಳು. ಆ ಅವಸ್ಥೆಗಳಲ್ಲಿ ತತ್ತ್ವಗಳಾವಾವೆಂದಡೆ: ಶಿವತತ್ತ್ವ, ಶಕ್ತಿತತ್ತ್ವ, ಸಾದಾಖ್ಯತತ್ತ್ವ, ಈಶ್ವರತತ್ತ್ವ, ಶುದ್ಧ ವಿದ್ಯಾತತ್ತ್ವ ಈ ಐದು ಮೊದಲಾಗಿ ಪರಾ, ಆದಿ, ಇಚ್ಛೆ, ಜ್ಞಾನ, ಕ್ರಿಯೆಯೆಂಬ ಶಕ್ತಿ ಪಂಚಕಗಳು ಉಸುರಾಗಿ ಜಾಗ್ರಾವಸ್ಥೆಯಲ್ಲಿ ಅರಿವುತ್ತಿಹನು. ಕ್ರಿಯಾಶಕ್ತಿ ಶಕ್ತಿತತ್ತ್ವಮಂ ಬಿಟ್ಟು ಉಳಿದ ಶಕ್ತಿ ನಾಲ್ಕು ಒಡಲುಸುರಾಗಿ ಅರಿಯೆ ಸ್ವಪ್ನಾವಸ್ಥೆ. ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಮೂರರಲ್ಲಿ ಅರಿಯೆ ಸುಷುಪ್ತಾವಸ್ಥೆ. ಇಚ್ಛಾಶಕ್ತಿ ಈಶ್ವರತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಎರಡರಲ್ಲಿ ಅರಿವುದು ತೂರ್ಯಾವಸ್ಥೆ. ಆಶಕ್ತಿ ಸಾದಾಖ್ಯತತ್ತ್ವವೂ ಬಿಟ್ಟು ಕಳೆದು ಉಳಿದ ಪರಾಶಕ್ತಿ ಒಂದು ಶಿವತತ್ತ್ವ ಒಂದರಲ್ಲಿ ಅರಿಯೆ ನಿರ್ಮಲದ ಅತೀತಾವಸ್ಥೆ. ಇನ್ನು ಈ ಶಕ್ತಿ ಶಿವತತ್ತ್ವಂಗಳೆ ಒಡಲುಸುರಾಗಿ ಇದ್ದಲ್ಲಿ ಶಿವನಲ್ಲದೆ ಮತ್ತೊಂದು ಏನೂ ತೋರದು. ಅಂಥ ಜೀವನ್ಮುಕ್ತರು ನಿರ್ಮಲಜಾಗ್ರದಲ್ಲಿ ಎಂತು ಅರಿವುತ್ತಿಪ್ಪರೆಂದಡೆ ಆ ಪರಮಾವಸ್ಥೆಯನೂ ಅನುಭವದಲ್ಲಿ ಅರಿವುದು, ಮಲಪಂಚಕಗಳನು ಅರುಹಿಸುವ ಸದಮಲ ಶಿವಜ್ಞಾನ ಪರೆ ಮೊದಲಾದ ಪೂರ್ಣ ಬೋಧದಲ್ಲಿ ಕೂಡಿ ತಾನು ಇಲ್ಲದಿರುವಂಧು ಏನೂ ತೋರದ ಪೂರ್ಣ ಬೋಧವಾಗಿ ನಿಂದುದು ನಿರ್ಮಲಜಾಗ್ರ. ಇನ್ನು ಪರಾಶಕ್ತಿಯನೂ ಶಿವತತ್ತ್ವವನೂ ಮೀರಿ, ಪರದಲಿ ಬೆರೆದು, ಅದ್ವೆ ೈತವೂ ಅಲ್ಲದೆ, ದ್ವೆ ೈತವೂ ಅಲ್ಲದೆ, ದ್ವೆ ೈತಾದ್ವೆ ೈತವೂ ಅಲ್ಲದೆ ಇನತೇಜದಲ್ಲಿ ಕಣ್ಣು ತೇಜ ಕೂಡಿದ ಹಾಂಗೆ ಆಣವದ ಅಣುವಿನ ಹಾಂಗೆ ತಾನು ಇಲ್ಲದೆ ಇಹನು. ಇದು ಶಿವಾದ್ವೆ ೈತ. ಇಂತಲ್ಲದೆ ಆತ್ಮ ಆತ್ಮ ಕೆಟ್ಟಡೆ, ಆತ್ಮವರ್ಗ ಮುಕ್ತಿಸುಖವಿಲ್ಲ, ಅಳಿದ ಠಾವಿನಲ್ಲಿ ಹುಟ್ಟುವುದಾಗಿ, ಶಿವ ತಾನೆ ಆತ್ಮನಾಗಿ ಹುಟ್ಟುವನಹುದು: ಶಿವನಲ್ಲಿ ಹುಟ್ಟಿ ಮಲ ಉಳ್ಳದಹುಲ್ಲ. ಶಿವ ತಾನೆ ಹುಟ್ಟಿಸಿ ನರಕ - ಸ್ವರ್ಗದ ಮಾನವನಹನು, ಪಕ್ಷಪ್ಕಾಯಹನು, ನಿಃಕರುಣಿಯಹನು, ವಿಕಾರಿಯಹನು. ಶಿವನ್ಲ ಕೂಡದೆ ಬೇರಾಗಿ ಇಹನೆಂದಡೆ, ಮುಕ್ತಿಯೆಂಬ ಮಾತು ಇಲ್ಲವಹುದು. ಪಂಚಕೃತ್ಯವ ಮಾಡಲು ಕಾರಣವಿಲ್ಲ ಒಂದಾಗೆ! ಎರಡಾಗದೆ ಭೇದಾಭೇದವಾಗಿಹನೆಂದಡೆ ಶಿವಭಕ್ತಿಯನೂ ಶಿವಕ್ರಿಯೆಗಳನೂ ಮಾಡಿ ಶಿವನ ಕೂಡಿಹನೆಂದೆನ್ನಬೇಡ! ಮುನ್ನವೆ ಒಂದಾಗಿ ಇದ್ದನಾಗಿ, ಈ ಭೇದವ ತಿಳಿಯಬಲ್ಲಡೆ ಆತನೆ ಶರಣ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಶ್ರೋತ್ರ ತ್ವಕ್ಕು ಚಕ್ಷು ಜಿಹ್ವೆ ಘ್ರಾಣಂಗಳೆಂಬವೈದು ಜ್ಞಾನೇಂದ್ರಿಯಂಗಳು. ವಾಕು ಪಾಣಿ ಪಾದ ಗುಹ್ಯ ಗುದಂಗಳೆಂಬವೈದು ಕರ್ಮೇಂದ್ರಿಯಂಗಳು. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬವೈದು ವಿಷಯಂಗಳು. ವಚನ ಆದಾನ ಗಮನ ಆನಂದ ವಿಸರ್ಜನಂಗಳು ಕರ್ಮೇಂದ್ರಿಯಂಗಳ ವಿಷಯಂಗಳು. ಶ್ರೋತ್ರೇಂದ್ರಿಯ ವಾಗೀಂದ್ರಿಯಂಗಳಿಗೆ ಭೇದವಿಲ್ಲ. ಶ್ರವಣೇಂದ್ರಿಯವಿಷಯವಪ್ಪ ಶಬ್ದಕ್ಕೆಯು, ವಾಗೀಂದ್ರಿಯವಿಷಯವಪ್ಪ ನುಡಿಗೆಯು ಭೇದವಿಲ್ಲ. ತ್ವಗೀಂದ್ರಿಯ ಪಾಣೇಂದ್ರಿಯಂಗಳೆಂಬ, ಜ್ಞಾನೇಂದ್ರಿಯ ಕರ್ಮೇಂದ್ರಿಯಂಗಳೆರಡಕ್ಕೆಯು ತ್ವಕ್ಪಾಣಿಗಳ ವಿಷಯಂಗಳಪ್ಪ ಸ್ಪರ್ಶನ ಆದಾನ ಈ ಎರಡು ವಿಷಯಂಗಳಿಗೆಯೂ ಭೇದವಿಲ್ಲ. ಜ್ಞಾನಕರ್ಮೇಂದ್ರಿಯಂಗಳಪ್ಪ ನೇತ್ರ ಪಾದಂಗಳೆಂಬೆರಡಕ್ಕೆಯು ನೇತ್ರ ವಿಷಯವಪ್ಪ ರೂಪಕ್ಕೆಯು ಪಾದೇಂದ್ರಿಯ ವಿಷಯಮಪ್ಪ ಗಮನಕ್ಕೆಯು ಭೇದವಿಲ್ಲ. ಆ ಜಿಹ್ವೆ ಗುಹ್ಯ ವಿಷಯಂಗಳಪ್ಪ ರಸ ಆನಂದವಪ್ಪವೆಂಬೆರಡು ವಿಷಯಂಗಳಿಗೆಯೂ ಭೇದವಿಲ್ಲ. ಘ್ರಾಣೇಂದ್ರಿಯ ಗುದೇಂದ್ರಿಯಂಗಳಿಗೆಯು ಭೇದವಿಲ್ಲ. ಅವರ ವಿಷಯಂಗಳಪ್ಪ ಗಂಧ ವಿಜರ್ಸನಂಗಳೆಂಬೆರಡು ವಿಷಯಂಗಳಿಗೆಯು ಭೇದವಿಲ್ಲ. ಈ ಜ್ಞಾನೇಂದ್ರಿಯ ಕರ್ಮೇಂದ್ರಿಯಂಗಳಿಗೆ ಹೃದಯವೇ ಕಾರಣವಾಗಿ ಹೃದಯವಾಕಾಶವೆನಿಸಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಶ್ರೋತ್ರಂ ವಾಚೋರ್ನಭೇದೋýಸ್ತಿ ಶಬ್ದಸ್ಯ ವಚನಸ್ಯ ಚ | ಸ್ಪರ್ಶಭಾಷಣ ಸದ್ಭಾವಾದ್ಭೇದೋ ನ ತು ಕರದ್ವಯೋಃ || ನ ನೇತ್ರಪಾದಯೋರ್ಭೇದಃ ರೂಪಸ್ಯ ಗಮನಸ್ಯ ಚ | ರಸಾನಂದಯೋರ್ಭೇದೋ ನ ಜಿಹ್ವಾ ಗುಹ್ಯಯೋಸ್ತಥಾ || ನಾಸಿಕಾ ಗುದಯೋರ್ಭೇದೋ ನಾಸ್ತಿ ಗಂಧವಿಸರ್ಗಯೋಃ | ಅಸ್ತಿಭೇದ ಪ್ರಮಾಣಸ್ಯ ಇತಿ ಸತ್ಯಾರ್ಥವರ್ಧಿನಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು. ನಿಷ್ಕಲಮೂರ್ತಿಯಾಗಿ ಪ್ರಾಣಲಿಂಗವಾಯಿತ್ತು. ಕೇವಲ ನಿರವಯಮೂರ್ತಿಯಾಗಿ ಭಾವಲಿಂಗವಾಯಿತ್ತು. ಸಕಲಮೂರ್ತಿಗೆ ಕ್ರಿಯೆ, ನಿಷ್ಕಲಮೂರ್ತಿಗೆ ಜ್ಞಾನ, ಕೇವಲ ನಿರವಯಮೂರ್ತಿಗೆ ಆನಂದ, ಸ್ಥೂಲವೇ ಕಾಯ, ಸೂಕ್ಷ್ಮವೇ ಪ್ರಾಣ, ಕಾರಣವೇ ವಸ್ತು. ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬವು ಸೂಕ್ಷ್ಮದ ಷಡ್ವಿಧಲಿಂಗವು. ಇವಕ್ಕೆ `ಓಂ ನಮಃಶಿವಾಯ' ಎಂಬುದೇ ತೃಪ್ತಿ. ಸಂತೋಷವೇ ಕಾರಣ, ಮಹಾಕಾರಣವೇ ಪರಿಣಾಮ. ತೂರ್ಯಾತೀತವಾಗಿ ಸರ್ವಕೇಳಿಕೆಯಂ ಕೇಳಿ ನಿಜಾನಂದವಾಗಿಹುದು. ವಿರಾಟವೇ ಸುನಾದವಾಗಿ ಹೊರಬಿದ್ದು ನುಡಿದು ಭೇರಿನಾದದಂತೆ ಆಕಾಶಧ್ವನಿಯಂತೆ ತನಗೆ ತಾನೇ ಕೇಳುವುದು. ಹಿರಣ್ಯಗರ್ಭಬಿಂದುವಿನ ಮನೆಯಲ್ಲಿ ಗಾಳಿಪಟಕ್ಕೆ ಬೇರಬಿರಿಕೆಯ ಕಟ್ಟಿ ನುಡಿಸುವ ತೆರದಂತೆ ತೇಜವಾಗಿ ಶಂಖದ ಧ್ವನಿಯಂತೆ ತೋರುತಿರ್ಪ ಸುನಾದಕ್ಕೆ ಎರಡಂಗುಲದ ಮೇಲೆ ತೇಜವಿಹುದು. ಅದು ತುಂಬಿದ ಹುಣ್ಣಿಮೆಯ ಬೆಳದಿಂಗಳಂತೆ, ಚಂದ್ರಜ್ಯೋತಿಯ ಪ್ರಭೆಯಂತೆ, ಹೂಬಿಸಿಲಿನಂತೆ ತೋರುತಿರ್ಪುದು. ಕಳೆಯ ಮನೆಯಲ್ಲಿ ಎರಡಂಗುಲ ಪ್ರಮಾಣ. ಮೂಲಪ್ರಕೃತಿ ಮೂಗಿನಮೇಲೆ ಭ್ರೂಮಧ್ಯ ಪ್ರಣವದಲ್ಲಿ ಓಂಕಾರಧ್ವನಿಯ ಝೇಂಕಾರದಂತೆ, ಘಂಟೆಯ ಬಾರಿಸಿದಂತೆ, ತಟತಟನೆ ಹಾರಿ ಅದು ಭ್ರೂಮಧ್ಯಸ್ಥಾನದಲ್ಲಿ ತೋರುವುದು. ನಾದವೇ ಶಬ್ದ, ನಿಃಶಬ್ದವೇ ಬಿಂದುಮಯ. ನಾದದೊಳಗಿರ್ದ ನಾದವೇ ಓಂಕಾರ. ಚಿಜ್ಜ್ಯೋತಿಯ ಪ್ರಕಾಶ ಭ್ರೂಮಧ್ಯದ ಪಣೆಯ ಮೇಲೆ ಎರಡಂಗುಲದಲ್ಲಿ ಕಾಣಿಸುತ್ತಿಹುದು. ಅದು ಮನದಿಂದೆ ಕಂಡಿತೋ ಕಣ್ಣಿನಿಂದ ಕಂಡಿತೋ ಎಂದಡೆ, ನೆನಹು ಎಂಬ ಅಂತಃಕರಣ ಓಂ ನಮಃಶಿವಾಯ ಎಂಬ ಪ್ರಣವಜ್ಯೋತಿಯ ತೋರಿತ್ತು. ಚಿತ್ತದ ತೋರಿಕೆ ಅರವತ್ತಾರುಕೋಟಿ ಪ್ರಣವಜ್ಯೋತಿಯ ಕಿರಣದಲ್ಲಿ ತೇರಿನ ಬದಿಯ ಬಿರಿಸಿನೋಪಾದಿಯ ನೆನಹು ಮಾತ್ರಕ್ಕೆ ತೋರುತ್ತಿಹುದು. ಹೊರದೃಷ್ಟಿಯ ಒಳಗಿಟ್ಟು, ಒಳದೃಷ್ಟಿಯ ಹೊರಗಿಟ್ಟು ಪರಿಪೂರ್ಣವಾಗಲು, ಒಳಹೊರಗೆ ನೋಡುವ ಶಿವಶರಣರ ಮನ ಭಾವಕ್ಕೆ ಆನಂದವೇ ತೋರುತ್ತಿಹುದು. ದಿನಕರನ ಕಾಂತಿ, ಮಧ್ಯಾಹ್ನದ ಬಿಸಿಲು, ಅಂತರಂಗದ ಛಾಯೆಯಂತೆ, ನಿರ್ಮಲವಾದ ದರ್ಪಣದ ಪ್ರತಿಬಿಂಬದಂತೆ, ತನ್ನ ರೂಪಂಗಳ ತಾನೆ ನೋಡಿದಾತನು ಜೀವನ್ಮುಕ್ತನು. ಆತ ಭವದಬಳ್ಳಿಯ ಹರಿದು ನಿತ್ಯಾನಂದ ನಿರ್ಮಳ ನಿರಾವರಣ ನಿಜ ಚಿನ್ಮಯನಾಗಿಹನು. ಇನ್ನು `ಓಂ ನಮಃಶಿವಾಯ' ಎಂಬ ಊಧ್ರ್ವಪ್ರಣವ. ಅಳ್ಳನೆತ್ತಿಯ ಸ್ಥಾನದಲ್ಲಿ ಅರುಹಿನ ಮನೆಯುಂಟು. ಅದಕ್ಕೆ ತಟಿಮಂತ್ರ. ಅಂತರಂಗದ ಬಾಯಲ್ಲಿ ಎಡಬಲವು ಎರಡು ಕರ್ಣದ್ವಾರಂಗಳಲ್ಲಿ ನುಡಿಯ ಕೇಳಿದಡೆ ಸುನಾದವಾಯಿತ್ತು. ಅದು ದಶನಾದಂಗಳಿಂದೆ ಶರಧಿ ನಿರ್ಝರ ಮೇಘ ಮುರಜ ಭೇರಿ ಕಹಳೆ ಘಂಟೆ ಶಂಖ ವೀಣೆ ಭ್ರಮರನಾದಂಗಳೆಂಬ ದಶನಾದಂಗಳನು ಗುರುಮುಖದಿಂದರಿತು ಹಗಲಿರುಳು ಆ ದಶನಾದಂಗಳೊಳಗಾದ ಸುನಾದವನು ಎಡೆದೆರಹಿಲ್ಲದೆ ಲಾಲಿಸಿ ಕೇಳುವುದು ಶಿವಯೋಗೀಶ್ವರರು. ಅದು ಪ್ರಸಾದಲಿಂಗಸ್ಥಲ, ವಿಶುದ್ಧಿಯ ಮನೆ ; ಶರಣಸ್ಥಲ. ಆ ಸ್ಥಲದಲ್ಲಿ ನಾದವ ಕೇಳಿದವರಿಗೆ ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳು, ತನುತ್ರಯಂಗಳು ತೂರ್ಯದಲ್ಲಿ ಹರಿದುಹೋಗುವವು. ಸುನಾದದಲ್ಲಿ ಮನಸ್ಸಿಟ್ಟಡೆ ಓಂ ನಮಃಶಿವಾಯ ಎಂಬ ಪ್ರಣವನಾದವ ಕೇಳಿದವರಿಗೆ ಸ್ವಪ್ನವು ಎಂದಿಗೂ ತೋರದು. ಇರುಹೆ ಸುಳಿದಡೆ ಎಚ್ಚರಿಕೆ, ದಿಗಿಲುಭುಗಿಲೆಂದಡೆ ನೀನಾರೆಲಾ ಎಂದು ಮಾತನಾಡಿಸಿಬಿಡುವನು. ಆ ಪ್ರಣವಘೋಷ ಸತ್ತೆನೆಂಬಂತೆ ದಿವಸ ಹನ್ನೆರಡು ತಾಸಿನೊಳಗೆ ತನುವ ಬಿಡುವ ಸಮಯದಲ್ಲಿ, ಆ ಘೋಷ ನಿರ್ಘೋಷವಾಗಿ ನಾದ ನುಡಿಯದು. ಅದು ಲಕ್ಷವಿಟ್ಟು ನೋಡಿದಡೆ ತೋರುವುದು. ಅಂಗುಲ ಪ್ರಮಾಣವಾಗಿ ವಸ್ತುವು ಅಂಗುಷ್ಟಕ್ಕೆ ಬರುವುದು. ವೃಕ್ಷವನೇರಿದ ಸರ್ಪನಂತೆ ಬ್ರಹ್ಮರಂಧ್ರದ ಕೊನೆಗೇರುವುದು. ಹೆದ್ದುಂಬಿಯ ಕೊಳವಿಯೋಪಾದಿಯಲ್ಲಿ ವಸ್ತುವು ಅಳ್ಳಿನೆತ್ತಿಯ ಸ್ಥಾನದಲ್ಲಿ ಏರಿ ಹೋಗುವುದು. ಈ ಮನೆಯ ಶಿವಶರಣ ಬಲ್ಲ. ಇದು ಹನ್ನೆರಡು ತಾಸು ಪುರಸತ್ತಿಗೆಯ ಹೇಳಿದ ಅರುಹು. ಇಂತಪ್ಪ ವಸ್ತುವಿನ ನಿಲುಕಡೆಯ ಬಲ್ಲ ಶರಣನು. ತನ್ನವಸಾನಕಾಲದ ಎಚ್ಚರಿಕೆಯನರಿದು, ಗೋವು ಮಲಗುವಷ್ಟು ಧರಣಿಯ ಸಾರಣಿಯ ಮಾಡುವುದು. ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ ಗೋಘೃತ ಗೋರೋಚನ ಎಂಬ ಷಡುಸಮ್ಮಾರ್ಜನೆಯ ಮಾಡುವುದು. ಶಿವಜಂಗಮದ ಧೂಳಪಾದಾರ್ಚನೆಯ ಉದಕಮಂ ನೀಡಿ ಸಮ್ಮಾರ್ಜನೆಯ ಮಾಡುವುದು. ರಂಗವಲ್ಲಿಯ ತುಂಬುವುದು, ಭಸ್ಮವ ತಳೆವುದು. ಪಾದೋದಕ ಪ್ರಸಾದಮಂ ಸಲಿಸಿ, ಶಿವಗಣಂಗಳಿಗೆ ವಂದನೆಯ ಮಾಡಿ, ಆ ಸಮ್ಮಾರ್ಜನೆಯ ಮಾಡಿದ ಗದ್ಗುಗೆಯ ಮೇಲೆ ಮುಹೂರ್ತವ ಮಾಡಿ, `ಓಂ ನಮಃಶಿವಾಯ' ಎಂಬ ಪ್ರಣವಸ್ಮರಣೆಯ ಮಾಡುವುದು. ಹಸ್ತದಲ್ಲಿ ಇಷ್ಟಲಿಂಗವ ಹಿಡಿದುಕೊಂಡು ಇರವಂತಿಗೆ ಸೇವಂತಿಗೆ ಮೊಲ್ಲೆ ಮಲ್ಲಿಗೆ ಜಾಜಿ ಕರವೀರ ಸುರಹೊನ್ನೆ ಸಂಪಿಗೆ ಮರುಗ ಪಚ್ಚೆ ದವನ ಬಿಲ್ವಪತ್ರೆ ಮೊದಲಾದ ಸಮಸ್ತ ಪುಷ್ಪ ಪತ್ರೆಗಳ ಧರಿಸಿ, ಆ ಶಿವಲಿಂಗವನು ಮನವೊಲಿದು ಕಂಗಳ ತುಂಬಿ ನೋಡುತ್ತ, ದೇವಭಕ್ತರು ಬಂದಡೆ ಶರಣಾರ್ಥಿ ಎಂದು, ಮಜ್ಜನವ ನೀಡಿಸಿ, ವಿಭೂತಿಯ ಧರಿಸಿ, ಪುಷ್ಪಪತ್ರೆಗಳ ಧರಿಸಿ ಎಂದು ಅವರ ಪಾದವಿಡಿದು, ಶರಣಾರ್ಥಿ ಸ್ವಾಮಿಗಳಿಗೆ ಎಂದು ಹೇಳಿ, ಶಿವಾರ್ಪಣವ ಮಾಡಿ ಎಂದು ಬಿನ್ನಹವ ಮಾಡುವುದು. ಮದುವೆ ಮಾಂಗಲ್ಯ ಅರ್ತಿ ಉತ್ಸಾಹ ಶಿಶುವಿನ ಹೆಸರಿಡುವ ಹಾಗೆ ಹರುಷ ಪರುಷ ಧೈರ್ಯವೇ ಭೂಷಣವಾಗಿ ನಿರೋಧಂಗಳ ಮಾಡದೆ ``ಓಂ ನಮಃಶಿವಾಯ' ಎಂಬ ಮಂತ್ರ ಭೋರ್ಗರೆಯೆ ನಿರ್ಮಲ ನೈಷಿ*ಕದಿಂದೆ ಶಿವಜಂಗಮದ ಪಾದವನು ಮಸ್ತಕದ ಮೇಲೆ ಇಡಿಸುವುದು. ಹಿತವಂತರಾದವರು ವೀರಶೈವ ಪರಮವಚನಂಗಳಂ ಕೇಳಿಸುವುದು. ಎಡಬಲದಲ್ಲಿರ್ದ ಸಕಲ ಭಕ್ತರು ಮಹೇಶ್ವರರು `ಓಂ ನಮಃಶಿವಾಯ' ಎಂಬ ಶಿವಮಂತ್ರವನ್ನು ಆ ಶರಣನ ಕರ್ಣಂಗಳಲ್ಲಿ ಉಚ್ಚರಿಸುವುದು. ಈ ಹಡಗದ ಹಗ್ಗವ ಮತ್ತೊಂದು ಹಡಗಕ್ಕೆ ಹಾಕಿ ಬಿಗಿದಡೆ, ಹಡಗಕ್ಕೆ ಹಡಗ ಕೂಡಿ, ಸಮುದ್ರದ ತೆರೆಯೋಪಾದಿಯಲ್ಲಿ ಹಡಗವ ಬಿಟ್ಟು ಪ್ರತಿಹಡಗದೊಳಗೆ ಮೂರ್ತವ ಮಾಡಿದಂತೆ, ಮಂತ್ರಮಂತ್ರವು ಸಂಬಂಧವಾಗಿ, ಉರಿ ಕರ್ಪುರ ಕೊಂಡಂತಾಯಿತ್ತು ಶರಣನ ದೇಹಪ್ರಾಣವು. ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ಅತಿ ರಹಸ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯ ಲಿಂಗಾಂಗ ಸಮರಸ ಹೇಗುಂಟೆಂದರೆ: ಸುಚಿತ್ತಕಮಲ ಮೊದಲಾಗಿ ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ ಸುಜ್ಞಾನಜಂಗಮ ಸ್ವರೂಪನಾದ ಇಷ್ಟ ಮಹಾಲಿಂಗದ ಗರ್ಭದಲ್ಲಿ ತನ್ನಂಗವ ಬಿಟ್ಟು; ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ ಇಷ್ಟಲಿಂಗವನು ಮುಳುಗಿಸುವುದೀಗ ಲಿಂಗಾಂಗಸಂಗಸಮರಸವು ನೋಡಾ. ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಡುವುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ ಲಿಂಗಾಂಗಸಂಗಸಮರಸವು [ನೋಡಾ] ರೂಪು ರೇಖೆವಿಭ್ರಮ ವಿಲಾಸಕಳಾಲಾವಣ್ಯಸ್ವರೂಪವಾದ ಹರಶಿವ ಬ್ರಹ್ಮಮೂರ್ತಿಯ ಮುದ್ದು ಮುಖದ ಆಧಾರದಲ್ಲಿ ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ ಚಿತ್‍ಶಕ್ತಿಸ್ವರೂಪಮಪ್ಪ ತನ್ನ ಮುದ್ದುಮುಖದ ಆಧಾರದಲ್ಲಿ ಹುಟ್ಟಿದ ನಕಾರಾದಿ ಪಂಚಪ್ರಣಮಂಗಳು ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ ಇದು ಲಿಂಗಾಂಗ ಸಮರಸವು. ಇದು ಶರಣಸತಿ ಲಿಂಗಪತಿ ನ್ಯಾಯವು. ಇದು ಶ್ರೀ (ತ್ರಿ?)ತನುವ ಲಿಂಗಕ್ಕರ್ಪಿಸುವ ಕ್ರಮವು. ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು. ಬಯಲು ಬಯಲು ಕೂಡಿದ ಹಾಗೆ, ಮಾತು ಮಾತ ಕಲಿವ ಹಾಗೆ ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ. ಇದ ಗುಹೇಶ್ವರನೆ ಬಲ್ಲನಲ್ಲದೆ, ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ ?
--------------
ಅಲ್ಲಮಪ್ರಭುದೇವರು
ದಶವಾಯುಗಳು ಅವಾವೆಂದಡೆ ಹೇಳುವ ಕೇಳಿರಣ್ಣಾ : ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ : ಪ್ರಾಣವಾಯು ಇಂದ್ರನೀಲವರ್ಣ, ಹೃದಯಸ್ಥಾನದಲ್ಲಿದ್ದು ಅಂಗುಷ* ತೊಡಗಿ ಪ್ರಾಣಾಗ್ರಪರಿಯಂತರದಲು ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸಮನೈದು ಅನ್ನ ಜೀರ್ಣಕಾರವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ, ಗುದಸ್ಥಾನದಲ್ಲಿದ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಅಧೋದ್ವಾರಮಂ ಬಲಿದು ಅನ್ನರಸವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷೀರವರ್ಣ, ಸರ್ವಸಂಧಿಯಲ್ಲಿದ್ದು ನೀಡಿಕೊಂಡಿದ್ದುದ ಅನುವಂ ಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯು ಎಳೆಮಿಂಚಿನವರ್ಣ, ಕಂಠಸ್ಥಾನದಲ್ಲಿದ್ದು ಸೀನುವ, ಕೆಮ್ಮುವ, ಕನಸುಕಾಣುವ, ಏಳಿಸುವ ಕಾರ್ಯಗೈದು ವರ್ಧಿಸಿ ರೋಧನಂಗಳಂ ಮಾಡಿಸಿ ಅನ್ನರಸ ಆಹಾರ ಸ್ಥಾಪನಂಗೈಸುತ್ತಿಹುದು. ಸಮಾನವಾಯು ನೀಲವರ್ಣ, ನಾಭಿಸ್ಥಾನದಲ್ಲಿದ್ದು ಅಪಾದಮಸ್ತಕ ಪರಿಯಂತರದಲ್ಲು ಸಪ್ರಾಣಿಸಿಕೊಂಡು ಇದ್ದಂಥ ಅನ್ನರಸವನು ಎಲ್ಲ ರೋಮನಾಳಂಗಳಿಗೆ ಹಂಚಿಹಾಕುತ್ತಿಹುದು. ಇಂತಿವು ಪ್ರಾಣಪಂಚಕವು. ಇನ್ನು ನಾಗವಾಯು ಪೀತವರ್ಣ, ರೋಮನಾಳಂಗಳಲ್ಲಿದ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂರ್ಮವಾಯು ಶ್ವೇತವರ್ಣ, ಉದರ ಲಲಾಟದಲ್ಲಿದ್ದು ಶರೀರಮಂ ತಾಳ್ದು ದೇಹಮಂ ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆಯುತ್ತ ನಯನದಲ್ಲಿ ಉನ್ಮೀಲನಮಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ, ನಾಶಿಕಾಗ್ರದಲ್ಲಿದ್ದು ಕ್ಷುಧಾದಿ ಧರ್ಮಂಗಳಂ ನೆಗಳಿಸಿ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದ ತ್ತವಾಯು ಸ್ಫಟಿಕವರ್ಣ, ಗುಹ್ಯ ಕಟಿಸ್ಥಾನದಲ್ಲಿದ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿದ್ದಲ್ಲಿ ಏಳಿಸಿ, ಚೇತರಿಸಿ, ಒರಲಿಸಿ, ಮಾತಾಡಿಸುತ್ತಲಿಹುದು. ಧನಂಜಯವಾಯು ನೀಲವರ್ಣ, ಬ್ರಹ್ಮರಂಧ್ರಸ್ಥಾನದಲ್ಲಿದ್ದು ಕರ್ಣದಲ್ಲಿ ಸಮುದ್ರಘೋಷವಂ ಘೋಷಿಸುತ್ತಿಹುದು. ಮರಣಕಾಲಕ್ಕೆ ನಿರ್ಘೋಷಮಪ್ಪುದು. ಇಂತಿವು ದಶವಾಯುಗಳು. ನಿನ್ನ ಕಟ್ಟಳೆಯಿಲ್ಲದೆ ಅಂಗದೊಳು ಚರಿಸ್ಯಾಡಲು ಈ ದಶವಾಯುಗಳಿಗಳವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹುಗುಲು ಹೂಟದೊಳಗಾಡುವರೆಲ್ಲರು ಬಗೆಗೆ ಅಳವಡದನ ಬಲ್ಲರೆ? ಗುಹ್ಯ ಜಿಹ್ವೆಯಲ್ಲಿ ಬಲ್ಲವನಾಗಬೇಕು, ಅದು ಬಿಡುಮುಡಿಯ ಸಂಗ. ಒಡಗೂಡುವ ತೊಡಗೆಯ ಭೇದವನರಿಯಬೇಕು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಇನ್ನಷ್ಟು ... -->