ಅಥವಾ

ಒಟ್ಟು 9 ಕಡೆಗಳಲ್ಲಿ , 7 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜಾÕನಜ್ಯೋತಿಯ ಬೆಳಗನಿಟ್ಟು ಘನಪುರುಷ ಪವಡಿಸೈದಾನೆ, ಎಲೆ ಅವ್ವಾ. ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ. ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ, ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
--------------
ಸಿದ್ಧರಾಮೇಶ್ವರ
ಸ್ಥಲಂಗಳನರಿದು ಆಚರಿಸುವಲ್ಲಿ ಮೂರನರಿದು ಮೂರ ಮರೆದು ಮೂರವೇದಿಸಿ ಐದ ಕಾಣಿಸಿಕೊಂಡು ಆರರ ಅರಿಕೆ ಹಿಂಗಿ ಮತ್ತಿಪ್ಪತ್ತೈದರ ಭೇದವಡಗಿ ಮತ್ತೊಂದರಲ್ಲಿ ಕಂಡೆಹೆನೆಂಬ ಸಂದು ಸಲೆ ಸಂದು ಒಂದಿ ಒಂದಾಹನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವೆಂಬ ಉಭಯನಾಮ ಬಿಡದು.
--------------
ತುರುಗಾಹಿ ರಾಮಣ್ಣ
ಗುರುವನರಿದಲ್ಲಿ ಮೂರನರಿದು ಐದ ಬಿಡಬೇಕು. ಲಿಂಗವನರಿದಲ್ಲಿ ಅರನರಿದು ಮೂರ ಬಿಡಬೇಕು ಜಂಗಮವನರಿದಲ್ಲಿ ಮೂವತ್ತಾರನರಿದು ಇಪ್ಪತ್ತೆ ೈದ ಬಿಡಬೇಕು. ಇಂತೀ ತ್ರಿವಿಧವನೊಡಗೂಡಿ, ನಾನಾ ಸ್ಥಲಂಗಳ ಶತ ಕುರುಹಿನಲ್ಲಿ ಗತಮಾಡಿ ಒಂದು ಎಂಬ ಸಂದೇಹ ಬಿಟ್ಟಿತ್ತು. ಆ ಸಂದೇಹವುಂಟೆಂಬ ಸಂಧಿಯಲ್ಲಿ ಗುರುವಿಂಗೆ ಎರಡಡಿ ಲಿಂಗಕ್ಕೆ ಮೂರಡಿ, ಜಂಗಮಕ್ಕೆ ಆರಡಿ, ಇಂತೀ ತ್ರಿವಿಧದಲ್ಲಿ ಸ್ಥಲಂಗಳನರಿತು ಗುರುವಿನ ಭವಪಾಶಮಂ ಕೆಡಿಸಿ, ಲಿಂಗದ ತ್ರಿವಿಧದ ಬೇರೆ ಕಿತ್ತು ಜಂಗಮದ ಸರ್ವಸಂಗವ ಮಾಡುವ ಜಂಗುಳಿ ಜಂಘೆಯಮುರಿದು, ಮೂರನವಗವಿಸಿ ನಿಂದ ಪರಮಭಕ್ತಂಗೆ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರಲಿಂಗಕ್ಕಿಂದತ್ತ ನಮೋ ನಮೋ ಎನುತ್ತಿದ್ದೆನು.
--------------
ದಾಸೋಹದ ಸಂಗಣ್ಣ
ಒಂದು ಎರಡ ನುಂಗಿ, ಮೂರು ಐದ ನುಂಗಿ, ಐದರೆಯಾಗಿ ಒರೆದಲ್ಲದೆ ಏಣಾಂಕಧರ ಸೋಮೇಶ್ವರಲಿಂಗವನರಿಯಬಾರದು.
--------------
ಬಿಬ್ಬಿ ಬಾಚಯ್ಯ
ವಾದ ವಶ್ಯ ಯಂತ್ರ ಮಂತ್ರ ಇಂದ್ರಜಾಲ ಮಹೇಂದ್ರಜಾಲ ಅದೃಶ್ಯಾಕರಣ ಪರಕಾಯಪ್ರವೇಶ ತೀರ್ಥಯಾತ್ರೆ ದಿಗ್ವಳಯದಲ್ಲಿ ಜನಜನಿತದ ಆಗುಚೇಗೆಯಲ್ಲದೆ ಎಲ್ಲಿಯೂ ಕಾಬುದಿಲ್ಲ. ಕಾಬುದಕ್ಕೆ ತೆರಪು ಮೂರನರಿದು ಮೂರ ಮರೆದು ಆರನರಿದು ಹದಿನಾರ ಹರಿದು, ಐದ ಬಿಟ್ಟು ಇಪ್ಪತ್ತೈದ ಕಟ್ಟಿ ಬಟ್ಟ ಬಯಲು ತುಟ್ಟತುದಿಯ ಮೆಟ್ಟಿ ನೋಡಿ ಕಂಡ ನಾರಾಯಣಪ್ರಿಯ ರಾಮನಾಥನಲ್ಲಿ ಕೂಟದ ಶರಣ.
--------------
ಗುಪ್ತ ಮಂಚಣ್ಣ
ಕಾಣಿಯ ಹಾಕಿ ಮುಕ್ಕಾಣಿಯನರಸುವನಂತೆ, ಒಂದ ಬಿಟ್ಟೊಂದನರಿದೆಹೆನೆಂಬ ಸಂದೇಹಿಗೇಕೆ ಲಿಂಗ ? ಸರ್ವವ್ಯಾಪಾರವ ಕಟ್ಟಿಕೊಂಡಿರ್ಪ ಹರದಿಗನ ತೆರನಂತೆ, ಕೊಂಡುದಕ್ಕೆ ಕೊಡುವಲ್ಲಿ, ವಾಸಿಯಂ ಕಂಡು ಬಿಟ್ಟ ಲಾಭಗಾರನಂತೆ, ಮೊದಲಿಂಗೆ ಮೋಸ ಲಾಭಕ್ಕರಸಲುಂಟೆ ? ಅಯ್ಯಾ, ಒಂದನರಿದಲ್ಲದೆ ಮೂರನು ಮರೆಯಬಾರದು. ಮೂರ ಮರೆದಲ್ಲದೆ ಐದ ಹರಿಯಬಾರದು. ಐದ ಹರಿದಲ್ಲವೆ ಆರ ಮೆಟ್ಟಬಾರದು. ಆರ ಮೆಟ್ಟಿದಲ್ಲದೆ ಎಂಟನೀಂಟಬಾರದು. ಎಂಟರೊಳಗಣ ಬಂಟರೆಲ್ಲರೂ ಮಹಾಪ್ರಳಯರಾದರು. ಹೀಂಗಲ್ಲದೆ ಪ್ರಾಣಲಿಂಗಿಗಳೆಂತಾದಿರೊ ? ಗಂಟ ಕೊಯ್ದು ಕೊಡದ ಗಂಟುಗಳ್ಳರಂತೆ, ತುಂಟರ ಮೆಚ್ಚುವನೆ, ನಿಃಕಳಂಕ ಮಲ್ಲಿಕಾರ್ಜುನ ?
--------------
ಮೋಳಿಗೆ ಮಾರಯ್ಯ
ಐದ ಕಟ್ಟಿ ಐದ ನೆಗಪಿ, ಮನಪವನಧ್ಯಾನ ಭಾವ ದೃಢದಿಂದ ಧ್ಯಾನದಿ ನೋಡಿ; ಕಾಯದ ಗಾಳಿಯ ಸಂಚವ ಶೋಧಿಸಿ, ಒಳಗೆ ಜಾರಿದ ಅಮೃತವನು ವಾಯುಮಂಡಲದಲೆತ್ತಿ, ನಾಭಿಮಂಡಲದಲ್ಲಿ ನುಂಗಿ ಮಾಯಾಮಂಡಲ ತೋರಲರಿಯ ಬಲ್ಲಡೆ ಗುಹೇಶ್ವರಲಿಂಗದಲ್ಲಿ ಆತ ಶಿವಯೋಗಿ
--------------
ಅಲ್ಲಮಪ್ರಭುದೇವರು
-->