ಆತ್ಮಗುಣ ವಿವರದ ಪರಿಯೆಂತುಟೆಂದಡೆ:
ತರುವಿನ ಪರಿಭೇದದಂತೆ,
ಮರ ಬಲಿದು ಋತುಕಾಲಕ್ಕೆ ಪಲ್ಲವದ ಮಧ್ಯದಲ್ಲಿ,
ಹೂ ಮಿಡಿ ಬಲಿದು ರಸನಿಂದು ಫಳವಾದಂತೆ
ಆತ್ಮನ ವಿವೇಕ ಸ್ವಸ್ಥದಲ್ಲಿ ನಿಂದು ತನ್ನಿರವ ತಾ ವಿಚಾರಿಸಿ,
ಮಹವನೊಡಗೂಡಿ, ಮಲತ್ರಯ ದೂರವಾಗಿ,
ಚಿಚ್ಛಕ್ತಿಯ ಹೃದಯದಲ್ಲಿ ಚಿದ್ಘನ ಬಲಿದು ಸ್ವರೂಪವಾಗಿ ನಿಂದು,
ಆತ್ಮನ ಅಳಿವನರಿದು ಅಧ್ಯಾತ್ಮಯೋಗಸಂಬಂಧ,
ಸದಾಶಿವಮೂರ್ತಿಲಿಂಗವನರಿದುದು.