ಅಥವಾ

ಒಟ್ಟು 61 ಕಡೆಗಳಲ್ಲಿ , 25 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು, ಎರಡು, ಮೂರು, ನಾಲಕ್ಕು, ಅಯಿದು, ಆರು, ಏಳು, ಎಂಟು ಒಂಬತ್ತು, ಹತ್ತು, ಹನ್ನೊಂದು ಹನ್ನೆರಡು, ಹದಿಮೂರು, ಹದಿನಾಲಕ್ಕು, ಹದಿನೈದು, ಹದಿನಾರು, ಹದಿನೇಳು, ಹದಿನೆಂಟು, ಹತ್ತೊಂ¨ತ್ತು, ಇಪ್ಪತ್ತು, ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತಮೂರು, ಇಪ್ಪತ್ತನಾಲಕ್ಕು. ಇಪ್ಪತ್ತನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತನಾಲಕ್ಕು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯುದಿಷ್ಠಿರೋ ವಿಕ್ರ[ಮೋ]ಶಾಲಿವಾಹನ[ಃ] ತ[ಪಸಾ] ಧ್ರುವಶ್ಚ [ದಿವಿ]ಜರಾಜನಂದನಃ ನಾಗಾಂತಕೋ ಭೂಪತಿ [ಷಷ್ಠಮಃ] ಕಲಿಯುಗೇ ಷಟ್‍ಚಕ್ರವರ್ತಿ[ನಃ] ಈ ಆರು ಮಂದಿ ಕಲಿಯುಗದ ಚಕ್ರವರ್ತಿಗಳು. ಇಪ್ಪತ್ತಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತಮೂರು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯಯಾತಿ ನಹುಷ[ಶ್ಶಂತನುಃ] ಚಿತ್ರವೀರ್ಯಶ್ಚ ಪಾಂಡವಃ ರಾಜಾ ದುರ್ಯೋಧನ[ಶ್ಚೈ]ವ ದ್ವಾಪರೇ ಷ[ಟ್] ಚಕ್ರವರ್ತಿ[ನಃ] ಆ ಆರು ಮಂದಿ ದ್ವಾಪರದ ಚಕ್ರವರ್ತಿಗಳು. ಇಪ್ಪತ್ತೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತೆರಡು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ವೈವ[ಸ್ವ]ತೋ ದಿಲೀಪಶ್ಚ ರಘು ಚಕ್ರೇಶ್ವರೋ ಅ[ಜಃ] ದಶರಥೋ ರಾಮಚಂದ್ರ[ಶ್ಚ] ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ತ್ರೇತಾಯುಗದ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಹರಿಶ್ಚಂ[ದ್ರೋ] ನ[ಳ]ರಾಜ[ಃ] ಪುರುಕು[ತ್ಸ]ಶ್ಚ ಪುರೂರವಃ ಸಗರಃ ಕಾರ್ತವೀರ್ಯಶ್ಚ ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ಕೃತಯುಗದ ಚಕ್ರವರ್ತಿಗಳು. ಅಂತೂ ಇಪ್ಪತ್ತನಾಲ್ಕು ಮಂದಿ ಚಕ್ರವರ್ತಿಗಳು. ಇಪ್ಪತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತು ಎಂದರೆ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಅದು ಎಂತೆಂದಡೆ: ಆಂಗೀರಸ, ಪುಲಸ್ತ್ಯ, ಪುಲಹ, ಶಾಂತ, ದಕ್ಷ, ವಸಿಷ್ಠ, ವಾಮದೇವ, ನವಬ್ರಹ್ಮ, ಕೌಶಿಕ, ಶೌನಕ, ಸ್ವಯಂಭು, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷಷ, ವೈವಸ್ವತ, ಸೂರ್ಯಸಾವರ್ಣಿ, ಚಂದ್ರಸಾವರ್ಣಿ, ಬ್ರಹ್ಮಸಾವರ್ಣಿ, ಇಂದ್ರ ಸಾವರ್ಣಿ ಇವರು ಇಪ್ಪತ್ತು ಮಂದಿ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಹತ್ತೊಂಬತ್ತು ಎಂದರೆ ಪುಣ್ಯನದಿಗಳು. ಅದು ಎಂತೆಂದಡೆ: ಗ್ರಂಥ || ಗಂಗಾ ಪುಷ್ಕ[ರಿಣೀ] ನರ್ಮದಾ ಚ ಯಮುನಾ ಗೋದಾವರೀ ಗೋಮತೀ ಗಂಗಾದ್ವಾರ ಗಯಾ ಪ್ರಯಾಗ ಬದರೀ ವಾರಾಣಸೀ ಸೈಯಿಂಧವೀ ಇವು ಹತ್ತೊಂಬತ್ತು ಪುಣ್ಯನದಿಗಳು. ಹದಿನೆಂಟು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೆಂಟು ಎಂದರೆ.......... ಅದು ಎಂತೆಂದಡೆ: ........................... ಹದಿನೇಳು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೇಳು ಎಂದರೆ................. ಅದು ಎಂತೆಂದಡೆ: .................... ಹದಿನಾರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾರು ಎಂದರೆ [ಅ]ರಸುಗಳು ಅದು ಎಂತೆಂದಡೆ: ಗ್ರಂಥ || ಗಯಾಂಬರೀ[ಷ] ಶ[ಶ]ಬಿಂದುರಂಗದೋ ಪೃಥು[ರ್ಮ]ರು[ತ್] ಭರತ[ಸ್ಸು]ಹೋತ್ರಃ ರಾಮೋ ದಿಲೀಪೋ ಸಗರ ರಂತಿ ರಾಮ[ಃ] ಯಯಾತಿ ಮಾಂಧಾತ ಭಗೀರಥ[ಶ್ಚ] ಎಂದುದಾಗಿ, ಗಯ, ಅಂಬರೀಷ, ಶಶಬಿಂದು, ಪೃಥು, ಮರುತ್, ಭರತ, ಸುಹೋತ್ರ, ಪರಶುರಾಮ, ದಿಲೀಪ, ಸಗರ, ರಂತಿ, ರಾಮಚಂದ್ರ, ಯಯಾತಿ, ಮಾಂಧಾತ, ಭಗೀರಥ, ಅ[ಂಗದ] ಇವರು ಹದಿನಾರು ಮಂದಿ ಅರಸುಗಳು. ಹದಿನೈದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೈದು ಎಂದರೆ ತಿಥಿಗಳು. ಅದು ಎಂತೆಂದಡೆ: ಪಾಡ್ಯ, ಬಿದಿಗೆ, ತದಿಗೆ, ಚವುತಿ, [ಪಂಚಮಿ], ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಅಮಾವಾಸ್ಯೆ ಇವು ಹದಿನೈದು ತಿಥಿಗಳು. ಹದಿನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾಲಕ್ಕು ಎಂದರೆ ಲೋಕಂಗಳು. ಅದು ಎಂತೆಂದಡೆ: ಅತಲ ವಿತಲ ಸುತಲ ತಲಾತಲ ಮಹಾತಲ ರಸಾತಲ ಪಾತಾಳ ಭೂಲೋಕ ಭುವರ್ಲೋಕ ಸುರ್ವರ್ಲೋಕ ಮಹರ್ಲೋಕ ತಪೋಲೋಕ ಜನೋಲೋಕ ಸತ್ಯಲೋಕ ಇವು ಹದಿನಾಲ್ಕು ಲೋಕಂಗಳು. ಹದಿಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೆನಪ್ಪ ? ಹದಿಮೂರು ಎಂದರೆ ಚಕ್ರಂಗಳು. ಅದು ಎಂತೆಂದಡೆ, ಆಧಾರಚಕ್ರ, ಸ್ವಾಷ್ಠಾನಚಕ್ರ, ಮಣಿಪೂರಕಚಕ್ರ, ಅನಾಹಚಕ್ರ, ವಿಶುದ್ಧಿಚಕ್ರ, ಆಜ್ಞಾಚಕ್ರ, ಶಿಖಾಚಕ್ರ, ಬ್ರಹ್ಮಚಕ್ರ, ಘಟಚಕ್ರ, ಕಾಲಚಕ್ರ, ಮೇಘಚಕ್ರ, ಭೂಚಕ್ರ, ಅವಗಡಚಕ್ರ ಇವು ಹದಿಮೂರು ಚಕ್ರಂಗಳು. ಹನ್ನೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹನ್ನೆರಡು ಎಂದರೆ ಮಾಸಂಗಳು. ಅದು ಎಂತೆಂದರೆ, ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ, ಕಾರ್ತೀಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಇವು ಹನ್ನೆರಡು ಮಾಸಂಗಳು. ಹನ್ನೊಂದು ಎಂದರೆ ನೋಡಿದ್ದೇನಪ್ಪ ? ಕೇಳಿದ್ದೇನಪ್ಪ ? ಹನ್ನೊಂದು ಎಂದರೆ ಭಾರತಂಗಳು. ಅದು ಎಂತೆಂದಡೆ: ಆದಿಭಾರತ, ಕೈಲಾಸಭಾರತ, ಶ್ರೀರುದ್ರಭಾರತ, ನಂದಿಭಾರತ, ನಾರ[ದ]ಭಾರ[ತ], ಭೃಗುಭಾರತ, ಮನುಭಾರತ, ಉಮಾಭಾರತ, ಪ್ರಸಿದ್ಧಭಾರತ, ಸಿದ್ಧೋರಗಭಾರತ, ಶ್ರೀರಂಗಭಾರತ ಇವು ಹನ್ನೊಂದು ಭಾರತಂಗಳು. ಹತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹತ್ತು ಎಂದರೆ, ದಶಾವತಾರಂಗಳು. ಅದು ಎಂತೆಂದರೆ, ಗ್ರಂಥ || ಮತ್ಸ್ಯಃ ಕೂರ್ಮಃ ವರಾಹಶ್ಚ ನಾರಸಿಂಹಶ್ಚ ವಾಮನಃ ರಾಮೋ ರಾಮಶ್ಚ [ಕೃಷ್ಣ]ಶ್ಚ ಬೌದ್ಧಃ ಕಲ್ಕಿ[ರೇ]ವ ಚ ಎಂದುದಾಗಿ, ಈ ದಶಾವತಾರಂಗಳಲ್ಲಿ ಯಾರಾರು ಸಂಹಾರ ಎಂದರೆ, ಮತ್ಯ್ಸಾವತಾರದಲ್ಲಿ ಅಮೃತಮಥನೇ ಸೋಮಕಾಸುರನ ಸಂಹಾರ. ಕೂರ್ಮಾವತಾರದಲ್ಲಿ ಮಂದರಪರ್ವತಕ್ಕೆ ಆಧಾರ. ವರಾಹಾವತಾರದಲ್ಲಿ ಹಿರಣ್ಯಾಕ್ಷನ ಸಂಹಾರ. ನರಸಿಂಹಾವತಾರದಲ್ಲಿ ಹಿರಣ್ಯಕಶ್ಯಪ ಸಂಹಾರ. ವಾಮನಾವತಾರದಲ್ಲಿ ಪಂಚಮೇಢ್ರಾಸುರ ಎಂಬ ರಾಕ್ಷಸನ ಸಂಹಾರ. ಪರಶುರಾಮಾವತಾರದಲ್ಲಿ ಕಾರ್ತವೀರ್ಯರ ಸಂಹಾರ. ರಫ್ಸುರಾಮಾವತಾರದಲ್ಲಿ ರಾವಣಕುಂಭಕರ್ಣರ ಸಂಹಾರ. 1ಬಲಭದ್ರ1 ನವತಾರದಲ್ಲಿ ಪ್ರಲಂಬಕವಾದ ಅಸುರರ ಸಂಹಾರ. ಬೌದ್ಧಾವತಾರದಲ್ಲಿ ತ್ರಿಪುರದಾನವಸತಿಯರ ಕೆಡಿಸಿದ. ಕಲ್ಕ್ಯವತಾರದಲ್ಲಿ 2ಕಂಸಾಸುರ, ನರಕಾಸುರ, ಬಾಣಾಸುರರ2 ಸಂಹಾರ, ಇವು ಹತ್ತು ದಶಾವತಾರಗಳು. ಒಂಬತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಒಂಬತ್ತು ಎಂದರೆ ನವಗ್ರಹಂಗಳು. ಅದು ಎಂತೆಂದರೆ: ಆದಿತ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ, ರಾಹು, ಕೇತು- ಇವು ಒಂಬತ್ತು ನವಗ್ರಹಂಗಳು. ಎಂಟು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಎಂಟು ಎಂದರೆ ಅಷ್ಟದಿಕ್ಪಾಲಕರು. ಅದು ಎಂತೆಂದರೆ: ಇಂದ್ರ, ಅಗ್ನಿ, ಯಮ, ನೈರುತಿ, ವರುಣ, ವಾಯುವ್ಯ, ಕುಬೇರ, ಈಶಾನ್ಯ- ಎಂಟು ಮಂದಿ ಅಷ್ಟದಿಕ್ಪಾಲಕರು. ಏಳು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಏಳು ಎಂದರೆ ಸಪ್ತಋಷಿಗಳು. ಅದು ಎಂತೆಂದರೆ: ಗ್ರಂಥ || ಕಶ್ಯಪಾತ್ರಿ ಭರದ್ವಾಜ[ಃ] ವಿಶ್ವಾಮಿ[ತ್ರಶ್ಚ] ಗೌತಮ[ಃ] ಜಮದಗ್ನಿ[ಃ] ವಸಿಷ್ಠ[ಶ್ಚ] ಸಪ್ತೈತೇ ಋಷಯ[ಃ ಸ್ಮøತಾಃ] ಎಂದುದಾಗಿ, ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ- ಇವರು ಏಳುಮಂದಿ ಸಪ್ತ ಋಷಿಗಳು. ಆರು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಆರು ಎಂದರೆ ಶಾಸತ್ತ್ರಂಗಳು. ಅದು ಎಂತೆಂದರೆ: ಶಿಲ್ಪಶಾಸ್ತ್ರ, ಭರತಶಾಸ್ತ್ರ, ತರ್ಕಶಾಸ್ತ್ರ, ಶಬ್ದಶಾಸ್ತ್ರ, ಆ[ನ್ವೀಕ್ಷಕೀ]ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ- ಇವು ಆರು ಶಾಸ್ತ್ರಂಗಳು. ಐದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಐದು ಎಂದರೆ ಈಶ್ವರನ ಪಂಚ ಮುಖಂಗಳು ಅದು ಎಂತೆಂದರೆ, ಗ್ರಂಥ || ಸದ್ಯೋಜಾ[ತೋ]ದ್ಭವೋರ್ಭೂಮಿಃ] ವಾಮದೇವೋದ್ಭ[ವಂ ಜಲಂ] ಅಫ್ಸೋ[ರಾದ್ವಹ್ನಿ]ರು[ದ್ಭೂತಂ] ತತ್ಪರು[ಷಾದ್ವಾಯುರ್ಭವೇತ್ ಈಶಾನಾದ್ಗಗನಂ ಜಾತಂ] ಎಂದುದಾಗಿ, ಸದ್ಯೋಜಾತಮುಖ, ವಾಮದೇವಮುಖ, ಅಘೋರಮುಖ, ತತ್ಪುರುಷಮುಖ, ಈಶಾನ್ಯಮುಖ- ಇವು ಐದು ಪಂಚಮುಖಂಗಳು. ನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ನಾಲಕ್ಕು ಎಂದರೆ ವೇದಂಗಳು. ಅದು ಎಂತೆಂದರೆ: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ- ಇವು ನಾಲ್ಕು ವೇದಂಗಳು. ಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಮೂರು ಎಂದರೆ ತ್ರಿಮೂರ್ತಿಗಳು. ಅದು ಎಂತೆಂದರೆ: ಬ್ರಹ್ಮ, ವಿಷ್ಣು, ಈಶ್ವರ- ಇವರು ಮೂವರು ತ್ರಿಮೂರ್ತಿಗಳು. ಎರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಎರಡು ಎಂದರೆ ಭಾನು ಶಶಿ. ಅದು ಎಂತೆಂದರೆ: ಸೂರ್ಯ, ಚಂದ್ರ- ಇವರಿಬ್ಬರು ಸೂರ್ಯಚಂದ್ರಾದಿಗಳು. ಒಂದು ಎಂದರೆ ನೋಡಿದ್ದೆನಪ್ಪ ಕೇಳಿದ್ದೇನಪ್ಪ ? ಒಂದು ಎಂದರೆ ಏಕೋ[ಏವ]ದೇವಃ ಅದು ಎಂತೆಂದರೆ: ದೇವನು ಒಬ್ಬನೇ. ದೇವನು] ಒಬ್ಬನೇ ಅಲ್ಲದೆ ಇಬ್ಬರೆಂದು ಬಗುಳುವನ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ನುಡಿದೆಹೆನೆಂಬ ಉಲುಹಿನ ಗಲಭೆಯ ತೋಟಿ ಬಿಡದು. ಉತ್ತಮ ಮಧ್ಯಮ ಕನಿಷ್ಠವೆಂಬುವ ತಿರುಗಿ ಕಂಡೆಹೆನೆಂಬ ಕಾಲಿನ ಎಡೆಯಾಟ ಬಿಡದು. ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು. ಈ ಉಭಯ ತೋಟಿಯ ನಾನಿನ್ನಾರಿಗೆ ಹೇಳುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಿನ್ನವಳಿದು ತನ್ನನರಿದು ತಾನಾದ ಶರಣನು ಸಚರಾಚರವೆಲ್ಲ ತನ್ನ ನಿರ್ಮಿತವೆಂದು ಕಾಂಬುವನಲ್ಲದೆ ಬೇರೊಂದು ಕುರುಪಿಟ್ಟು ಹೇಳುವನಲ್ಲ ಕಾಣಾ. ಅಕಾಯಚರಿತ್ರನಾದ ಅನುಪಮಸುಖಿ ತನಗೊಮ್ಮೆ ಹಿರಿದುಕಿರಿದು ಉತ್ತಮ ಮಧ್ಯಮ ಕನಿಷ್ಠವೆಂಬವೇನು ಕಾಣದಿರ್ದವು ನೋಡಾ. ಈ ನಿಲವು ನಿಲುಕದ ಕುಲಾದಿ ಮದಯುಕ್ತರು ಶರಣಸ್ಥಲವ ತೋರಿ ನಡೆವರು. ಇವರೆತ್ತ ಹೋಗುವರು ಎತ್ತ ಬರುವರು ಹೇಳಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬ್ರಹ್ಮ ಸೋರೆಯಾಗಿ, ವಿಷ್ಣು ದಂಡವಾಗಿ, ಸಕಲದೇವತಾಕುಲ ದಾರವಾಗಿ, ಶ್ರುತಿನಾದ ವಸ್ತುವಾಗಿ ತೋರುತ್ತಿರೆ, ತನ್ನ ಲೀಲೆಯಿಂದ, ಜಗಕ್ರೀಡಾಭಾವದಿಂದ ಒಂದಕ್ಕೊಂದು ಸೇರಿಸಿ, ಉತ್ತಮ ಕನಿಷ್ಠ ಮಧ್ಯಮವೆಂಬ ತ್ರಿವಿಧಮೂರ್ತಿಯಾಗಿ, ಕಲ್ಪಿಸಿದ ಜಗ ಹಾಹೆಯಿಂದ ಎಂಬುದನರಿಯದೆ, ಮಲಕ್ಕೂ ನಿರ್ಮಲಕ್ಕೂ ಸರಿಯೆನಬಹುದೆ? ವಾದಕ್ಕೆ ಈ ತೆರ ಅರಿದಡೆ ಆ ತೆರ. ಸದಾಶಿವಮೂರ್ತಿಲಿಂಗವು ಅತ್ಯತಿಷ್ಠದ್ದಶಾಂಗುಲವು.
--------------
ಅರಿವಿನ ಮಾರಿತಂದೆ
ಶಿವಶಿವಾ ದ್ವಿಜರೆಂಬ ಪಾತಕರು ನೀವು ಕೇಳಿ ಭೋ ! ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು, `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂದು, ಬಳ್ಳಿಟ್ಟು ಬಾಸ್ಕಳಗೆಡವುತಿಪ್ಪಿರಿ ನೋಡಾ. `ಆದಿ ಬಿಂದುದ್ಭವೇ ಬೀಜಂ' ಎಂಬ ಶ್ರುತಿಯಿಂ ತಿಳಿದು ನೋಡಲು ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ ನಿಮ್ಮ ಪಿಂಡ ಉದಯಿಸಿತ್ತು. ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ ? ಅದೂ ಅಲ್ಲದೆ ಪಿಂಡ ಒಂಬತ್ತು ತಿಂಗಳು ಒಡಲೊಳಗೆ ಕುರುಳು, ಮಲಮೂತ್ರ, ಕೀವು, ದುರ್ಗಂಧ, ರಕ್ತ ಖಂಡಕಾಳಿಜ ಜಂತುಗಳೊಳಗೆ, ಪಾತಾಳದೊಳಗಣ ಕ್ರಿಮಿಯಂತೆ ಹೊದಕುಳಿಗೊಂಬಂದು ನೀನಾವ ಕುಲ ಹೇಳಿರೆ ? ಅದುವಲ್ಲದೆ ಮೂತ್ರದ ಕುಳಿಯ ಹೊರವಡುವಾಗ, ಹೊಲೆ ಮುಂತಾಗಿ ಮುದುಡಿ ಬಿದಲ್ಲಿ, ಹೆತ್ತವಳು ಹೊಲತಿ, ಹುಟ್ಟಿದ ಮಗುವು ಹೊಲೆಯನೆಂದು ನಿಮ್ಮ ಕುಲಗೋತ್ರ ಮುಟ್ಟಲಮ್ಮದೆ, ಹನ್ನೆರಡು ದಿನದೊಂದು ಪ್ರಾಯಶ್ಚಿತ್ತವನಿಕ್ಕಿಸಿಕೊಂಡು ಬಂದು ನಿನ್ನಾವ ಕುಲ ಹೇಳಿರೆ ? ಮುಂಜಿಗಟ್ಟದ ಮುನ್ನ ಕೀಳುಜಾತಿ, ಮುಂಜಿಗಟ್ಟಿದ ಬಳಿಕ ಮೇಲುಜಾತಿಗಳು ಎಂಬ ಪಾತಕರು ನಿಮ್ಮ ನುಡಿ ಕೊರತೆಗೆ ನೀವು ನಾಚಬೇಡವೆ ? ನೀವು ನಾಚದಿರ್ದಡೆ ನಾ ನಿಮ್ಮ ಕುಲದ ಬೇರನೆತ್ತಿ , ತಲೆಕೆಳಗು ಮಾಡಿ ತೋರಿಹೆನು. ನಾನು ಉತ್ತಮದ ಬ್ರಾಹ್ಮಣರೆಂಬ ನಿಮ್ಮ ದೇಹ ಬ್ರಹ್ಮನೊ ? ನಿಮ್ಮ ಪ್ರಾಣ ಬ್ರಹ್ಮನೊ ? ಆವುದು ಬ್ರಾಹ್ಮಣ್ಯ ? ಬಲ್ಲಡೆ ಬಗುಳಿರಿ ! ಅರಿಯದಿರ್ದಡೆ ಕೇಳಿರಿ. ದೇಹ ಕುಲಜನೆಂದಡೆ ಚರ್ಮಕ್ಕೆ ಕುಲವಿಲ್ಲ, ಖಂಡಕ್ಕೆ ಕುಲವಿಲ್ಲ, ನರವಿಂಗೆ ಕುಲವಿಲ್ಲ, ರಕ್ತಕ್ಕೆ ಕುಲವಿಲ್ಲ, ಕೀವಿಂಗೆ ಕುಲವಿಲ್ಲ. ಕರುಳಿಂಗೆ ಕುಲವಿಲ್ಲ, ಮಲಮೂತ್ರಕ್ಕಂತೂ ಕುಲವಿಲ್ಲ, ಒಡಲೆಂಬುದು ಅಪವಿತ್ರವಾಯಿತ್ತು, ಕುಲವೆಲ್ಲಿಯದೊಡಲಿಂಗೆ ? ಅವಂತಿರಲಿ ; ಇನ್ನು ನಿಮ್ಮ ಪ್ರಾಣಕ್ಕೆ ಕುಲವುಂಟೆಂದಡೆ. ಪ್ರಾಣ ದಶವಾಯುವಾದ ಕಾರಣ, ಆ ವಾಯು ಹಾರುವನಲ್ಲ. ಅದುವಲ್ಲದೆ ನಿಮ್ಮ ಒಡಲನಲಗಾಗಿ ಇರಿವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳು ಉತ್ತಮ ಕುಲವೆಂಬ ಅವು ಮುನ್ನವೆ ಪಾಪಕಾರಿಗಳಾದ ಕಾರಣ, ಅವಕ್ಕೆ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಳಗಣ ಸಪ್ತವ್ಯಸನಂಗಳು ಉತ್ತಮ ಕುಲವೆಂಬ ಅವು ಮುನ್ನವೆ ದುರ್ವ್ಯಸನಂಗಳಾದ ಕಾರಣ, ಅದಕೆಂದೂ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮ ಅಷ್ಟಮದಂಗಳು ಉತ್ತಮ ಕುಲವೆಂಬ ಅವು ನಿನ್ನ ಸುರೆಯ ಸವಿದ ಕೋಡಗದ ಹಾಂಗೆ ನಿಮ್ಮ ಗಾಣಲೀಯವಾದ ಕಾರಣ, ಅವು ಕುಲವಿಲ್ಲ. ನಿಲ್ಲು ! ಬಗುಳದಿರು ! ಇನ್ನು ಒಡಲ ತಾಪತ್ರಯಂಗಳು ಉತ್ತಮ ಕುಲವೆಂಬ ಅವು ನಿಮ್ಮ ಇರಿದಿರಿದು ಸುಡುವ ಒಡಗಿಚ್ಚುಗಳು. ಅವು ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಡಲ ಮುಚ್ಚಿದ ಮಲಮೂತ್ರಂಗಳ ಕುಲವುಂಟೆ ? ಅವು ಅರಿಕೆಯಲಿ ಮಲಮೂತ್ರಂಗಳಾದ ಕಾರಣ, ಅವಕ್ಕೆ ಕುಲವಿಲ್ಲ ನಿಲ್ಲು ! ಮಾಣು ! ಇನ್ನು ಉಳಿದ ಅಂತಃಕರಣಂಗಳಿಗೆ ಉತ್ತಮ ಕುಲವೆಂಬಿರಿ. ಅವ ನೀವು ಕಾಣಿರಿ, ನಿಮ್ಮನವು ಕಾಣವು. ಅದು ಕಾರಣ ಬಯಲಭ್ರಮೆಗೆ ಉತ್ತಮ ಕುಲವುಂಟೆ ? ಇಲ್ಲ ! ಇಲ್ಲ !! ನಿಲ್ಲು ! ಮಾಣು ! ಇಂತು ನಿಮ್ಮ ಪಂಚಭೂತ ಸಪ್ತಧಾತು ಪಂಚೇಂದ್ರಿಯಂಗಳು ಉತ್ತಮ ಕುಲವೆಂಬ ಅವು ಎಲ್ಲಾ ಜೀವರಾಶಿಗೂ ನಿಮಗೂ ಒಂದೇ ಸಮಾನ. ಅದೆಂತೆಂದಡೆ : ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ನಿಮ್ಮ ದೇಹಕ್ಕೆ ಕುಲವಾವುದು ಹೇಳಿರೆ ! ಇದಲ್ಲದೆ ಆತ್ಮನು ದೇಹವ ಬಿಟ್ಟು, ಒಂದು ಘಳಿಗೆ ತೊಲಗಿರಲು ಆ ದೇಹ ಹಡಿಕೆಯಾಗಿ ಹುಳಿತು, ನಾಯಿ ನರಿ ತಿಂಬ ಕಾರಣ ನಿಮ್ಮ ದೇಹ ಅಪವಿತ್ರ ಕಾಣಿರೆ ! ಇಂತಪ್ಪ ಅಪವಿತ್ರ ಕಾರ್ಯಕ್ಕೆ ಕುಲವಿಲ್ಲ. ಆ ಕಾರ್ಯಕ್ಕೆ ಕುಲವುಂಟೆಂದಡೆ ಮೇಲುಜಾತಿಯ ದೇಹದೊಳಗೆ ಹಾಲುವುಳ್ಳಡೆ ಕೀಳುಜಾತಿಯ ದೇಹದೊಳಗೆ ರಕ್ತವುಳ್ಳಡೆ ಅದು ಕುಲವಹುದು ! ಅಂಥಾ ಗುಣ ನಿಮಗಿಲ್ಲವಾಗಿ, ಎಲ್ಲಾ ಜೀವರಾಶಿಯ ದೇಹವು, ನಿಮ್ಮ ದೇಹವು ಒಂದೇ ಸಮಾನವಾದ ಕಾರಣ ನಿಮಗೆ ಕುಲವಿಲ್ಲ ! ನಿಲ್ಲು ! ಮಾಣು ! ಒಡಲು ಕರಣಾದಿಗಳು ಕುಲವಿಲ್ಲದೆ ಹೋದಡೂ ಎಲ್ಲವೂ ಅರಿವ ಚೈತನ್ಯಾತ್ಮಕನೆ, ಸತ್ಕುಲಜನೆ ಆತ್ಮನು, ಆವ ಕುಲದೊಳಗೂ ಅಲ್ಲ. ಶರೀರ ಬೇರೆ, ಆತ್ಮ ಬೇರೆ. ಅದೆಂತೆಂದಡೆ : ಭೂದೇವಮೃದ್ಭಾಂಡಮನೇಕ ರೂಪಂ ಸುವರ್ಣಮೇಕಂ ಬಹುಭೂಷಣಾನಾಂ | ಗೋಕ್ಷೀರಮೇಕಂ ಬಹುವರ್ಣಧೇನುಃ | ಶರೀರಭೇದಸ್ತೆ ್ವೀಕಃ ಪರಮಾತ್ಮಾ || ಎಂದುದಾಗಿ, ಶರೀರಂಗಳು ಅನಂತ, ಆತ್ಮನೊಬ್ಬನೆ. ಅದು ಕಾರಣ, ಆ ಆತ್ಮನು ಆವ ಕುಲದಲ್ಲೂ ಅಲ್ಲ. ಇನ್ನು ಆವ ಠಾವಿನಲ್ಲಿ ನಿಮ್ಮ ಕುಲದ ಪ್ರತಿಷ್ಠೆಯ ಮಾಡಿ ತೋರಿವಿರೊ ? ದೇಹದ ಮೃತ್ತಿಕೆ ಆತ್ಮ ನಿರಾಕಾರನೆನುತ್ತಿರಲು, ಇನ್ನಾವ ಪರಿಯಲ್ಲಿ ನಾ ಉತ್ತಮ ಕುಲಜರೆಂಬಿರೊ ? ಜೀವಶ್ಶಿವೋ ಶಿವೋ ಜೀವಸ್ಸಜೀವಃ ಕೇವಲಃ ಶಿವಃ | ಪಾಶಬದ್ಧಸ್ಥಿತೋ ಜೀವಃ ಪಾಶಮುಕ್ತಃ ಸದಾಶಿವಃ || ಎಂಬ ಶ್ರುತಿಯಂ ತಿಳಿದು ನೋಡಲು, ನೀವೆಲ್ಲಾ ಪಾಶಬದ್ಧ ಜೀವಿಗಳಾಗುತ್ತ ಇರಲು, ನಿಮಗೆಲ್ಲಿಯ ಉತ್ತಮ ಕುಲ ? ಪಾಶಮುಕ್ತರಾದ ಎಮ್ಮ ಶಿವಭಕ್ತರೆ ಕುಲಜರಲ್ಲದೆ ನಿಮಗೆ ಉತ್ತಮ ಕುಲ ಉಂಟಾದಡೆ, ನಿಮ್ಮ ದೇಹದೊಳಗೆ ಹೊರಗೆ ಇಂಥಾ ಠಾವೆಂದು ಬೆರಳುಮಾಡಿ ತೋರಿ ! ಅದೂ ಅಲ್ಲದೆ ಒಂದು ಪಕ್ಷಿಯ ತತ್ತಿಯೊಳಗೆ ಹಲವು ಮರಿ ಹುಟ್ಟಿದಡೆ ಒಂದರ ಮರಿಯೋ, ಹಲವು ಪಕ್ಷಿಯ ಮರಿಯೋ ? ತಿಳಿದು ನೋಡಿದಡೆ ಅದಕ್ಕೆ ಬೇರೆ ಬೇರೆ ಪಕ್ಷಿಗಳೆಂಬ ಕುಲವಿಲ್ಲ. ಅಹಂಗೆ ಒಬ್ಬ ಬ್ರಹ್ಮನ ಅಂಡವೆಂಬ ತತ್ತಿಯೊಳಗೆ ಸಕಲ ಜೀವರಾಶಿ ಎಲ್ಲಾ ಉದಯಿಸಿದವು. ಅದೆಂತೆಂದಡೆ : ಪೃಥಿವ್ಯಾಕಾಶಯೋರ್ಭಾಂಡಂ ತಸ್ಯಾಂಡಂ ಜಾಯತೇ ಕುಲಂ | ಅಂತ್ಯಜಾತಿದ್ರ್ವಿಜಾತಿರ್ಯಾ ಏಕಯೋನಿಸಹೋದರಾ || ಎಂದುದಾಗಿ, ಇರುಹೆ ಮೊದಲು, ಆನೆ ಕಡೆಯಾದ ಸಚರಾಚರವೆಲ್ಲವು ಒಬ್ಬ ಬ್ರಹ್ಮನ ಅಂಡದೊಳಗೆ ಹುಟ್ಟಿ, ಏಕಯೋನಿ ಸಹೋದರರೆಂದು ಪ್ರತಿಷ್ಠಿಸುತ್ತಿರಲು, ನಿಮಗೆಲ್ಲಿಯ ಕುಲವೊ ? ಶಿವಭಕ್ತರೆ ಉತ್ತಮ ಕುಲಜರೆಂದು, ಮಿಕ್ಕಿನವರೆಲ್ಲಾ ಕೀಳುಜಾತಿ ಎಂಬುದನು ಓದಿ ಬರಿದೊರೆಯಾದಡು ನಾನು ನಿಮಗೆ ಹೇಳಿಹೆನು ಕೇಳಿ ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || ಎಂಬ ಶ್ರುತಿಗೆ ಇದಿರುತ್ತರವ ಕೊಟ್ಟಡೆ, ಬಾಯಲ್ಲಿ ಕಾಷ್ಟವ ಮೂಡುವುದಾಗಿ ನೀವೇ ಕೀಳುಜಾತಿಗಳು, ಅರಿದ ಶಿವಭಕ್ತರು ಸತ್ಕುಲಜರೆಂದು ಸುಮ್ಮನಿರಿರೋ. ಅಲ್ಲದ ಅಜ್ಞಾನರಾದುದೆಲ್ಲಾ ಒಂದು ಕುಲ. ಸುಜ್ಞಾನರಾದುದೆಲ್ಲಾ ಒಂದು ಕುಲವೆಂದು ಶಾಸ್ತ್ರಗಳು ಹೇಳುತ್ತಿದಾವೆ. ಅದೆಂತೆಂದಡೆ : ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಬ್ಥಿರ್ನರಾಣಾಂ | ಜ್ಞಾನಂ ಹಿ ತೇಷಾಂ ಅದ್ಥಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಬ್ಥಿಃ ಸಮಾನಾಃ || ಎಂದುದಾಗಿ, ಅಜ್ಞಾನತಂತುಗಳು ನೀವೆಲ್ಲರೂ ಕರ್ಮಪಾಶಬದ್ಧರು. ನಿಮಗೆಲ್ಲಿಯದೊ ಸತ್ಕುಲ ? ಇದು ಅಲ್ಲದೆ ನಿಮ್ಮ ನುಡಿಯೊಡನೆ ನಿಮಗೆ ಹಗೆಮಾಡಿ ತೋರಿಹೆನು. ಕೇಳೆಲವೊ ನಿಮಗೆ ಕುಲವು ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ, ಕೌಂಡಿಲ್ಯ, ಕಾಶ್ಯಪನೆಂಬ ಋಷಿಗಳಿಂದ ಬಂದಿತ್ತೆಂಬಿರಿ. ಅವರ ಪೂರ್ವವನೆತ್ತಿ ನುಡಿದಡೆ ಹುರುಳಿಲ್ಲ. ಅವರೆಲ್ಲಾ ಕೀಳುಜಾತಿಗಳಾದ ಕಾರಣ, ನೀವೇ ಋಷಿಮೂಲವನು, ನದಿಮೂಲವನೆತ್ತಲಾಗದೆಂಬಿರಿ. ಇನ್ನು ನಿಮ್ಮ ನುಡಿ ನಿಮಗೆ ಹಗೆಯಾಯಿತ್ತೆಂದೆ ಕೇಳಿರೊ. ಆ ಋಷಿಗಳ ಸಂತಾನವಾಗಿ ನಿಮ್ಮ ಮೂಲವನೆತ್ತಿದಡೂ ಹುರುಳಿಲ್ಲ. ಅದಂತಿರಲಿ. ನಿಮ್ಮ ಕುಲಕೆ ಗುರುವೆನಿಸುವ ಋಷಿಗಳೆಲ್ಲರೂ ಲಿಂಗವಲ್ಲದೆ ಪೂಜಿಸರು, ವಿಭೂತಿ ರುದ್ರಾಕ್ಷಿಯನಲ್ಲದೆ ಧರಿಸರು, ಪಂಚಾಕ್ಷರಿಯನಲ್ಲದೆ ಜಪಿಸರು, ಜಡೆಯನ್ನಲ್ಲದೆ ಕಟ್ಟರು. ಹಾಗೆ ನೀವು ಲಿಂಗವ ಪೂಜಿಸಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಪಂಚಾಕ್ಷರಿಯ ಜಪಿಸಿ, ಜಡೆಯ ಕಟ್ಟಿ, ಈಶ್ವರನ ಲಾಂಛನವ ಧರಿಸಿದಡೆ ನೀವು ಋಷಿಮೂಲದವರಹುದು. ಹೇಗಾದಡೂ ಅನುಸರಿಸಿಕೊಳಬಹುದು. ಅದು ನಿಮಗಲ್ಲದ ಮಟ್ಟಿಯನ್ನಿಟ್ಟು ವಿಷ್ಣುವಂ ಪೂಜಿಸಿ ಮುಡುಹಂ ಸುಡಿಸಿಕೊಂಡು, ಸಾಲಿಗ್ರಾಮ, ಶಕ್ತಿ, ಲಕ್ಷ್ಮಿ, ದುರ್ಗಿ ಎಂಬ ಕಿರುಕುಳದೈವವಂ ಪೂಜಿಸಿ, ನರಕಕ್ಕಿಳಿದು ಹೋಹರಾದ ಕಾರಣ, ನೀವೇ ಹೀನಜಾತಿಗಳು. ನಿಮ್ಮ ಋಷಿಮಾರ್ಗವ ವಿಚಾರಿಸಿ ನಡೆಯಿರಾಗಿ ನೀವೇ ಲಿಂಗದ್ರೋಹಿಗಳು. ಲಿಂಗವೆ ದೈವವೆಂದು ಏಕನಿಷ್ಠೆಯಿಂದಲಿರಿರಾಗಿ ನೀವೇ ಲಿಂಗದ್ರೋಹಿಗಳು. ಪಂಚಾಕ್ಷರಿಯ ನೆನೆಯಿರಾಗಿ ಮಂತ್ರದ್ರೋಹಿಗಳು. ರುದ್ರಾಕ್ಷಿಯ ಧರಿಸರಾದ ಕಾರಣ ನೀವು ಶಿವಲಾಂಛನ ದ್ರೋಹಿಗಳು. ಶಿವಭಕ್ತರಿಗೆರಗದ ಕಾರಣ ನೀವು ಶಿವಭಕ್ತರಿಗೆ ದ್ರೋಹಿಗಳು. ನಿಮ್ಮ ಮುಖವ ನೋಡಲಾಗದು. ಬರಿದೆ ಬ್ರಹ್ಮವನಾಚರಿಸಿ ನಾವು ಬ್ರಹ್ಮರೆಂದೆಂಬಿರಿ. ಬ್ರಹ್ಮವೆಂತಿಪ್ಪುದೆಂದರಿಯಿರಿ. ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಸತ್ಯಂ ಬ್ರಹ್ಮ ಶುಚಿಬ್ರ್ರಹ್ಮ ಇಂದ್ರಿಯನಿಗ್ರಹಃ | ಸರ್ವಜೀವದಯಾಬ್ರಹ್ಮ ಇತೈ ್ಯೀದ್ಬ್ರಹ್ಮ ಲಕ್ಷಣಂ | ಸತ್ಯಂ ನಾಸ್ತಿ ಶುಚಿರ್ನಾಸ್ತಿ ನಾಸ್ತಿ ಚೇಂದ್ರಿಯ ನಿಗ್ರಹಃ | ಸರ್ವಜೀವ ದಯಾ ನಾಸ್ತಿ ಏತಚ್ಚಾಂಡಾಲ ಲಕ್ಷಣಂ || ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಬ್ರಹ್ಮವೆ ನಿಃಕರ್ಮ, ನೀವೇ ಕರ್ಮಿಗಳು. ಮತ್ತೆಂತೊ `ಬ್ರಹ್ಮಂ ಚರೇತಿ ಬ್ರಹ್ಮಣಾಂ' ಎಂದು ಗಳವುತ್ತಿಹಿರಿ. ಗಾಯತ್ರಿಯ ಜಪಿಸಿ ನಾವು ಕುಲಜರೆಂಬಿರಿ. ಆ ಗಾಯತ್ರಿ ಕರ್ಮವಲ್ಲದೆ ಮುಕ್ತಿಗೆ ಕಾರಣವಿಲ್ಲ. ಅಂತು ಗಾಯತ್ರಿಯಿಂದ ನೀವು ಕುಲಜರಲ್ಲ. ವೇದವನೋದಿ ನಾವೇ ಬ್ರಹ್ಮರಾದೆವೆಂಬಿರಿ. ವೇದ ಹೇಳಿದ ಹಾಂಗೇ ನಡೆಯಿರಿ. ಅದೆಂತೆಂದಡೆ : ``ದ್ಯಾವಾಭೂವಿೂ ಜನಯನ್ ದೇವ ಏಕಃ'' ಎಂದೋದಿ ಮರದು, ವಿಷ್ಣು ವನೆ ಭಜಿಸುವಿರಿ. ನೀವೇ ವೇದವಿರುದ್ಧಿಗಳು. ``ವಿಶ್ವತೋ ಮುಖ ವಿಶ್ವತೋ ಚಕ್ಷು ವಿಶ್ವತೋ ಬಾಹು'' ಎಂದೋದಿ ಮತ್ತೆ , ``ಏಕೋ ರುದ್ರೋ ನ ದ್ವಿತೀಯಾಯ ತಸ್ಥೇ'' ಎಂದು ಮರದು, ಬೇರೊಬ್ಬ ದೈವ ಉಂಟೆಂದು ಗಳಹುತ್ತಿದಿರಿ. ನೀವೇ ವೇದದ್ರೋಹಿಗಳು. ``ಏಕಮೇವಾದ್ವಿತಿಯಂ ಬ್ರಹ್ಮ''ವೆಂದೋದಿ, ಕರ್ಮದಲ್ಲಿ ಸಿಕ್ಕಿದೀರಿ. ನೀವೇ ದುಃಕರ್ಮಿಗಳು. ``ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ |'' ಎಂದೋದಿ, ಅನ್ಯಪೂಜೆಯ ಮಾಡುತಿದೀರಿ. ನೀವೇ ಪತಿತರು. ``ಶಿವೋ ಮೇ ಪಿತಾ'' ಎಂದೋದಿ, ಸನ್ಯಾಸಿಗಳಿಗೆ ಮಕ್ಕಳೆಂದಿರಿ. ನೀವೇ ಶಾಸ್ತ್ರವಿರುದ್ಧಿಗಳು. ಸದ್ಯೋಜಾತದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ | ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಎಂದೋದಿ, ಸರ್ವವಿಷ್ಣುಮಯ ಎನ್ನುತ್ತಿಪ್ಪಿರಿ. ನಿಮ್ಮಿಂದ ಬಿಟ್ಟು ಶಿವದ್ರೋಹಿಗಳಾರೊ ? ``ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ |'' ಎಂದೋದಿ, ಮರದು ವಿಭೂತಿಯ ನೀಡಲೊಲ್ಲದೆ ಮಟ್ಟಿಯಂ ನೀಡುವಿರಿ. ನಿಮ್ಮಿಂದ ಪತಿತರಿನ್ನಾರೊ ? ``ರುದ್ರಾಕ್ಷಧಾರಣಾತ್ ರುದ್ರಃ'' ಎಂಬುದನೋದಿ ರುದ್ರಾಕ್ಷಿಯಂ ಧರಿಸಲೊಲ್ಲದೆ, ಪದ್ಮಾಕ್ಷಿ ತೊಳಸಿಯ ಮಣಿಯಂ ಕಟ್ಟಿಕೊಂಬಿರಿ. ನಿಮ್ಮಿಂದ ಪಾಪಿಗಳಿನ್ನಾರೊ ? ``ಪಂಚಾಕ್ಷರಸಮಂ ಮಂತ್ರಂ ನಾಸ್ತೀ ತತ್ವಂ ಮಹಾಮುನೇ '' ಎಂಬುದನೋದಿ, ಪಂಚಾಕ್ಷರಿಯ ಜಪಿಸಲೊಲ್ಲದೆ, ಗೋಪಳಾ ಮಂತ್ರವ ನೆನವಿರಿ ಎಂತೊ ? ನಿಮ್ಮ ನುಡಿ ನಿಮಗೆ ವಿರುದ್ಧವಾಗಿರಲು, ನಿಮ್ಮ ಓದು ವೇದ ನಿಮಗೆ ವಿರುದ್ಧವಾಗಿರಲು, ನಿಮ್ಮ ಉತ್ತಮ ಕುಲಜರೆಂದು ವಂದಿಸಿದವರಿಗೆ ಶೂಕರ ಜನ್ಮದಲ್ಲಿ ಬಪ್ಪುದು ತಪ್ಪದು ನೋಡಿರೆ ! ವಿಪ್ರಾಣಾಂ ದರಿಶನೇ ಕಾಲೇ ಪಾಪಂ ಭುಂಜಂತಿ ಪೂಜಕಾಃ | ವಿಪ್ರಾಣಾಂ ವದನೇನೈವ ಕೋಟಿಜನ್ಮನಿ ಶೂಕರಃ || ಇಂತೆಂದುದಾಗಿ, ನಿಮ್ಮೊಡನೆ ಮಾತನಾಡಿದಡೆ ಪಂಚಮಹಾಪಾತಕಃ ನಿಮ್ಮ ಮುಖವ ನೋಡಿದಡೆ ಅಘೋರನರಕ. ಅದೆಂತೆಂದಡೆ : ಒಬ್ಬ ಹಾರುವನ ದಾರಿಯಲ್ಲಿ ಕಂಡದಿರೆ ಇರಿದು ಕೆಡಹಿದಲ್ಲದೆ ಹೋಗಬಾರದೆಂದು ನಿಮ್ಮ ವಾಕ್ಯವೆಂಬ ನೇಣಿಂದ ಹೆಡಗುಡಿಯ ಕಟ್ಟಿಸಿಕೊಳುತಿಪ್ಪಿರಿ. ಮತ್ತು ನಿಮ್ಮ ದುಶ್ಯರೀರತ್ರಯವನೆಣಿಸುವಡೆ ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬುದ ನೀವೇ ಓದಿ, ಪ್ರಾಣಿಯಂ ಕೊಂದು ಯಾಗವನ್ನಿಕ್ಕಿ, ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ, ಕೊಬ್ಬು ಬೆಳೆದ ಸವಿಯುಳ್ಳ ಖಂಡವನೆ ತಿಂದು, ಸೋಮಪಾನವೆಂಬ ಸುರೆಯನೆ ಕುಡಿದು, ನೊಸಲಕಣ್ಣ ತೋರುವಂತಹ ಶಿವಭಕ್ತನಾದಡೂ ನಿಂದಿಸಿ ನುಡಿವುತಿಪ್ಪಿರಿ. ನಿಮ್ಮೊಡನೆ ನುಡಿವಡೆ ಗುರುಲಿಂಗವಿಲ್ಲದವರು ನುಡಿವರಲ್ಲದೆ, ಗುರುಲಿಂಗವುಳ್ಳವರು ನುಡಿವರೆ ? ಇದು ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಲು, ನೀವೇ ಪಂಚಮಹಾಪಾತಕರು. ಶಿವಭಕ್ತಿಯರಿಯದ ನರರು ಪೀನಕುರಿಗಳು. ನಿಮ್ಮಿಂದ ಏಳುಬೆಲೆ ಹೊರಗಾದ ಹೊಲೆಯನೆ ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು, ಎತ್ತಿರೊ ಸತ್ಯವುಳ್ಳಡೆ ! ಅಲ್ಲದಡೆ ನಿಮ್ಮ ಬಾಯಬಾಲವ ಮುಚ್ಚಿಕೊಳ್ಳಿರೆ. ಎಮ್ಮ ಶಿವಭಕ್ತರೇ ಅದ್ಥಿಕರು, ಎಮ್ಮ ಶಿವಭಕ್ತರೇ ಕುಲಜರು, ಎಮ್ಮ ಶಿವಭಕ್ತರೇ ಸದಾಚಾರಿಗಳು, ಎಮ್ಮ ಶಿವಭಕ್ತರೇ ಪಾಪರಹಿತರು, ಎಮ್ಮ ಶಿವಭಕ್ತರೇ ಸರ್ವಜೀವ ದಯಾಪಾರಿಗಳು, ಎಮ್ಮ ಶಿವಭಕ್ತರೇ ಸದ್ಯೋನ್ಮುಕ್ತರಯ್ಯಾ, ಘನಗುರು ಶಿವಲಿಂಗ ರಾಮನಾಥ.
--------------
ವೀರಶಂಕರದಾಸಯ್ಯ
ಮತ್ತಮಾ ಮಂತ್ರಂಗಳಿಂ ಕರನ್ಯಾಸ ದೇಹನ್ಯಾಸ ಅಂಗನ್ಯಾಸಮೆಂಬ ನ್ಯಾಸತ್ರಯಂಗಳ ಉತ್ರತ್ತಿ ಸ್ಥಿತಿ ಸಂಹಾರ ಭೇದಂಗಂಳಂ ಪೂರ್ವೋಕ್ತ ಕ್ರಮ ದಿಂದರಿದು ವಿಸ್ತರಿಸುವದರಲ್ಲಿ ಗೃಹಸ್ಥಂಗೆ ಮುತ್ತೈದೆ ವಿಧವೆಯರಿಗೆ ಸ್ಥಿತಿನ್ಯಾಸ ವಹುದು, ಬ್ರಹ್ಮಚಾರಿಗೆ ಉತ್ಪನ್ಯಾಸವಹುದು, ವಾನಪ್ರಸ್ಥ ಯತಿಗಳಿಗೆ ಸಂಹಾರ ನ್ಯಾಸ ವಹದೆಂದನುವದಿಸಿ, ಬಳಿಕ ಅಗುಷ್ಠದಿಂ ಮೋಕ್ಷ, ತರ್ಜನಿಯಿಂ ಶತ್ರು ಹಾನಿ, ಮಧ್ಯಾಂಗುಲಿಯಿಂದರ್ಥಸಿದ್ಥಿ, ಅನಾಮಿಕೆಯಿಂ ಶಾಂತಿ, ಕನಿಷ್ಠದಿಂ ರಕ್ಷಣೆಗಳಪ್ಪವಲ್ಲಿ, ಮಧ್ಯಾಂಗುಷ್ಠ ಯೋಗದಿಂ ಮಾಲಿಕೆಯಂ ಪಿಡಿದು ಜಪಂಗೆಯ್ವುದೆ ಕನಿಷ್ಠ ವೆನಿಸೂದು. ತರ್ಜನ್ಯಂಗುಷ್ಠ ಯೋಗದಿಂ ಜಪಿಸೂದೆ ಮಧ್ಯಮವೆನಿಸೂದು. ಅನಾಮ್ಯಂಗುಷ್ಠ ಯೋಗದಿಂ ಜಪಂಗೆಯ್ವುದೆ ಉತ್ತಮ ವೆನಿಸೂದು. ಬಳಿಕಲ್ಲಿ ಮಧ್ಯಾಂಗುಷ್ಠಂಗಳಿಂ ಭಾಷ್ಯಜಪಂಗೆಯು, ತರ್ಜನ್ಯಂ ಗುಷ್ಠಂಗಳಿಂದುಪಾಂಶು ಜಪಂಗೆಯ್ವುದು, ಅನಾಮಿಕೆ ಮಧ್ಯಾಂಗುಷ್ಠಂಗಳಿಂ ಮಾನಸೆಜಪಂಗೆಯ್ವುದವರ ಅಲ್ಲಿ ಪರಶ್ರುತಿ ಗೋಚರವಪ್ಪುದೆ ಉಚ್ಚರಿಪುದೆ ವಾಚಕವಹುದು, ಸ್ವಶ್ರುತಿಸಾರವಾಗಿ ಓಷ್ಟ ಸ್ಪಂದನಮಾಗುಚ್ಚರಿಪುದೆ ಉಪಾಂಶುವಹುದು, ಮಂತ್ರವಾಕ್ಯಾರ್ಥಚಿಂತನಂಗೆಯ್ವುದೆ ಮಾನಸವಹುದು. ಅವರೊಳಗೆ ವಾಚಕಜಪವೆ ಕ್ಷುದ್ರಕಾರ್ಯಂಗಳಿಗೆ, ಉಪಾಂಶುಜಪವೆ ಸಕಲಸಿದ್ಧಿ ಗಳಿಗೆ, ಮಾನಸಜಪವೆ ಮುಕ್ತಿಗಹುದೆಂದು ನಿಯಾಮಿಸಿ ಜಪಂಗೆಯ್ವುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಉತ್ತಮ ಮಧ್ಯಮ ಕನಿಷ್ಟವೆಂದು, ಬಂದ ಜಂಗಮವನೆಂದೆನಾದಡೆ ನೊಂದೆನಯ್ಯಾ, ಬೆಂದೆಯಯ್ಯಾ, ಎನ್ನ ಕಿಚ್ಚು ಎನ್ನ ಸುಟ್ಟಿತ್ತು. ಸುಖಿಜಂಗಮ, ಸಾಮಾನ್ಯಜಂಗಮ ಉಂಟೆ, ಕೂಡಲಸಂಗಮದೇವಾ 401
--------------
ಬಸವಣ್ಣ
ವೈಶೇಷಿಕವೇ ದ್ರವ್ಯ ಗುಣ, ಕರ್ಮ ಸಾಮಾನ್ಯ ವಿಶೇಷ ಸಮವಾಯವೆಂಬ ಷಟ್ಪದಾರ್ಥ ಪ್ರತಿಪಾದಕತ್ವದಿಂ, ಪ್ರಪಂಚ ಸ್ವರೂಪಮಂ ವಿಭಾಗಿಸುತ್ತಿರ್ಕುಂ, ಬಳಿಕ ಕಪಿಲ ಪತಂಜಲಿ ವ್ಯಾಸರೆಂಬ ಮುನಿಗಳಿಂ ಕ್ರಮದಿಂ ನಿರೂಪಿತಂಗಳಾದ ಸಾಂಖ್ಯ ಪಾತಂಜಲ ವೇದಾಂತಗಳೆಂಬ ಆತ್ಮಜ್ಞಾನಫಲವಾಗುಳ್ಳವೆ ಆದ್ಯಾತ್ಮಿಕ ಶಾಸ್ತ್ರ ತ್ರಯಂಗಳವರಲ್ಲಿ ಸಾಂಖ್ಯವೆ ನಿತ್ಯನಿರ್ಮಲರಾದಾತ್ಮರ ಸನ್ನಿಧಾನದಿಂ ಗುಣ ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಸನ್ನಿಧಾನದಿಂ ಗುಣ ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಜಗವಾಗಿ ವ್ಯವಹರಿಸೂದೆ ಸಂಸಾರ ಬಂಧವೆಂಬುದಂ ಸತ್ವಾದಿ ಗುಣತ್ರಯಾನುಕ್ರಮದಿಂ ಶ್ಲೇಷ್ಮಪ್ರಕೃತಿ ಪಿತ್ತಪ್ರಕೃತಿ ವಾತಪ್ರಕೃತಿ[ಗಳುಳ್ಳ] ಶಾಂತಿಕ್ರೋಧಮೂಢತ್ವಾದಿ ಗುಣಾದಿಗಳಾದ ಉತ್ತಮ ಮಧ್ಯಮ ಅಧಮ....ತ್ರಯದ....ಮೊದಲಾದವಂ ವಿಭಾಗಿಸೂ ದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ : ಪ್ರಾಕೃತಪ್ರಾಣಾಯಾಮವೆಂದು, ವೈಕೃತಪ್ರಾಣಾಯಾಮವೆಂದು, ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು, ಮೂರು ಪ್ರಕಾರವಾಗಿರ್ಪುದದೆಂತೆನೆ : ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಹಂಸ ಹಂಸವೆಂದುಚ್ಚರಿಸುವ ಅಹಂಕಾರಾತ್ಮಕವಾದ ಜೀವಜಪವೇ ಪ್ರಾಕೃತ ಪ್ರಾಣಾಯಾಮವೆನಿಸುವುದು. ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ ವೈಕೃತಪ್ರಾಣಾಯಾಮವೆನಿಸುವುದು. ಆ ವೈಕೃತಪ್ರಾಣಾಯಾಮವೆ ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ : ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು, ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ, ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು, ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ, ನಾಬ್ಥಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ ಕನಿಷ್ಠಪ್ರಾಣಾಯಾಮವೆನಿಸುವುದು. ಅದೆಂತೆಂದೊಡೆ : ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ, ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು. ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು. ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು. ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು. ಇಂತೀ ಮೂವತ್ತಾರು ಮಾತ್ರೆಗಳು ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು. ಇನ್ನು ಕೇವಲ ಕುಂಭಕವೆಂತೆನೆ : ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು ಯಮುನಾನದಿ ಎಂದು ಪೇಳಲ್ಪಡುವುದು. ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು ಗಂಗಾನದಿಯೆಂದು ಪೇಳಲ್ಪಡುವುದು. ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ, ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ ತ್ರಿಕೂಟವೆಂದು, ಮಧ್ಯಹೃದಯವೆಂದು, ಕಾಶಿಕ್ಷೇತ್ರವೆಂದು, ಕೂರ್ಚವೆಂದು ಆಜ್ಞಾಚಕ್ರವೆಂದು, ಪರ್ಯಾಯ ನಾಮಂಗಳನುಳ್ಳ ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ ಮನೋಮಾರುತಂಗಳನೈದಿಸಿ ಯೋಗಮಂ ಸಾದ್ಥಿಸಲ್ತಕ್ಕುದೇ ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕ್ಷೀರವ ಸೋಂಕಿದ ಜಲವ ಬೇರೆ ಮಾಡಬಹುದೇ? ಪರಿಮಳವ ಸೋಂಕಿದ ವಾಯುವ ವಿವರಿಸಲುಂಟೆ? ಉತ್ತಮಂ ಏಕಭುಕ್ತಂ ಚ ಮಧ್ಯಮಂ ದ್ವಯಸ್ವೀಕೃತಂ ಕನಿಷೊ*ೀನ[s]ರ್ಪಿತಶ್ಚೈವ ಪ್ರಸಾದೋ ನಿಷ್ಫಲೋ ಭವೇತ್ ಎಂದುದಾಗಿ ನಿರೂಪಿಂಗೆ ರೂಪನರ್ಪಣೆಯ ಮಾಡಿ, ರುಚಿ ಪರಿಮಳ ಭಾವದತ್ತಲು ಅವಧಾನಿಯಾಗಿಪ್ಪ ನಿಮ್ಮ ಶರಣ. ಬೇರೆ ಮತ್ತೆ ವ್ಯವಧಾನವಿಲ್ಲದಂತಿಪ್ಪ ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.
--------------
ಚನ್ನಬಸವಣ್ಣ
ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ ನಿರ್ಣಯವಾವುದೆನಲು, ಅನ್ಯದೈವ ಭವಿಮಿಶ್ರ ಅನಾಚಾರ ಭಕ್ಷಾಭಕ್ಷ ಪೇಯಾಪೇಯ ಅನ್ಯಾಯ ಇಂತಿವರನುಸರಣಿಗೊಳ್ಳದೆ ವಿಚಾರಿಸಿ ಭಕ್ತರ ಗೃಹವ ಹೋಗುವುದೀಗ ಆಚಾರಕರ್ಪರ. ನಾನಾರೊ ? ಎಂದು ವಿಚಾರಿಸಿ ತನಗೆ ಮುಸುಕಿದ ಮಾಯಾಪಟಲದ ಭ್ರಮೆಯಂ ಪರಿದು ಶ್ರೀಗುರುವಿನ ಸದ್ಭಾವಜ್ಞಾನಮನಕರಣದಿಂ ಉದಯಿಸಿದವನಜಾತಸ್ವಯಂಭುವೆಂದರಿದು, ಆಶೆಯಾಮಿಷ ಕಾಯಗುಣ ಇಂದ್ರಿಯದುರವಣೆ ಮನೋವಿಕಾರಾದಿಗಳಿಗೆ ಸಿಲ್ಕದೆ, ಆ ಮನ ಮೊದಲಾದ ಕಾರಣಂಗಳ ತನ್ನರಿವಿನಾಜ್ಞೆಯಿಂ ಲಿಂಗದಲ್ಲಿ ನೆನಹು ನೆಲೆಗೊಳಿಸಿ, ನೋಟವನಿಮಿಷವೆನಿಸಿ, ಅನ್ಯನುಡಿ ಅನ್ಯನಡೆಯೆಲ್ಲಮಂ ಮುನ್ನವೆ ತ್ಯಜಿಸಿ, ಲಿಂಗದ ನಡೆ ನುಡಿ ಚೈತನ್ಯವಳವಟ್ಟು, ಪರಶಿವನ ಪರತತ್ವವೆ ಪರಮಕರ್ಪರ ವಿಷಯ, ಶಿಕ್ಷಾದಂಡವೆ ಕಟ್ಟಿಗೆ, ಪಂಚಭೂತಕಾಯವನುಳಿದ ಅಕಾಯವೆ ಕಂಥೆ, ಪರಮವೈರಾಗ್ಯವೆ ಯೋಗವಟ್ಟಿಗೆ, ನಿರಾಶಾಪಥವೆ ಯೋಗವಾವುಗೆ, ನಿಷ್ಕಾಮಿತವೆ ಒಡ್ಯಾಣ. ಬಿಂದುಚಲಿಸಿದ ಸಂಧಾನಗತಿ ನಿಂದು ಲಿಂಗಸಂಯೋಗದ ಸಮರತಿಯ ಮುಕ್ತ್ಯಂಗನೆಯೆನಿಸುವ ಚಿಚ್ಛಕ್ತಿಯ ಕೂಟದ ಊಧ್ರ್ವರೇತಸ್ಸಿನ ಪರಮವಿಶ್ರಾಂತಿಯೆ ಕೌಪೀನ, ಅಪ್ರಮಾಣ ಚಾರಿತ್ರ್ಯವೆ ಆಧಾರಘುಟಿಕೆ, ಲಿಂಗಗಂಭೀರದ ಮಹದೈಶ್ವರ್ಯವೆ ವಿಭೂತಿ, ನಿರುಪಾಧಿಕ ತೇಜೋಮಯವಾದ ಮಹಾಲಿಂಗದ ಪ್ರಕಾಶವೆ ಭಸ್ಮೋದ್ಧೂಳನಾಗಿ, ಆ ಭಸ್ಮೋದ್ಧೂಳನ ಪ್ರಕಾಶದಿಂ ಅಜ್ಞಾನತಮವಳಿದ ಸಜ್ಞಾನಕ್ಷೇತ್ರದಲ್ಲಿ ಸುಳಿವ ಸುಳುಹೆ ದೇಶಾಂತರವಾಗಿ ಚರಿಸುವುದೆಂತೆಂದಡೆ: ಜಂಗಮಸ್ಯ ಗೃಹಂ ನಾಸ್ತಿ ಸ ಗಚ್ಛೇತ್ ಭಕ್ತಮಂದಿರಂ ಯದಿ ಗಚ್ಛೇತ್ ಭವೇರ್ಗೇಹಂ ತದ್ಧಿಗೋಮಾಂಸಭಕ್ಷಣಂ ಎಂದುದಾಗಿ ಇಂತೀ ವಿಚಾರದಲ್ಲಿ ಸುಳಿವ ಸುಳುಹೆ ವಿಚಾರಕರ್ಪರ. ವೇದಾತೀತಾಗಮಾತೀತಃ ಶಾಸ್ತ್ರಾತೀತೋ ನಿರಾಶ್ರಯಃ ಆನಂದಾಮೃತಸಂತುಷ್ಟೋ ನಿರ್ಮಮೋ ಜಂಗಮಃ ಸ್ಮೃತಃ ಇಂತೆಂದುದಾಗಿ, ಕಾಯಗುಣವಳಿದು, ಪರಕಾಯಗುಣವುಳಿದು, ಇಂದ್ರಿಯಗುಣವಳಿದು, ಅತೀಂದ್ರಿಯತ್ವದಲ್ಲಿ ವಿಶ್ರಾಂತಿಯನೈದಿ, ರಣಗುಣವಳಿದು, ನಿರಾವರಣ ನಿರ್ಮಲ ನಿರ್ವಿಕಾರ ನಿಜಲಿಂಗದಲ್ಲಿ ನಿಶ್ಚಲಿತನಾಗಿ, ಜೀವನ ಗುಣವಳಿದು, ಪರಮಾತ್ಮಲಿಂಗದಲ್ಲಿ ಘನಚೈತನ್ಯ ತಲ್ಲೀಯವಾಗಿ, ತನಗಿದಿರಿಟ್ಟು ತೋರುವ ತೋರಿಕೆಯೆಲ್ಲವೂ ತಾನಲ್ಲದೇನು ಇಲ್ಲವೆಂದರಿದು, ಕಾಬವೆಲ್ಲವೂ ಶಿವರೂಪು, ಕೇಳುವವೆಲ್ಲವೂ ಶಿವಾನುಭಾವ, ನಡೆದುದೆಲ್ಲವೂ ಶಿವಮಾರ್ಗ, ನುಡಿದುದೆಲ್ಲವೂ ಶಿವತತ್ವ, ಕೊಡುವ ಕೊಂಬೆಡೆಯಲ್ಲಿ ಎಡೆದೆರಪಿಲ್ಲದೆ ಅಖಂಡಾದ್ವಯ ಪರಿಪೂರ್ಣಚಿದಾನಂದರೂಪ ತಾನೆಂದರಿದು, ನಿಂದ ನಿಲವೆ ಅವಿಚಾರಕರ್ಪರ. ಅದೆಂತೆಂದಡೆ: ಚರಾಚರವಿಹೀನಂ ಚ ಸೀಮಾಸೀಮಾವಿವರ್ಜಿತಂ ಸಾಕ್ಷಾನ್ ಮುಕ್ತಿಪದಂ ಪ್ರಾಹುರುತ್ತಮಂ ಜಂಗಮಸ್ಥಲಂ ಎಂದುದಾಗಿ, ಶಬ್ದ ಚಲನೆಯಿಲ್ಲದುದೆ ಲಿಂಗವೆಂದರಿದು, ಬಿಂದುಚಲನೆಯಿಲ್ಲದುದೆ ಜಂಗಮವೆಂದರಿದು, ಆ ಬಿಂದುವನೆ ಲಿಂಗಮುಖದಲ್ಲಿ ನಿಲಿಸಿ ಆ ನಾದವನೆ ಘನಚೈತನ್ಯಜಂಗಮಮುಖದಲ್ಲಿ ನಿಲಿಸಿ, ಆ ನಾದಬಿಂದುವನೊಂದು ಮಾಡಿ ನಿಂದ ನಿಲವೆ ಉಪಮಾತೀತವದೆಂತೆಂದಡೆ: ನಾದನಿಶ್ಚಲತೋ ಲಿಂಗಂ ಬಿಂದುನಿಶ್ಚಲತೋ ಚರಃ ನಾದಬಿಂದು ಸಮಾಯುಕ್ತ ಶ್ರೇಷ*ಂ ತಲ್ಲಿಂಗಜಂಗಮಂ ಎಂದುದಾಗಿ, ಮನಶ್ಚಂದಿರ ಇತ್ಯುಕ್ತಂ ಚಕ್ಷುರಾದಿತ್ಯ ಉಚ್ಯತೇ ಚಂದಿರಾದಿತ್ಯಸಂಯುಕ್ತಂ ಉತ್ತಮಂ ಜಂಗಮಸ್ಥಲಂ ಎಂದುದಾಗಿ, ಮನಸ್ಥಂ ಮನೋಮಧ್ಯಸ್ಥಂ ಮನೋಮಧ್ಯಸ್ಥ ವರ್ಜಿತಾಃ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾ ಸುಯೋಗಿನಃ ಇಂತೆಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಜಾತಜನಿತರು, ಅನುಪಮಚರಿತರು.
--------------
ಉರಿಲಿಂಗಪೆದ್ದಿ
ಜಂಗಮದ ಪಾದತೀರ್ಥ ಎನ್ನಂಗದೋಷವ ಕಳೆಯಿತ್ತಯ್ಯ, ಜಂಗಮದ ಪಾದತೀರ್ಥ ಎನ್ನ ಲಿಂಗಕೆ ಪ್ರಾಣಪ್ರತಿಷೆ*ಯಾಯಿತ್ತಯ್ಯ, ಜಂಗಮದ ಪಾದತೀರ್ಥ ಸಂಗನ ಶರಣರಿಗೆ ಮುಕ್ತಿಯ ಪಥವ ತೋರಿತ್ತಯ್ಯ. ಇಂತಪ್ಪ ಜಂಗಮದ ಪಾದತೀರ್ಥಕ್ಕೆ ಎಂತಪ್ಪ ಹಿರಿಯರಾದರು ತಮ್ಮ ಗರುವಿಕೆಯ ಬಿಟ್ಟು, ದೀರ್ಘದಂಡಪ್ರಣಾಮಂಗೆಯ್ದು ನಮಸ್ಕರಿಸಿ, ಸಾಕ್ಷಿ- ಉತ್ತಮಂ ದೀರ್ಘದಂಡಂ ಚ ಮಧ್ಯಮಂ ಶಿರೋ ವಂದನಂ ಕನಿಷ್ಟಂ ಕರ [ಮೇಲನಂ] ವಾಗ್ವಂದನಂ ಮಹಾ [ಧಮಂ] ಎಂಬುದಾಗಿ ಜಂಘೆಯಿಕ್ಕಿ ನಡದುಬಂದು ಕೊಂಡಡೆ ಕಂಗಳ ಮೂರುಳ್ಳ ದೇವನೆಂಬೆ, ಹಿರಿಯ ಮಹೇಶ್ವರನೆಂಬೆ. ಹಾಂಗಲ್ಲದೆ ಕಂಗಳು ಹೋದ ಅಂಧಕನಂತೆ, ಕಾಲಿಲ್ಲದ ಪಂಗುಳನಂತೆ, ತಾನಿದ್ದಲ್ಲಿಯೇ ಇದ್ದು ಅಯ್ಯಾ ಶರಣಾರ್ಥಿಯೆಂದು ಇದ್ದೆಡೆಗೆ ತರಿಸಿಕೊಂಡು, ಅಂಗಯ್ಯಾಂತುಕೊಂಬ ಚೆಂಗಿಮೂಳ ಹೊಲೆಯರ ಕಂಡಡೆ ನೆತ್ತಿಯ ಮೇಲೆ ಚೊಂಗ ಚೊಂಗನೆ ಹೊಡಿ, ಒದ್ದೊದ್ದು ತುಳಿಯೆಂದು [ಹೇಳಿ] ದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪ್ರಸಾದ ಪ್ರಸಾದವೆಂಬರು ಪ್ರಸಾದದ ಕುಳವೆಂತಿಪ್ಪುದೆಂದರೆ: ಕೊಟ್ಟವ ಗುರುವಲ್ಲ, ಕೊಂಡವ ಶಿಷ್ಯನಲ್ಲ, ಅಂಜಿಕೆಯಿಂದ ಕೊಂಡುದು ಎಂಜಲ ಪ್ರಸಾದ, ಅದೆಂತೆಂದರೆ; ಈಡಾಪಿಂಗಳನಾಳಮಂ ಕಟ್ಟಿ, ಸುಷುಮ್ನಾನಾಳದಲ್ಲಿ ಇಪ್ಪಪರಿಚಾರಕನು ಅಗ್ನಿಯೆಂಬ ಸುವ್ವಾರನನೆಬ್ಬಿಸಲು, ಮಸ್ತಕದಲ್ಲಿ ಇದ್ದ ಉತ್ತಮ ಪ್ರಸಾದ ದಾಳೂದೂಳಿಯೆನುತ್ತ (ದಳದಳನಿಳಿಯುತ್ತ?) ಮಹಾಘನವೆಂಬ ಪ್ರಸಾದಿಯೆದ್ದು, ಮುಯ್ಯಾಂತು ಉಂಡು ಭೋಗಿಸ ಬಲ್ಲರೆ ನಿತ್ಯಪ್ರಸಾದಿ. ಅದಲ್ಲದೆ, ಧನವುಳ್ಳವರ ಕಂಡು ಬೋಧಿಸಿ ಬೋಧಿಸಿಕೊಂಬ ಪ್ರಸಾದಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಸತ್ಯಸಹಜ ನಿತ್ಯ ಉತ್ತಮ ವಸ್ತು, ನಿಜತತ್ವವೆನಿಸುವ ಶಿವನು ಒಂದೇ ವಸ್ತು. ವೇದ, ಶಾಸ್ತ್ರ, ಪುರಾಣ, ಆಗಮ, ಅಷ್ಟಾದಶ ವಿದ್ಯೆಂಗಳು ವಾದಿಸಲು, ಅಂದೂ ಇಂದೂ ಶಿವತತ್ವ ಒಂದೇ ವಸ್ತುವೆಂದು ನಿರ್ಧರಿಸುವವು. ಸಕಲ ನಿಃಕಲದೊಳಗೆ ಉತ್ತಮೋತ್ತಮ ವಸ್ತುವೊಂದೇ. ಇದನರಿದು ನಿಶ್ಚೈಸುವ ವಿವೇಕವುಳ್ಳ ಮನ ಅಂದೂ ಇಂದೂ ಒಂದೇ. ಇದನೆಂತೂ ನೀವೇ ಬಲ್ಲರಿ. ಈ ಒಂದೊಂದರಲ್ಲೆ ಒಂದೊಂದ ಮಾಡಲು ಒಂದಲ್ಲದೆ ಮತ್ತೊಂದಿಲ್ಲ. ಇದಲ್ಲದೆ ಇನ್ನೊಂದುಂಟೆಂಬವಂಗೆ ಎರಡಲ್ಲದೆ ಒಂದಿಲ್ಲ. ಅವಂಗೆ ಅಧೋಗತಿ, ಅವನಜ್ಞಾನಿ. ಒಂದೆಂದರಿದವಂಗೆ ಜ್ಞಾನವಿದೆ, ಭಕ್ತಿಯಿದೆ, ಮುಕ್ತಿಯಿದೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವಿತ್ತಂ ಚ ರಾಜವಿತ್ತಂ ಚ ಕಾಮಿನೀ ಕಾಮಕಾವಶಾ ಪೃಥಿವೀ ವೀರಭೋಜ್ಯಾ ಚ ಸ್ವಧನಂ ಧರ್ಮ ಏವ ಚ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ಅಧರ್ಮಾತ್ ಜಾಯತೇ ಕಾಮಃ ಕ್ರೋಧೋ[s] ಧರ್ಮಾಚ್ಚ ಜಾಯತೇ ಧರ್ಮಾತ್ ಸಂಜಾಯತೇ ಮೋಕ್ಷಃ ತಸ್ಮಾದ್ಧರ್ಮಂ ಸಮಾಚರೇತ್ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವನಮೇವ ಚ ಯಮಸ್ಯ ಕರುಣೋ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಇಂತು, ನಾನಾ ವೇದ ಶಾಸಸ್ತ್ರ ಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿದರೆ ಸತ್ಪಾತ್ರಕ್ಕೆ ಮಾಡಿ ಧನ ಕೆಡದ ಹಾಂಗೆ. ಪಾತ್ರಪರೀಕ್ಷೆಗಳಲ್ಲಿ ಸತ್ಪಾತ್ರರು ಮಾಹೇಶ್ವರರು. ಅಲ್ಲಿ ಪ್ರೇಮ ಪ್ರೀತಿ ಕಿಂಕರತೆಯಿಂದ ದಾಸೋಹವ ಮಾಡಿ ಬದುಕಿರೆ. ನ ಮೇ ಪ್ರಿಯಶ್ಚತುರ್ವೆದೀ ಮದ್ಭಕ್ತ ಶ್ವಪಚೋಪಿ ವಾ ತಸ್ಮೈ ದೇಯಂ ತತೋ ಗ್ರಾಹ್ಯಂ ಯಥಾ ಪೂಜ್ಯಸ್ತಧಾಹಿ ಸಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ನಿಕೃಷ್ಟಚಾರಜನ್ಮಾನೋ ವಿರುದ್ಧಾ ಲೋಕವೃತ್ತಿಷು ಕೋಟಿಭ್ಯೋ ವೇದವಿದುಷಾಂ ಶ್ರೇಷಾ* ಮದ್ಭಾವಭಾವಿತಾಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಚತುರ್ವೇದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ ದುಷ್ಟಚಾಂಡಾಲಭಾಂಡಸ್ಥಂ ಯಥಾ ಭಾಗೀರಥೀಜಲಂ ಚುರ್ವೇದಧರೋ ವಿಪ್ರಃ ಶಿವದೀಕ್ಷಾವಿವರ್ಜಿತಃ ತಸ್ಯ ಭೋಜನದಾನೇನ ದಾತಾ ಚ ನರಕಂ ವ್ರಜೇತ್ ಚದುರ್ವೇದಧರೋ ವಿಪ್ರಃ ಸರ್ವಶಾಸ್ತ್ರವಿಶಾರದಃ ಶಿವಜ್ಞಾನಂ [ನ]ಜಾನಾತಿ ದರ್ವೀ ಪಾಕರಸಂ ಯಥಾ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಇಂತು ನಾನಾವೇದಶಾಸ್ತ್ರಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿ, ಮಾಡಿ ಮಾಡಿ, ಮಾಹೇಶ್ವರರಿಗೆ. ಫಲವ ಬಯಸಲು ಫಲವಹುದು. ಮುಕ್ತಿಯ ಬಯಸಲು ಮುಕ್ತಿಯಹುದು. ಅನಿಮಿತ್ತಂ ನಿಮಿತ್ತಂ ಚ ಉಪಾಧಿರ್ನಿರುಪಾಧಿಕಂ ದಾಸೋಹಯುಕ್ತ ಕರ್ಮಾ ಚ ಯಥಾ ಕರ್ಮ ತಥಾ ಫಲಂ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಅನಾದರಾದಹಂಕಾರಾತ್ ಮೋಹಾದ್ಭೀತಿರುಪಾಧಿಕಾ ಕೀರ್ತಿಶ್ಚ ಷಡ್ಗುಣೋ ನಾಸ್ತಿ ದಾಸೋಹಶ್ಚ ಸ್ವಯಂ ಶಿವಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಕೆಡಬೇಡ ಕೆಡಬೇಡ. ಸಾಲೋಕ್ಯಾದಪಿ ಸಾಮೀಪ್ಯಾತ್ ಸಾರೂಪ್ಯಾಚ್ಚ ಸಯುಜ್ಯಕಾತ್ ಶಿವತತ್ತ್ವಾದಿಶೇಷಶ್ಚ ಸ್ವಯಂ ದಾಸೋಹ ಉತ್ತಮಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಸಕೃಲ್ಲಿಂಗಾರ್ಚಕೇ ದತ್ವಾ ವಸ್ತ್ರಮಾತ್ರಂ ಯಥೇಪ್ಸಿತಂ ಏಕತಂತ್ರಂ ಲಭೇದ್ರಾಜ್ಯಂ ಶಿವಸಾಯುಜ್ಯಮಾಪ್ನುಯಾತ್ ಸಕೃಲ್ಲಿಂಗಾರ್ಚಕೇ ದತ್ವಾ ಗೋಷ್ಟದಂ ಭೂಮಿಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವೇನ ಸಹ ಮೋದತೇ ಸಕೃಲ್ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ದೇವೈಶ್ಚ ಪೂಜ್ಯಮಾನಸ್ತು ಗಣಮುಖ್ಯೋ ಗಣೇಶ್ವರಃ ಸಕೃಲ್ಲಿಂಗಾರ್ಚಕೇ ದತ್ವಾ ಭಿಕ್ಷಾಮಾತ್ರಂ ಚ ಸಾದರಂ ಪದ್ಮಾನಿ ದಶಸಾಹಸ್ರಂ ಪಿತ್ರೂಣಾಂ ದತ್ತಮಕ್ಷಯಂ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಸಾವು, ದಿಟ ದಿಟ. ದಾಸೋಹವ ಮಾಡಲು ತನು ಕೆಡದ ಹಾಂಗೆ ಸತ್ಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್ ಅಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್ ಎಂಬುದನರಿದುದಕ್ಕೆ ಸತ್ಪಾತ್ರವಾವುದೆಂದಡೆ: ಕಿಂಚಿದ್ವೇದಮಯಂ ಪಾತ್ರಂ ಕಿಂಚಿತ್ಪಾತ್ರಂ ತಪೋಮಯಂ ಆಗಮಿಷ್ಯತಿ ಯತ್ಪಾತ್ರಂ ತತ್ಪಾತ್ರಂ ತಾರಯಿಷ್ಯತಿ ಸರ್ವೇಷಾಮೇವ ಪಾತ್ರಾಣಮತಿಪಾತ್ರಂ ಮಹೇಶ್ವರಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ, ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ಸಂಶಯಃ ಇಂತೆಂದುದಾಗಿ, ಅರಿದು ಇದು ಕಾರಣ, ಅರಿವನೇ ಅರಿದು, ಮರವೆಯನೇ ಮರದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ[ನ]ರಿದು, ಪೂಜಿಸಲು ಇಹಪರಸಿದ್ಧಿ ಸದ್ಯೋನ್ಮುಕ್ತಿ ಕೇಳಿರಣ್ಣಾ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->