ಅಥವಾ

ಒಟ್ಟು 73 ಕಡೆಗಳಲ್ಲಿ , 34 ವಚನಕಾರರು , 65 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ತೋರಿದನು ಲಿಂಗ- ಜಂಗಮವ. ಪಾದೋದಕ-ಪ್ರಸಾದವ ಕೊಳಹೇಳಿದನಲ್ಲದೆ ಇವ ತೊರೆಯ ಹೇಳಿದನೆ? ಅಹಮ್ಮೆಂದು ಪ್ರಸಾದದ್ರೋಹಿಗಳಾಗಿ, ನಾನೆ ಎಂದು ಲಿಂಗದ್ರೋಹಿಗಳಾಗಿ, ವಿಭೂತಿ-ರುದ್ರಾಕ್ಷಿ ಸಾಕ್ಷಾತ್ ಶಿವನೆಂದರಿಯದೆ, ಅವರಾಚರಣೆಯ ನೋಡಿ ನಿಂದಿಸಿ ಜಂಗಮದ್ರೋಹಿಗಳಾಗ ಹೇಳಿದನೆ? ಜಂಗಮದಲ್ಲಿ ಜಾತಿಯ, ಪ್ರಸಾದದಲ್ಲಿ ರುಚಿಯ, ಂಗದ್ಲ ಮೃದುವನರಸುವ, ಸಮಯದ್ಲ ವಿಶ್ವಾಸವಿಲ್ಲದ ಮಿಟ್ಟಿಯ ಭಂಡರ ತೋರರಯ್ಯಾ ಎನಗೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ, ತುಂಬಿದ ಘಟ, ಅರಿದು ಕೊಂಡ ಆತ್ಮ ಇವ ಹಿಡಿದಡೆ ಭಂಗ. ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.
--------------
ಕರುಳ ಕೇತಯ್ಯ
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ. ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ. ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ. ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ, ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು. ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ, ಅಕಟಕಟಾ, ಸಂಸಾರ ವೃಥಾ ಹೋಯಿತ್ತಲ್ಲಾ. ಕರ್ತುವೆ ಕೂಡಲಸಂಗದೇವಾ ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ. 11
--------------
ಬಸವಣ್ಣ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾದ್ಥಿ ಎಂದು ಈಯೆಂಟು ಅಷ್ಟಾಂಗಯೋಗಂಗಳು. ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು. ಯಮಾದಿ ಪಂಚಕವೈದು ಪೂರ್ವಯೋಗ; ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ: ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು ಲಿಂಗಪೂಜೆಯ ಮಾಡುವುದೀಗ ಯಮಯೋಗ. ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಂಗಳಲ್ಲಿ ನಡೆವವನು. ಶಿವನಿಂದೆಯ ಕೇಳದಿಹನು. ಇಂದ್ರಿಯಂಗಳ ನಿಗ್ರಹವ ಮಾಡುವವನು. ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಬ್ಥೀತನಾಗಿಹನು. ಇದು ನಿಯಮಯೋಗ. ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ. ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು. ಇವಕ್ಕೆ ವಿವರ: ಪ್ರಾಣವಾಯು ಇಂದ್ರ ನೀಲವರ್ಣ. ಹೃದಯಸ್ಥಾನದಲ್ಲಿರ್ದ ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು ಅನ್ನ ಜೀರ್ಣೀಕರಣವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ. ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷಿರವರ್ಣ. ಸರ್ವಸಂದಿಗಳಲ್ಲಿರ್ದು ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯ ಎಳೆಮಿಂಚಿನವರ್ಣ. ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ ಛರ್ದಿ ನಿರೋಧನಂಗಳಂ ಮಾಡಿ ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು. ಸಮಾನವಾಯು ನೀಲವರ್ಣ. ನಾಬ್ಥಿಸ್ಥಾನದಲ್ಲಿರ್ದು ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು. ಈ ಐದು ಪ್ರಾಣಪಂಚಕ. ಇನ್ನು ನಾಗವಾಯು ಪೀತವರ್ಣ. [ಲೋ] ಮನಾಳಂಗಳಲ್ಲಿರ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂಮವಾಯುವ ಶ್ವೇತವರ್ಣ. ಉದರ ಲಲಾಟದಲ್ಲಿರ್ದು ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ. ನಾಸಿಕಾಗ್ರದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ನೆಗಳೆ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ. ಗುಹ್ಯ[ಕಟಿ] ಸ್ಥಾನದಲ್ಲಿರ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. ಧನಂಜಯವಾಯು ನೀಲವರ್ಣ. ಬ್ರಹ್ಮರಂಧ್ರದಲ್ಲಿರ್ದು ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ ಮರಣಗಾಲಕ್ಕೆ ನಿರ್ಘೋಷಮಪ್ಪುದು. ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು. ಆ ಪವನದೊಡನೆ ಪ್ರಾಣ ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು ನವನಾಳಂಗಳೊಳಗೆ ಚರಿಸುತ್ತಿಹುದು. ಅಷ್ಟದಳಂಗಳೇ ಆಶ್ರಯವಾಗಿ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು. ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂದ್ಥಿಸಿ ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ. ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು, ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ. ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ ಜೀವಂಗೆ ಭವ ಭವದ ಬಂಧನವನೊಡಗೂಡಿ ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು; ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು. ಅದರಿಂದಲಾಹಾರಮಂ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತ ಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ. ಈ ಐದು ಪೂರ್ವಯೋಗಂಗಳು. ಇನ್ನು ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗಂಗಳು. ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಮಾರ್ಥಚಿಹ್ನವೆಂದರಿದು ಆ ಲಿಂಗವನೇ ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ ಆ ಶಿವಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ. ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. ಆ ಸತ್ಕಿ ್ರಯಾ ಜ್ಞಾನಯೋಗದಿಂದ ಪ್ರಾಣಂಗೆ ಶಿವಕಳೆಯ ಸಂಬಂದ್ಥಿಸಿ ಇಷ್ಟ, ಪ್ರಾಣ, ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ ಮಹಾಲಿಂಗದೊಳಗೆ ಸಂಯೋಗವಾಗಿ ಬ್ಥಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾದ್ಥಿಯೋಗ. ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು- ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ ಈ ಐದು ಕರ್ಮಯೋಗಂಗಳು. ಅವರು ಲಕ್ಷಿಸುವಂಥಾ ವಸ್ತುಗಳು ಉತ್ತರಯೋಗವಾಗಿ ಮೂರು ತೆರ. ಅವಾವವೆಂದಡೆ: ನಾದಲಕ್ಷ ್ಯ, ಬಿಂದುಲಕ್ಷ ್ಯ, ಕಲಾಲಕ್ಷ ್ಯವೆಂದು ಮೂರು ತೆರ. ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು. ಬಿಂದುವೇ ಆಕಾರ, ಉಕಾರ, ಮಕಾರ, ಈ ಮೂರು ಶುದ್ಧಬಿಂದು ಸಂಬಂಧವೆಂದೂ. ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ ಲಕ್ಷಿಸುವರು. ಕಲೆಯೇ ಚಂದ್ರನ ಕಲೆಯ ಹಾಂಗೆ, ಸೂರ್ಯನ ಕಿರಣಂಗಳ ಹಾಂಗೆ, ಮಿಂಚುಗಳ ಪ್ರಕಾಶದ ಹಾಂಗೆ, ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ, ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ. ಈ ಎಂಟು ಇತರ ಮತದವರು ಮಾಡುವ ಯೋಗಂಗಳು. ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು. ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವ ಮುಟ್ಟಲಾಗದು. ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ: ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ, ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ, ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ, ಒಂದೇ ವಸ್ತು ತನು, ಮನ, ಭಾವಂಗಳಲ್ಲಿ ಇಷ್ಟ, ಪ್ರಾಣ, ಭಾವವಾದ ಭೇದವನರಿದು ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗಬಾಹ್ಯಂಗೆ ಲಿಂಗಬಾಹ್ಯನಾಗಬೇಕಲ್ಲದೆ, ಸುಜಾತಿ ವಿಜಾತಿಯ ಬೆರಸಿದುದುಂಟೆ ? ಇಂತೀ ಆರುಶೈವವ ಹೊದ್ದದ ವೀರಶೈವವೆಂದ ಮತ್ತೆ. ಇವ ಮೀರಲಿಲ್ಲ, ಪಂಚಾಚಾರಶುದ್ಧಂಗೆ. ಇಂತೀ ಪಥವನೇರಿ ಬದುಕಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ, ತೊರೆಯಿಂ ಭೋ ಪರನಾರಿಯರ ಸಂಗವ ತೊರೆಯಿಂ ಭೋ ! ಪರಧನದಾಮಿಷವ ತೊರೆಯಿಂ ಭೋ ! ಇವ ತೊರೆಯದೆ ಹೋಗಿ ತೊರೆಯ ಮಿಂದಡೆ ಬರುದೊರೆ ಹೋಹುದು, ಕೂಡಲಸಂಗಮದೇವಾ.
--------------
ಬಸವಣ್ಣ
ಈ ಬಚ್ಚಬರಿಯ ಬಯಲ ಕಂಡಿಹೆನೆಂದರೆ, ಕಾಣಬಾರದು. ಕೇಳಿಹೆನೆಂದರೆ ಕೇಳಬಾರದು, ಹೇಳಿಹೆನೆಂದರೆ ಹೇಳಬಾರದು. ಇವ ಮೂರರ ಕಾಳಿಕೆಯ ಕಳೆದು, ಈ ಹನ್ನೆರಡ ಜಾಣಿಯಲ್ಲಿ ದಾಂಟಿ, ಒಂದರ ಮೇಲೆ ನಿಂದು, ಅಂದವಳಿಯದೆ, ಬಿಂದು ತುಳುಕದೆ, ಅಂದಂದಿನ ಹೊಸಪೂಜೆಯ ನೋಡಿ, ಕಣ್ದೆರೆದು ಕರಗಿ ಒಂದಾದ ಶರಣರ ಚರಣವ ತೋರಿ ಬದುಕಿಸಯ್ಯಾ ಎನ್ನ , ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಎಂಬತ್ತನಾಲ್ಕುಲಕ್ಷ ವ್ರತಶೀಲ, ಅರವತ್ತನಾಲ್ಕು ನೇಮ, ಅರುವತ್ತಾರು ವ್ರತಂಗಳಲ್ಲಿ ಇವ ಪ್ರಮಾಣಿಸಿ ನಾಮವಿಟ್ಟೆಹೆನೆಂದಡೆ ಎನಗಾಗದು, ಚೆನ್ನಬಸವಣ್ಣಂಗಲ್ಲದೆ. ಆತ ಜ್ಞಾನಸೂತ್ರಧಾರಿ, ನಾನು ಕ್ರಿಯಾವರ್ತಕ. ಮಾಡಿಕೊಂಡ ವ್ರತಕ್ಕೆ ಕೇಡು ಬಂದಿಹಿತೆಂದು, ಬೆನ್ನ ಮತ್ಸದ ಹುಣ್ಣಿನ ಪಶುವಿನಂತೆ ಎಲ್ಲಿಯೂ ನುಸುಳಲಮ್ಮೆನು. ಬ್ಥಿನ್ನಭಾವದ ಕ್ರೀಯಲ್ಲಿ ನೆಮ್ಮಿದೇನೆ, ಎನಗೆ ಅಭಿನ್ನದಠಾವ ಹೇಳಾ, ಚೆನ್ನಬಸವಣ್ಣಪ್ರಿಯ ಏಲೇಶ್ವರಲಿಂಗವೆ.
--------------
ಏಲೇಶ್ವರ ಕೇತಯ್ಯ
ಭಕ್ತಿಯೆಂಬುದು ಅಪ್ರಮಾಣು ನೋಡಾ. ಭಕ್ತನಾದಡೆ ಸರ್ವಗುಣಸಂಪನ್ನನಾಗಿ ಕರ್ತೃ ಕಾಮಿಸಿದಲ್ಲಿ ಕಾಣದಂತಿರಬೇಕು. ಕರ್ತೃ ಕ್ರೋದ್ಥಿಸಿದಲ್ಲಿ ಎನ್ನ ನಲ್ಲ ಪರಾದ್ಥೀನವೆಂದಂತಿರಬೇಕು. ಕರ್ತೃ ಲೋಬ್ಥಿಸಿದಲ್ಲಿ ತನ್ನ ಬೈಕೆಯ ತಾನೊಯ್ದನೆಂದರಿಯದಿರಬೇಕು. ಹೀಗಲ್ಲದೆ, ಇವ ತಾಳಲರಿಯದೆ ಮಾಡುವ ಮಾಟ ಆತ ಭಕ್ತನಲ್ಲ, ದಾತೃಸಂಬಂದ್ಥಿ. ಇದು ಕಾರಣ ಸದ್ಯೋಜಾತಲಿಂಗವನರಿದು ಮುಟ್ಟಬೇಕು.
--------------
ಅವಸರದ ರೇಕಣ್ಣ
ಉಳ್ಳಿ ಇಂಗು ಬೆಲ್ಲ ಮೆಣಸು ಇವ ಕೊಳ್ಳಬಾರದುಯೆಂಬ ಒಳ್ಳೆ ವ್ರತಿಗಳು ನೀವು ಕೇಳಿರೊ. ಸುಳ್ಳು ಸಟೆಯ ಬಿಟ್ಟು ತಳ್ಳಿಬಳ್ಳಿಯ ಬಿಟ್ಟು ಒಳ್ಳಿತಾಗಿ ನಡೆಯಬಲ್ಲಡೆ ಬಳ್ಳೇಶ್ವರನ ಭಕ್ತರೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಸೂಳೆಯ ತನುಮನದ ಕೊನೆಯಲ್ಲಿ ವಿಟಗಾರನೇ ಪ್ರಾಣಲಿಂಗ; ಶೀಲವಂತನ ತನುಮನದ ಕೊನೆಯಲ್ಲಿ ಭವಿಯೇ ಪ್ರಾಣಲಿಂಗ ; ನಿತ್ಯ ಪ್ರಸಾದಿಯ ತನುಮನದ ಕೊನೆಯಲ್ಲಿ ಬೆಕ್ಕೇ ಪ್ರಾಣಲಿಂಗ ; ಬ್ರಾಹ್ಮಣರ ತನುಮನದ ಕೊನೆಯಲ್ಲಿ ಸೂತಕವೇ ಪ್ರಾಣಲಿಂಗ; ಇಂಥವರಿಗೆಲ್ಲಾ ಇಂತಾಯಿತು! ದೇವರಗುಡಿಯೆಂದು ದೇಗುಲವ ಪೊಕ್ಕು ನಮಸ್ಕಾರವ ಮಾಡುವಂಗೆ ಹೊರಗೆ ಕಳೆದ ಪಾದರಕ್ಷೆಯೆ ಪ್ರಾಣಲಿಂಗ. ಅದು ಎಂತೆಂದಡೆ : ಸೂಳೆಗೆ ವಿಟನ ಹಂಬಲು; ಶೀಲವಂತನಿಗೆ ಭವಿಯ ಹಂಬಲು; ನಿತ್ಯಪ್ರಸಾದಿಗೆ ಬೆಕ್ಕಿನ ಹಂಬಲು ; ಬ್ರಾಹ್ಮಣನಿಗೆ ಸೂತಕದ ಹಂಬಲು ; ಇವರು ಭಕ್ತಿಶೂನ್ಯರು ಕಾಣಿರಯ್ಯಾ ! ಇವಂ ಬಿಟ್ಟು, ಪರಸ್ತ್ರೀಯರ ಮುಟ್ಟದಿರ್ಪುದೇ ಶೀಲ ; ಪರದ್ರವ್ಯ[ವ]ಅಪಹರಿಸದಿರುವುದೇ ಆಚಾರ ; ಪರನಿಂದೆ[ಯ] ಕರ್ಣದಿಂ ಕೇಳದಿರ್ಪುದೇ ನಿತ್ಯಪ್ರಸಾದತ್ವ ; ಪರರಂ ದೂಷಿಸದಿರ್ಪುದೇ ಬ್ರಹ್ಮತ್ವ. ಇಂತಿದರಲ್ಲಿ ನಡೆದು, ದೇವರಿಗೆ ನಮಸ್ಕಾರವ ಮಾಡುವುದೇ ನಮಸ್ಕಾರ. ಹಿಂದಿನ ಪುರಾತನರು ನಡೆದರೆಂಬೋ ಶಾಸ್ತ್ರವಂ ಕೇಳಿ, ಈಗಿನ ಕಿರಾತರು 'ನಾವು ಶೀಲವಂತರು' 'ನಾವು ಆಚಾರವಂತರು', 'ನಾವು ನಿತ್ಯಪ್ರಸಾದಿಗಳು', 'ನಾವು 1[ 'ಪೂಜಸ್ಥರು']1, 'ನಾವು ಬ್ರಾಹ್ಮಣರು', ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಮನ ಮಹದಲ್ಲಿ ನೆಮ್ಮಿ ಮತ್ತೊಂದು ಜಿನುಗುವ ನೇಮವೇತಕ್ಕೆ? ತಲೆ ಪೂಣ್ಯದ ತತ್ತಿಂಗೆ ಪೂಜೆ. ಆಗಣ್ಯನನರಿವುದಕ್ಕೆ ತ್ರಿಕರಣ. ಅಣ್ಣಾ, ಇವ ತಿಳಿದು ನೋಡಿ ಪ್ರಸನ್ನನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಡಕಲ್ಲು ಹೊಲಗೇರಿಯ ನಾಯಿ, ಇವ ಕೊಂಡಾಡ ಬಂದೆ. ನೋಡದ ಲಿಂಗ, ಹಿಂದೆ ಬಿಟ್ಟೋಡದ ಹೊಲೆಗುಣ ಇದೆಂದಿಗೆ ಹರಿದು? ಈ ಸಂಸಾರದ ಸಂದಣಿ ಬೇಡ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ವೇದಂಗಳು ದೈವವಾದಡೆ ಕುಕ್ಕುರ ಕುದುರೆಗಳಾಗಲೇಕೋ? ಶಾಸ್ತ್ರಂಗಳು ದೈವವಾದಡೆ ಹೊರಜು ಕಣ್ಣಿಗಳಾಗಲೇಕೋ? ಆಗಮಂಗಳು ದೈವವಾದಡೆ ಕೀಲುಗುಣಿಕೆಗಳಾಗಲೇಕೋ? ಪುರಾಣಂಗಳು ದೈವವಾದಡೆ ಅಚ್ಚು ಹೊರಜೆಯಾಗಲೇಕೋ? ಚಂದ್ರಸೂರ್ಯರು ದೈವವಾದಡೆ ಗಾಲಿಗಳಾಗಲೇಕೋ? ಇವ ಹಿಡಿದಾಡಿ ಭಜಿಸಿ ಪೂಜೆಮಾಡಿದವರು ದೈವವಾದಡೆ, ಪುಣ್ಯ-ಪಾಪಕ್ಕೀಡಾಗಲೇಕೋ? ಇದು ಕಾರಣ, ವೇದಂಗಳು ದೈವವಲ್ಲ, ಶಾಸ್ತ್ರಂಗಳು ದೈವವಲ್ಲ, ಆಗಮಂಗಳು ದೈವವಲ್ಲ, ಪುರಾಣಂಗಳು ದೈವವಲ್ಲ, ಚಂದ್ರ ಸೂರ್ಯರು ದೈವವಲ್ಲ, ಆತ್ಮನು ದೈವವಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ, ನೀನೊಬ್ಬನೇ ದೈವ
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->