ಅಥವಾ

ಒಟ್ಟು 55 ಕಡೆಗಳಲ್ಲಿ , 35 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಂತರಂಗದ ಜ್ಯೋತಿಯೆ ಬಸವಣ್ಣನಯ್ಯಾ, ಎನ್ನ ಬಹಿರಂಗದ ಜ್ಯೋತಿಯೆ ಚೆನ್ನಬಸವಣ್ಣನಯ್ಯಾ, ಎನ್ನ ಸರ್ವಾಂಗದ ಜ್ಯೋತಿಯೆ ಪ್ರಭುದೇವನಯ್ಯಾ, ಇಂತಿವರ ಶ್ರೀಪಾದದಲ್ಲಿ ಉರಿ ಕರ್ಪುರ ಸಂಯೋಗದಂತೆ ಬೆರೆಸಿದೆನಯ್ಯಾ ಉಳಿಯುಮೇಶ್ವರಾ.
--------------
ಉಳಿಯುಮೇಶ್ವರ ಚಿಕ್ಕಣ್ಣ
ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ? ನಾನೆಲ್ಲವನರಿದೆನೆಂದು ಸೊಲ್ಲು ಸೊಲ್ಲಿಗೆ ಹೋರಲೇಕೆ ? ನಾನೆಲ್ಲವ ಕಳೆದುಳಿದೆನೆಂದು ಅಲ್ಲಲ್ಲಿಗೆ ಹೊಕ್ಕು, ಬಲ್ಲೆನೆಂದು ಕಲ್ಲಿಗೆ ಸನ್ನೆಯ ಕೊಡುವನಲ್ಲಿರುವನಂತೆ, ಇಂತಿವರ ಬಲ್ಲತನ ಬರುಸೂರೆಹೋಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊಸ ಮದುವೆ ಹಸೆಯುಡುಗದ ಮುನ್ನ, ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ, ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು ಹುಸಿಯಿಲ್ಲದಿರ್ದಡೆ ಭಕ್ತನೆಂಬೆ! ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ! ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ! ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ! ಆಶೆಯಿಲ್ಲದಿರ್ದಡೆ ಶರಣನೆಂಬೆ! ಈ ಐದರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ! ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ! ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು. ಬೈದಡರಿಯದು; ಹೊಯ್ದಡರಿಯದು. ನಿಂದಿಸಿದಡರಿಯದು; ಸ್ತುತಿಸಿದಡರಿಯದು. ಸುಖವನರಿಯದು; ದುಃಖವನರಿಯದು. ಇಂತಿವರ ತಾಗು ನಿರೋಧವನರಿಯದಿರ್ದಡೆ ಅವರ ಮಹಾಲಿಂಗ ಗಜೇಶ್ವರನೆಂಬೆ.
--------------
ಗಜೇಶ ಮಸಣಯ್ಯ
ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ ಶಕ್ತಿ ಕೂಡಿ ಪ್ರಣವವಾಯಿತ್ತು. ಮಾತಿನ ಸೂತಕದಿಂದ ವೇದವಾಯಿತ್ತು, ನೀತಿಯ ಹೇಳುವಲ್ಲಿ ಶಾಸ್ತ್ರವಾಯಿತ್ತು. ಸರ್ವರ ಕೂಟದ ಕೂಗಿನಿಂದ ಪುರಾಣವಾಯಿತ್ತು. ಇಂತಿವರ ಗೋಷ್ಠಿಯ ಹುದುಗಿಗಾರದೆ, ಅಲೇಖನಾದ ಶೂನ್ಯ ಕಲ್ಲಿನೊಳಗಾದ.
--------------
ವಚನಭಂಡಾರಿ ಶಾಂತರಸ
ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ. ಅದೆಂತೆಂದಡೆ: ನಾವು ಗುರುಗಳು, ನಾವು ಲಿಂಗಾಂಗಿಗಳು, ನಾವು ಜಂಗಮಲಿಂಗಿಗಳು, ನಾವು ಸದಾಚಾರಸದ್ಭಕ್ತರು ಎಂಬರಯ್ಯ. ಇಂತಿವರ ನಡತೆ ಆಚರಣೆಯೆಂತಾಯಿತೆಂದಡೆ: ಒಬ್ಬಾನೊಬ್ಬ ಜಾತಿಹಾಸ್ಯಗಾರನು ವೇಷವ ಧರಿಸಿಕೊಂಡು ಪುರಜನರ ಮೆಚ್ಚಿಸಿ, ತನ್ನ ಒಡಲಹೊರವಂತೆ, ವಿಭೂತಿ ರುದ್ರಾಕ್ಷಿ ಕಾವಿ ಕಾಷಾಂಬರ ಮುಂತಾಗಿ ವೇಷವ ಧರಿಸಿ, ಗುರು-ಹಿರಿಯರು ಜಂಗಮಲಿಂಗಿಗಳೆಂದು ನಾಮವ ತಾಳಿ, ಭಕ್ತರಿಗೆ ಸದಾಚಾರಮಾರ್ಗವ ಹೇಳೇವು, ಸದಮಲದ ಬೆಳಗ ತೋರೇವು ಎಂದು ಧನಿಕರಿದ್ದೆಡೆಗೆ ಬಂದು, ನಿಮಗೆ ಉಪದೇಶವ ಹೇಳಿ, ಲಿಂಗಾಂಗಸಮರಸವ ತೋರಿ, ಮಾಂಸಪಿಂಡವಳಿದು ಮಂತ್ರಪಿಂಡವ ಮಾಡೇವು ಎಂದು ಹೇಳಿ, ಆ ಭಕ್ತರ ಕೈಯಲ್ಲಿ ಅನ್ನ ಹಚ್ಚಡ ಹೊನ್ನು ವಸ್ತ್ರವ ತೆಗೆದುಕೊಂಡು ಆ ಜಾತಿಕಾರನ ಹಾಗೆ ಇವರು ತಮ್ಮ ಉದರಾಗ್ನಿ ಅಡಗಿಸಿಕೊಂಬುವರಲ್ಲದೆ ಇಂತಪ್ಪ ಗುರು-ಶಿಷ್ಯರ, ದೇವ-ಭಕ್ತರೆಂಬುಭಯರ ಆಚರಣೆಯೆಂತಾಯಿತ್ತೆಂದೊಡೆ- ಹಂದಿಯ ಬಾಯೊಳಗಿನ ತುತ್ತ ನಾಯಿ ಬಂದು ಕಚ್ಚಿದಂತೆ. ಅದೆಂತೆಂದೊಡೆ: ಜೀವನಬುದ್ಭಿಯುಳ್ಳ ಗುರುವೆಂದಾತ ಹಂದಿ, ಕರಣಬುದ್ಧಿಯುಳ್ಳ ಶಿಷ್ಯನೆಂಬಾತ ನಾಯಿ. ಇಂತಪ್ಪ ಗುರು-ಶಿಷ್ಯರ ಸಮ್ಮೇಲನವು ಹುಟ್ಟುಗುರುಡನ ಕೈಯ ಕಟ್ಟಿ ಲೊಟ್ಟಿಗಣ್ಣವ ಪಿಡಿದು ಕಾಣದೆ ಕಮ್ಮರಿಬಿದ್ದಂತಾಯಿತಯ್ಯ. ಅದೇನು ಕಾರಣವೆಂದಡೆ, ಗುರುವಿನಂತ ಶಿಷ್ಯನರಿಯ, ಶಿಷ್ಯನಂತ ಗುರುವರಿಯ, ಜಂಗಮನಂತ ಭಕ್ತನರಿಯ, ಭಕ್ತನಂತ ಜಂಗಮವರಿಯದ ಕಾರಣ. ಉಪಾದ್ಥಿಯುಳ್ಳವರು ಗುರುವಲ್ಲ ಶಿಷ್ಯರಲ್ಲ. ಉಪಾದ್ಥಿಯುಳ್ಳವರಲ್ಲಿ ಉಪದೇಶವ ಹಡಿಯಬೇಕೆಂಬವರ, ಉಪಾದ್ಥಿಯುಳ್ಳವರಿಗೆ ಉಪದೇಶವ ಹೇಳಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಸೂರ್ಯಚಂದ್ರರು ಅಳಿದುಹೋಗುವ ಪರಿಯಂತರವು ಹಂದಿ ನಾಯಿಯ ನರಕದಲ್ಲಿಕ್ಕದೆ ಬಿಡನೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸದ್ಯೋಜಾತಮುಖವೆ ಎನಗೆ ಬಸವಣ್ಣನಯ್ಯಾ, ವಾಮದೇವಮುಖವೆ ಎನಗೆ ಚೆನ್ನಬಸವಣ್ಣನಯ್ಯಾ, ಅಘೋರಮುಖವೆ ಎನಗೆ ಮಡಿವಾಳಯ್ಯನಯ್ಯಾ, ತತ್ಪುರುಷಮುಖವೆ ಎನಗೆ ಸಿದ್ಧರಾಮಯ್ಯನಯ್ಯಾ, ಈಶಾನಮುಖವೆ ಎನಗೆ ಪ್ರಭುದೇವರಯ್ಯಾ, ಹೃದಯದ ಮುಖವೆ ಎನಗೆ ಗಣಂಗಳಯ್ಯಾ. ಇಂತಿವರ ಶ್ರೀಚರಣದಲ್ಲಿ ಉರಿಯುಂಡ ಕರ್ಪುರದಂತೆ ಬೆರಸಿದೆನಯ್ಯಾ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ ಶಿಷ್ಯನ ಮಾಡಿಕೊಂಬುವ ಹೆಡ್ಡಜಡಜೀವಿಗಳನೇನೆಂಬೆನಯ್ಯ ! ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ ! ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ, ಅವನ ಆದಿ-ಅಂತ್ಯವ ತಿಳಿಯದೆ, ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ ಹುಟ್ಟಂಧಕನೆಂಬೆನಯ್ಯ ! ತನ್ನ ಗುರುತ್ವವನರಿಯದ ಗುರುವಿಂದ ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ ! ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮಚ್ಚರಯ್ಯ ! ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂ ಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಗುರುವಾಗಿ ಬಂದರಯ್ಯಾ ರೇವಣಸಿದ್ಧೇಶ್ವರದೇವರು. ಲಿಂಗದಲ್ಲಿ ನಿಬ್ಬೆರಗಾದರಯ್ಯಾ ಅನುಮಿಷದೇವರು. ಜಂಗಮವಾಗಿ ಸುಳಿದರಯ್ಯಾ ಪ್ರಭುದೇವರು. ಪ್ರಸಾದವ ಕೊಂಡು ಪಥವ ತೋರಿದರಯ್ಯಾ ಬಿಬ್ಬಿಬಾಚಯ್ಯಗಳು. ಲಿಂಗದಲ್ಲಿ ನಿರ್ವಯಲಾದರಯ್ಯಾ ನೀಲಲೋಚನೆಯಮ್ಮನವರು. ಸೌರಾಷ್ಟ್ರಮಂಡಲದಲ್ಲಿ ಮೆರೆದರಯ್ಯಾ ಓಹಿಲದೇವರು. ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದ ಕೊಂಡು ಬದುಕಿದೆನಯ್ಯಾ, ವೀರಶೂರ ರಾಮೇಶ್ವರಾ
--------------
ಬಾಲಬೊಮ್ಮಣ್ಣ
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ? ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು. ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ ? ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ ? ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಹಿತವಾಗಿಹುದು. ಇಂತಿವರ ಭೇದವ ಬಸವಣ್ಣ ಬಲ್ಲನು. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು, ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಿಶ್ಚಿಂತ ನಿರಾಕಾರ ಪರಂಜ್ಯೋತಿ ಪರಮಪ್ರಕಾಶ ಆನಂದ ಸ್ವರೂಪನೆ ಜಂಗಮಲಿಂಗ. ಚೈತ್ಯರೂಪವೆ ಲಿಂಗಜಂಗಮ, ಸತ್ವರೂಪವೆ ಗುರುಲಿಂಗ. ಸತ್ತು ಚಿತ್ತಾನಂದವೆ ಸದ್ಭಕ್ತನಲ್ಲಿ ಉದಯ ಇಂತಿವರ ನೆಲೆಯ ವೇದಾಗಮ ಶಾಸ್ತ್ರ ಪುರಾಣಗಳು ಕಾಯದೆ ವಾಗತೀತಃ ಮನೋತೀತಃ ಭಾವಾತೀತಃ ಪರಃ ಶಿವಃ ಸರ್ವಶೂನ್ಯ ನಿರಾಕಾರಂ ನಿತ್ಯತ್ವಂ ಪರಮಂ ಪದಂ || ಎಂದುದಾಗಿ, ಇಂತಪ್ಪ ಶ್ರುತಿ ಒಳ ಹೊರಗಿಪ್ಪ ಜಂಗಮಲಿಂಗವೆ ಜಗತ್ಪಾವನ ಜಂತು ಜಯ ಶರಣಾಗು. ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು, ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ನೇಮ, ಅಯಿವತ್ತುಮೂರು ನೇಮ, ಮೂವತ್ತೆರಡು ನಿತ್ಯ. ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ ಅರ್ಥ ಪ್ರಾಣ ಅಭಿಮಾನಂಗಳಲ್ಲಿ, ತಥ್ಯಮಿಥ್ಯ ರಾಗದ್ವೇಷಂಗಳಲ್ಲಿ, ಭಕ್ತಿ ಜ್ಞಾನ ವೈರಾಗ್ಯಂಗಳಲ್ಲಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ, ಜರ ನಿರ್ಜರ ಸಮನ ಸುಮನಂಗಳಲ್ಲಿ, ಸರ್ವೇಂದ್ರಿಯ ಭಾವಭ್ರಮೆಗಳಲ್ಲಿ, ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ, ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ, ಜಿಹ್ವೆದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ, ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ, ಆತ್ಮಂಗೆ ವ್ರತ. ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು
--------------
ಅಕ್ಕಮ್ಮ
ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜದೇವರಿಗೆ. ಮಾಹೇಶ್ವರಸ್ಥಲ ಸಾಧ್ಯವಾಯಿತ್ತು ಮಡಿವಾಳಮಾಚಿತಂದೆಗಳಿಗೆ. ಪ್ರಸಾದಿಸ್ಥಲ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಗಳಿಗೆ. ಪ್ರಾಣಲಿಂಗಿಸ್ಥಲ ಸಾಧ್ಯವಾಯಿತ್ತು ಅನುಮಿಷದೇವರಿಗೆ. ಶರಣಸ್ಥಲ ಸಾಧ್ಯವಾಯಿತ್ತು ಅಲ್ಲಮಪ್ರಭುದೇವರಿಗೆ. ಐಕ್ಯಸ್ಥಲ ಸಾಧ್ಯವಾಯಿತ್ತು ಅಜಗಣ್ಣಗಳಿಗೆ. ಸರ್ವಾಚಾರಸ್ಥಲ ಸಾಧ್ಯವಾಯಿತ್ತು, ಚೆನ್ನಬಸವಯ್ಯಗಳಿಗೆ. ಎನಗೆ ಷಟಸ್ಥಲಸರ್ವಾಚಾರವೆ ಸಾಧ್ಯವಾಗಿ ಇಂತಿವರ ನೆನೆದು ಶುದ್ಧನಾದೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಎನ್ನಂತರಂಗವೆ ಬಸವಣ್ಣನಯ್ಯಾ. ಎನ್ನ ಬಹಿರಂಗವೆ ಚೆನ್ನಬಸವಣ್ಣನಯ್ಯಾ. ಎನ್ನ ಸರ್ವಾಂಗವೆ ಪ್ರಭುದೇವರಯ್ಯಾ. ಇಂತಿವರ ಕರುಣದ ಕಂದನಾಗಿ ಬದುಕಿದೆನಯ್ಯಾ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದದಿಟವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ನಿತ್ಯ ಅನಿತ್ಯವೆಂಬುದ ತೋರಿದಿರಿ, ಸತ್ಯ ಅಸತ್ಯವೆಂಬುದ ತೋರಿದಿರಿ. ಆಚಾರ ವಿಚಾರವೆಂಬುದ ತೋರಿದಿರಿ. ಅಯ್ಯಾ ಸೋಹಂ ದಾಸೋಹಂ ಎಂಬುದ ತೋರಿದಿರಿ. ಇದು ಎಂಬುದ ತೋರಿದಿರಿ. ಅಯ್ಯಾ ಮುಕ್ತಿ ಎಂಬುದ ತೋರಿದಿರಿ. ಅಂಗ ಲಿಂಗವೆಂಬುದ ತೋರಿದಿರಿ, ಪ್ರಾಣವೇ ಜಂಗಮವೆಂಬುದ ತೋರಿದಿರಿ. ಪ್ರಸಾದವೇ ಪರವೆಂದು ತೋರಿದಿರಿ. ಇಂತಿವರ ಭೇದಾದಿ ಭೇದವನೆಲ್ಲ ತೋರಿದಿರಿ. ನಿಮ್ಮ ಹಾದಿಯ ಹತ್ತಿಸಿದಿರಿ. ಮೂದೇವರೊಡೆಯ ಚೆನ್ನಮಲ್ಲೇಶ್ವರಾ, ನಿಮ್ಮ ಹಾದಿಗೊಂಡು ಹೋಗುತ್ತಿರ್ದು, ನಾನೆತ್ತ ಹೋದೆನೆಂದರಿಯನಯ್ಯಾ. ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ , ನಾ ಹೋದ ಹಾದಿಯ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಜಗದಲ್ಲಿ ಪರಿವೇಷ್ಟಿಸುವ ದೈವಜಾತಿಗಳ ಪರಿಪ್ರಕಾರವ ನೋಡಿರೆ. ಬ್ರಹ್ಮಮೂರ್ತಿ ಗುರುವಾದ, ವಿಷ್ಣುಮೂರ್ತಿ ಲಿಂಗವಾದ, ರುದ್ರಮೂರ್ತಿ ಜಂಗಮವಾದ. ಇಂತೀ ಮೂವರು ಬಂದ ಭವವ ನೋಡಾ. ಇಷ್ಟಲಿಂಗವ ಕೊಟ್ಟು ಕಷ್ಟದ್ರವ್ಯಕ್ಕೆ ಕೈಯಾನುವ ಕಾರಣ, ಗುರುಬ್ರಹ್ಮನ ಕಲ್ಪಿತವ ತೊಡೆದುದಿಲ್ಲ. ಲಿಂಗ ಸರ್ವಾಂಗದಲ್ಲಿ ಸಂಬಂದ್ಥಿಸಿದ ಮತ್ತೆ, ಕಾಯದಲ್ಲಿ ಮೆಟ್ಟಿಸಿಕೊಂಬ ಕಾರಣ, ವಿಷ್ಣುವಿನ ಸ್ಥಿತಿ ಬಿಟ್ಟುದಿಲ್ಲ. ಜಂಗಮ ರುದ್ರನ ಪಾಶವ ಹೊತ್ತ ಕಾರಣ, ರುದ್ರನ ಲಯಕ್ಕೆ ಹೊರಗಾದುದಿಲ್ಲ. ಇಂತಿವರ ಗುರುವೆನಬಾರದು, ಲಿಂಗವೆನಬಾರದು, ಜಂಗಮವೆನಬಾರದು. ಪೂಜಿಸಿದಲ್ಲಿ ಮುಕ್ತಿಯಲ್ಲದೆ ನಿತ್ಯತ್ವವಿಲ್ಲ. ಸತ್ಯವನರಸಿ ಮಾಡುವ ಭಕ್ತ, ನಿತ್ಯಾನಿತ್ಯವ ವಿಚಾರಿಸಬೇಕು. ಸತ್ತು ಗುರುವೆಂಬುದ, ಚಿತ್ತು ಲಿಂಗವೆಂಬುದ, ಆನಂದ ಜಂಗಮವೆಂಬುದ [ಅರಿದು], ಇಂತೀ ತ್ರೈಮೂರ್ತಿಯಾಗಬೇಕು. ತಾನೆ ಗುರುವಾದಡೆ ಬ್ರಹ್ಮಪಾಶವ ಹರಿಯಬೇಕು. ತಾನೆ ಲಿಂಗವಾದಡೆ ಶಕ್ತಿಪಾಶವ ನಿಶ್ಚೆ ೈಸಬೇಕು. ತಾನೆ ಜಂಗಮವಾದಡೆ ರುದ್ರನ ಬಲೆಯ ಹರಿಯಬೇಕು. ಇಂತಿವರೊಳಗಾದವೆಲ್ಲವು ಪ್ರಳಯಕ್ಕೆ ಒಳಗು. ಗುರುವೆಂಬುದು ಬಿಂದು, ಲಿಂಗವೆಂಬುದು ಕಳೆ, ಜಂಗಮವೆಂಬುದು ಕಳಾತೀತ, ಜ್ಞಾನ ಜಂಗಮ. ಆ ವಸ್ತುವಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾಶಬದ್ಧನಲ್ಲ, ವೇಷಧಾರಿಯಲ್ಲ, ಗ್ರಾಸಕ್ಕೋಸ್ಕರವಾಗಿ ಭಾಷೆಯ ನುಡಿವನಲ್ಲ. ಈಶಲಾಂಛನವ ಹೊತ್ತು, ಕಾಸಿಂಗೆ ಕಾರ್ಪಣ್ಯಬಡುವನಲ್ಲ. ಮಹದಾಶ್ರಯವನಾಶ್ರಯಿಸಿದನಾಗಿ, ಮನೆಯ ತೂತಜ್ಞಾನಿಗಳ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೇಪನಾದ ಶರಣ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->