ಎಲೆ ದೇವಾ ಏತಕ್ಕೆ ನುಡಿಯೆ? ಎನ್ನೊಳು ಮುನಿಸೆ?
ಎನ್ನೊಳು ನಿನ್ನಯ ಚಿತ್ತವನಿರಿಸಿ ನೀಕರಿಸಿ ನುಡಿಯದಿರ್ದಡೆ
ಎನ್ನಯ ನೋವನಿನ್ನಾರಿಗೆ ಹೇಳುವೆ, ನಿನಗಲ್ಲದೆ?
ನೀ ಮಾಡುವ ಮಾಟ ಅನೇಕ ಕುಟಿಲ.
ಯೋಗಿಗಳ ಸುತ್ತಿ ಮುತ್ತಿದ ಹರಿತದ ಪಾಶ ನಿಮ್ಮಲ್ಲಿ.
ಅನೇಕರ ಕೊಲುವ ಪಾಶ ಕೈಯಲ್ಲಿ, ಭವವೇಷವಂಗದಲ್ಲಿ.
ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾಗಿ, ನಿನಗದು ನೀತಿಯೆ?
ರುದ್ರನ ವೇಷಕ್ಕದು ಸಹಜ, ಅವ ಬಿಡು ಬಿಡು ನೀಕರಿಸು.
ಉಮಾಪತಿ ವೇಷವ ಬಿಟ್ಟು ಸ್ವಯಂಭುವಾಗು.
ಎಲೆ ಅಯ್ಯಾ, ಎನ್ನಲ್ಲಿ ಸದ್ಭಕ್ತಿಯ ನೆಲೆಗೊಳಿಸಿ,
ಎನ್ನ ಪ್ರಕೃತಿಯ ಪರಿಹರಿಸಯ್ಯಾ.
ಎನ್ನ ತಂದೆ, ಮುಕುರ ಪ್ರತಿಬಿಂಬದಂತೆ
ಎನಗೆ ನಿನಗೆಂಬುದ ನೀನರಿಯಾ?
ಎಲೆ ದೇವಾ, ಅರಿದರಿದೇಕೆನಗೆ ಕೃಪೆಯಾಗಲೊಲ್ಲೆ.
ಎಲೆ ಸ್ವಾಮಿ, ಆನು ಮಾಡಿದುದೇನು ನಿನಗೆ?
ಮಾರನ ಕೊಂದ ಮಲತ್ರಯದೂರನೆ,
ಅನಾಗತಸಂಸಿದ್ಧ ಭೋಗಮಯನೆ,
ನಯನ ಚರಣಾರವಿಂದ ವಿರಾಜಿತನೆ, ಸರ್ವವ್ಯಾಪಕ ನಾಶನೆ,
ಸರ್ವಾಂತರ್ಗತ ವಿಮಲಾಂತರಂಗನೆ, ಕರುಣಾಬ್ಧಿಚಂದ್ರ ವಿಲಾಸಿತನೆ,
ಭಕ್ತ ಚಿತ್ತದ ಸಾಕಾರದ ಪುಂಜನೆ,
ಭಕ್ತವತ್ಸಲನೆ, ಭಕ್ತದೇಹಿಕದೇವನೆ,
ಎನಗೆ ನಿಮ್ಮ ಭಕ್ತಿವಿಲಾಸವ ಕರುಣಿಸಯ್ಯಾ.
ಶಂಭು ಮಾರೇಶ್ವರಾ.