ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕಾಯದ ಮದವಳಿದಲ್ಲದೆ ಮಾಯಾವಿಕಾರವಳಿಯದು.ಮಾಯಾವಿಕಾರವಳಿದಲ್ಲದೆ ಭವನಾಶವಾಗದು.ಭವನಾಶವಾದಲ್ಲದೆ ಲಿಂಗಸಂಬಂಧವಳವಡದು.ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯವಾಗದು.ಪರಮಸುಖ ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇ ಬೇಕು.ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ.ಇಂತಪ್ಪ ಮಹಾನುಭಾವದ ಮೂರ್ತಿಸಂಗನ ಬಸವಣ್ಣನ ಕೃಪೆಯಿಂದಲೆನಗೆ ನಿಜವು ಕಾಣಬಂದಿತ್ತು.ಇದು ಕಾರಣ, ನಿಜಗುರು ಶಂಕರದೇವರ ಶರಣಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತನಾದೆನಯ್ಯಾ.
ಕಾಯವಿಲ್ಲಾಗಿ ಮಾಯವಿಲ್ಲ, ಮಾಯವಿಲ್ಲಾಗಿ ಮಥನವಿಲ್ಲ,ಮಥನವಿಲ್ಲಾಗಿ ಭಾವವಿಲ್ಲ, ಭಾವವಿಲ್ಲಾಗಿ ಬಯಕೆಯಿಲ್ಲ,ಬಯಕೆಯಿಲ್ಲಾಗಿ ನಿರ್ಭಾವ ನಿಜವನೈದಿ,ನಿಜಗುರು ಶಂಕರದೇವರೆಂಬುದು ತಾನಿಲ್ಲ.