ಅಯ್ಯಾ, ಕಾಶಿ, ರಾಮೇಶ್ವರ, ಕೇದಾರ, ಗೋಕರ್ಣ,
ಶ್ರೀಶೈಲಪರ್ವತ, ಹಂಪೆ, ಅಮರಗುಂಡ, ಕಲ್ಯಾಣ,
ಸೊನ್ನಲಾಪುರ, ಗಯ, ಪ್ರಯಾಗ, ಕೊಲ್ಲಿಪಾಕ,
ಗಂಗಾಕ್ಷೇತ್ರ, ಶಿವಗಂಗೆ, ನಂಜನಗೂಡು,
ಉಳುವೆ, ಶಂಭುಲಿಂಗನ ಬೆಟ್ಟ, ಕುಂಭಕೋಣೆ, ಕಂಚಿ,
ಕಾಳಹಸ್ತಿ, ನವನಂದಿಮಂಡಲ, ಕುಮಾರಪರ್ವತ ಮೊದಲಾದ ಕ್ಷೇತ್ರಂಗಳಲ್ಲಿ,
ಕುಂತಣದೇಶ ಮೊದಲಾದ ಐವತ್ತಾರು ದೇಶಂಗಳಲ್ಲಿ
ನಿಮ್ಮ ಚರಣಕಮಲವ ಕಂಡು ಸದ್ಭಕ್ತಿಯ ಮಾಡದೆ,
ವೃಥಾ ಭ್ರಾಂತಿನಿಂದ ಕಲ್ಲು ಮುಳ್ಳು ಮಣ್ಣಿನಲ್ಲಿ
ತಿರಿಗಿ ತಿರಿಗಿ ಕೆಟ್ಟಿತಯ್ಯ ಎನ್ನ ಪಾದೇಂದ್ರಿಯವು.
ಇಂತು ಕೆಡಗುಡದೆ ನಿಮ್ಮ ಸದ್ಭಕ್ತ ಹರಳಯ್ಯಗಳ
ಮನೆಯ ಬಾಗಿಲ ಕಾಯ್ವಂತೆ ಮಾಡಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರಿಗುರುಸಿದ್ಧಲಿಂಗೇಶ್ವರ.