ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ, ತಾನೇ ಗುರುತತ್ತ್ವವಾದ ಮಹಾಪ್ರಸಾದಿಗೆ, ಬೇರೆ ಜ್ಞಾನವುಂಟೇ? ಅಪರಿಚ್ಛಿನ್ನ ವಾಙ್ಮನಕ್ಕಗೋಚರ ಪರಾನಂದರೂಪ ನಿತ್ಯ ತೃಪ್ತ ನಿಜಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ. ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ. ಅದು ಕಾರಣ, ಗುರುಪೂಜೆಯ ಮಾಡಿ, ಗುರು ಕೃಪೆಯನೆ ಪಡೆದಿಹುದಯ್ಯ. ಉಪಮಿಸಬಾರದ ಮಹಾದೇವನು, ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು, ಗುರುಭಕ್ತಿಯನೆ ಮಾಡುವುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಪೂರ್ವಜನ್ಮದಲ್ಲಿ ಮಾಡಿದ ಕರ್ಮ, ಈಗಿನ ಜನ್ಮದಲ್ಲಿ ಭೋಗಿಸಲಿಕ್ಕೀಡಾಯಿತ್ತು. ಈಗ ಮಾಡಿದ ಕರ್ಮ, ಮುಂದಕ್ಕೆ ಬಿತ್ತಿದ ಬೆಳೆಯನುಂಬಂತೆ ಬರ್ಪುದು ತಪ್ಪದು. ಈ ಕರ್ಮವುಳ್ಳನ್ನಕ್ಕ ಆರಿಗಾದರೂ ಬಳಲಿಕೆ ಬಿಡದು. ಈ ಕರ್ಮ ಹರಿದಂದಿಗೆ ನಿಮ್ಮ ಕಾಂಬರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ ವಿವರಿಸಿ ತಿಳಿದು ನೋಡೆ, ರೂಪು ಲಿಂಗದಲ್ಲಿ ತ್ರಿಭುವನಾಧಾರವಾದ ಶಿವ ಕಲಾ ರೂಪ ಚೈತನ್ಯ. ನಿರೂಪಲಿಂಗವ ಭಾವಿಸಿ, ಧ್ಯಾನಪೂಜೆಯ ಮಾಡಿ; ಕೋಟಿ ಸೂರ್ಯ ಪ್ರಕಾಶ ಚಿದ್ರೂಪ ಶಿವಲಿಂಗವ ನೆನಹಿನ ಕೊನೆಯ ಮೇಲಿರಿಸಿ ನೆನೆದು ನಿತ್ಯ ತೃಪ್ತನಾದ ಪರಾನಂದರೂಪ ಶಿವಯೋಗಿಯ ಯೋಗನಿದ್ರಾಮುದ್ರೆಯಲ್ಲಿ ತಾನಿದಿರೆಂಬುದ ಮರೆದು ಬ್ಥಿನ್ನವಿಲ್ಲದೆ ಶಿವಸುಖದೊಳಗಿಹನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
ಹುಲ್ಲಹೊರೆಯೊಳಗೊಂದು ಕಿಚ್ಚು ಹುಟ್ಟಿ ಸುಡುವುದ ಕಂಡೆ. ಹುಲ್ಲ ಮೇವ ಎರಳೆಯ ಕೋಡು ಮುರಿದು ಅಡವಿಯಲ್ಲಿ ಬಿಟ್ಟುದ ಕಂಡೆ. ಬಲ್ಲಿದ ಬಲೆಗಾರನ ಬಲೆಯ ನೇಣು ಹರಿದು, ಬಲೆಯ ಬಿಟ್ಟುಹೋದುದ ಕಂಡೆ. ಅಟ್ಟೆಯ ಬಿಟ್ಟು ತಲೆ ಆಕಾಶವನಡರಿತ್ತ ಕಂಡೆ. ದೂರ ದಾರಿ ಸಾರೆಯಾದುದ ಕಂಡೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ, ಹುಟ್ಟು ಮುರಿದು ಬಟ್ಟಬಯಲಾದುದ ಕಂಡೆ.