ಅಥವಾ

ಒಟ್ಟು 84 ಕಡೆಗಳಲ್ಲಿ , 24 ವಚನಕಾರರು , 77 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿ ತೆಂಗಿನ ಮರದಲ್ಲಿ ಏರಿತ್ತೊ ? ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ? ಅಲ್ಲಾ ವೃಕ್ಷದ ಸಹಜ ಬೀಜವೊ ? ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ, ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ, ನೀರೆಲ್ಲಿ ಅಡಗಿತ್ತು? ಹಿಪ್ಪೆ, ಕವಚವೆಲ್ಲಿದ್ದಿತ್ತು ? ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?, ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ, ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾದ್ಥಿಸಿಕೊಳ್ಳಿ, ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ, ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ? ಆ ಅಂಗಭಾವ ವಿರಹಿತನೋ ? ಈ ಉಭಯದ ಸಂದೇಹವುಳ್ಳನ್ನಕ್ಕ ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ, ಇಂತೀ ಭೇದಂಗಳನರಿತು, ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ, ಅದು ಬ್ಥಿನ್ನರೂಪೋ, ಅಬ್ಥಿನ್ನರೂಪೋ ? ಆ ನಿಜದ ನೆಲೆಯ ನೀವೇ ಬಲ್ಲಿರಿ. ಕಾಮಧೂಮ ಧೂಳೇಶ್ವರನಲ್ಲಿ ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು.
--------------
ಮಾದಾರ ಧೂಳಯ್ಯ
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ, ಆ ಸುಳುಹಾಗಿ ಸುಳಿಯಬೇಕು. ನಿಂದಡೆ ನೆಟ್ಟನೆ ಭಕ್ತನಾಗಿ ನಿಂದು ಸಹಜ ಮಾಟವ ಮಾಡಬೇಕು. ಸುಳಿದಡೆ ನೆಟ್ಟನೆ ಪರಮಜಂಗಮವಾಗಿ ಸುಳಿಯಬೇಕು. ನಿಂದು ಭಕ್ತನಾಗಲರಿಯದ, ಸುಳಿದು ಜಂಗಮವಾಗಲರಿಯದ ಉಭಯಭ್ರಷ್ಟರನೇನೆಂಬೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಶಿಷ್ಯನ ಪೂರ್ವಾಶ್ರಯವ ಕಳೆವುದು ಗುರುವಿಗೆ ಸಹಜ. ಶಿಷ್ಯನು ತನ್ನ ಪೂರ್ವಾಶ್ರಯವ ಕಳೆದು ಶ್ರೀಗುರುಲಿಂಗವ ಮುಟ್ಟುವ ಪರಿ ಎಂತೋ ? ಅರ್ಪಿತ ಹೋಗಿ, ಪ್ರಸಾದವನರಸುವುದೊ ? ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿಯೆ ಬಲ್ಲ.
--------------
ಚನ್ನಬಸವಣ್ಣ
ಶಿವಭಕ್ತನೆನಿಸುವಾತಂಗೆ ಆವುದು ಚಿಹ್ನವೆಂದೊಡೆ : ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಿಂದಿರುವುದು, ಲಿಂಗಜಂಗಮ ಒಂದೆಯೆಂದು ಕಾಂಬುದು. ವಿಭೂತಿ ರುದ್ರಾಕ್ಷಿ ಲಿಂಗಧಾರಣ ಮುಂತಾದ ಶಿವಲಾಂಛನವನುಳ್ಳ ಶಿವಶರಣರಲ್ಲಿ ಅತಿಭಕ್ತಿಯಾಗಿರ್ಪಾತನೇ ಸದ್‍ಭಕ್ತ ನೋಡಾ ! ಅದೆಂತೆಂದೊಡೆ : ``ಸಾದಾಚಾರಃ ಶಿವೇ ಭಕ್ತಿರ್ಲಿಂಗೇ ಜಂಗಮ ಏಕದ್ಥೀಃ| ಲಾಂಛನೇ ಶರಣೇ ಭಕ್ತಿಃ ಭಕ್ತಸ್ಥಲಮನುತ್ತಮಮ್ ||'' ಎಂದುದಾಗಿ, ಇಂತಪ್ಪ ಸಹಜ ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬ್ರಹ್ಮಜ್ಞಾನದಿಂದ ಬ್ರಹ್ಮವನರಿತರಿವು ಆ ಪರಬ್ರಹ್ಮದೊಡವೆರಸಿ ನಿಂದಿತ್ತು. ಅದೆಂತೆಂದಡೆ: ಬ್ರಹ್ಮಬ್ರಹ್ಮಾಂಡ ಬೇರಿಲ್ಲದಿಪ್ಪಂತೆ, ಆಕಾಶವನಿಲ ಬೇರಿಲ್ಲದಿಪ್ಪಂತೆ, ಹಣ್ಣುರುಚಿ ಬೇರಿಲ್ಲದಿಪ್ಪಂತೆ. ದ್ವೈತವೆ ಅದ್ವೈತವಾದ ಬಳಿಕ ದ್ವೈತವೆಂದೆನಲುಂಟೆ ? ಇಲ್ಲವಾಗಿ. ಅರಿವು ಮರಹಿಗೆ ತೆರಹಿಲ್ಲದ ಕರಿಗೊಂಡರಿವು ತಾನಾಗಿರಲು ನಾನಾ ಪರಿಯ ವಿಚಿತ್ರಚಿತ್ರಂಗಳತ್ಯಾಶ್ಚರ್ಯವಪ್ಪಂತೆ ತೋರುತಿರಲು ಅದು ವಿಪರೀತವೆಂದೆನಲುಂಟೆ ? ಮುನ್ನ ತಾನಾಗಿರ್ದು ಇನ್ನು ಬೇರೆನಲುಂಟೆ ? ಇಲ್ಲವಾಗಿ. ಆದಿಮಧ್ಯಾಂತ ವಿರಹಿತವಾದ ಮಹಾಘನವೆ ಊಹಿಸಲಿಲ್ಲದ ಉಪಮೆ, ಭಾವಿಸಲಿಲ್ಲದ ಭಾವ, ಅರಿಯಲಿಲ್ಲದರಿವು ತಾನಾಗಿ, ಸೌರಾಷ್ಟ್ರ ಸೋಮೇಶ್ವರನೆಂಬ ನುಡಿಯನೊಳಕೊಂಡು ನಿಂದ ಸಹಜ ಭರಿತವಾಗಿರ್ದಿಲ್ಲದಂತೆ ಇಹ ಭೇದವನೇನೆಂಬೆನಯ್ಯಾ.
--------------
ಆದಯ್ಯ
ವೃಕ್ಷಛಾಯೆಯಲ್ಲಿಹಂಗೆ ನೀನು, ಸಕಲರಿಗೆ ಸ್ವಾತಂತ್ರ ್ಯ ಪದವನೀವೆ, ನಿನಗಿಲ್ಲ. ನೀನು ನಿಷ್ಕಲದಲ್ಲಿ ನಿರ್ಣೈಸಿ ಸಕಲದ ಸ್ವಾತಂತ್ರಿಸಿ ಇಪ್ಪೆ. ಆನಂದವೆಂಬ ಗತಿಯಲ್ಲಿ, ಸಾನಂದವೆಂಬ ತಾಳವಿಡಿದು ಆಡಲಾಗಿ, ಕೊಟ್ಟೆನೆಂಬ ಪದವ ಅವರೊಲ್ಲದಿದ್ದಡೆ ನೀನೆ ಒಚ್ಚತ ಹೋಹೆ, ಕಪಿಲಸಿದ್ಧಮಲ್ಲಿಕಾರ್ಜುನಾ ನಿನಗಿದು ಸಹಜ.
--------------
ಸಿದ್ಧರಾಮೇಶ್ವರ
ಋಗ್ವೇದ ಯಜುರ್ವೇದ ತಾನಿರ್ದಲ್ಲಿ, ಸಾಮದೇವ ಅಥರ್ವಣವೇದ ತಾನಿರ್ದಲ್ಲಿ, ಉದಾತ್ತ ಅನುದಾತ್ತ ಸ್ವರಿತ ಪ್ರಚರವೆಂಬ ಸ್ವರಂಗಳು ಮೊದಲಾಗಿ, ಅನಂತ ವೇದಸ್ವರಂಗಳೆಲ್ಲ ತಾನಿರ್ದಲ್ಲಿ, ಅಜಪೆ ಗಾಯತ್ರಿ ತಾನಿರ್ದಲ್ಲಿ, ಛಂದಸ್ಸು ನಿಘಂಟು ಶಾಸ್ತ್ರಂಗಳೆಲ್ಲ ತಾನಿರ್ದಲ್ಲಿ, ಅಷ್ಟಾದಶಪುರಾಣಂಗಳು ತಾನಿರ್ದಲ್ಲಿ, ಅಷ್ಟವಿಂಶತಿ ದಿವ್ಯಾಗಮಂಗಳು ತಾನಿರ್ದಲ್ಲಿ, ಅನಂತಕೋಟಿ ವೇದಂಗಳು ತಾನಿರ್ದಲ್ಲಿ, ಇವೆಲ್ಲ ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ ? ತನ್ನಿಂದದ್ಥಿಕವಪ್ಪ ಪರಬ್ರಹ್ಮವಿಲ್ಲವಾಗಿ ತಾನೇ ಸಹಜ ನಿರಾಲಂಬವಾಗಿಹ ಸ್ವಯಂಭುಲಿಂಗ ನೋಡಾ ಅನಂತ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಹಜ ಶಿವಭಕ್ತರಾದವರು ತಟ್ಟೆ ಬಟ್ಟಲೊಳಗುಂಡದ್ದು ಇಷ್ಟಲಿಂಗದ ಪ್ರಸಾದ. ಕರಕಮಲದೊಳಗುಂಡದ್ದು ಪ್ರಾಣಲಿಂಗದ ಪ್ರಸಾದ. ಪಾವಡ ಪರ್ಣದೊಳಗುಂಡದ್ದು ಭಾವಲಿಂಗದ ಪ್ರಸಾದ. ಲಿಂಗದಲ್ಲಿ ಮನ ನೋಟ ನಿಲಿಸಿಕೊಂಬುವುದು ಲಿಂಗಪ್ರಸಾದ. ಲಿಂಗದಲ್ಲಿ ಮನ ನೋಟವಿಲ್ಲದೆ ಕೊಂಬುದು ಅನರ್ಪಿತವು. ಅದು ಕಾರಣ, ಲಿಂಗ ನೆನಹಿನಿಂದಲೆ ಸ್ವೀಕರಿಸುವುದು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಶಬ್ದವೂ ಅ(ಪ)ಶಬ್ದವೂ ಶಬ್ದದಲ್ಲಿಯೆ ಕಾಣಬಹುದು, ಕಾಣಿರೋ ! ಇದ್ದವರು ಇದ್ದ ಸ್ಥಲವನೆ ನುಡಿವರು, ಅದಕದು ಸಹಜ. ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ, ಅಂಗ-ಪ್ರತ್ಯಂಗಸ್ವರೂಪ ಸ್ವಭಾವಗಳೆಂತೆಂದಡೆ : ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ, ಮಹಾಘನವಾಗಿಹ ಪ್ರಣವವೆ ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ. ದಿವ್ಯಾನಂದಪ್ರಣವ ದಿವ್ಯಜ್ಞಾನ ಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಚಕ್ಷು. ನಿರಾಕಾರಪ್ರಣವ, ನಿರಾಳಪ್ರಣವವೆ ಆ ಅಖಂಡ ಮೂಲಸ್ವಾಮಿಯ ಪುರ್ಬು. ಅಚಲಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ. ಸಹಜ ನಿರಾಲಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ನಾಸಿಕ. ನಿರಾಲಂಬಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಂಗಳು ನೋಡಾ. ನಿರಾಮಯಪ್ರಣವ ನಿರಾಮಯಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ. ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ. ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಡ್ಡ ಮೀಸೆ ಕೋರೆದಾಡೆ ನೋಡಾ. ನಾದ ಬಿಂದು ಕಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ತಾಳೋಷ*ಸಂಪುಟ ನೋಡಾ. ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ, ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ, ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ, ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ, ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ, ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಷೋಡಶದಂತಂಗಳು ನೋಡಾ. ಆ ಒಂದೊಂದು ದಂತಂಗಳ ಕಾಂತಿಯೆ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ಕುಳವಿಲ್ಲದ ನಿರಾಕುಳಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕೊರಳು. ಅಪ್ರಮಾಣ ಅಗೋಚರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ. ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ, ಶಿವಜ್ಯೋತಿಪ್ರಣವ,ಅಚಲಪ್ರಣವ, ಅಚಲಾನಂದಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಹಸ್ತಾಂಗುಲಿ ನಖಂಗಳು ನೋಡಾ. ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಎದೆ. ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ. ನಿರುಪಮಪ್ರಣವ, ನಿರುಪಮಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ದಕ್ಷಿಣ ವಾಮ ಪಾಶ್ರ್ವಂಗಳು. ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನು. ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನಿನೆಲುವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗರ್ಭ ನೋಡಾ. ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು, ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು, ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು, ಅನೇಕಕೋಟಿ ಆದಿಪಾಶಂಗಳೆಂಬ ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು, ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್‍ಪದ, ಅನೇಕಕೋಟಿ ಅನಾದಿ ತ್ವಂಪದ, ಅನೇಕಕೋಟಿ ಅನಾದಿ ಅಸಿಪದಂಗಳೆಂಬ ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್‍ಪದ, ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಂಗಳು, ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ ವೇದಾಂತ ಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು, ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು, ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು, ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು, ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು, ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು, ಅನೇಕಕೋಟಿ ದೇವರ್ಕಳು, ಅನೇಕಕೋಟಿ ಆದಿದೇವರ್ಕಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಂಗಳು, ಅನೇಕಕೋಟಿ ಮಹಾಬ್ರಹ್ಮಾಂಡಂಗಳು, ಅನೇಕಕೋಟಿ ಆದಿಮಹಾಬ್ರಹ್ಮಾಂಡಂಗಳು ಅಡಗಿಹವು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ನಡುವೇ ವ್ಯೋಮಾತೀತಪ್ರಣವವು. ಆ ಅಖಂಡ ಮಹಾಮೂಲಸ್ವಾಮಿಯ ಕಟಿಸ್ಥಾನವೇ ಚಿತ್ಕಲಾತೀತಪ್ರಣವ. ಆ ಅಖಂಡ ಮಹಾಮೂಲಸ್ವಾಮಿಯ ಪಚ್ಚಳವೇ ಅನಾದಿಪ್ರಣವ ಆದಿಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಉಪಸ್ಥವೇ ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ ಮೊದಲಾದ ಅನೇಕಕೋಟಿ ದೇವರ್ಕಳಿಗೂ ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ. ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳದೊಡೆ ನೋಡಾ. ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳಪಾದ ಕಂಭಂಗಳು ನೋಡಾ. ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಹರಡು ನೋಡಾ. ಓಂಕಾರಪ್ರಣವ ಮಹದೋಂಕಾರಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ. ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ ಪ್ರಣವದತ್ತತ್ತ ಸ್ಥಾನಂಗಳೇ ಆ ಅಖಂಡ ಮಹಾಮೂಲಸ್ವಾಮಿಯ ಪದಾಂಗುಲಿಗಳು ನೋಡಾ. ಆ ಓಂಕಾರಪ್ರಣವದ ಮಹದೋಂಕಾರಪ್ರಣವದ ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಾಂಗುಷಾ*ಂಗುಲಿಗಳು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಸರವೇ ಪರಾತೀತಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಮಾತೇ ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ ಅತಿಮಹಾಜ್ಯೋತಿಪ್ರಣವ ನೋಡಾ. ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ವಪೆ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯಲ್ಲಿ ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ ಆ ನಿರಾಳಸ್ವಯಂಭುಲಿಂಗಂಗಳೇ ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ. ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ. ಆನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎಲ್ಲೆಲ್ಲಿ ಸುಳಿದಡೆ ಅಲ್ಲಲ್ಲಿ ಉಪಾಧಿ ಬಿಡದಯ್ಯಾ. ಈ ಉಪಾಧಿಗೆ ಅಪಾಯವನಿತ್ತು, ನಿರುಪಾಧಿಯಲ್ಲಿ ನಿಲಿಸಯ್ಯಾ. ಎಲ್ಲಾ ಬಯಕೆಯರತ ಬಟ್ಟೆಯ ತೋರಯ್ಯಾ. ಸಹಜ ಸಮ್ಯಕ್ ಪದವನಿತ್ತು ಸಲಹಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶಿವಭಕ್ತಿಯುಳ್ಳವಂಗೆ; ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ; ಮೋಹ ಬೇಡ, ಮದ ಬೇಡ, ಮತ್ಸರ ಬೇಡ. ಶಿವಭಕ್ತಿಯುಳ್ಳವಂಗೆ; ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು, ಮೋಹ ಬೇಕು, ಮದ ಬೇಕು, ಮತ್ಸರ ಬೇಕು. ಬೇಕೆಂಬುದಕ್ಕಾವ ಗುಣ ? ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ, ಲೋಭ ಬೇಕು ಪಾದೋದಕ ಪ್ರಸಾದದಲ್ಲಿ, ಮೋಹ ಬೇಕು ಗುರುಲಿಂಗ ಜಂಗಮದಲ್ಲಿ, ಮದ ಬೇಕು ಶಿವಚಾರದಿಂದ ಘನವಿಲ್ಲವೆಂದು, ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ_ಇಂತೀ ಷಡ್ಗುಣವಿರಬೇಕು. ಬೇಡವೆಂಬುದಕ್ಕಾವುದು ಗುಣ ? ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ, ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ, ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ._ ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು, ಬಿಡದೆ ಬೆಂಬತ್ತಿಸುವ ಪರಿಯ ನೋಡಾ. ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ ಬಿಡದೆ ವೇಧಿಸುವ ಬೆಡಗ ಕಂಡೆನಯ್ಯಾ ! ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ, ಬೇಡ ಬೇಡ ತನಗೆನ್ನದ ಸಜ್ಜನ ಮಡದಿ, ತನ್ನ ಗಂಡನ ಅಡಗಿ ಕೂಡುವ ಭೇದ !_ ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು. ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ, ಮಾಡುವರು ಹರಸುವರು ನೋಡುವರು ಮನದಣಿಯೆ ಕೊಡುವರು ಕೋಟಿ, ಸಹಜ ಒಂದೆ ಎಂದು ! ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು, ನೋಡಿರೆ ಮಸೆ ಮುಟ್ಟದ ಮಹಾಂತನ ! ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->