ಅಥವಾ

ಒಟ್ಟು 26 ಕಡೆಗಳಲ್ಲಿ , 14 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ. ಹೇಳಿಹೆನು ಕೇಳಿರಣ್ಣಾ: ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ, ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ. ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಭಿಲಾಷೆಯುಳ್ಳಡೆ, ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ. ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ_ ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ.
--------------
ಅಲ್ಲಮಪ್ರಭುದೇವರು
ವಸ್ತ್ರ ಬಲುಹಿನಲ್ಲಿ ಕಟ್ಟು, ಸೆಜ್ಜೆಯ ಬಲುಹಿನಲ್ಲಿ ಕಟ್ಟು. ಶಿವದಾರವ ಬಲುಹಿನಲ್ಲಿ ಕಟ್ಟೆಂದು ಹೇಳೂದು ಉಪದೇಶವೆ ? ಮತ್ತೆ ಕಟ್ಟುವರಿವುಂಟಾಗಿ, ಅಷ್ಟವಿಧಾರ್ಚನೆ, ಷೋಡಶೋಪಚಾರ, ಕಾಲನೇಮವೆಂದು ಹೇಳೂದು ದೀಕ್ಷೆಯೆ ? ಮತ್ತೆ ಕಾಲನೇಮವುಂಟಾಗಿ, ಇದನರಿಯದೆ ಹೇಳಿದಾತ ಶಿವದ್ರೋಹಿ. ಕೇಳಿದಾತ ಗುರುದ್ರೋಹಿ. ಐಕ್ಯವಿಲ್ಲದ ಮಾಟ, ಸಯಿದಾನದ ಕೇಡು. ಕೂಡಲಚೆನ್ನಸಂಗಯ್ಯಾ ಆ ಗುರುಶಿಷ್ಯರಿಬ್ಬರೂ ಉಭಯಭ್ರಷ್ಟರು.
--------------
ಚನ್ನಬಸವಣ್ಣ
ಬಸವಣ್ಣನ ನೆನೆವುದೆ ಷೋಡಶೋಪಚಾರ. ಬಸವಣ್ಣನ ನೆನೆವುದೆ ಪರಮತತ್ವ. ಬಸವಣ್ಣನ ನೆನೆವುದೆ ಮಹಾನುಭಾವ. ಕಲಿದೇವಾ, ನಿಮ್ಮ ಶರಣ ಬಸವಣ್ಣನ ನೆನೆದು, ಸಮಸ್ತಗಣಂಗಳೆಲ್ಲರೂ ಅತಿಶುದ್ಧರಾದರಯ್ಯ.
--------------
ಮಡಿವಾಳ ಮಾಚಿದೇವ
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಟ್ಟು, ಕಟ್ಟಿ ಪೂಜೆಯ ಮಾಡಬೇಕೆಂಬರಯ್ಯಾ. ಅದೆಂತೆಂದಡೆ:ಭೂಮಿಗೆ ಹುಟ್ಟಿ ಶಿಲೆಯಾದ, ಕಲ್ಲುಕುಟಿಕನ ಕೈಯಲ್ಲಿ ರೂಪಾದ, ಗುರುವಿನ ಕೈಯಲ್ಲಿ ಮೂರ್ತಿಯಾದ. ಇಂತೀ ಮೂವರಿಗೆ ಹುಟ್ಟಿದ ಸೂಳೆಯ ಮಗನ ನಾನೇನೆಂದು ಪೂಜೆಯ ಮಾಡಲಿ ? ಅದು ಬಿದ್ದಿತ್ತೆಂದು ಸಮಾಧಿಯ ಹೊಕ್ಕಿಹೆನೆಂಬವನು, ಅಸ್ತ್ರ ಸಮಾಧಿ ಜಲಾಂತರ ವನಾಂತರ ದಿಗಂತರದಲ್ಲಿ ಸತ್ತಡೆ ಕುಂಭಿನಿಪಾತಕ ನಾಯಕನರಕ. ಕೈಯ ಲಿಂಗ ಹೋದಡೆ ಮನದ ಲಿಂಗ ಹೋದುದೆ ?_ಎಂದು ಎತ್ತಿಕೊಂಡು, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವುದೆ ವ್ರತವು. ಇದ ಕಟ್ಟುವ ಭೇದವ, ಮುಟ್ಟುವ ಪಥವ ಚೆನ್ನಬಸವಣ್ಣನೊಬ್ಬನೆ ಬಲ್ಲನಲ್ಲದೆ ಮಿಕ್ಕ ಅಭ್ಯಾಸಕ್ಕೆ ಅಗ್ಘವಣಿಯ ಕೊಟ್ಟು ಪರವನೆಯ್ದಿದೆನೆಂಬ ಲಜ್ಜಗೇಡಿಗಳನೇನೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚವಿಷಯ ಸಂಗತವಾವುದೆಂದಡೆ: ಶಬ್ದಗುರು, ಸ್ಪರ್ಶಲಿಂಗ, ರೂಪುಜಂಗಮ, ರಸಪ್ರಸಾದ, ಗಂಧ ಅನುಭಾವ. ಇಂತೀ ಪಂಚವಿಂಶತಿಯವನಲ್ಲವೆನಬಲ್ಲನಾಗಿ ಬಸವಣ್ಣನು. ಮನ ಬುದ್ಧಿ ಚಿತ್ತ ಅಹಂಕಾರ ಚತುರ್ವಿಧ ಸ್ಥೂಲವಾವುದೆಂದಡೆ: ಮನ ಧ್ಯಾನ ಬುದ್ಧಿ ವಂಚನೆ ಇಲ್ಲದುದು. ಚಿತ್ತ ದಾಸೋಹ ಅಹಂಕಾರ ಜ್ಞಾನ ಇವರಲ್ಲಿ ಮಾಡಬಲ್ಲನಾಗಿ ಬಸವಣ್ಣನು. ಸತ್ವ ರಜ ತಮವೆಂಬೀ ತ್ರಿಕರಣವಾವುದೆಂದಡೆ: ಸತ್ವಶುದ್ಧ ರಜಸಿದ್ಧ ತಮಪ್ರಸಿದ್ಧ. ಇಂತೀ ತ್ರಿವಿಧ ಸನ್ನಹಿತನಾಗಿ ಬಸವಣ್ಣನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾವುದೆಂದಡೆ: ಕಾಮ ಪೂಜೆ, ಕ್ರೋಧ ಅನಿಮಿಷ, ಲೋಭ ಭಕ್ತಿ, ಮೋಹ ಅಷ್ಟವಿಧಾರ್ಚನೆ, ಮದ ಷೋಡಶೋಪಚಾರ ಮತ್ಸರ ಭವಂ ನಾಸ್ತಿ ಎಂದೆನಬಲ್ಲನಾಗಿ ಬಸವಣ್ಣನು, ಮಹಾದೇವನು ಬಸವಣ್ಣನು, ಮಹಾಲಿಂಗವು ಬಸವಣ್ಣಂಗೆ ಮತ್ತೇನು ಅಪ್ರತಿಮ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಯ್ಯ, ಕೇಳ, ಪ್ರಮಥಗಣಂಗಳೆಲ್ಲ ಷಡ್ವಿಧಭಕ್ತಿಯೆಂಬ ಪರಮಾಮೃತವ ಸೇವಿಸಿ, ಪ್ರವೃತ್ತಿಮಾರ್ಗದಲ್ಲಿ ಚರಿಸುವ ಆರು ವೈರಿಗಳ ಸಂಗವ ತ್ಯಜಿಸಿ, ನಿವೃತ್ತಿ ಮಾರ್ಗದಲ್ಲಿ ಚರಿಸುವ ಷಡ್ಗುಣಗಳ ಸಂಗವ ಸಾಧಿಸಿ, ಜಂಗಮದ ಆಚಾರ ವಿಚಾರವ ತಿಳಿದು, ಷಟ್‍ಸ್ಥಲಮಾರ್ಗದಲ್ಲಿ ನಿಂದು, ಭಕ್ತಿ-ಜ್ಞಾನ-ವೈರಾಗ್ಯದಲ್ಲಾಚರಿಸಿದ ವಿಚಾರವೆಂತೆಂದಡೆ : ಅನಾದಿನಿರಂಜನ-ಅಕಾಯಚರಿತ್ರ-ನಿರಾಲಂಬ-ಪರಶಿವಮೂರ್ತಿ ಸಾಕ್ಷಾತ್ ಶ್ರೀಗುರುದೇವನಿಂದ ಏಕವಿಂಶತಿ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡದು, ತನ್ನ ತಾನರ್ಚಿಸಿ, ಆ ಶ್ರೀಗುರುದೇವನ ಲಿಂಗಜಂಗಮಲೀಲೆ ಹೇಗುಂಟೋ ಹಾಂಗೆ, ಭಕ್ತಿಯ ಮಾಡಿ, ಶ್ರೀಗುರು-ಲಿಂಗ-ಜಂಗಮದಂತಃಕರಣವೆಂಬ ಪರಮಾತೃತಸುಧೆಯೊಳಗೆ ಲೋಲುಪ್ತರಾಗಿ, ನಿರಾವಯ ಸಮಾಧಿಯಲ್ಲಿ ಬಯಲಾದರು ನೋಡ. ಅದರ ವಿಚಾರವೆಂತೆಂದಡೆ : ಭಕ್ತಿಸ್ಥಲಕ್ಕೆ ಕಾರಣವಾದ ಬಸವಣ್ಣನೆ ಲಿಂಗಲಾಂಛನಗಳ ನೋಡಿ, ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ ! ಮಹೇಶಸ್ಥಲಕ್ಕೆ ಕಾರಣವಾದ ಮಡಿವಾಳದೇಶಿಕೇಂದ್ರನೆ ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಪಂಚಾಚಾರವ ನೋಡಿ ತನುಮನಧನವನೊಪ್ಪಿಸಿ ಶರಣೆಂದರಯ್ಯ. ಪ್ರಸಾದಿಸ್ಥಲಕ್ಕೆ ಕಾರಣವಾದ ಮರುಳಶಂಕರದೇವನೆ ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಮಂತ್ರ ಪಂಚಾಚಾರದಾಚರಣೆ, ಸಪ್ತಾಚಾರದ ಸಂಬಂಧದ ನಡೆನುಡಿಯ ವಿಚಾರಿಸಿ, ತನುಮನಧನವನೊಪ್ಪಿಸಿ ಶರಣೆಂದರಯ್ಯ. ಪ್ರಾಣಲಿಂಗಿಸ್ಥಲಕ್ಕೆ ಕಾರಣವಾದ ಸಿದ್ಧರಾಮೇಶ್ವರನೆ ಲಿಂಗಲಾಂಛನ, ಶ್ರೀವಿಭೂತಿ, ರುದ್ರಾಕ್ಷೆ, ಪಂಚಮಂತ್ರ, ದ್ವಾದಶಾಚಾರ ಮೊದಲಾದ ಸರ್ವಾಚಾರ ಸಂಪತ್ತಿನಾಚರಣೆ ಸರ್ವಾಂಗದಲ್ಲಿ ನೂನು ಕೂನುಗಳಿಲ್ಲದೆ, ನಡೆನುಡಿಗಳು ಹೊದ್ದಲ್ಲದೆ, ನಿರಾಭಾರಿ ವೀರಶೈವವ ನೋಡಿ ಇದೆ ಪರವಸ್ತುವೆಂದು ತನುಮನಧನವನೊಪ್ಪಿಸಿ ಶರಣೆಂದರಯ್ಯ. ಶರಣಸ್ಥಲಕ್ಕೆ ಕಾರಣವಾದ ಚೆನ್ನಬಸವೇಶ್ವರನೆ ಇಂತು ಚತುರ್ವಿಧಮೂರ್ತಿಗಳು ವಿಚಾರಿಸಿದ ಆಚರಣೆಯ ನೋಡಿ, ಗುರು-ಸೂತ್ರ-ಗೋತ್ರ-ಸಂಪ್ರದ ದೀಕ್ಷೆಯ ವಿಚಾರಿಸಿ, ಲಿಂಗಾಂಗ ಷಟ್ಸ್ಥಾನಂಗಳ ನೋಡಿ, ಗುರುಮಾರ್ಗಾಚಾರ ನಡೆನುಡಿಗಳ ವಿಚಾರಿಸಿ, ಸ್ವಾನುಭಾವ ಸಕೀಲದ ಗೊತ್ತ ತಿಳಿದು, ಲಾಂಚನವ ನೋಡಿ ಮನ್ನಿಸಿ, ತನುಮನಧನವನೊಪ್ಪಿಸಿ ಶರಣೆಂದರಯ್ಯ. ಐಕ್ಯಸ್ಥಲಕ್ಕೆ ಕಾರಣವಾದ ಅಜಗಣ್ಣಗಳೆ ಬಸವ, ಮಡಿವಾಳ, ಮರುಳುಶಂಕರ, ಸಿದ್ಧರಾಮ, ಚೆನ್ನಬಸವ ಮೊದಲಾದ ಮಹಾಗಣಂಗಳು ಅರ್ತಿ-ಉತ್ಸಾಹದಿಂದ ಭಕ್ತಿಯ ಮಾಡಿದ ಜಂಗಮವೆ ನನಗೆ ಮಹಾಪ್ರಸಾದವೆಂದು ಅವರಡಿಗಳಿಗೆ ವಂದಿಸಿ, ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ. ನಿರವಯಸ್ಥಲಕ್ಕೆ ಕಾರಣವಾದ ಪ್ರಭುದೇವನೆ ಆವ ಮತವೆಂದು ನೋಡದೆ, ಬಾಲಬ್ರಹ್ಮಿ-ಬಳಸಿಬ್ರಹ್ಮಿಯೆಂಬ ಸಂಸಾರ ಸಂಕಲ್ಪಸೂತಕವನೆಣಿಸದೆ, ಸರ್ವಾಂಗದವಯವಂಗಳ ನೋಡಿ, ಸರ್ವಸಂಗಪರಿತ್ಯಾಗದಿಂದ, ದ್ವಾದಶ ಮಲಂಗಳ ತ್ಯಜಿಸಿ, ಭಕ್ತಿ-ಜ್ಞಾನ-ವೈರಾಗ್ಯದಿಂದ ಸಮಸ್ತವಾದ ಭೋಗಯೋಗಾದಿಗಳಿಗೆ ಹೇವರಿಸಿ, ನಿರಾಸಕತ್ವದಿಂದ ಶಿವಧೋ ಎಂದು ಗುರೂಪಾವಸ್ತೆಯಂ ಮಾಡುವ ಜ್ಞಾನಕಲಾತ್ಮಂಗೆ ಜಂಗಮಾಕೃತಿಯಿಂದ ಪ್ರತ್ಯಕ್ಷವಾಗಿ, ಆ ಜ್ಞಾನಕಲಾತ್ಮನ ಉಪಾವಸ್ತೆಯನೊಂದಿಸಿ, ಆತಂಗೆ ಅಂಜಬೇಡವೆಂದು ಅಭಯಹಸ್ತವನಿತ್ತು. ರೇವಣಸಿದ್ಧೇಶ್ವರ ಮೊದಲಾದ ಗಣಾಚಾರ್ಯರ ಮಧ್ಯದಲ್ಲಿ ಈ ಜ್ಞಾನಕಲಾತ್ಮನನೊಪ್ಪಿಸಿ, ಅವರಿಂದ ನಿರಾಕಾರವಾದ ಪ್ರಾಣಲಿಂಗವ ಬಷ್ಕರಿಸಿ, ಪಂಚಕಲಶಸೂತ್ರದಿಂದ ಪ್ರಮಥಗಣ ಸಾಕ್ಷಿಯಾಗಿ ಆತನ ಷಡ್ವಿಧಸ್ಥಾನದಲ್ಲಿ ಸ್ಥಿರಗೊಳಸಿ, ಅಂತರಂಗ ಬಹಿರಂಗದಲ್ಲಿ ಅಷ್ಟವಿಧಾರ್ಚನೆ, ಷೋಡಶೋಪಚಾರ ಭಕ್ತಿಗಳನರುಪಿ, ಆ ಪರಶಿವಲಿಂಗದಲ್ಲಿ ನೈಷೆ*ಯ ನೋಡಿ, ಪ್ರಮಥಗಣರಾಧ್ಯ ಭಕ್ತ ಮಹೇಶ್ವರರೊಡಗೂಡಿ, ಏಕವಿಂಶತಿ ದೀಕ್ಷೆ ಮೊದಲಾಗಿ, ಪ್ರಮಥರು ನುಡಿದ ಎರಡೆಂಬತ್ತು ಕೋಟಿ ವಚನಾನುಭಾವದ ಉದಾಹರಣೆಯ ಬೋಧಿಸಿ, ಸ್ವಸ್ವರೂಪು ನಿಲುಕಡೆಯ ಬೋಧಿಸಿ, ನಾನು ನೀನು ಎಂಬ ಭಿನ್ನಭಾವವನಳಿದು, ಏಕಸ್ವರೂಪವೆಂಬ ಅಭಿನ್ನಲೀಲೆಯಿಂದ ಪಾದೋದಕ ಪ್ರಸಾದದಲ್ಲಿ ಏಕಭಾಜನವ ಮಾಡಿದಮೇಲೆ, ಶ್ರೀಗುರು ಬಸವ ಮೊದಲಾದ ಸಕಲಪ್ರಮಥಗಣಾರಾಧ್ಯರ ಕರದು, ಇಲ್ಲೊಂದು ನಿಜವಸ್ತು ಉಂಟೆಂದು ಹೇಳಿ, ತಾವು ಮೊದಲು ಶರಣು ಹೊಕ್ಕು, ತಮ್ಮ ಹಿಂದೆ ಶರಣಗಣಂಗಳೆಲ್ಲ ಶರಣುಹೊಕ್ಕು. ಅಡಿ ಮುಡಿಯಿಂದ ವಸ್ತುವ ಬೆಸಗೊಂಡು ಆ ಲಿಂಗಜಂಗಮದೇವರೂಪಡಗೂಡಿ ಬಯಲೊಳಗೆ ಮಹಾಬಯಲಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ ! ಪೂರ್ವವನಳಿದು ಪುನರ್ಜಾತನಾದ ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ ವೇಧಾ_ಮಂತ್ರ_ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು, ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು, ನೂರೊಂದು ಸ್ಥಲದ ಆಚರಣೆ_ಇನ್ನೂರಹದಿನಾರು ಸ್ಥಲದ ಸಂಬಂಧವನರಿದು, ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ ತನು_ಮನ_ಧನವಂಚನೆಯಿಲ್ಲದೆ ನಿರ್ವಂಚಕನಾಗಿ, ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ] ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಭಿಕ್ಷವ ಮಾಡಿ, (ಬೇಡಿ?) ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ, ಸತ್ಯಶುದ್ಧ ನಡೆನುಡಿಯಿಂದಾಚರಿಸಿ, ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ ಮೊದಲಾದ ಅರ್ಪಿತಾವಧಾನವ, ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ, ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು, ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ*ತ್ವಮಂ ತಿಳಿದು, ದಂತಧಾವನಕಡ್ಡಿ ಮೊದಲು Põ್ಞಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ ಗುರು_ಲಿಂಗ_ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ, ಸ್ವಯ_ಚರ_ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು ತೊಳದು ಬಹುಗುಣಿಯಲ್ಲಿ ಮಡಗಿಕೊಂಡು, ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ_ಆಭರಣ, ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ, ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ ! ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು. ಆ ಸಮಯದಲ್ಲಿ ಬಿಂದುಮಾತ್ರ [ವಾದರೂ] ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು. ಇನ್ನು ಜಂಗಮದ ಅಂಗುಷ* ಎರಡು_ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ, ಪೂರ್ವದಲ್ಲಿ ಭಾಂಡದೊಳಗೆ ತುಂಬಿದ ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಭಿಷೇಕವ ಮಾಡಿ, ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ, ಇಪ್ಪತ್ತೊಂದು ಪ್ರಣಮವ ಲಿಖಿಸಿ ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ ಸ್ನಾನ_ಧೂಳನ_ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು, ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು, ಅಷ್ಟಾಂಗಯುಕ್ತನಾಗಿ ಶರಣಾರ್ಥಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ ಪಾಲಿಸಬೇಕೆಂದು ಬೆಸಗೊಂಡು, ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಸಮರ್ಪಿಸಿ, ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ, ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ ಆ ಪರಶಿವಜಂಗಮಲಿಂಗದೇವನ ಚರಣಾಂಗುಷ*ವ, ತನ್ನ ವಾಮಕರಸ್ಥಲದಲ್ಲಿ ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯಗಳ ಮಾಡಿ, ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ ಬಲದಂಗುಷ*ದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು. ಎಡದಂಗುಷ*ದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು. ಎರಡಂಗುಷ*ದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು. ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ, ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ, ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾರ್ಥಿಯೆಂದು ಅಭಿವಂದಿಸಿ. ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ, ಅಷ್ಟಾಂಗ ಹೊಂದಿ ಶರಣುಹೊಕ್ಕು, ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು. ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು. ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ, ಶಕ್ತಿಯಾಗಲಿ, ದೊಡ್ಡವರಾಗಲಿ ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ, ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು. ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು_ಕೊಂಡ, ಭಕ್ತ_ಜಂಗಮವು ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು. ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ. ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ, ಶರಣಾರ್ಥಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಭಿವಂದಿಸಿ, ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ, ಭಕ್ತ_ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ_ ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ, ತಾಂಬೂಲ ಪಂಚವರ್ಣದ ಪತ್ರೆ ಪುಷ್ಪದ ಪೂಜೆಯ ರಚನೆಯ ಮಾಡುವೆನಯ್ಯಾ. ಅಷ್ಟವಿಧಾರ್ಚನೆ ಷೋಡಶೋಪಚಾರ ಮುಖ್ಯವಾಗಿ ಮಾಡುವೆನಯ್ಯಾ. ಸಕಲಕ್ಷೇಮದಿಂದ ನಡೆದು ನಿಮ್ಮಲ್ಲಿಗೆ ಸಾರುವೆನು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಹರಹರಾ ನೀವಿಪ್ಪಠಾವನರಿಯದೆ, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ ದಿಟ್ಟತನವ ನೋಡಾ ! ಶಿವಶಿವಾ ನಿಮ್ಮ ಶ್ರೀಮುಖವನರಿಯದೆ ಸಕಲ ಪದಾರ್ಥವ ನಿಮಗರ್ಪಿಸಿ ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ ! ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ ಆರು ಮೆಚ್ಚುವರು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗಸಂಬಂಧಿಯಾದ ಸದ್ಭಕ್ತನು ಏಕಭಕ್ತೋಪವಾಸಂ ಮಾಡಲಾಗದು. ಅದೆಂತೆಂದಡೆ: ದೇವರಾರೋಗಣೆ ತಪ್ಪುವುದು, ಅಷ್ಟವಿಧಾರ್ಚನೆ ಷೋಡಶೋಪಚಾರ ಶ್ರೀ ತಪ್ಪುವುದು, ಶ್ರೀಗುರುವಾಜ್ಞೆ ತಪ್ಪುವುದು. ದೋಷಕಾರಿಯಪ್ಪನು ಕೇಳಿರಣ್ಣಾ. ಪ್ರಾಣಲಿಂಗಸಮಾಯುಕ್ತಾ ಏಕಭುಕ್ತೋಪವಾಸಿನಃ ಪ್ರಸಾದೋ ನಿಷ್ಫಲಶ್ಚೈವ ರೌರವಂ ನರಕಂ ಭವೇತ್ ಎಂದುದಾಗಿ, ಇದು ಕಾರಣ, ನಿತ್ಯನೈಮಿತ್ತಿಕ ಪಂಚಪರ್ವ ವಿಶೇಷತಿಥಿಗಳಲ್ಲಿ ಆವ ದಿನದಲ್ಲಿಯೂ ಒಂದೆ ಎಂದು ಅಷ್ಟವಿಧಾರ್ಚನೆ ಷೋಡಶೋಪಚಾರವೆ ಕರ್ತವ್ಯವೆಂದು ದೇವರಾರೋಗಣೆಯ ಮಾಡಿಸಿ, ಪ್ರಸನ್ನತ್ವವ ಪಡೆದು ಪ್ರಸಾದವ ಗ್ರಹಿಸಿ ಮುಕ್ತರಪ್ಪುದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಒಂದೆಂದರಿದಂಗೆ ಎರಡೆಂಬುದಿಲ್ಲ, ಎರಡೆಂದರಿದಂಗೆ ಮೂರೆಂಬುದಿಲ್ಲ, ಮೂರೆಂದರಿದಂಗೆ ಮುಟ್ಟಿದ, ನಾಲ್ಕೆಂದರಿದಂಗೆ ನಗುತಿರ್ದ, ಐದೆಂದರಿದಂಗೆಯ್ದಿದ, ಆರೆಂದರಿದಂಗೆ ಮೀರಿದ, ಏಳೆಂದರಿದಂಗೆ ಎಚ್ಚರಿಸಿದ, ಎಂಟೆಂದರಿದಂಗೆ ಕಂಟಕವಿಲ್ಲ, ಒಂಬತ್ತೆಂದರಿದಂಗೆ ಸಂಭಾವಿತ, ಹತ್ತೆಂದರಿದಂಗೆ ಒಂದೆಂಬುದಿಲ್ಲ. ಮಾಟ ಕೂಟ ನೋಟ ಶೃಂಗಾರಬೇಟ ಷೋಡಶೋಪಚಾರ ಕೂಟಕ್ಕೆಂದು ಮಾಡಿದ ನಾಚಯ್ಯಪ್ರಿಯ ಚೆನ್ನರಾಮೇಶ್ವರ.
--------------
ಅನಾಮಿಕ ನಾಚಯ್ಯ
ಪರುಷದ ಪರ್ವತದಲ್ಲಿ ಕಬ್ಬುನಂಗಳುಂಟೆ ? ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ ಅವಗುಣಂಗಳುಂಟೆ ? ಭಕ್ತಕಾಯ ಮಮಕಾಯ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರ ಹುಸಿ ಕಾಣಿರೇ. ಗಾಣದೆತ್ತಿನಂತೆ ಮೆಟ್ಟಿದ ಹಜ್ಜೆಯ ಮೆಟ್ಟುವ ಭಕ್ತನ ಪರಿಯ ನೋಡಾ! ಕೊಂಬಲ್ಲಿ ಐದುವನು, ಕೊಡುವಲ್ಲಿ ನಾಲ್ಕುವನು ಒಂಬತ್ತರಿಂದಲ್ಲಿ ಭಕ್ತಿಭಾಗಕ್ಕಿನ್ನೆಂತೋ? ಮೂರ್ತಿವಿಡಿದು ಮೂರ್ತಿಯನರಿಯರು. ಮಾರುವರು ಗುರುಲಿಂಗವನು ತ್ರಿವಿಧಕ್ಕೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಇನ್ನಷ್ಟು ... -->