ಅಥವಾ

ಒಟ್ಟು 18 ಕಡೆಗಳಲ್ಲಿ , 7 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ, ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ, ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ ಪ್ರಣವವಾಯಿತ್ತಯ್ಯ ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತಯ್ಯ. ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ತನ್ನ ನಿರಂಜನ ಶಕ್ತಿಯ ನಸುನೆನಹಿಂದ ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ ಮೊಳೆದೋರಿತ್ತಯ್ಯ. ಆ ಶುದ್ಧ ಪ್ರಸಾದವೆಂಬ ಮೊಳೆ ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ ಕರ್ಣಿಕಾಪ್ರಕಾಶ ಪಂಚನಾದವನುಳ್ಳ ಷೋಡಶ ಕಲಾಪುಂಜರಂಜಿತವಪ್ಪ ಹನ್ನೊಂದನೂರುದಳದ ಪತ್ರದಲ್ಲಿ ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ. ಆ ಸಿದ್ಧಪ್ರಸಾದವೆಂಬ ಎಳವೆರೆ ತನ್ನ ಶಾಂತಶಕ್ತಿಯ ಚಲನೆಯಿಂದ ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ. ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು. ಆ ಹೂಗಳ ಮಹಾಕೂಟದಿಂದ ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು. ಆ ಹಣ್ಣುಗಳ ಆದ್ಯಂತಮಂ ಪಿಡಿದು ಸದ್ಯೋನ್ಮುಕ್ತಿಯಾಗಬೇಕೆಂದು ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು ತಿಳಿದು ನೋಡಿ ಕಂಡು ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ ಜ್ಞಾನ ಕ್ರೀಗಳೆಂಬ ದೃಢದಿಂದೇರಿ ನಾಲ್ಕೆಲೆಯ ಪೀತವರ್ಣದ ಹಣ್ಣ ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು ಆರೆಲೆಯ ನೀಲವರ್ಣದ ಹಣ್ಣ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು ಹತ್ತೆಲೆಯ ಸ್ಫಟಿಕವರ್ಣದ ಹಣ್ಣ ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ ಸುಮನನೆಂಬ ಹಸ್ತದಲ್ಲಿ ಪಿಡಿದು ಹದಿನಾರೆಲೆಯ ಮಿಂಚುವರ್ಣದ ಹಣ್ಣ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಆಸನಸ್ಥಿರವಾಗಿ ಕಣ್ಮುಚ್ಚಿ ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ರೇಚಕ ಪೂರಕ ಕುಂಭಕಂಗೈದು ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ ಸಿಂಹನಾದಂಗಳಂ ಕೇಳಿ ಹರುಷಂಗೊಂಡು ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ ದಶವಾಯುಗಳ ಹೆಸಗೆಡಿಸಿ ಅಷ್ಟಮದಂಗಳ ಹಿಟ್ಟುಗುಟ್ಟಿ ಅಂತಃಕರಣಂಗಳ ಚಿಂತೆಗೊಳಗುಮಾಡಿ ಮೂಲಹಂಕಾರವ ಮುಂದುಗೆಡಿಸಿ ಸಪ್ತವ್ಯಸನಂಗಳ ತೊತ್ತಳದುಳಿದು ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ ಕರ್ಮೇಂದ್ರಿಯಂಗಳ ಕಾಲಮುರಿದು ತನ್ಮಾತ್ರೆಯಂಗಳ ತೋಳಕೊಯ್ದು, ಅರಿಷಡ್ವರ್ಗಂಗಳ ಕೊರಳನರಿದು ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ- ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಓಂಕಾರವೆಂಬ ಮಂತ್ರದಿಂದ ಸಂತೈಸಿ ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ ಆ ಪರಬ್ರಹ್ಮವೆ ತಾನೆಯಾಗಿ ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ ನಿರ್ಭಾವವೆಂಬ ಹಸ್ತದಿಂ ಪಿಡಿದು ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ ಆ ನಿಷ್ಕಲಬ್ರಹ್ಮವೇ ತಾನೆಯಾಗಿ ಮೂರುಮಂಟಪದ ಮಧ್ಯದ ಕುಸುಮಪೀಠದಲ್ಲಿಪ್ಪ ಶೂನ್ಯಬ್ರಹ್ಮದ ಶೂನ್ಯಪಾದಮಂ ನಿಷ್ಕಲವೆಂಬ ಹಸ್ತದಿಂ ಪಿಡಿದು ಕ್ಷಕಾರವೆಂಬ ಮಂತ್ರದಿಂ ಸಂತೈಸಿ ಘೃತಘೃತವ ಕೂಡಿದಂತೆ ಶೂನ್ಯಬ್ರಹ್ಮವನೊಡಗೂಡಿ ಆ ಶೂನ್ಯಬ್ರಹ್ಮವೇ ತಾನೆಯಾಗಿ- `ನಿಶಬ್ದಂ ಬ್ರಹ್ಮ ಉಚ್ಯತೇ' ಎಂಬ ಒಂಬತ್ತು ನೆಲೆಯ ಮಂಟಪದೊಳಿಪ್ಪ ನಿರಂಜನಬ್ರಹ್ಮದ ನಿರಂಜನಪಾದಮಂ ಶೂನ್ಯವೆಂಬ ಹಸ್ತದಿಂ ಪಿಡಿದು ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ ಬಯಲ ಬಯಲು ಬೆರಸಿದಂತೆ ನಿರಂಜನಬ್ರಹ್ಮವೇ ತಾನೆಯಾಗಿ- ಮಹಾಗುರು ಸಿದ್ಧಲಿಂಗಪ್ರಭುವಿನ ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು. ಎನ್ನ ಹೃದಯಕಮಲೆಂಟು ಮಂಟಪದ ಚತುಷ್ಪಟ್ಟಿಕಾ ಮಧ್ಯದ ಪದ್ಮಪೀಠದಲ್ಲಿ ಎನ್ನ ತಂದೆ ಸುಸ್ಥಿರವಾಗಿ ಎನಗೆ ಷಟ್ಸ ್ಥಲಮಾರ್ಗ-ಪುರಾತರ ವಚನಾನುಭಾವ- ಭಕ್ತಿ ಜ್ಞಾನ ವೈರಾಗ್ಯವೆಂಬ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ. ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು ಮೀಟು ಜವ್ವನೆಯಾದೆನಯ್ಯ ನಾನು. ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ. ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ ಪರಂಜ್ಯೋತಿಲಿಂಗವೆ ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ ಕಂಠಮಾಲೆಯಂ ಧರಿಸು. ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು. ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ ರತ್ನದ ಕರ್ಣಾಭರಣಂಗಳಂ ತೊಡಿಸು. ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ ತ್ರಿಪುಂಡ್ರಮಂ ಧರಿಸು. ಕ್ರೀಯಲ್ಲದೆ ನಿಷ್ಕಿ ್ರೀಯ ಮಾಡೆನೆಂಬ ಮೌಕ್ತಿಕದ ಬಟ್ಟನಿಕ್ಕು. ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ ಕನಕಲತೆಯ ಬಾಸಿಂಗಮಂ ಕಟ್ಟು. ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ ನವ್ಯದುಕೂಲವನುಡಿಸು. ಲಿಂಗಾಣತಿಯಿಂದ ಬಂದುದನಲ್ಲದೆ ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ ರತ್ನದ ಕಂಕಣವಂ ಕಟ್ಟು. ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ ಪರಿಮಳವಂ ಲೇಪಿಸು. ಶಿವಪದವಲ್ಲದೆ ಚತುರ್ವಿಧಪದಂಗಳ ಬಯಸೆನೆಂಬ ಹಾಲು ತುಪ್ಪಮಂ ಕುಡಿಸು. ಪ್ರಸಾದವಲ್ಲದೆ ಬ್ಥಿನ್ನರುಚಿಯಂ ನೆನೆಯೆನೆಂಬ ತಾಂಬೂಲವನಿತ್ತು ಸಿಂಗರಂಗೆಯ್ಯ. ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ ಪ್ರಮಥಗಣಂಗಳ ಮಧ್ಯದಲ್ಲಿ ಎನ್ನ ಮದುವೆಯಾಗಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಗುಣ ರೂಪಂಗಳ ಮೀರಿ ಶಿಷ್ಯಜನ ಮನೋಜ್ಞಾನಾಂಧಕಾರಕ್ಕೆ ಸೂರ್ಯೋದಯನಾಗಿ, ಲಲಾಟಲೋಚನ ಚಂದ್ರಕಳಾ ದಶಭುಜಂಗಳಂ ಜ್ಞಾನ ಶಾಂತಿ ಬಾಹುದ್ವಯಂಗಳಲ್ಲಿ ಪುದುಂಗೊಳಿಸಿ, ಭುವನ ಹಿತಾರ್ಥಮಾಗಿ ದೇಶಿಕಸ್ವರೂಪಮಂ ತಾಳ್ದು, ದೀಕ್ಷಾ ಶಿಕ್ಷಾ ಸ್ವಾನುಭಾವಾತ್ಮಕನಾಗಿ ಚರಿಪ ಷಟ್ಸ ್ಥಲಬ್ರಹ್ಮ ಪ್ರಬೋಧಕ ಪ್ರಭು ಪ್ರಸನ್ನಮೂರ್ತಿ ಪರಮ ಶಿವಲಿಂಗ ಭಕ್ತಜನಾಂತರಂಗಾ. ಮನ್ಮಾನಸಾಂಭೋಜ ಭೃಂಗ ತವ ಪಾದ ಪಲ್ಲವಂಗಳೆ ಮನೋವಚನಕಾಯಂಗಳಿಂ ತ್ರಿವಾರಂ ಶರಣು ಶರಣು.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಆ ಶಾಂಭವಚಕ್ರಮೆ ಪೀಠ ಕಟ್ಯಾತ್ಮಕ ಸೂರ್ಯಮಂಡಲ, ವರ್ತುಳ ಗೋಮುಖಾತ್ಮಕ ಚಂದ್ರಮಂಡಲ, ನಾಳಗೋಳಕಾತ್ಮಕ ಪಾವಕಮಂಡಲಂಗಳೆಂದು ತ್ರಿಸ್ಥಾನಂಗಳ್. ಅವರಲ್ಲಿ ಪೂರ್ವೋಕ್ತ ಸಂಬಂದ್ಥಿತ ಸಕೀಲ ನಿಕರ ಸಮನ್ವಿತ ಷಟ್ಸ ್ಥಲಾತ್ಮಕವಾದ ಸೋಹಮೆಂಬಾತ್ಮಪ್ರಸಾದ. ಮನುವಿನ ವ್ಯಂಜನ ಸ್ ಹ್ ಎಂಬಕ್ಷರದ್ವಯಮಂ ಕುಂಭಕದೊಳ್ಳೋಪಿಸಲುಳಿಜಾಮೆಂಬೇಕಾಕ್ಷರಮಯವಾದ ಮಹಾಲಿಂಗವೆನಿಸಿತ್ತಾ ಮಹಾಲಿಂಗವೆ ಮಹಾಚಕ್ರವೆನಿಸಿತ್ತಾ ಮಹಾಚಕ್ರವೆ ಸಹಸ್ರಕಮಲವೆನಿಸಿತ್ತೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಶಿವಶರಣಂಗೆ ನಿಜೈಕ್ಯಪದಂಗಳು ದೊರೆಕೊಂಬುವ ತೆರನ ಶ್ರುತಿ ಗುರು ಸ್ವಾನುಭಾವದಿಂದ ನುಡಿವುತಿಪ್ಪೆ ಕೇಳಿರಯ್ಯ. ಜನನ ಮರಣಕಂಜಿ ತಾನಾರೆಂಬುದಂ ಸ್ವಾನುಭಾವದಿಂ ನೋಡಿ ಎಲ್ಲಿಂದೊಗೆದೆನೆಂಬುದಂ ಬಗೆಗೊಂಡು ಅರಿವು ತಲೆದೋರಿ ಪುಣ್ಯಪಾಪಕ್ಕೆ ಬೀಜಾಂಕುರಮಪ್ಪ ಮಲತ್ರಯಂಗಳಿಗೆ ತಲೆಗೊಡಹಿ ಭೋಗಮಂ ನೀಗಿ ಭುಕ್ತಿಯಿಂ ತೊತ್ತಳದುಳಿದು ಬಂಧುವರ್ಗಮಂ ಭಂಗಿಸಿ ಉಪಾದ್ಥಿಕೆಯನುರುಹಿ ಒಡಲಾಸೆಯಂ ತಲೆವೊಡೆಯನಿಕ್ಕಿ ಅಹಂಕಾರಂಗಳನಳಿದು ಮಮಕಾರಂಗಳಂ ಮುಂದುಗೆಡಿಸಿ ಲೋಕದ ನಚ್ಚುಮೆಚ್ಚಿಗೆ ಕಿಚ್ಚುಗುತ್ತಿ ಜ್ಞಾನ ಕ್ರೀಗಳಲ್ಲಿ ದೃಢವ್ರತವಾಗಿ ಕರಿಗೊಂಡು ಆಸನದಲ್ಲಿ ಮರಹ ಮಗ್ಗಿಸಿ ಮನ ತನುವನಪ್ಪಿ ಸರ್ವ ಕರಣಂಗಳಂ ಚರಲಿಂಗಮುಖವ ಮಾಡಿ ಆತ್ಮವಿದ್ಯಾಲಿಂಗದಲ್ಲಿ ಮನಸಂದು ಪಂಚಪ್ರಸಾದಾತ್ಮಕನಾದ ಘನಲಿಂಗದ ಬೆಳಗ ಪಿಂಡಾಂಡದಲ್ಲಿ ಜ್ಞಾನದಿಕ್ಕಿನಿಂದ ಪರಿಪೂರ್ಣವಾಗಿ ಕಂಡು ಪೆಣ್ದುಂಬಿಯನಾದವೆ ಮೊದಲಾದ ಸಿಂಹನಾದವೆ ಕಡೆಯಾದ ಆರೆರಡು ಪ್ರಕಾರದ ನಾದಂಗಳಂ ಕೇಳಿ ಹರುಷಂ ಹರವರಿಗೊಂಡು ಎನಗೆ ಶಿವತತ್ವ ಸಾಧ್ಯವಾಯಿತು. ಪರಶಿವನಲ್ಲಿ ಒಡಗೂಡಿ ಪರಬ್ರಹ್ಮವಾದೆನೆಂದು, ಅಹಂಕರಿಸಿ ಕ್ರೀಯಂ ಬಿಟ್ಟು ಗಂಬ್ಥೀರಜ್ಞಾನದೊಳಿರುವ ಶರಣಂಗೆ ಮೂರೊಂದು ವಿಧದ ಪದಂಗಳು ಬಪ್ಪವಲ್ಲದೆ ಶಿವನಲ್ಲಿ ನಿಜೈಕ್ಯವಿಲ್ಲ. ಅದೇನು ಕಾರಣವೆಂದೊಡೆ- ಷಟ್ಸ ್ಥಲಬ್ರಹ್ಮಿಯೆನಿಸಿಕೊಂಡು ಆರುಸ್ಥಲವಿಡಿದು ಆಚರಿಸಿ ಮೂರುಸ್ಥಲದಲ್ಲಿ ಅವಧಾನಿಯಾಗಿ ಎರಡೊಂದು ಸ್ಥಲ ಒಂದಾದ ಸ್ಥಲದಲ್ಲಿ ಶರಣಲಿಂಗವೆಂಬುಭಯವಳಿದು ನೂರೊಂದುಸ್ಥಲದೊಳಗೆ ಪ್ರಭಾವಿಸಿ ಪರಿಪೂರ್ಣವಾಗಿ ಸಿದ್ಧಪ್ರಸಾದವೆಂಬ ನಿಷ್ಕಲಬ್ರಹ್ಮದಲ್ಲಿ ಉರಿ ಕರ್ಪೂರದಂತೆ ಬೆಳಗುದೋರಿ ಶುದ್ಧಪ್ರಸಾದವನಂಗಂಗೊಂಡು ನಿರಂಜನ ಪ್ರಸಾದವನೊಡಗೂಡಿದ ಬಸವರಾಜದೇವರು ಉತ್ತುಂಗಲಿಂಗದಲ್ಲಿ ಐಕ್ಯವಾಗುವನ್ನಬರ ಶಿವಲಿಂಗಪೂಜೆಯಂ ಬಿಟ್ಟ[ರೆ]? ಜಪ ತಪ ನಿತ್ಯ ನೇಮಂಗಳ ಬಿಟ್ಟ[ರೆ]? ಲಿಂಗಕ್ಕೆ ಕೊಟ್ಟು ಕೊಂಬ ಅರ್ಪಿತವಧಾನಂಗಳಂ ಬಿಟ್ಟ[ರೆ]? ತೀರ್ಥಪ್ರಸಾದದಲ್ಲಿ ಒಯ್ಯಾರಮಂ ಬಿಟ್ಟ[ರೆ]? ಮಾಡಿ ನೀಡುವ ದಾಸೋಹಮಂ ಬಿಟ್ಟ[ರೆ]? ಗುರುಲಿಂಗ ಜಂಗಮವ ಕಂಡು ಪೊಡಮಡುವುದಂ ಬಿಟ್ಟ[ರೆ]? ಬಿಜ್ಜಳನ ಓಲಗದ ಸಭಾಮಧ್ಯಕ್ಕೆ ಹೋಗಿ ತನ್ನ ದಿವ್ಯ ಶ್ರೀ ಪಾದಪದ್ಮಂಗಳಂ ಬಿಜ್ಜಳಂಗೆ ತೋರಿ ಅವನ ಕರ್ಮಾದಿಕರ್ಮಂಗಳಂ ಸುಟ್ಟು ಅವನ ರಕ್ಷಿಪುದಂ ಬಿಟ್ಟ[ರೆ]? ಇಂತಿವೆಲ್ಲವು ಕ್ರೀಯೋಗಗಳು. `ಕ್ರಿಯಾದ್ವೆ ೈತಂ ನ ಕರ್ತವ್ಯಂ ಜ್ಞಾನಾದ್ವೆ ೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವ ಶುದ್ಧಾಂತು ಶಾಂಕರಿ||' ಇಂತೆಂದುದಾಗಿ ಇದುಕಾರಣ ಐಕ್ಯವಾಗುವನ್ನಬರ ಕ್ರೀಯೊಳಗೊಂಡ ಶರಣಂಗೆ ನಿಜಮುಕ್ತಿಯಲ್ಲದೆ ಐಕ್ಯವಾಗುವುದಕ್ಕೆ ಮುನ್ನವೇ ಕ್ರೀಯಳಿದ ಶರಣನು ಸಾಯುಜ್ಯಪದಸ್ಥಲನಪ್ಪನಲ್ಲದೆ ಹರನಲ್ಲಿ ಸಮರಸವಿಲ್ಲವೆಂದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ ಹಂಬಲಿಸಿ ಹಲಬುತಿಪ್ಪರಣ್ಣ. ಕಠಿಣ ಪದಾರ್ಥವ ಸವಿದೊಡೆ ವಿರತಿಯೆ? ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ? ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ? ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ ವಿರತಿಯೆ? ಕ್ರೀಯೆಲ್ಲಿ ಮುಳುಗಿದೊಡೆ ವಿರತಿಯೆ? ನಿಷ್ಕಿ ್ರೀಯ ಮಾಡಿದೊಡೆ ವಿರತಿಯೆ? ಮೌನಗೊಂಡಡೆ ವಿರತಿಯೆ? ನಿರ್ಮೌನವಾದಡೆ ವಿರತಿಯೆ? ಕ್ರೀಯನಾಚರಿಸಿ, ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ? ಇಂತಿವೆಲ್ಲವು ವಿರತಿಯ ನೆಲೆಯನರಿಯದೆ ತಲೆಬಾಲಗೆಟ್ಟು ಹೋದವು. ಇನ್ನು, ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ- ಷಟ್ಸ ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ ಹಿಡಿದ ವ್ರತನೇಮಂಗಳಲ್ಲಿ ನೈಷೆ*ಯಾಗಿ ಈಷಣತ್ರಯಂಗಳ ಘಾಸಿಮಾಡಿ ಬಹಿರಂಗಮದಂಗಳ ಬಾಯ ಸೀಳಿ ಅಂತರಂಗಮದಂಗಳ ಸಂತೋಷಮಂ ಕೆಡಿಸಿ ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ ಎಂಟೆರಡುದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು ಸುಗುಣ ದುರ್ಗುಣಂಗಳ ನಗೆಗೊಳಗುಮಾಡಿ ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ ತನು ಮನವ ಸೋಂಕಿದ ಸಾಕಾರ ನಿರಾಕಾರವೆಂಬ ಪದಾರ್ಥಂಗಳ ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ ಮಧ್ಯವೀಗ ಸಂಗಮಕ್ಷೇತ್ರ. ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ ತೋಂಟದ ಅಲ್ಲಮನೆಂಬ ಪರಬ್ರಹ್ಮದ ಬೆಳಗಿನ ಪ್ರಭೆಯ ಮೊತ್ತಮಂ ಕಂಡು ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ ಪೂಜೆಯಂ ಮಾಡಿ ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ. ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ ಮಾತಿಂಗೆ ಮಾತು ಕೊಟ್ಟು ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಸ್ಥೂಲ ಸೂಕ್ಷ ್ಮ ಕಾರಣಾಂಗತ್ರಯದಲ್ಲಿ ಸ್ಥೂಲ ಸೂಕ್ಷ ್ಮ ಕಾರಣ ಲಿಂಗವಾಗಿ ನಿಂದೆಯಯ್ಯಾ. ಮಹೇಶ್ವರ ಸದಾಶಿವ ಪರಮ ಶಿವಲಿಂಗ ದಿವ್ಯನಾಮ ಷಟ್ಸ ್ಥಲಬ್ರಹ್ಮ ದೃಙ್ಮಂಡಲ ವಿರಾಜಿತ ಶುದ್ಧ ಪ್ರಸಾದರೂಪ ಶಿವಲಿಂಗ ನಿರಂತರಾಂತರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಕಣ್ಣಿನಲ್ಲಿ ಕಾಮ, ಮನದಲ್ಲಿ ಕ್ರೋಧ ಪ್ರಾಣದಲ್ಲಿ ಲೋಭ, ಬುದ್ಧಿಯಲ್ಲಿ ಮದ ವಿವೇಕದಲ್ಲಿ ಮತ್ಸರ ಅರುಹಿನಲ್ಲಿ ಮಾಯವುಳ್ಳನ್ನಕ್ಕರ ಎಂತು ಭಕ್ತನೆಂಬೆ? ಎಂತು ಮಾಹೇಶ್ವರನೆಂಬೆ? ಎಂತು ಪ್ರಸಾದಿಯೆಂಬೆ? ಎಂತು ಪ್ರಾಣಲಿಂಗಿಯೆಂಬೆ? ಎಂತು ಶರಣನೆಂಬೆ? ಎಂತು ಐಕ್ಯನೆಂಬೆ? ಎಂತು ಷಟ್ಸ ್ಥಲದಲ್ಲಿ ಸಂಪೂರ್ಣನೆಂದೆಂಬೆ? ಎಂತು ಧ್ಯಾನಿಗಳೆಂಬೆ? ಎಂತು ಅನುಭಾವಿಗಳೆಂಬೆ? ವಾಕುಪೋಟಾರ್ಥಿಗಳು, ಉದರ ಘಾತಕರ ಎನಗೊಮ್ಮೆ ತೋರದಿರಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮತ್ತಂ, ಮೊದಲಂಗ ಷಟ್ಸ ್ಥಲದಲ್ಲಿ ಭಕ್ತಸ್ಥಳವೊಂದೆ ಪಿಂಡ ಪಿಂಡಜ್ಞಾನ ಸಂಸಾರಹೇಯ ಗುರುಕರುಣ ಲಿಂಗಧಾರಣ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಭಕ್ತೋಭಯ ತ್ರಿವಿಧಸಂಪಚ್ಚತುರ್ವಿಧಸಾರಸೋಪಾಧಿ ನಿರುಪಾಧಿ ಸಹಜದಾನಂಗಳೆಂದು ಪದಿನೈದು ತೆರನಲ್ಲಿ ನೀನೆ ಆಚಾರಲಿಂಗಮಾಗಿ ನೆಲಸಿರ್ಪೆಯಯ್ಯಾ, ಚಿದ್ಗಗನಚಂದ್ರ ಚಿರಂತನ ಪ್ರಮಥೇಂದ್ರ ಚಿತ್ತಜಗಜ ಮೃಗೇಂದ್ರ ಚಿರಾಯುರ್ದಾಯಿ ಪರಮ ಶಿವಲಿಂಗೇಂದ್ರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಉಟ್ಟಡೇನು ತೊಟ್ಟಡೇನು ಮಲಮೂರು ಮುಟ್ಟದನ್ನಕ್ಕ? ಉಟ್ಟು ತೊಟ್ಟು ಬೆಟ್ಟುಣಿಗಿ ಕಟ್ಟಳೆ ಷಟ್ಸ ್ಥಲಗುರುವರ್ಯ ಚೆನ್ನಬಸವಣ್ಣ ಮೆರೆಯಲ್ಲವೆ? ಕಪಿಲಸಿದ್ಧಮಲ್ಲಿಕಾರ್ಜುನಂಗವೆ.
--------------
ಸಿದ್ಧರಾಮೇಶ್ವರ
ಅಯ್ಯಾ, ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ನಿತ್ಯ ನಿರಂಜನ ಗುರು-ಲಿಂಗ-ಜಂಗಮ ಶಿವಶರಣರ ಸತ್ಯ ಸನ್ಮಾರ್ಗದ ಗೊತ್ತಿನ ಮರ್ಯಾದೆಯನರಿಯದೆ ಮತ್ರ್ಯದ ಜಡಜೀವಿ ಭವಿಪ್ರಾಣಿಗಳ ಹಾಂಗೆ ಗುಹ್ಯಲಂಪಟಕಿಚ್ಛೆಸಿ ದಾಸಿ ವೇಶಿ ಸೂಳೆ ರಂಡೆ ತೊತ್ತುಗೌಡಿಯರ ಪಟ್ಟ ಉಡಿಕೆ ಸೋವಿಯೆಂದು ಮಾಡಿಕೊಂಡು ಭುಂಜಿಸಿ, ಷಟ್ಸ ್ಥಲ ಬ್ರಹ್ಮಾನುಭಾವವ ಕೇಳಿ ಹೇಳುವ ಮೂಳ ಬೊಕ್ಕಿಯರ ಕಂಡು ಎನ್ನ ಮನ ನಾಚಿತ್ತು ಕಾಣೆ! ಅವ್ವ ನೀಲವ್ವನ ಮೋಹದ ಮಗಳೆ! ಅಪ್ಪ ಬಸವಣ್ಣನ ಸುಚಿತ್ತದ ಪು[ತ್ರಿಯೆ]! ನಿಷ್ಕಳಂಕ ಸದ್ಗುರುಪ್ರಭುದೇವರ ಸತ್ಯದ ಸೊಸೆಯೆ! ಅಣ್ಣ ಮಡಿವಾಳಪ್ಪನ ಭಾವ, ಚನ್ನಮಲ್ಲಿಕಾರ್ಜುನನರ್ಧಾಂಗಿಯೆ! ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳೆ! ಎನ್ನಕ್ಕ ಮಹಾದೇವಿ ಕೇಳವ್ವ! ಮತ್ರ್ಯದ ಜಡಜೀವಿ ಭ್ರಷ್ಟರ ಬಾಳಿವೆ ಎಂದೆ!
--------------
ಘಟ್ಟಿವಾಳಯ್ಯ
ಅಯ್ಯಾ ಬಸವಾದಿ ಪ್ರಮಥರೇ ನಿಮ್ಮ ಕರುಣಪ್ರಸಾದವ ನಾನು ಆದಿ ಅನಾದಿಯಲ್ಲಿ ದಣಿಯಲುಂಡ ದೆಸೆಯಿಂದಲೆನ್ನ ತನು ಷಟ್ಸ ್ಥಲವನೊಳಕೊಂಡು ಉದಯವಾಯಿತ್ತು. ಎನ್ನ ಪಾದ ಷಟ್‍ಸ್ಥಲಕ್ಕೆ ಒಪ್ಪವಿಟ್ಟಲ್ಲದೆ ಅಡಿಯಿಡದು. ಎನ್ನ ಹಸ್ತ ಷಟ್‍ಸ್ಥಲಪತಿಯನಲ್ಲದೆ ಪೂಜೆಯ ಮಾಡದು. ಎನ್ನ ಘ್ರಾಣ ಮೊದಲು ಶ್ರೋತ್ರ ಕಡೆಯಾದ ಪಂಚೇಂದ್ರಿಯಂಗಳು ಷಟ್ಸ ್ಥಲವನಲ್ಲದೆ ಆಚರಿಸವು. ಎನ್ನ ಮನ ಷಟ್ಸ ್ಥಲದ ಷಡ್ವಿಧಲಿಂಗಂಗಳ ಮೇಲಲ್ಲದೆ ಹರುಷಗೊಂಡು ಹರಿದಾಡದು. ಎನ್ನ ಪ್ರಾಣ ಷಟ್‍ಸ್ಥಲಕ್ಕೆ ಸಲೆ ಸಂದ ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ ಕಿರುಬಟ್ಟೆಯಲ್ಲಿ ನಡೆಯದು. ಇಂತಿವೆಲ್ಲವು ಷಟ್ಸ ್ಥಲವನಪ್ಪಿ ಅವಗ್ರಹಿಸಿದ ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ ಮೋಹದಕಂದನಾದ ಕಾರಣ ಎನಗೆ ಷಟ್ಸ ್ಥಲಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ದಯದಿಂದ ನೋಡಿ ಬಹು ವಿಚಾರವುಂಟು. ಷಟ್ಸ ್ಥಲಬ್ರಹ್ಮಚಾರಿ ತಾನು ಸಂಕಲ್ಪವನೇತಕ್ಕೆ ಮಾಡುವದು? ಗುರುವು ಹಿಡಿದು ಲಿಂಗವಾಯಿತ್ತು. ಲಿಂಗ ಹಿಡಿದು ಜಂಗವಾಯಿತ್ತು. ಜಂಗಮವು ಹಿಡಿದು ಪಾದೋದಕ ಪ್ರಸಾದವಾಯಿತ್ತು. ಇದನರಿಯದೆ ಭಿನ್ನಭೇದವ ಮಾಡಲಾಗದು. ಜಂಗಮನ ಕೊಂದವನಾದರು, ಲಿಂಗವ ಭಿನ್ನವ ಮಾಡಿದವನಾದರು, ಅವನ ಕಂಡು ಮನಸ್ಸಿನಲ್ಲಿ ನಿಂದಿಸಿದರೆ ವಿರಕ್ತನೆಂಬ ಭಾವನೆಯಿಲ್ಲ. ಭಕ್ತನ ಮಠವೆಂದು ಹೋದಲ್ಲಿ, ಆ ಭಕ್ತನು ಎದ್ದು ನಮಸ್ಕರಿಸಿ, ತನ್ನ ದಾಸಿಯರ ಕರದು `ಪಾದಾರ್ಚನೆಯ ಮಾಡು' ಎಂದರೆ ಆ ಪಾದಾರ್ಚನೆಯ ಮಾಡಿದ ಫಲವು ಅರಿಗೆ ಮೋಕ್ಷವಾಗುವದು? ಆ ತೊತ್ತಿನ ಬಸುರಲ್ಲಿ ಬಪ್ಪುದು ತಪ್ಪದು. ತಾನು ವಿರಕ್ತನಾದ ಮೇಲೆ, ಲಿಂಗವಿದ್ದವರಲ್ಲಿ ಲಿಂಗಾರ್ಪಿತವ ಬೇಡಲೇತಕ್ಕೆ? ತಾ ಬಿರಿದ ಕಟ್ಟಿ ಆಚರಿಸುವ ಶರಣನು ತನಗೆ ಸಮಾಚಾರ ಸಮನಾಗದಲ್ಲಿ ಹೊನ್ನ ಹಿಡಿದು ಬಡ್ಡಿ ವ್ಯವಹಾರವ ಮಾಡಿದ ಜಂಗಮದಲ್ಲಿ ತೆಗೆದುಕೊಳ್ಳಲಾಗದು. ಆ ಜಂಗಮವು ತ್ರಿವಿಧ ಪದಾರ್ಥದಲ್ಲಿದ್ದರೇನು? ವಂಚನೆಯಿಲ್ಲದೆ ಸವದರೆ ಆತ ಮುಟ್ಟಿದರೊಳಗಿಲ್ಲ. ಆತನ ಅಂತು ಇಂತು ಎನ್ನಲಾಗದು ಶರಣರಾಚರಣೆ. ಶರಣ ತಾ ಬಿರಿದ ಕಟ್ಟಿ ಆಚರಿಸಿದಲ್ಲಿ ತನ್ನಾಚರಣೆಗೆ ಕೊರತೆ ಬಂದರೆ ಬಂದಿತ್ತೆಂಬ ಹೇಹ ಬೇಡ. ಬಂದಾಗ ನರಳಿ, ಬಾರದಾಗ ಸದಾಚಾರದಲ್ಲಿರ್ಪುದೆ ಶರಣನಾಚರಣೆ. ಗುರು ಮೋಕ್ಷವಾಗಿಯಿಪ್ಪಾತನು ಪಾಪಕ್ಕೆ ಸಂಬಂಧವಾಗಲು ಆತನ ಕಂಡು ಮನದಲ್ಲಿವ ದ್ರೋಹಿಯೆಂದರೆ ನನ್ನ ಬಿರಿದಿಂಗೆ ಕೊರತೆಯದಾಗುವುದಲ್ಲದೆ ವಿರಕ್ತನೆಂಬ ಭಾವವೆನಗಿಲ್ಲ ನೋಡಾ. ಮುಂದೆ ಕ್ರಿಯಾಚರಣೆ. ವಿರಕ್ತನ ನಡೆಯೆಂತೆಂದೊಡೆ ಭಕ್ತಿಸ್ಥಲ ಸಂಬಂಧವಾದ ಭಕ್ತಂಗೆ ಕ್ರೀಯವ ಕೊಡುವ ಆಚರಣೆಯೆಂತೆಂದೊಡೆ ಆತ ತೆಗೆದು ಕೊಂಬ ಆಚರಣೆಯೆಂತೆಂದೊಡೆ ಪಾದಾರ್ಚನೆಯ ಮಾಡಿದಲ್ಲಿ ಪಾದತೀರ್ಥ ಕೊಡುವರು. ಅನ್ನವ ನೀಡಿದ ಹಂಗಿನಲ್ಲಿ ಪ್ರಸಾದವಂ ಕೊಡುವವರು. ಮುಯ್ಯಿಂಗೆ ಮುಯ್ಯನಿತ್ತುದಲ್ಲದೆ ಮುಕ್ತಿಯೆಂಬುದು ಅವುದು ಹೇಳ? ಭಕ್ತನಾಚಾರಣೆಯೆಂತೆಂದೊಡೆ- ಆ ಗೃಹಕ್ಕೆ ಹೋದಲ್ಲಿ ತಾ ಲಿಂಗಪೂಜೆಯ ಮಾಡುತ್ತಿರ್ದರಾದರು ತಾಯೆದ್ದು ಬಂದು ನಮಸ್ಕರಿಸುವದೆ ಭಕ್ತನ ಮಾರ್ಗ. ಎನ್ನೊಳಗೆ ಲಿಂಗವು ಜಂಗಮವು ಉಂಟೆಂಬ ಅವಿಚಾರದ ನುಡಿಯ ಕೇಳಲಾಗದು. ಮುಂದೆ ಭಕ್ತನು ಜಂಗಮದ ಪಾದವ ಹಿಡಿದಲ್ಲಿ ಪುಷ್ಪ ವಿಭೂತಿಯಿರಲು ಅಗ್ಛಣಿಯಿಲ್ಲದಿರಲು ಮರ್ಲೆದ್ವು ವ್ರತಸ್ಥಪಾದವ ಬಿಡಲಾಗದು. ಬಿಟ್ಟನಾದರೆ ಪಾದತೀರ್ಥಕ್ಕೆ ದೂರವಾಯಿತ್ತು. ಲೋಕಾಚಾರದ ಭಕ್ತರು ಪಾದವ ಹಿಡಿಯಲು, ಪುಷ್ಪ ವಿಭೂತಿಯಿರಲು ಅಗ್ಘಣಿಯಿಲ್ಲದಿರಲು ಆ ಪಾದಕ್ಕೆ ನಮಸ್ಕಾರವ ಮಾಡಿ ಪಾದವಂ ಬಿಟ್ಟು ಮತ್ತೆ ಹೋಗಿ ಅಗ್ಘಣಿಯಂ ತಂದು ಪಾದತೀರ್ಥವಂ ಪಡೆದು ಸಲಿಸುವುದು ಭಕ್ತನಾಚರಣೆ. ಜಂಗಮದೇವರ ಕರತಂದು ವ್ರತಸ್ಥನ ಪಾದತೀರ್ಥವಂ ಪಡೆದಲ್ಲಿ ಆ ಆ ದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಆ ದೇವರು ಮಜ್ಜನವ ನೀಡಿದ ಸ್ಥಾನ ಅವರು ಮೂರ್ತಿಮಾಡಿರ್ದ ಸ್ಥಾನವ ನೋಡಿ ಆ ವ್ರತಸ್ಥನು ಪ್ರಾಣವ ಕೊಡುವುದು. ಭಕ್ತನು ಜಂಗಮವ ಕರಕೊಂಡು ಬಂದು ಪಾದತೀರ್ಥಮಂ ಪಡೆದು ಆ ಜಂಗಮದೇವನ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಅವರು ಮಜ್ಜನವ ನೀಡಿದ ಸ್ಥಾನದಲ್ಲಿ ಮೂರ್ತಿಗೊಂಡಿರ್ದ ಸ್ಥಾನದಲ್ಲಿ ಪರಾಂಬರಿಸಿ ಆ ಲಿಂಗವು ಸಿಕ್ಕಿದರೆ ಕ್ರೀಯವ ಜಂಗಮವು ಭಕ್ತರು ಸಲಿಸುವುದು, ಇಲ್ಲದಿದ್ದರೆ ಆ ಭಕ್ತರು ತೆಗೆದು ಕೊಂಬುದು. ಆ ಜಂಗಮವು ತೆಗೆದು ಕೊಳಲಾಗದು. ಇದು ಸಕಲ ಶರಣರಿಗೆ ಸನ್ಮತ. ಸಂಕಲ್ಪವ ಮಾಡಲಾಗದು ಮುಂದೆ ಮಾರ್ಗಕ್ಕೆ ತಾನು ನಡೆದಲ್ಲಿ ತನಗೆ ಮಾರ್ಗ ತಪ್ಪದು. ತನಗೆವೊ[ಂ]ದು ವೇಳೆ ಲಿಂಗವು ಭಿನ್ನ ಭಿನ್ನವಾಗಲು ಅದನು ಸಕಲ ಸಮಸ್ತಮೂರ್ತಿಗಳು ತಿಳಿದು ನೋಡಲು ಅದರಲ್ಲಿ ಭಿನ್ನ ಭಿನ್ನವಾಗದೆಯಿರಲು ಪರಾಂಬರಿಸಿ ಎಲ್ಲಾ ಮಾಹೇಶ್ವರರು ಎದ್ದು ಬಂದು ಅದರೊಳಗೆ ಸಂಕಲ್ಪವಿಲ್ಲವೆಂದು ನಮಸ್ಕಾರವ ಮಾಡುವುದು. ಲಿಂಗವು ಭಿನ್ನವಾಗಲು `ನಿಮ್ಮ ಗುರುಮಠಪೂರ್ವಕ್ಕೆ ಹೋಗಿ'ಯೆಂದು ಹೇಳಲು, `ನಾನೊಲ್ಲೆ, ನಿಮ್ಮ ಪಾದದಲ್ಲಿಯೇಕಾರ್ಥವ ಮಾಡಿಕೊಳ್ಳಿ'ಯೆಂದು ಹೇಳಲು, ಆ ದೇವರ ಅಡ್ಡಬೀಳಿಸಿಕೊಂಡು ವಸ್ತು ಹೋಗುವ ಪರಿಯಂತರದಲ್ಲಿ ಕಾದಿರುವುದು. ಅಥ[ವ] ಒಂದು ವೇಳೆ ಮೋಸ ಬಂದರೆ ಅಲ್ಲಿರ್ಪ ಭಕ್ತ ಮಾಹೇಶ್ವರರ ಬಿಡುವುದು. ಧರ್ಮಾಧರ್ಮದಲ್ಲಿ ವಿಚಾರಿಸದೆ ಆ ಭಕ್ತನು ಜಂಗಮ ಮುಟ್ಟಿದ ಗದ್ದುಗೆಯಲ್ಲಿ ಮೂರ್ತಿಮಾಡಿ `ಪ್ರಸಾದಕ್ಕೆ ಶರಣಾರ್ಥಿ'ಯೆನಲು ನೀಡಲಾಗದೆಂಬುದು ಆಚರಣೆ. ಆದ ನೀಡಿಯಿಟ್ಟರು ಮುಗಿವಲ್ಲಿ ಭಕ್ತನ ಪ್ರಸಾದ ಹೆಚ್ಚಾದರೆ `ಅಯ್ಯೋ ನನ್ನ ಪ್ರಸಾದ ಹೆಚ್ಚಾಯಿ'ತೆಂದು ಹೇಳಿದರೆ ಆ ಪ್ರಸಾದವನು ನೀಡಿಸಿ ಕೊಂಬ ಜಂಗಮಕ್ಕೆ ಆಚರಣೆ ಸಲ್ಲದು. ವ್ಯಾಪಾರವ ಕೊಟ್ಟು ವ್ಯಾಪಾರವನೊಪ್ಪಿಸಿಕೊಂಡರೆ ನಾವು ಪ್ರಸಾದವ ತೆಗೆದುಕೊಂಬುದು ಆಚರಣೆ. ಹೊನ್ನು ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ ಅವನ ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ ಅವನ ಪ್ರಸಾದವನು ತೆಗೆದುಕೊಂಬುದು ಇದು ಜಂಗಮದಾಚರಣೆ. ಗುರುದೀಕ್ಷೆಯಿಲ್ಲದವನು ಲಿಂಗಪೂಜೆಯ ಮಾಡಿದರೆ ಪಾದೋದಕ ಪ್ರಸಾದವ ಕೊಂಡರೆ ಸಹಜವಲ್ಲದೆ ಸಾಧ್ಯವಾಗದು. ಬಿಟ್ಟರಾದರೆ ಅವರಿಗೆ ಮೋಕ್ಷವಿಲ್ಲವು. ಜಂಗಮವು ಆವ ವರ್ತನೆಯಲ್ಲಿ ನಡಕೊಂಡರು [ಆಸ]ತ್ತು `ಬೇಡ ಹೋಗಿ'ಯೆಂದರೆ `ನಾನು ಅರಿಯದೆ ಮಾಡಿದೆ'ನೆಂದರೆ ಅವನನೊಪ್ಪಿಕೊಂಬುದು ಇದಕ್ಕೆ ಕಲ್ಪಿತ ಪಾಪಪುಣ್ಯಕ್ಕೆ ಒಳಗಾದವರು ಷಟ್ಸ ್ಥಲಕ್ಕೆ ಮಾತ್ರ ಆಗದು. ಭಕ್ತಂಗೆ ಪ್ರಸಾದವ ಕೊಡುವ ಆಚರಣೆಯೆಂತೆಂದೊಡೆ- ದೀಕ್ಷೆಯಿಲ್ಲದೆ ಶಿವಭಕ್ತನ ಗೃಹಕ್ಕೆ ಹೋಗಿ `ಭಿಕ್ಷೆ'ಯೆಂದೆನಾದರೆ, ಜಿಹ್ವೆಯ ಮುಕ್ಕುಳಿಸಿದರೆ ಪಾತಕ ನೋಡ. ಗುರುವಚನ ಪ್ರಮಾಣದಲ್ಲಿ ನಾನು ಗುರುಮುಖವ ಹಿಡಿದಲ್ಲಿ ಶಿವಮಂತ್ರಸ್ಮರಣೆಯನು ಶಿವಾನುಭಾವಿಗಳ ಸ್ಥಾನದಲ್ಲಿ ಬೆಸಗೊಂಬುದೆ ಶುದ್ಧವಾಯಿತ್ತು. ಇಲ್ಲದಿದ್ದರೆ ಶುದ್ಧವಿಲ್ಲವು. ಶಿವಶರಣನ ಜ್ಞಾನವೆಂತೆಂದೊಡೆ ನೀರಮೇಲಣ ತೆಪ್ಪದಂತಿರಬೇಕು, ಕ್ಷೀರದೊಳಗಣ ಘೃತದಂತಿರಬೇಕು, ಕೆಸರಿನೊಳಗಣ ತಾವರೆ ಪ್ರಜ್ವಲಿಸಿದಂತಿರಬೇಕು. ಲಿಂಗದೊಳಗೊಡವೆರದರೆ ಆರು ಆರಿಗೆಯು ಕಾಣದಂತೆ ನೋಡಾ. ಅಂದಳದೊಳಗೆ ಹೋಗುವನ ಹಜ್ಜೆಯ ಕಂಡವರಾರು ಹೇಳ? ಮಾತಿನಲ್ಲಿ ಮಹಾಜ್ಞಾನಿಗಳೆಂದರೊಪ್ಪುವರೆ? ಮಹಾಲಿಂಗದ ಬೆಳಗಿನಲ್ಲಿ, ತನ್ನ ನಡೆಯನೊಡವೆರದಿಪ್ಪ ಮಹಿಮಂಗೆ ದುಃಖವಿಲ್ಲ ನೋಡ ಭಕ್ತಿಸ್ಥಲವಾದುದು. ಭಕ್ತನ ಮಾರ್ಗವೆಂತೆಂದೊಡೆ- ತನ್ನ ಗೃಹಕ್ಕೆ ಜಂಗಮವು ಹೋದಲ್ಲಿ ಶುದ್ಧವಲ್ಲದೆ ಇದನರಿಯದೆ ಕಾಡದೈವಕ್ಕೆಲ್ಲ ಹರಕೆಯ ಮಾಡಿ ಆ ದೈವದ ಹೆಸರಿನಲ್ಲಿ ಜಂಗಮವ ಕರೆತಂದು ಉಣಲಿಕ್ಕಿದೆನಾದರೆ ಕಾರಿದ ಕೂಳಿಗಿಂದ ಕನಿಷ* ಕಾಣಾ. ಅನ್ಯ ದೈವದ ಪೂಜೆಯಿಲ್ಲದಾತನೆ ಶಿವಭಕ್ತ ನೋಡಾ. ತನ್ನ ಗುರುವು ಹಸ್ತಕ ಸಂಯೋಗವ ಮಾಡಿ, ಲಿಂಗವ ಧರಿಸಿದ ಬಳಿಕ ಲಿಂಗವಲ್ಲದೆ ಅನ್ಯಪೂಜೆಯೇತಕ್ಕೆ? ಇದನ್ಲರ್ವಿದರಿದು ಮಾಡಿದನಾದರೆ ಪಾತಕವಲ್ಲದೆ ಮತ್ತಿಲ್ಲ ನೋಡಾ. ಮೋಕ್ಷವೆಂಬುದೆಂದಿಗೂ ಇಲ್ಲ ನೋಡಾ. ಹುಟ್ಟುಗೆಟ್ಟು ಬಟ್ಟಬಯಲಾದವನಿಗೆ ದುಃಖವುಂಟೆ?. ಲಿಂಗದಲ್ಲಿ ನಿರ್ಭಯಲಾದವಂಗೆ ಸಂಕಲ್ಪವುಂಟೆ?. ಮಹಾಜ್ಞಾನಿಗೆ ಕತ್ತಲೆಯುಂಟೆ?. ಮಹಾಪ್ರಸಾದಿಗೆ ಸಂಕಲ್ಪಮುಂಟೆ?. ಜ್ಞಾನಿಗಳಿಗೆನ್ನವರು ತನ್ನವರೆಂಬ ಭೇದಮುಂಟೆ?. ಸದ್ಭಕ್ತಿಯುಳ್ಳಾತನು ತನ್ನ ಲಿಂಗವ ಪೂಜಿಸಿ ಅನ್ಯರಮನೆಯಲ್ಲಿ ಭೋಗದಲ್ಲಿದ್ದನಾದರೆ ಶ್ವಾನನ ಬಸುರಲ್ಲಿ ಬರುವು[ದು] ತಪ್ಪದು, ಅರೆಭಕ್ತರಾದವರ ಗೃಹದಲ್ಲಿ ಹೋಗಿ ಅನ್ನವ ಮುಟ್ಟಿದರಾದರೆ, ಅವನಿಗೆ ಗುರುವಿಲ್ಲ. ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ನೋಡಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂತೊಪ್ಪುವ ಸಚ್ಚಿದಾನಂದ ಧ್ಯಾನದಿಂದ, ನಿಮ್ಮ ಪರಿಪೂರ್ಣ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ಎಂದು ಬೇಡಿಕೊಂಡು ಅಭಯವಾದ ಮೇಲೆ ಬಂದು ಮೊದಲಹಾಗೆ ಅಲ್ಲಿ ಮೂರ್ತವ ಮಾಡಿ, ಆ ಜಂಗಮಮೂರ್ತಿಗಳು ಸಲಿಸಿದೋಪಾದಿಯಲ್ಲಿ ಅನಾದಿಮೂಲಮಂತ್ರಸೂತ್ರವಿಡಿದು ತಾನು ಸಲಿಸುವುದು. ಆ ಮೇಲೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಮೊದಲಾದ ಷಟ್ಸ್ಥಲ ಭಕ್ತ ಮಹೇಶ್ವರರು, ಅದೇ ರೀತಿಯಲ್ಲಿ ಸಲಿಸುವುದು ಪೂರ್ವಪುರಾತನೋಕ್ತವು. ಉಳಿದ ತ್ರಿವಿಧ ದೀಕ್ಷೆಗಳರಿಯದೆ, ಕ್ರಿಯಾಪ್ರಸಾದದ ಕುರುಹ ಕಾಣದೆ, ಷಟ್ಸ ್ಥಲಮಾರ್ಗವರಿಯದೆ, ಇಷ್ಟಲಿಂಗಧಾರಕ ಉಪಾಧಿಗಳು ಆ ಗದ್ದುಗೆಯ ತೆಗೆದು, ಲಿಂಗಕ್ಕರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ : ಅವರಿಗೆ ತ್ರಿವಿಧದೀಕ್ಷಾನುಗ್ರಹ ಪ್ರಸನ್ನಪ್ರಸಾದ ಷಟ್ಸ್ಥಲಮಾರ್ಗ ಸರ್ವಾಚಾರಸಂಪತ್ತಿನ ಆಚರಣೆ ಮುಂದಿಹುದರಿಂದ ಅವರು ಬಟ್ಟಲ ಎತ್ತಲಾಗದು. ಹೀಂಗೆ ಸರ್ವರು ಸಲಿಸಿದ ಮೇಲೆ ಕೊಟ್ಟ ಕೊಂಡ ಭಕ್ತ ಜಂಗಮವು ಇರ್ವರೂ ಕೂಡಿ, ಅನಾದಿ ಮೂಲಮಂತ್ರಸೂತ್ರವಿಡಿದು, ಮುಕ್ತಾಯವ ಮಾಡಿದಲ್ಲಿಗೆ ದಶವಿಧಲಿಂಗಸಂಬಂಧದಿಂದ ದಶವಿಧಪಾದೋದಕ ಲಿಂಗೋದಕ ಪ್ರಸಾದೋದಕಂಗಳಲ್ಲಿ ಪರಿಪೂರ್ಣತೃಪ್ತರೆ ನಿಮ್ಮ ಪ್ರತಿಬಿಂಬರಯ್ಯ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
-->