ಅಥವಾ

ಒಟ್ಟು 33 ಕಡೆಗಳಲ್ಲಿ , 10 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ ? ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ? ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ? ಇಂತೀ ವ್ರತದ ನಿಹಿತವ ತಿಳಿದಲ್ಲಿ, ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ, ಆ ತನುವ ಬಿಡದಿರ್ದಡೆ ಎನಗದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
--------------
ಅಕ್ಕಮ್ಮ
ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ. ಆ ಸದ್ಭಾವದ ದೆಸೆಯಿಂದ ವಿಮಲಜ್ಞಾನ. ಆ ಸುಜ್ಞಾನ ಸೂತ್ರವಾಗಿ ತ್ರಿವಿಧಭೇದವಾಯಿತ್ತು. ಆ ತ್ರಿವಿಧದ ಸೂತ್ರದಿಂದ ಷಡುಸ್ಥಲವಾಯಿತ್ತು. ಆ ಷಡುಸ್ಥಲದ ಭಾವಂಗಳೆ ಬ್ಥಿನ್ನಭಾವವಾಗಿ ನಾನಾ ಸ್ಥಲಭೇದ ವ್ರತವಾಯಿತ್ತು. ಆ ವ್ರತದ ಲಕ್ಷಣವನರಿತು ಆವಾವ ಕ್ರೀಯಲ್ಲಿ ಆವಾವ ಭಾವಶುದ್ಧವಾಗಿ, ಕೃತ್ಯಕ್ಕೆ ಕಟ್ಟಳೆಯಾಗಿ, ನೇಮಕ್ಕೆ ನಿಶ್ಚಯವಾಗಿ ವ್ರತದಾಳಿಯ ತಪ್ಪದಿಪ್ಪ ಭಕ್ತನಲ್ಲಿ ಏಲೇಶ್ವರಲಿಂಗವು ನಿಶ್ಚಯವಾಗಿಪ್ಪನು.
--------------
ಏಲೇಶ್ವರ ಕೇತಯ್ಯ
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು, ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ. ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ, ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ. ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ. ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ, ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ, ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ. ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ. ಇದಕ್ಕೆ ಎನಗೆ ನಿಶ್ಚಯ. ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
--------------
ಏಲೇಶ್ವರ ಕೇತಯ್ಯ
ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ. ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ? ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ? ತನ್ನ ಮನೆಗೆ ಕಟ್ಟಳೆ ಇರಬೇಕು. ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ, ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು. ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು. ಇಂತೀ ಇಷ್ಟರ ಕ್ರೀಯಲ್ಲಿ ಸಂತತ ವ್ರತ ಇರಬೇಕು. ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ. ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ.
--------------
ಅಕ್ಕಮ್ಮ
ಸಂದೇಹವ ಹರಿದವಂಗಲ್ಲದೆ ಸಹಭೋಜನ ಭಾಜನವಿಲ್ಲ. ಸಂದಿತ್ತು ಸಲ್ಲದೆಂಬ ಸಂಕಲ್ಪವಳಿದವಂಗಲ್ಲದೆ ಭರಿತಾರ್ಪಣವಿಲ್ಲ. ನೇಮ ತಪ್ಪಿದಲ್ಲಿ ಆಶೆಯು ಬಿಟ್ಟವಂಗಲ್ಲದೆ ಸರ್ವವ್ರತದ ದೆಸೆಯಿಲ್ಲ. ಇಂತೀ ಆಶೆಯ ಪಾಶದಿಂದ ತಾ ಹಿಡಿದ ವ್ರತದ ಭಾಷೆಯ ತಪ್ಪಿ ಮತ್ತೆ ಪ್ರಾಯಶ್ಚಿತ್ತವೆಂದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ ಇಹಪರಕೆ ಹೊರಗೆಂದು ಡಂಗುರವಿಕ್ಕುವ.
--------------
ಅಕ್ಕಮ್ಮ
ತನ್ನ ಸ್ವಕಾರ್ಯದಿಂದ ಮಾಡುವ ಭಕ್ತನ ವ್ರತವೆ ವ್ರತ; ಆತನಾಚಾರವೆ ಸತ್ಯ; ಆತನಾಶ್ರಯದ ಶೇಷವೆ ಸಂಜೀವನಪ್ರಸಾದ. ಆತನ ರೂಪೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಷ್ಟರೂಪು.
--------------
ಅಕ್ಕಮ್ಮ
ನಾನಾ ವ್ರತದ ಭಾವಂಗಳುಂಟು. ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು. ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ ಆರನೂ ಕರೆಯೆನೆಂಬ ಕಟ್ಟಳೆಯವರುಂಟು. ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಹಿಡಿದು ನೂಕುವರುಂಟು. ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು. ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು. ಇಂತೀ ಶೀಲವೆಲ್ಲವು ನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ. ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರು ಕೂಡಿ ತಪ್ಪ ಹೊರಿಸಿದ ಮತ್ತೆ ಆ ವ್ರತವನೊಪ್ಪಬಹುದೆ ! ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ? ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು. ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ ಅವನೂಟ ಸತ್ತನಾಯಮಾಂಸ. ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ. ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ. ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು. ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ. ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು. ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.
--------------
ಅಕ್ಕಮ್ಮ
ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ, ಅದು ಸ್ವಯಂಭು ಹೇಮವಪ್ಪುದೆ? ಹೆಣ್ಣು ಹೊನ್ನು ಮಣ್ಣು ಕುರಿತು ಕುಜಾತಿಗನ್ನಕ್ಕೆ ಶೀಲವಂತನಾದವ ನನ್ನಿಯ ವ್ರತದ ದೆಸೆಯ ಬಲ್ಲನೆ? ಇಂತೀ ಗನ್ನರನರಿದು, ಇಂತೀ ನಿಜಪ್ರಸನ್ನರ ಕಂಡು, ಉಭಯದ ಬಿನ್ನಾಣದ ವ್ರತದ ಬೆಸುಗೆಯ ತ್ರಿಕರಣಕ್ಕೆ ಅನ್ಯವಿಲ್ಲದೆ ಮಾಡಬೇಕು. ಏಲೇಶ್ವರಲಿಂಗಕ್ಕೆ ವ್ರತಕ್ಕೆ ಆಚಾರ್ಯನಾಗಬಲ್ಲಡೆ.
--------------
ಏಲೇಶ್ವರ ಕೇತಯ್ಯ
ಭಕ್ತಿಯಿಂದ ನಡೆದೆಹೆನಂಬಲ್ಲಿ ವ್ರತಲಕ್ಷವುಂಟು, ಅಲಕ್ಷವುಂಟು. ಮಿಕ್ಕಾದ ಸರ್ವಗುಣಂಗಳಲ್ಲಿ ಹೊತ್ತು ಹೋರಿಹೆನೆಂದಡೆ ಭಕ್ತಿ ಲಕ್ಷಣ. ವಿಶ್ವಮಯಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಚಿತ್ತವೊಪ್ಪಿ ನಡೆವ ಕೃತ್ಯವ ಹೊತ್ತು, ಆ ಕೃತ್ಯ ತಪ್ಪದೆ ನಿಶ್ಚಯವಾಗಿರಬೇಕು. ಇದು ಏಲೇಶ್ವರಲಿಂಗಕ್ಕೆ ವ್ರತದ ಗುತ್ತಗೆಯ ನೇಮ.
--------------
ಏಲೇಶ್ವರ ಕೇತಯ್ಯ
ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು, ಸದಾಚಾರಿಗಳೆಲ್ಲಾ ಬನ್ನಿರಿಂದು, ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು ಕೀಲಿಗೆ ದೇವಾಲಯವ ನೋಡುವವನಂತೆ, ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ? ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಖಂಡಿತವ್ರತದ ನಿರಂಗನ ವ್ರತವೆಂತುಟೆಂದಡೆ ತನ್ನ ಸತಿಗೆ ಗರ್ಭ ತಲೆದೋರಿದಲ್ಲಿಯೆ, ಮುಖವ ಕಾಂಬುದಕ್ಕೆ ಮುನ್ನವೆ ಲಿಂಗಧಾರಣಮಂ ಮಾಡಿ, ಮಾಡಿದ ಮತ್ತೆ ತನ್ನ ವ್ರತದ ಪಟ್ಟವಂ ಕಟ್ಟಿ, ಶಕ್ತಿಯಾದಲ್ಲಿ ತನ್ನ ನೇಮದ ವ್ರತಿಗಳಿಗೆ ಕೊಟ್ಟಿಹೆನೆಂದು ಸುತನಾದಲ್ಲಿ ತನ್ನ ನೇಮದ ವ್ರತಿಗಳಲ್ಲಿ ತಂದೆಹೆನೆಂದು, ಗಣಸಾಕ್ಷಿಯಾಗಿ ವಿಭೂತಿಯ ಪಟ್ಟವಂ ಕಟ್ಟಿ ಇಪ್ಪುದು ಖಂಡಿತನ ವ್ರತ, ಶೀಲ, ನೇಮ. ಹಾಗಲ್ಲದೆ ದಿಂಡೆಯತನದಿಂದ ಹೋರಿ, ಮಕ್ಕಳಿಗೆ ಸಂದೇಹದ ವ್ರತವ ಕಟ್ಟಬಹುದೆಯೆಂದು ಬುದ್ಧಿಯಾದಂದಿಗೆ ವ್ರತವಾಗಲಿಯೆಂಬವರ ಅಂಗಳವ ಮೆಟ್ಟಬಹುದೆ ಅದೆಂತೆಂದಡೆ ವ್ರತದ ಅಂಗಳದಲ್ಲಿ ಬೆಳೆದ ಗರ್ಭವ ಮತ್ತಂದಿಗಾಗಲಿಯೆಂಬ ಭಂಡರ ನೋಡಾ ಅಂದಿಗಾಗಲಿಯೆಂಬವನ ವ್ರತ ಇಂದೆ ಬಿಟ್ಟಿತ್ತು. ಅದೆಂತೆಂದಡೆ ತನ್ನಂಗದಲ್ಲಿ ಆದ ಲಿಂಗದೇಹಿಯ ಮುಂದಕ್ಕೆ ಭವಿಸಂಗಕ್ಕೆ ಈಡುಮಾಡುವ ವ್ರತಭಂಗಿತನ ಕಂಡು, ಅವನೊಂದಾಗಿ ನುಡಿದಡೆ ಕುಂಭೀನರಕ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಅವನ ಹಂಗಿರಬೇಕಯ್ಯಾ.
--------------
ಅಕ್ಕಮ್ಮ
ತನು ಮುಟ್ಟುವುದಕ್ಕೆ ಮುನ್ನವೇ ಮನ ಶೀಲವಾಗಿರಬೇಕು, ಮನ ಮುಟ್ಟುವುದಕ್ಕೆ ಮುನ್ನವೆ ಅರಿವು ಶೀಲವಾಗಿರಬೇಕು, ಅಂಗ ಮನ ಅರಿವು ವ್ರತಾಂಗದಲ್ಲಿ ಕರಿಗೊಂಡು ಆಚಾರಕ್ಕೆ ಅನುಸರಣೆಯಿಲ್ಲದೆ, ಆತ್ಮವ್ರತ ತಪ್ಪಿದಲ್ಲಿ ಓಸರಿಸದೆ, ಆ ವ್ರತದ ಅರಿವು ಹೆರೆಹಿಂಗದೆ ಇಪ್ಪಾತನಂಗವೆ ಏಲೇಶ್ವರಲಿಂಗದಂಗ.
--------------
ಏಲೇಶ್ವರ ಕೇತಯ್ಯ
ಭರಿತಾರ್ಪಣವೆಂದು ಲಿಂಗಕ್ಕೆ ಸಮರ್ಪಿಸಿದ ಮತ್ತೆ ಪ್ರತಿಪ್ರಸಾದವೆಂದು ಕೊಂಬಲ್ಲಿ ಭರಿತಾರ್ಪಣವೆಂತುಟಾಯಿತ್ತು ? ತನ್ನಯ ಘಟದ ಹೆಚ್ಚುಗೆಯೊ ? ಅಲ್ಲಾ, ಭರಿತಾರ್ಪಣದ ವ್ರತದ ನಿಶ್ಚಯವೊ ? ಕಟ್ಟಿನ ವ್ರತಕ್ಕೆ ಪುನರಪಿ ಕ್ರೀಯುಂಟೆ ? ಸತ್ಯ ಜಾರಿದ ಮತ್ತೆ ಮುಕ್ತಿಯ ಪಥ ಅವಂಗುಂಟೆ ? ಇಂತೀ ಕಂಡವರ ಕಂಡು, ಕೈಕೊಂಡು, ಅವರೊಂದಾಗಿ ಆಡಿ, ಅವರ ಸಂಸರ್ಗದಿಂದವ ಕಲಿತು, ಅವರು ಹಿಂಗಿದ ಮತ್ತೆ ತಾನೆಂದಿನಂತಹ ಕ್ರಿಯಾಭಂಡನ ಭರಿತಾರ್ಪಣಲಂಡನ ಮತ್ತಾವ ಕ್ರೀಯಲ್ಲಿಯೂ ತಪ್ಪಿ, ಆ ತಪ್ಪಿಗೆ ವ್ರತವ ಹೆಚ್ಚಿಸಿಕೊಂಡಹೆನೆಂಬ ದುರ್ಮತ್ತ ಸುರಾಪಾ[ನಿಯಿಂ]ದತ್ತ ಕಾಣದಿರ್ದಡೆ ಭಕ್ತಿಗೆ ಸಲ್ಲ, ಮುಕ್ತಿಯವಂಗಿಲ್ಲ, ಸದ್ಭಕ್ತರೊಳಗಲ್ಲ, ಮಿಕ್ಕಾದ ಕೃತ್ಯ ಅವಂಗಿಲ್ಲ, ಇದು ಸತ್ಯ, ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.
--------------
ಶ್ರೀ ಮುಕ್ತಿರಾಮೇಶ್ವರ
ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ ಸೋಂಕು ಬಹುದಕ್ಕೆ ಮುನ್ನವೆ ಸುಳುಹನರಿದು, ತಟ್ಟುಮುಟ್ಟು ಬಹುದಕ್ಕೆ ಮುನ್ನವೆ ಕಟ್ಟಣೆಯ ಮಾಡಿ, ಮೀರಿ ದೃಷ್ಟದಿಂದ ಶಿವಾಧಿಕ್ಯ ತಪ್ಪಿ ಬಂದಲ್ಲಿ ತನ್ನ ಕಟ್ಟಳೆಯ ವ್ರತಸ್ಥಭಕ್ತರು ಗಣಂಗಳು ಗುರುಲಿಂಗಜಂಗಮ ಮುಂತಾಗಿ ಎನ್ನ ವ್ರತದ ದೃಷ್ಟದ ಕಟ್ಟಳೆ ತಪ್ಪಿತ್ತೆಂದು ಮಹಾಪ್ರಮಥರಲ್ಲಿ ತಪ್ಪನೊಪ್ಪಿಸಿ, ಇನ್ನು ಘಟವಿಪ್ಪುದಿಲ್ಲಾಯೆಂದು ಬೀಳ್ಕೊಂಡು ಸತ್ಯಕ್ಕೊಪ್ಪಿದಂತೆ ತನ್ನ ಚಿತ್ತವಿದ್ದು ಪರಿಹರಿಸಿಕೊಂಬುದು ಮತ್ರ್ಯದ ಅನುಸರಣೆ. ತಪ್ಪಿದಲ್ಲಿಯೆ ಆತ್ಮವಸ್ತುವಿನಲ್ಲಿ ಕೂಡುವುದು ಕಟ್ಟಾಚಾರಿಯ ನೇಮ. ಇಂತೀ ಉಭಯವ ವಿಚಾರಿಸಿ ನಿಂದ ವ್ರತಕ್ಕೆ ನಿಮ್ಮ ಮನವೆ ಸಾಕ್ಷಿ. ಆಜ್ಞೆಯ ಮೀರಲಿಲ್ಲ, ಬಂಧನದಲ್ಲಿ ಅಳಿಯಲಿಲ್ಲ. ನೀವು ನೀವು ಬಂದ ಬಟ್ಟೆಯ ನೀವೆ ನೋಡಿಕೊಳ್ಳಿ. ಎನ್ನ ಬಟ್ಟೆ, ಏಲೇಶ್ವರಲಿಂಗದ ಗೊತ್ತು, ಕೆಟ್ಟಿಹಿತೆಂದು ಸೂಚನೆದೋರಿತ್ತು.
--------------
ಏಲೇಶ್ವರ ಕೇತಯ್ಯ
ಹೆಣ್ಣು ಹೊನ್ನು ಮಣ್ಣಿಗಾಗಿ ವ್ರತವೆಂಬ ನೇಮವ ಮಾಡಿಕೊಳ್ಳಬಹುದೆ ? ಕೂಲಿಗೆ ಬಳಿನೀರ ಕುಡಿದಡೆ ಅದಾರ ಮುಟ್ಟುವುದು ? ವಾಸಿಗೆ ಮೂಗನರಿದುಕೊಂಡಡೆ ನಾಚಿಕೆ ಯಾರಿಗೆಂಬುದನರಿದ ಮತ್ತೆ ಇಂತಿವ ಹೇಸಿ ಶೀಲವಂತನಾಗಬೇಕು. ಇಂತೀ ಗುಣಕ್ಕೆ ನಾಚಿ ನೇಮವ ಮಾಡಿಕೊಳ್ಳಬೇಕು. ಇಂತೀ ವ್ರತದ ಆಗುಚೇಗೆಯನರಿದ ಮತ್ತೆ ಇದಿರ ಬಯಕೆಯ ಬಿಟ್ಟು ತನ್ನ ತಾನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಇನ್ನಷ್ಟು ... -->