ಅಥವಾ

ಒಟ್ಟು 228 ಕಡೆಗಳಲ್ಲಿ , 54 ವಚನಕಾರರು , 182 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಭೇದಂಗಳಲ್ಲಿ ಷಡ್ದರುಶನವ ಹೊಕ್ಕು ತಿಳಿದಡೂ ಶ್ರುತಿ ವೇದ ಶಾಸ್ತ್ರ ಪುರಾಣ ಆಗಮಂಗಳ ಕಲಿತಡೂ ಮೂರುಮಲದ ಭೇದವನರಿತು ಬಿಡುಮುಡಿಯಲ್ಲಿ ಕಳೆದುಳಿಯಬೇಕು. ಇದು ಪ್ರಸಿದ್ಧವಪ್ಪ ತೆರ. ಇದು ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು.
--------------
ಬಾಹೂರ ಬೊಮ್ಮಣ್ಣ
ಇನ್ನು ತಾರಕಯೋಗದ ಲಕ್ಷಣವೆಂತೆನೆ: ವೇದ ಶಾಸ್ತ್ರಾಗಮ ಪುರಾಣ ಕವಿತ್ವಗಳೆಂಬ ನುಡಿಗಳಿಂದೆ ವಾಚಾಳಕರಾದವರಿಗೆ ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು. ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಯತಿಗಳೆಂಬ ಚತುರಾಶ್ರಮಗರ್ವಿತರಿಗೆ ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು. ಜಾÕನಖಾಂಡಿ ಕರ್ಮಖಾಂಡಿಗಳೆಂಬ ವೇದಾಂತಿ ಸಿದ್ಧಾಂತಿಗಳಿಗೆ ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು. ಶ್ರೀ ಗುರುಕಟಾಕ್ಷದಿಂದಲ್ಲದೆ ತಾರಕಬ್ರಹ್ಮವು ಆರಾರಿಗೂ ಸಾಕ್ಷಾತ್ಕಾರವಾಗದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
``ದಂಡಶ್ಚ ತಾರಕಾಕಾರೋ ಭವತಿ | ಓಂ ಸಾರ್ವತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ಪಂಚದಶಮೇ ಪ್ರಣವಾಂಶಕೇ ||'' ಅಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋ ಭವತಿ | ಓಂ ಪರಮಾತ್ಮಾ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ಷೋಡಶೇ ಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ``ಜ್ಯೋತಿಶ್ಚ ದರ್ಪಣಾಕಾರೋ ಭವತಿ | ಓಂ ಶಿವಾತ್ಮಾ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಸಪ್ತದಶ ಪ್ರಣವಾಂಶಕೇ ||'' ``ಮಕಾರೇ ಚ ಅಕಾರೇಚ ಉಕಾರೇಚ ನಿರಾಮಯಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಅರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿರೂಪಕಂ | ಇತಿ ಪ್ರಣವಃ ಜ್ಞೇಯಂ ಏತದ್ಗೋಪ್ಯಂ ವರಾನನೇ || ಓಂಕಾರ ಪ್ರಭವೋ ವೇದಃ ಓಂಕಾರಂ ಪ್ರಭವ ಸ್ವರಃ | ಓಂಕಾರಪ್ರಭವಾ ಭೂಃ ಓಂಕಾರಪ್ರಭವಾ ಭುವಃ || ಓಂಕಾರಪ್ರಭವಾ ಸ್ವಹಃ ಓಂಕಾರ ಪ್ರಭವಾ ಮಹಃ | ಓಂಕಾರಪ್ರಭವೋ ಜನಃ ಓಂಕಾರ ಪ್ರಭವಂ ತಪಃ || ಓಂಕಾರಪ್ರಭವಂ ಸತ್ಯಂ ಓಂಕಾರ ಪ್ರಭವೋ ರವಿ ಃ | ಓಂಕಾರಪ್ರಭವಸ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರಸ್ಯಾತ್ರ ನ ಸಂಭವೇತ್ | ಪ್ರಣವೋಹಿ ಪರಬ್ರಹ್ಮ ಪ್ರಣವಃ ಪರಮಂ ಪದಂ || ಓಂಕಾರಂ ನಾದರೂಪಂ ಚ ಓಂಕಾರಂ ಬಿಂದುರೂಪಕಂ | ಓಂಕಾರಂ ಚ ಕಲಾರೂಪಂ ಓಂಕಾರಂ ಮಂತ್ರರೂಪಕಂ || ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ | ಇತಿ ಪ್ರಣವಃ ವಿಜ್ಞೇಯಃ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ವಿಶ್ವಾದ್ಥಿಕ ಮಹಾರುದ್ರನುತ್ಪತ್ಯವೆಂತೆಂದಡೆ : ಅನಂತ ಬ್ರಹ್ಮಾಂಡ ಅನಂತ ಕೋಟಿ ಲೋಕಧರನಾದ ಪರಾಪರನಾದ ಮಹಾಸದಾಶಿವನಾದವನು ತನ್ನ ನಿಜಜಾÕನ ಹಿರಿಣ್ಯಗರ್ಭದಲ್ಲಿ ವಿಶ್ವಾದ್ಥಿಕ ಮಹಾರುದ್ರನಂ ನಿರ್ಮಿಸಿ ತನ್ನ ಪಂಚಮುಖದಿಂದ ಪೃಥ್ವಿ ತೇಜ ವಾಯುವಾಕಾಶವೆಂಬ ಮಹಾಭೂತ ಬ್ರಹ್ಮಾಂಡದೊಳು ಚತುರ್ದಶ ಭುವನಂಗಳು, ಸಪ್ತ ಕುಲಪರ್ವತಂಗಳು ಮೊದಲಾದ ಅನಂತ ಗಿರಿ ಗಹ್ವರಂಗಳಂ, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ನಿರ್ಮಿಸೆಂದು ಬೆಸನಂ ಕೊಟ್ಟು ಕಳುಹಲು, ಮಹಾಪ್ರಸಾದವೆಂದು ಕೈಕೊಂಡು ಆ ಭೂತಬ್ರಹ್ಮಾಂಡದೊಳು ನಿರ್ಮಿಸಿದನೆಂತೆಂದಡೆ : ಜಲದ ಮೇಲೆ ಕಮಠನ ನಿರ್ಮಿಸಿದ. ಆ ಕಮಠನ ಮೇಲೆ ಮಹಾವಾಸುಗಿಯಂ ನಿರ್ಮಿಸಿದ. ಆ ಮಹಾವಾಸುಗಿಯ ಮೇಲೆ ಅಷ್ಟದಿಗ್ಗಜಂಗಳ ನಿರ್ಮಿಸಿದನು ಆ ವಿಶ್ವಾದ್ಥಿಕ ಮಹಾರುದ್ರನು. ಆ ಅಷ್ಟದಿಗ್ಗಜಂಗಳ ಮೇಲೆ ಸಕಲವಾದ ಜೀವಂಗಳಿಗೂ ಸಕಲವಾದ ಪದಾರ್ಥಂಗಳಿಗೂ ಇಹಂತಾಗಿ ಮಹಾಪೃಥ್ವಿಯಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಮಹಾಮೇರುಪರ್ವತದ ತಾವರೆಯ ನಡುವಣ ಪೀಠಿಕೆಯ ಕ್ರಮದಲ್ಲಿ ನಡೆಯ ಪ್ರಮಾಣು ಹದಿನಾರು ಸಾವಿರದ ಯೋಜನ ಪ್ರಮಾಣು. ಉದ್ದ ಎಂಬತ್ನಾಲ್ಕು ಸಾವಿರ ಯೋಜನದುದ್ದ. ವಿಸ್ತೀರ್ಣ ಮೂವತ್ತೆರಡು ಸಾವಿರಯೋಜನ ಪ್ರಮಾಣು ಉಂಟಾಗಿಹಂತಾಗಿ ಮೇರುತನಕ ಸುತಾಳ ತಾಳ, ಪಂಚಾಶತಕೋಟಿ ಸೋಪಾನಂಗಳುಂಟಾಗಿ ದಿವ್ಯರೂಪಾಗಿ ನಿರ್ಮಿಸಿದನು. ಆ ಮೇರುವಿನ ಪೂರ್ವದೆಸೆಯಲ್ಲಿ ಪದ್ಮರಾಗವು, ಆಗ್ನೆಯಲ್ಲಿ ವಜ್ರ, ದಕ್ಷಿಣದಲ್ಲಿ ಮೌಕ್ತಿಕ, ನೈರುತ್ಯಭಾಗದಲ್ಲಿ ನೀಲ, ಪಶ್ಚಿಮದ ದೆಸೆಯ ವಿಭಾಗದಲ್ಲಿ ವೈಡೂರ್ಯ, ವಾಯುವ್ಯದಲ್ಲಿ ಚಿಂತಾಮಣಿ, ಉತ್ತರದಲ್ಲಿ ರತ್ನಕನಕ, ಈಶಾನ್ಯದಲ್ಲಿ ತಾಮ್ರ, ಮೇರುವಿನ ಮಧ್ಯದಲ್ಲಿ ಪುಷ್ಯರಾಗ ಜಾÕನ ದೃಷ್ಟಿಗಳುಂಟಾಗಿ ಪರಿಪೂರಿತಗಳಿಹಂತಾಗಿ ಗಿರಿಯ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಮೇಲುಳ್ಳ ವೃಕ್ಷಂಗಳೆಲ್ಲ ಕಲ್ಪವೃಕ್ಷಂಗಳು. ಆ ಮೇರುವಿನ ಮೇಲುಳ್ಳ ಮೃಗಂಗಳೆಲ್ಲ ಅಚಾಮಚರಿತ್ರಂಗಳು. ಆ ಮೇರುವಿನ ಮೇಲುಳ್ಳ ಗೋವೆಲ್ಲ ಕಾಮಧೇನುಗಳು. ಅಲ್ಲಿದ್ದ ಮನುಷ್ಯರೆಲ್ಲ ಪರಮಾತ್ಮರು. ಅಲ್ಲಿದ್ದ ಸ್ತ್ರೀಯರೆಲ್ಲ ದೇವಸ್ತ್ರೀಯರು. ಆಹಾರಂಗಳೆಲ್ಲ ಅಮೃತಾಹಾರ, ನೀರೆಲ್ಲ ರಜಸ್ತಳೇಯ ; ಅಲ್ಲಿಯ ಮಣ್ಣೆಲ್ಲ ಕಸ್ತೂರಿ ಕುಂಕುಮಾದಿಗಳೆನಿಸಿಕೊಂಬುದು. ಅಲ್ಲಿಯ ಕಾಷ್ಠಂಗಳೆಲ್ಲ ಸುಗಂಧಂಗಳು. ಆ ಮೇರುವಿನ ದೇವತೆಗಳಿಗೂ ಮುನಿಗಳಿಗೂ ಅನಂತ ಸಿದ್ಧರಿಗೂ ಅನಂತ ಯೋಗಿಗಳಿಗೂ ಜೋಗಿಗಳಿಗೂ ಪುರಂಗಳು ಗೃಹಂಗಳು ಗುಡಿಗಳು ಬಿಲದ್ವಾರಂಗಳುಂಟಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿಗೆ ನಾಲ್ಕು ಬಾಗಿಲು, ಎಂಟು ಸ್ವರ್ಣಕಂಡಿಗಳು, ಹದಿನಾರು ಮಕರತೋರಣಗಳು, ಮೂವತ್ತೆರಡು ಸೋಮವೀದಿಗಳು, ಅರವತ್ನಾಲ್ಕು ಸಂದುಗಳುಂಟಾಗಿ ಸರ್ವಸಂಪೂರ್ಣವಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿನ ಮಧ್ಯದಲ್ಲಿ ಶ್ರೀ ಮಹಾದೇವರಿಗೆ ಶಿವಪುರಮಂ ನಿರ್ಮಿಸಿದನು. ಪಂಚಸಹಸ್ರಯೋಜನ ಚತುಃಚಕ್ರಾಕಾರವಾಗಿ, ನವರತ್ನಖಚಿತವಾಗಿ, ಅಷ್ಟದಳವೇಷ್ಟಿತವಾಗಿ, ಅಷ್ಟಧ್ವಾನಂಗಳುಂಟಾಗಿ, ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ. ಪ್ರಮಥಗಣಂಗಳು, ನಂದಿ, ಮಹಾನಂದಿಕೇಶ್ವರ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖದಲ್ಲಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಬಲದ ದೆಸೆಯಲ್ಲಿ ಬ್ರಹ್ಮಪುರವು ತ್ರಿಕೋಣಾಕಾರವಾಗಿ ಅನಿಲಪ್ರಕಾರವೇಷ್ಟಿತವಾಗಿ, ಅಷ್ಟದ್ವಾರಂಗಳುಂಟಾಗಿ ಐನೂರು ಕೋಟಿ ಕನಕಗೃಹಂಗಳು ಅಸಂಖ್ಯಾತಕೋಟಿ ಮಹಾಋಷಿಗಳು ಒಡ್ಡೋಲಂಗಗೊಟ್ಟು, ನಾಲ್ಕು ವೇದಂಗಳು ಮೂರ್ತಿಬಾಂಧವರಾಗಿ ಸರಸ್ವತಿಸಮೇತವಾಗಿ ಬ್ರಹ್ಮದೇವರು ಪರಮಾನಂದಸುಖದೊಳಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ವಾಮಭಾಗದಲ್ಲಿ ವಿಷ್ಣುವಿಂಗೆ ವೈಕುಂಠವೆಂಬ ಪುರ ಚಕ್ರಾಕಾರವಾಗಿ ಪದ್ಮರಾಗಪ್ರಕಾಶವೇಷ್ಟಿತವಾಗಿ ಅಷ್ಟದ್ವಾರಂಗಳು ಹತ್ತುನೂರುಕೋಟಿ ಕನಕಗೃಹಂಗಳುಂಟಾಗಿ ಅನಂತಕೋಟಿ ಶಂಕ ಚಕ್ರ ಗದಾಹಸ್ತನಾಗಿ ವೇದ ಓಲೈಸಲಾಗಿ ಶ್ರೀಲಕ್ಷ್ಮೀ ಸಮೇತನಾಗಿ ವಿಷ್ಣು ಪರಮಾನಂದಸುಖದಲ್ಲಿಪ್ಪಂತೆ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಪೂರ್ವದೆಸೆಯಲ್ಲಿ ದೇವೇಂದ್ರಂಗೆ ಅಮರಾವತಿಯ ಪುರಮಂ ನಿರ್ಮಿಸಿದನು. ಆಗ್ನೇಯ ದೆಸೆಯಲ್ಲಿ ಅಗ್ನಿದೇವಂಗೆ ತೇಜೋವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ದಕ್ಷಿಣದಿಶಾಭಾಗದಲ್ಲಿ ಯಮದೇವಂಗೆ ಸಿಂಹಾವತಿಯ ಪುರಮಂ ನಿರ್ಮಿಸಿದನು. ನೈಋತ್ಯ ದಿಶಾಭಾಗದಲ್ಲಿ ನೈಋತ್ಯಂಗೆ ಕೃಷ್ಣವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಪಶ್ಚಿಮ ದಿಶಾಭಾಗದಲ್ಲಿ ವರುಣಂಗೆ ಜಂಜನಿತಪುರಮಂ ನಿರ್ಮಿಸಿದನು. ವಾಯುವ್ಯದಲ್ಲಿ ವಾಯುವಿಂಗೆ ಗಂಗಾವತಿಯಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಉತ್ತರದೆಶೆಯಲ್ಲಿ ಕುಬೇರಂಗೆ ಅಳಕಾಪುರಮಂ ನಿರ್ಮಿಸಿದನು. ಈಶಾನ್ಯದಿಶಾಭಾಗದಲ್ಲಿ ಈಶಾನ್ಯದೇವಂಗೆ ಧವಳಾವತಿಪುರಮಂ ಮೊದಲಾಗಿ ಸಮಸ್ತವಾದ ಪುರಗಳಂ ನಿರ್ಮಿಸಿದನು ವಿಶ್ವಾದ್ಥಿಯಕಮಹಾರುದ್ರನು. ಆ ಮಹಾಮೇರುವಿಂಗೆ ವಳಯಾಕೃತವಾಗಿ ಲವಣ ಇಕ್ಷು ಸುರೆ ಘೃತ ದದ್ಥಿ ಕ್ಷೀರ ಶುದ್ಧಜಲಂಗಳೆಂಬ ಸಪ್ತಸಮುದ್ರಂಗಳಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಸಮುದ್ರಂಗಳ ನಡುವೆ ಜಂಬೂದ್ವೀಪ, ಪ್ಲಕ್ಷದ್ವೀಪ, ಶುಕ್ಲದ್ವೀಪ, ಕುಶದ್ವೀಪ, ಶಾಕದ್ವೀಪ, ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ದ್ವೀಪಂಗಳಿಗೆ ವಳಯಾಕೃತವಾಗಿ ಮಲಯಜಪರ್ವತ, ನೀಲಪರ್ವತ, ಶ್ವೇತಪರ್ವತ, ಋಕ್ಷಪರ್ವತ, ರಮ್ಯಪರ್ವತ, ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ, ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ, ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ, ಉದಯಾದ್ರಿಪರ್ವತ, ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ, ಮಾಲ್ಯವಂತಪರ್ವತ, ನಿಷಧಪರ್ವತ, ಹೇಮಕೂಟಪರ್ವತ, ನಿರಾಚಲಪರ್ವತ, ಗಂಧಾಚಲಪರ್ವತ, ನೀಲಾಚಲಪರ್ವತ, ಮಂದಾಚಲಪರ್ವತ, ಮೇರುಮಂದಿರಪರ್ವತ, ಶುಬರೀಶ್ವರಪರ್ವತ, ಕುಮುದಉದಯಾದ್ರಿ, ದೇವಕೂಟ, ವಿಂಧ್ಯಾಚಲ, ಪವನಾಚಲ, ಪರಿಯಾಚಲ, ಚಂದ್ರಾಚಲ, ಧಾರಾಚಲ, ಷಡುಲಕ್ಷ್ಮಿಗಿರಿ, ಮಾನಸಾಂತಗಿರಿ, ತಮಂಧಗಿರಿ, ಚಂದ್ರಗಿರಿ, ನಾಗಗಿರಿ, ಲಘುಗಿರಿ, ಮಕರಗಿರಿ, ದ್ರೋಣಗಿರಿ, ಅನಂತವಜ್ರಗಿರಿ, ಕಪಿಲಗಿರಿ, ನೀಲಗಿರಿ, ಪರಗಿರಿ, ತ್ರಿಪುರಗಿರಿ, ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ, ಇಂದ್ರಗಿರಿಪರ್ವತ, ಲೋಕಪರ್ವತಂಗಳು ಮೊದಲಾದ ಪರ್ವತಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇದಕ್ಕೆ ದೇಶಂಗಳಾಗಬೇಕೆಂದು ಪಾಂಚಾಲ, ಬರ್ಬರ, ಮತ್ಸ್ಯ, ಮಗಧ, ಮಲೆಯಾಳ, ತೆಲುಂಗ, ಕಳಿಂಗ, ಕುಕರ, ಕೊಂಕಣ, ತ್ರಿಕರರಾಷ್ಟ್ರ, ಶ್ವಾಸಿನಿ, ಕಂಠರಹಿತ, ಕುತಿಷ್ಟ, ದಶಾರ್ಣ, ಕುರು, ಮುಖಸರ, ಕೌಸಯಿವರ್ಣ, ಆವಂತಿ, ಲಾಳ, ಮಹೇಂದ್ರ, ಪಾಂಡ್ಯ, ಸರ್ವೇಶ್ವರ, ವಿಷ್ಣು, ಶಾಂತಕ, ತುರಾದ್ರ, ಮಗಧಾದ್ರ, ವಿದೇಹ, ಮಗಧ, ದ್ರವಿಳ, ಕಿರಾಂತ, ಕುಂತಳ, ಕಾಮೀರ, ಗಾಂಧಾರ, ಕಾಂಭೋಜ, ಕೀಳುಗುಜ್ಜರ, ಅತಿದೃಷ್ಟ, ನೇಪಾಳ, ಬಂಗಾಳ, ಪುಳಿಂದ್ರ, ಜಾಳೇಂದ್ರ, ಕಲ್ವರ-ಇಂಥಾ ದೇಶಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇನ್ನು ಭೂಮಿಯಿಂದಂ ಮೇಲೆ ಮೇಘಮಂಡಲ ಮೊದಲಾಗಿ ಶಿವಾಂಡ ಚಿದ್ಬ ್ರಹ್ಮಾಂಡ ಕಡೆಯಾಗಿ ಎಲ್ಲಾ ಲೋಕಂಗಳಂ ನಿರ್ಮಿಸಿ, ಸಪ್ತಪಾತಾಳವ ನಿರ್ಮಿಸಿದನದೆಂತೆಂದಡೆ: ಅಲ್ಲಿ ಪೃಥ್ವಿಯ ಕೆಳಗೆ ಶತಕಯೋಜನದಲ್ಲಿ ಅತಳಲೋಕದಲ್ಲಿ ಇಶಿತಮಂಡಲಮಂ ನಿರ್ಮಿಸಿದನು. ಅತಳಲೋಕದಿಂದಂ ಕೆಳಗೆ ಕೋಟಿಯೋಜನದುದ್ದದಲ್ಲಿ ವಿತಳಲೋಕದಲ್ಲಿ ಸ್ವರ್ಣ ನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲು ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಸುತಳತೋಲಕದಲ್ಲಿ ಕೃಷ್ಣನಾಗಮಂಡಲಮಂ ನಿರ್ಮಿಸಿದನು. ಆ ಸುತಳಲೋಕದಿಂದಲು ಕೆಳಗೆ ರಸಾತಳಲೋಕದಲ್ಲಿ ರತ್ನನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ರಸಾತಳಲೋಕದಿಂದಲು ಕೆಳಗೆ ಚತುಃಕೋಟಿ ಯೋಜನದುದ್ದದಲ್ಲಿ ಮಹಾತಳಲೋಕದಿಂದಲು ಕೆಳಗೆ ಶತಕೋಟಿ ಯೋಜನದುದ್ದದಲ್ಲಿ ಪಾತಾಳಲೋಕದಲ್ಲಿ ಅವಿಷ್ಟಕೆ ಆಧಾರವಾಗಿ ಕಮಠನಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಕಮಠನ ಮೇಲೆ ಜಲಂಗಳಂ, ಕಮಲಂಗಳಂ, ಮಹಾಪೃಥ್ವಿಯಂ, ಮೇರುಪರ್ವತ ಸಮಸ್ತದೇವಾಸುರಂಗಳಂ ಮಹಾಪೃಥ್ವಿಯು ಸಮಸ್ತ ಸಪ್ತಸಮುದ್ರಂಗಳಂ, ಸಪ್ತದ್ವೀಪಂಗಳಂ ಮೊದಲಾದ ಲೋಕಾದಿಲೋಕ ಪರ್ವತಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲೂ ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಪಾತಾಳ ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯರ್ಲೋಕ-ಇಂಥ ಲೋಕಂಗಳೆಂಬ ಹದಿನಾಲ್ಕು ಲೋಕಂಗಳಂ ನಿರ್ಮಿಸಿ ಮತ್ತೆ ಸ್ವರ್ಗ-ಮತ್ರ್ಯ-ಪಾತಾಳಗಳ ವಿವರಿಸಿ ನೋಡಿ ಆ ಲೋಕದವರಿಗೆ ವೇದಶಾಸ್ತ್ರಂಗಳಂ ನಿರ್ಮಿಸಿದನದೆಂತೆಂದಡೆ : ವೇದ ವೇದಾಂಗ, ಮಂತ್ರಶಾಸ್ತ್ರ, ತರ್ಕಶಾಸ್ತ್ರ, ಯೋಗಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ವೈದ್ಯಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ, ಶಕುನಶಾಸ್ತ್ರ, ಶಸ್ತ್ರಶಾಸ್ತ್ರ, ಶಿಲ್ಪಶಾಸ್ತ್ರ, ಜಲಶಾಸ್ತ್ರ, ಸಾಮುದ್ರಿಕಶಾಸ್ತ್ರ, ನೃಪತಿಶಾಸ್ತ್ರ, ಅಂಜನಶಾಸ್ತ್ರ, ರಸವೈದ್ಯಶಾಸ್ತ್ರ, ಬಿಲ್ಲುಶಾಸ್ತ್ರ, ಗೋಪಶಾಸ್ತ್ರ, ಮನುಷ್ಯಶಾಸ್ತ್ರ, ರಥಿಕಶಾಸ್ತ್ರ, ಅಂಗುಲಿಶಾಸ್ತ್ರ, ಶ್ರವಣಶಾಸ್ತ್ರ, ಗಂಧಪಾದ್ಯಶಾಸ್ತ್ರ, ಭುಜಗಶಾಸ್ತ್ರ, ಯೋಗಿಣಿಶಾಸ್ತ್ರ, ಯಕ್ಷಿಣಿಶಾಸ್ತ್ರ, ಶಬ್ದನೀತಿಶಾಸ್ತ್ರ, ಅಲಂಕಾರಶಾಸ್ತ್ರ, ವಿಶ್ವಶಾಸ್ತ್ರ, ಗಂಡಶಾಸ್ತ್ರ, ವ್ಯಾದ್ಥಿಶಾಸ್ತ್ರ, ಯುದ್ಧಶಾಸ್ತ್ರ, ಹಸರಶಾಸ್ತ್ರ, ಶುಂಭನಶಾಸ್ತ್ರ, ಮುಖಶಾಸ್ತ್ರ, ಬಂಧಶಾಸ್ತ್ರ, ಜಲಸ್ತಂಭಶಾಸ್ತ್ರ, ಅಗ್ನಿಶಾಸ್ತ್ರ, ಕರ್ಮಶಾಸ್ತ್ರ, ಪುರಾಣಿಕಶಾಸ್ತ್ರ, ಇಂಗಶಾಸ್ತ್ರ, ವೈದ್ಯಶಾಸ್ತ್ರ, ಇಂದ್ರಜಾಲ, ಮಹೇಂದ್ರಜಾಲ ಶಾಸ್ತ್ರಂಗಳು ಮೊದಲಾದ ಚೌಷಷ್ಠಿ ವಿದ್ಯಂಗಳ ನಿರ್ಮಿಸಿದನು ನೋಡಾ [ಅಪ್ರಮಾಣ] ಕೂಡಲಸಂಗಯ್ಯನ ಶರಣ ವಿಶ್ವಾದ್ಥಿಕಮಹಾರುದ್ರನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವೇದವನೋದುವ ಅಣ್ಣಗಳು ನೀವು ಕೇಳಿರೊ ! ವೇದ ವೇದಿಸಲಿಲ್ಲ ಶಾಸ್ತ್ರ ಸಾಧಿಸಲಿಲ್ಲ; ಪುರಾಣ ಪೂರೈಸಲಿಲ್ಲ, ಆಗಮಕ್ಕೆ ಆದಿಯಿಲ್ಲ. ಇದು ಕಾರಣ_ ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲ ಬರಿಯ ಹಿರಿಯರು ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೇದ ವೇದಂಗಳೆಲ್ಲ ಶಿವನ ಹೊಗಳಿ ನಿರ್ಮಲವಾದವು ನೋಡಾ `ಓಂ ನಮಃ ಸೋಮಾಯ ಚ ರುದ್ರಾಯ ಚ' ಎಂದು ವೇದವಾಕ್ಯ ನೋಡಾ. `ನಮಸ್ತಾಮ್ರಾಯ ಚಾರುಣಾಯ ಚ' ಎಂದು ಪಂಡಿತಮುಖಪ್ರಸಿದ್ಧ ನೋಡಾ. `ನಮಃ ಶೃಂಗಾಯ ಚ ಪಶುಪತಯೇ ಚ' ಎಂದು ವೇದಾಧ್ಯಾಯಿಗಳರಿಕೆ ನೋಡಾ. `ನಮಃ ಶಿವಾಯ ಚ ಶಿವತರಾಯ ಚ' ಎಂದು ಕಪಿಲಸಿದ್ಧಮಲ್ಲಿಕಾರ್ಜುನನ ಪಂಚಮುಖದಲ್ಲಿ ನಿತ್ಯ ನಿತ್ಯ ಘೋಷ ನೋಡಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು. ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು. ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ, ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ, ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ, ಬಸವಣ್ಣನ ನೆನೆವುತಿರ್ದೆನಯ್ಯಾ. ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು. ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು. ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು. ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು. ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು. ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ನಂಬಿ, ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಕತ್ತೆ ರುದ್ರಾಕ್ಷಿಯ ಹೊತ್ತು ವ್ಯವಹರಿಸಿದಲ್ಲಿ ಮೋಕ್ಷವಾಯಿತು. ಬೇಂಟೆಗಾರನು ಶುನಿಗಳ ಕೂಡಿಕೊಂಡು ಅರಣ್ಯದಲ್ಲಿ ಬೇಂಟೆಯನಾಡುವ ಸಮಯದಲ್ಲಿ ಒಂದು ರುದ್ರಾಕ್ಷಿಯ ಕಂಡು ತನ್ನ ಶುನಿಗಳಿಗೆ ಗಾದಿಯ ಮಣಿಗಳೆಂದು ಕಟ್ಟಿಬಿಡಲು, ಆ ಶುನಿಗಳು ಹೋಗಿ ಹಂದಿಯ ಹಿಡಿಯಲು ಆ ಹಂದಿಗೂ ಆ ಶುನಿಗೂ ಮೋಕ್ಷವಾಯಿತು. ವೇಶ್ಯಾಂಗನೆಯು ತನ್ನ ವಿನೋದಕ್ಕೆ ಮರ್ಕಟ ಕುಕ್ಕುಟಂಗೆ ರುದ್ರಾಕ್ಷಿ ಧರಿಸಲು ಅವಕ್ಕೆ ಮುಂದೆ ಅಂತ್ಯಕಾಲಕ್ಕೆ ಮೋಕ್ಷವಾಯಿತೆಂದು ವೇದ, ಶ್ರುತಿ, ಪ್ರಮಾಣಗಳಿಂದ ಕೇಳಿ ಜೀವಾತ್ಮರು ರುದ್ರಾಕ್ಷಿಯ ಧರಿಸುತ್ತಿರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಚಿತ್ರದ ಬೊಂಬೆ ರೂಪಾಗಿರ್ದರೇನೋ? ಅಚೇತನವಾದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಹಾವುಮೆಕ್ಕೆಯ ಹಣ್ಣು ನುಂಪಾಗಿರ್ದರೇನೋ? ಕಹಿ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಅತ್ತಿಯ ಹಣ್ಣು ಕಳಿತಿರ್ದರೇನೋ? ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ. ತಿಪ್ಪೆಯ ಹಳ್ಳ ತಿಳಿದಿರ್ದರೇನೋ? ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ವೇದ ಶಾಸ್ತ್ರ ಪುರಾಣಾಗಮಂಗಳನೋದಿ ಎಲ್ಲರಲ್ಲಿಯೂ ಅನುಭಾವಿಗಳಾದರೇನೋ? ಆಶೆಯೆಂಬ ಪಾಶದಲ್ಲಿ ಕಟ್ಟುವಡೆದು ಪಾಶಬದ್ಧರಾದ ಕಾರಣ ಪ್ರಯೋಜನಕಾರಿಗಳಾದುದಿಲ್ಲ. ನುಡಿವಂತೆ ನಡೆಯದವರ ನಡೆದಂತೆ ನುಡಿಯದವರ ಎಂತು ಶಿವಶರಣರೆಂಬೆ ವಾಚಾಳಿಕರ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ ಸಾರುತ್ತೈದಾವೆ, ನೋಡಾ, ಶ್ರುತಿಗಳೂ ನಾಲ್ಕು ವೇದವೂ ಹುಸಿಯಿದೆ `ಭರ್ಗೋ ದೇವಸ್ಯ ದ್ಥೀಮಹಿ' ಎಂದುದಾಗಿ, ಕೂಡಲಸಂಗನಲ್ಲದಿಲ್ಲೆಂದುದು ವೇದ.
--------------
ಬಸವಣ್ಣ
ವಚನದ ರಚನೆಯೆಂಬ ಮಾತಿನ ಬಣ್ಣದ ಪರಿಯಲ್ಲ ನೋಡಾ. ಹೊಲಳಿ ಕಂಡವರೆಲ್ಲರು ಮೂರ್ತಿಗೊಳಗಾದರು. ವೇದ ಶಾಸ್ತ್ರ ಮಾರ್ಗವೆಲ್ಲವೂ ಹೊಗಳಿ ಕಾಣವೆಂಬುದ, ಗುಹೇಶ್ವರ ಸಾಕ್ಷಿಯಾಗಿ ಮೂರುಲೋಕ ಬಲ್ಲುದು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು; ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು. ಅದೆಂತೆಂದಡೆ: ``ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.
--------------
ಅಲ್ಲಮಪ್ರಭುದೇವರು
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ ! ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ ! ಆಗಮ ಹೆರತೊಲಗಿ ಅಗಲಿದ್ದಿತಯ್ಯಾ ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
--------------
ಬಸವಣ್ಣ
ಇನ್ನಷ್ಟು ... -->